
ಹುಬ್ಬಳ್ಳಿ:- ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿಯವರು ನನ್ನ ಬಗ್ಗೆ ಅಲ್ಲ ಸಲ್ಲದ ಮಾತುಗಳಾಡಿದ್ದಾರೆ. ನನಗೆ ಕೆಲಸ ಇಲ್ಲ ಅಂದೋರು 35ವರ್ಷ ತಾವೇನು ಕೆಲಸ ಮಾಡಿದ್ದಾರೆ ತಿಳಿಸಲಿ ಎಂದು ಬಾಳೆ ಹೊಸೂರು ಮಠದ ಪೀಠಾಧ್ಯಕ್ಷರಾದ ದಿಂಗಾಲೇಶ್ವರ ಸ್ವಾಮಿಗಳು ಹೊರಟ್ಟಿ ಅವರಿಗೆ ಸವಾಲ್ ಹಾಕಿದ್ದಾರೆ. ಹುಬ್ಬಳ್ಳಿಯಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಪ್ರತ್ಯೇಕ ರಾಜ್ಯಕ್ಕಿಂತ ಮೊದಲು ಅಖಂಡ ಕರ್ನಾಟಕದ ಅಭಿವೃದ್ಧಿ ಆಗಲೆಂದು ಬಯಸುತ್ತೇನೆ. ಆದರೆ, ಆಡಳಿತರೂಢ ಸರ್ಕಾರದ ಮಲತಾಯಿ ಧೋರಣೆಯೇ ಪ್ರತ್ಯೇಕ ರಾಜ್ಯದ ಕೂಗಾಗಿ ಇಂದು ಹೊರ ಬಿದ್ದಿದೆ ಎಂದರು. ಸಮ್ಮಿಶ್ರ ಸರ್ಕಾರ ಉತ್ತರ ಕರ್ನಾಟಕಕ್ಕೆ ಆಧ್ಯತೆ ನೀಡಿದ್ದರೆ ಇವತ್ತು ಪ್ರತ್ಯೇಕತೆಯ ಕೂಗು ಕೇಳುತ್ತಿರಲಿಲ್ಲ. ಈ ಕೂಗು ಈ ಭಾಗದ ಜನರ ಕೂಗಾಗಿದೆ. ಪ್ರಾಂತ್ಯವಾರು ಭೇದ ತೋರದೇ ಸಮಗ್ರ ಕರ್ನಾಟಕದ ಅಭಿವೃದ್ಧಿ ಮಾಡಬೇಕಿತ್ತು. ರಾಜ್ಯ ವಿಭಜನೆ ವಿಚಾರವಾಗಿ ಕುಮಾರಸ್ವಾಮಿಯವರು ಮಾಧ್ಯಮಗಳ ಮೇಲೆ ಗೂಬೆ ಕೂಡಿಸುವುದು ಸಲ್ಲ ಎಂದರು. ರಾಜಕಾರಣಿಗಳು ತಾವು ಬಚಾವಾಗಲು ಮಾಧ್ಯಮದವರ ಮತ್ತು ಮಠಾಧೀಶರ ಮೇಲೆ ಗೂಬೆ ಕೂಡಿಸುತ್ತಾರೆ. ವಿಧಾನ ಪರಿಷರ್ ಸಭಾಪತಿ ಹೊರಟ್ಟಿ ವಿರುದ್ಧ ವಾಗ್ದಾಳಿ ಮಾಡಿದ ಶ್ರೀಗಳು ಮಠಾಧೀಶರ ತೋಜೋವಧೆ ಮಾಡುವುದು ಸರಿಯಲ್ಲ. ಬಸವರಾಜ ಹೊರಟ್ಟಿಯವರ ನಾಲಿಗೆ ಮೇಲೆ ಹಿಡಿತ ಇರಲಿ ಎಂದು ಎಚ್ಚರಿಕೆ ನೀಡಿದರು. ಅವರು ತಮ್ಮ ಘನತೆಗೆ ತಕ್ಕ ಹಾಗೇ ಮಾತನಾಡಲಿ. ಹೊರಟ್ಟಿಯವರು ಹಿಂದಿನಿಂದಲೂ ನನ್ನ ತೆಜೋವಧೆ ಮಾಡುತ್ತಿದ್ದಾರೆ. ನಿಮ್ಮ 35 ವರ್ಷಗಳ ರಾಜಕೀಯ ಜೀವನದಲ್ಲಿ ಉ-ಕ ಭಾಗಕ್ಕೆ ಏನು ಕೊಡುಗೆ ನೀಡಿದ್ದರಿ.? ಯಾಕೆ ಈ ಭಾಗದ ಜನರ ಬೇಡಿಕೆಗೆ ಕಿವಿಗೂಡುತ್ತಿಲ್ಲ. ಉತ್ತರ ಕರ್ನಾಟಕ ಅಭಿವೃದ್ಧಿ ಯಾಕೇ ಪಕ್ಷಾತೀತ ಹೋರಾಟ ಮಾಡ್ತಾಯಿಲ್ಲಾ ಎಂದು ಸಭಾಪತಿಗಳಿಗೆ ದಿಂಗಾಲೇಶ್ವರ ಶ್ರೀಗಳು ಪ್ರಶ್ನೆ ಹಾಕಿದ್ದಾರೆ. ಇನ್ನೂ ರಾಜಕಾರಣಿಗಳು ಮಹಾರಾಜರಲ್ಲ. ಅವರು ಜನ ಸೇವಕರೆಂಬುದು ಮರೆಯಬಾರದು ಎಂದರು.