ರೌಡಿ ಸೈಕಲ್ ರವಿಗೆ ಮಾಜಿ ಸಚಿವ ಎಂ.ಬಿ.ಪಾಟೀಲ್ ಅವರೊಂದಿಗೆ ನಂಟು

 

ಬೆಂಗಳೂರು, ಜು.17- ಖ್ಯಾತ ಚಿತ್ರನಟ ಯಶ್ ಅವರ ಹತ್ಯೆಗೆ ಸ್ಕೆಚ್ ಹಾಕಿದ್ದ ಆರೋಪಕ್ಕೆ ಗುರಿಯಾಗಿರುವ ಬೆಂಗಳೂರಿನ ನಟೋರಿಯಸ್ ರೌಡಿ ಸೈಕಲ್ ರವಿ ಪ್ರಭಾವಿ ಲಿಂಗಾಯತ ಮುಖಂಡ ಹಾಗೂ ಮಾಜಿ ಸಚಿವ ಎಂ.ಬಿ.ಪಾಟೀಲ್ ಅವರೊಂದಿಗೆ ನಂಟು ಹೊಂದಿದ್ದರು ಎಂಬ ಅಂಶ ಇದೀಗ ಬೆಳಕಿಗೆ ಬಂದಿದೆ.
ಸಿದ್ದರಾಮಯ್ಯ ಅವರ ಸಂಪುಟದಲ್ಲಿ ಜಲಸಂಪನ್ಮೂಲ ಖಾತೆ ಸಚಿವರಾಗಿದ್ದ ಎಂ.ಬಿ.ಪಾಟೀಲ್ ಅವರು ಸೈಕಲ್ ರವಿ ಅವರೊಂದಿಗೆ 80ಕ್ಕೂ ಹೆಚ್ಚುಬಾರಿ ದೂರವಾಣಿಯಲ್ಲಿ ಮಾತುಕತೆ ನಡೆಸಿರುವ ಮಾಹಿತಿ ಬಹಿರಂಗಗೊಂಡಿದೆ.
ಎಂ.ಬಿ.ಪಾಟೀಲ್ ಅವರು ಸಚಿವರಾಗಿದ್ದ ಸಂದರ್ಭದಲ್ಲಿ ಸೈಕಲ್ ರವಿಗೆ 54 ಬಾರಿ ದೂರವಾಣಿ ಕರೆ ಮಾಡಿದ್ದರು. ಮಾತ್ರವಲ್ಲ, ಎರಡು ಎಸ್‍ಎಂಎಸ್ ಸಂದೇಶಗಳನ್ನು ಕಳುಹಿಸಿದ್ದರು ಎನ್ನಲಾಗಿದೆ.
ಅದೇ ರೀತಿ ನಟೋರಿಯಸ್ ರೌಡಿ ಸೈಕಲ್ ರವಿ ಅವರು 24 ಬಾರಿ ಪಾಟೀಲರಿಗೆ ದೂರವಾಣಿ ಕರೆ ಮಾಡಿರುವುದು ಪೆÇಲೀಸರ ತನಿಖೆಯಿಂದ ತಿಳಿದುಬಂದಿದೆ.
ಕೊಲೆ, ಕೊಲೆ ಯತ್ನ, ಸುಲಿಗೆ, ದರೋಡೆ ಮತ್ತಿತರ ಅಪರಾಧ ಕೃತ್ಯಗಳಲ್ಲಿ ತೊಡಗಿಸಿಕೊಂಡು ನಟೋರಿಯಸ್ ರೌಡಿಯಾಗಿ ಪರಿವರ್ತನೆಗೊಂಡಿದ್ದ ಸೈಕಲ್ ರವಿ ಭೂಗತವಾಗಿದ್ದುಕೊಂಡೇ ರಾಜಧಾನಿಯಲ್ಲಿ ಕೋಟ್ಯಂತರ ರೂ.ಗಳ ಆಸ್ತಿ ಸಂಪಾದನೆ ಮಾಡಿದ್ದ.
ಇತ್ತೀಚೆಗೆ ಪೆÇಲೀಸರು ಸೈಕಲ್ ರವಿ ಮೇಲೆ ಗುಂಡಿನ ದಾಳಿ ನಡೆಸಿ ಬಂಧಿಸುವಲ್ಲಿ ಯಶಸ್ವಿಯಾಗಿದ್ದರು.
ಸೈಕಲ್ ರವಿಯನ್ನು ಪೆÇಲೀಸರು ತೀವ್ರ ವಿಚಾರಣೆಗೊಳಪಡಿಸಿದಾಗ ಹಲವಾರು ಬೆಚ್ಚಿಬೀಳಿಸುವ ಸಂಗತಿಗಳು ಬೆಳಕಿಗೆ ಬಂದಿದ್ದವು.
ಖ್ಯಾತ ಚಿತ್ರನಟ ಯಶ್ ಅವರ ಹತ್ಯೆಗೂ ಸೈಕಲ್ ರವಿ ಗ್ಯಾಂಗ್ ಸ್ಕೆಚ್ ಹಾಕಿತ್ತು ಎಂಬ ಮಾಹಿತಿಯಲ್ಲದೆ ಇನ್ನಿತರ ಹಲವಾರು ನಾಯಕರುಗಳ ಕೊಲೆಗೂ ಈ ತಂಡ ಸಂಚು ರೂಪಿಸಿದ್ದ ಸಂಗತಿ ಹೊರಬಿದ್ದಿತ್ತು.
ಇದೀಗ ಶಾಸಕ ಎಂ.ಬಿ.ಪಾಟೀಲ್ ಅವರೊಂದಿಗೂ ಸೈಕಲ್ ರವಿ ನಂಟು ಹೊಂದಿದ್ದ ಎಂಬ ಮಾಹಿತಿ ಬಹಿರಂಗಗೊಂಡಿರುವುದು ರಾಜಕೀಯ ವಲಯವನ್ನು ಬೆಚ್ಚಿಬೀಳಿಸಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ