ಬೆಂಗಳೂರು,ಆ.8- ಬೆಂಗಳೂರು ನಗರ ಪ್ರಾಕೃತಿಕವಾಗಿಯೇ ಬಹಳ ಅಂದವಾಗಿದ್ದು, ನಗರದ ಸೌಂದರ್ಯವನ್ನು ಕೆಡಿಸುವಂತಹ ಯಾವುದೇ ಜಾಹಿರಾತು ನೀತಿಯನ್ನು ಜಾರಿಗೆ ತರಬಾರದು, ಜಾಹಿರಾತು ನಿಷೇಧ ಕ್ರಮವನ್ನು ಮುಂದುವರೆಸಿಕೊಂಡು ಹೋಗಿ ಎಂದು ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ದಿನೇಶ್ ಮಹೇಶ್ವರ್ ಖಡಕ್ ಆದೇಶ ನೀಡಿದ್ದಾರೆ.
ಹೈಕೋರ್ಟ್ ಆದೇಶದ ಹಿನ್ನೆಲೆಯಲ್ಲಿ ಅನಧಿಕೃತ ಜಾಹಿರಾತು ತೆರವುಗೊಳಿಸಲು ಬಿಬಿಎಂಪಿ ಕೈಗೊಂಡ ಕ್ರಮದ ಬಗ್ಗೆ ವಿವರ ನೀಡಲು ಇಂದು ಬಿಬಿಎಂಪಿ ಜಂಟಿ ಆಯುಕ್ತ ವೆಂಕಟೇಶ್ ಅವರು ನ್ಯಾಯಾಲಯಕ್ಕೆ ಹಾಜರಾಗಿದ್ದರು.
ಈ ವೇಳೆ ಮುಖ್ಯ ನ್ಯಾಯಮೂರ್ತಿಗಳು ಜಾಹಿರಾತು ನಿಷೇಧಗೊಳಿಸಿ ಪಾಲಿಕೆ ಕೈಗೊಂಡ ನಿರ್ಣಯ ಪರಿಶೀಲಿಸಿ ಈ ನಿಷೇಧವನ್ನು ಮುಂದುವರೆಸುವಂತೆ ಸೂಚಿಸಿದರು.
ಜಾಹಿರಾತು ಅಳವಡಿಸಲು ಅವಕಾಶ ನೀಡುವ ಯಾವುದೇ ಹೊಸ ನೀತಿಯನ್ನು ಜಾರಿಗೆ ತರಬಾರದು ಎಂದು ಸೂಚಿಸಿದ ಅವರು, ಹಿಂದಿನ ಮೇಯರ್ ಶಾಂತಕುಮಾರಿ ಅವರು ಅಧಿಕಾರದಲ್ಲಿದ್ದಾಗ ರಚಿಸಿದ ಹೊಸ ಜಾಹಿರಾತು ನೀತಿಯನ್ನು ಜಾರಿಗೆ ತರಬಾರದು ಎಂದರು.