ಜಿಲ್ಲೆಯಲ್ಲಿ ಕಳೆದ ರಾತ್ರಿಯಿಂದೀಚೆಗೆ ನಡೆದ ಪ್ರತ್ಯೇಕ ರಸ್ತೆ ಅಪಘಾತದಲ್ಲಿ ಇಬ್ಬರು ಯುವಕರು ಸೇರಿದಂತೆ ಐದು ಮಂದಿ ಸಾವು

 

ಮದ್ದೂರು/ಮಂಡ್ಯ, ಆ.12- ಜಿಲ್ಲೆಯಲ್ಲಿ ಕಳೆದ ರಾತ್ರಿಯಿಂದೀಚೆಗೆ ನಡೆದ ಪ್ರತ್ಯೇಕ ರಸ್ತೆ ಅಪಘಾತದಲ್ಲಿ ಬೆಂಗಳೂರಿನ ಇಬ್ಬರು ಯುವಕರು ಸೇರಿದಂತೆ ಐದು ಮಂದಿ ಸಾವನ್ನಪ್ಪಿದ್ದಾರೆ.
ಮಂಡ್ಯ ನಗರ ಹೊರವಲಯದ ವಿಸಿ ಫಾರಂ ಗೇಟ್‍ನ ಬೆಂಗಳೂರು ಹೆದ್ದಾರಿಯಲ್ಲಿ ಲಾರಿಯೊಂದು ಬೈಕ್‍ಗೆ ಡಿಕ್ಕಿ ಹೊಡೆದ ಪರಿಣಾಮ ಎಚ್.ಮಲ್ಲಿಗೆರೆ ಗ್ರಾಮದ ಪ್ರವೀಣ್ (22) ಹಾಗೂ ಹೊಳಲು ಗ್ರಾಮದ ಪ್ರಮೋದ್ (23) ಮೃತ ದುರ್ದೈವಿಗಳು.
ಲಾರಿ ಚಾಲಕ ಮದ್ಯಪಾನ ಮಾಡಿದ್ದ ಎಂದು ಹೇಳಲಾಗಿದ್ದು, ಅಡ್ಡಾದಿಡ್ಡಿ ಚಾಲನೆ ಮಾಡಿ ಮುಂದೆ ಹೋಗುತ್ತಿದ್ದ ಬೈಕ್‍ಗೆ ಡಿಕ್ಕಿ ಹೊಡೆದು ಸುಮಾರು 250 ಮೀಟರ್ ದೂರ ಎಳೆದೊಯ್ದಿದೆ.
ಚಕ್ರಕ್ಕೆ ಸಿಲುಕಿದ ಯುವಕರ ದೇಹ ಛಿದ್ರಗೊಂಡಿದೆ. ಈ ದೃಶ್ಯ ಕಂಡವರು ದಿಗ್ಭ್ರಮೆಗೊಂಡಿದ್ದಾರೆ. ತುಂಡು ತುಂಡಾಗಿ ಬಿದ್ದ ದೇಹದ ಭಾಗಗಳನ್ನು ಕವರ್‍ನಲ್ಲಿ ತುಂಬಿ ಪೆÇಲೀಸರು ಆಸ್ಪತ್ರೆ ಶವಾಗಾರಕ್ಕೆ ಸಾಗಿಸಿದ್ದಾರೆ.
ಘಟನೆಯಿಂದಾಗಿ ಹೆದ್ದಾರಿಯಲ್ಲಿ ವಾಹನ ಸಂಚಾರ ಅಸ್ತವ್ಯಸ್ತಗೊಂಡಿತ್ತು. ಮಂಡ್ಯ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಚಾಲಕನನ್ನು ಬಂಧಿಸಲಾಗಿದ್ದು, ತನಿಖೆ ಮುಂದುವರಿದಿದೆ.
ಟ್ರ್ಯಾಕ್ಟರ್ ಪಲ್ಟಿ: ಕಬ್ಬು ತುಂಬಿಕೊಂಡು ಹೋಗುತ್ತಿದ್ದ ಟ್ರ್ಯಾಕ್ಟರ್ ಚಾಲಕನ ನಿಯಂತ್ರಣ ತಪ್ಪಿ ಕಾರಿಗೆ ಡಿಕ್ಕಿ ಹೊಡೆದು ರಸ್ತೆ ಪಕ್ಕ ಉರುಳಿ ಬಿದ್ದ ಪರಿಣಾಮ ಟ್ರ್ಯಾಕ್ಟರ್ ಚಾಲಕ ಕಿಲಾರ ಗ್ರಾಮದ ಶಿವಕುಮಾರ್ (35) ಎಂಬುವವರು ಮೃತಪಟ್ಟಿದ್ದಾರೆ.
ಮಂಡ್ಯ ಜಿಲ್ಲೆ ಮದ್ದೂರು ತಾಲೂಕಿನ ಬೆಸಗರಹಳ್ಳಿ ಬಳಿ ಈ ದುರ್ಘಟನೆ ಸಂಭವಿಸಿದೆ. ಕಾರಿನ ಚಾಲಕ ಕೂಡ ಗಾಯಗೊಂಡಿದ್ದಾರೆ. ಟ್ರ್ಯಾಕ್ಟರ್ ಮಗುಚಿದ ಪರಿಣಾಮ ಕಬ್ಬಿನ ಜಲ್ಲೆಗಳು ಅವನ ಮೇಲೆಯೇ ಬಿದ್ದಿವೆ. ಅದರಲ್ಲಿ ಸಿಲುಕಿ ಆತ ಸಾವನ್ನಪ್ಪಿದ್ದಾನೆ.
ಕಬ್ಬಿನ ಜಲ್ಲೆಗಳನ್ನು ತೆಗೆದು ಶವವನ್ನು ಹೊರತೆಗೆಯಲು ಸಾಕಷ್ಟು ಪ್ರಯಾಸ ಪಡಬೇಕಾಯಿತು. ಬೆಸರಗರನಹಳ್ಳಿ ಪೆÇಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ