ಮಾವಿಗೆ ಬೆಂಬಲ ಬೆಲೆಗೆ ಒತ್ತಾಯಿಸಿ ಬಂದ್

ಶ್ರೀನಿವಾಸಪುರ, ಜು.9 – ಮಾವಿಗೆ ಸೂಕ್ತ ಬೆಂಬಲ ಬೆಲೆ ನೀಡಬೇಕು, ಮಾವಿನ ಉತ್ಪನ್ನಗಳಿಗಾಗಿ ಕಾರ್ಖಾನೆ ಸ್ಥಾಪಿಸಬೇಕೆಂದು ಒತ್ತಾಯಿಸಿ ತಾಲೂಕಿನಾದ್ಯಂತ ನಡೆದ ಬಂದ್ ಸಂಪೂರ್ಣ ಯಶಸ್ವಿಯಾಗಿದೆ. ಅಂಗಡಿ ಮುಂಗಟ್ಟುಗಳನ್ನು ಮುಚ್ಚಿ ಕರೆ ನೀಡಿದ್ದ ಬಂದ್‍ಗೆ ಬೆಂಬಲ ವ್ಯಕ್ತವಾಗಿದೆ. ಸರ್ಕಾರಿ ಹಾಗೂ ಖಾಸಗಿ ಶಾಲೆಗಳು ಮುಚ್ಚಲಾಗಿದ್ದು, ಬಸ್‍ಗಳ ಸಂಚಾರವೂ ಸ್ಥಗಿತಗೊಂಡಿತ್ತು. ಔಷಧ ಮಳಿಗೆಗಳನ್ನು ಬಿಟ್ಟರೆ ಇನ್ಯಾವುದೇ ಅಂಗಡಿಗಳು ತೆರೆದಿರಲಿಲ್ಲ. ಒಟ್ಟಾರೆ ಎಲ್ಲೆಡೆ ಬಂದ್‍ಗೆ ಬೆಂಬಲ ಕಂಡುಬಂತು. ಇಂದಿರಾ ಭವನ ವೃತ್ತದಲ್ಲಿ ಮಾವು ಬೆಳೆಗಾರರು ಮಾವಿನ ಕಾಯಿ ಸುರಿದು ಪ್ರತಿಭಟನೆ ನಡೆಸಿದರಲ್ಲದೆ, ನೆರೆ ರಾಜ್ಯವಾದ ಆಂಧ್ರದಲ್ಲಿ ಕ್ವಿಂಟಾಲ್‍ಗೆ 7,500 ರೂ. ಬೆಂಬಲ ಬೆಲೆ ನೀಡುತ್ತಿರುವ ಮಾದರಿಯಲ್ಲಿ ರಾಜ್ಯದಲ್ಲೂ ಕನಿಷ್ಟ 5 ಸಾವಿರ ರೂ.ಗಳನ್ನು ನಿಗದಿಪಡಿಸಬೇಕು ಎಂದು ಮಾವು ಬೆಳೆಗಾರರ ಸಂಘದ ಅಧ್ಯಕ್ಷ ಚಿನ್ನಪ್ಪ ರೆಡ್ಡಿ ಆಗ್ರಹಿಸಿದರು. ಮಾವಿನ ಹಣ್ಣಿನ ರಸ ಹಾಗೂ ತಿರುಳನ್ನು ಬಳಸಿ ಮಾಡುವ ವಿವಿಧ ಉತ್ಪನ್ನಗಳ ಕಾರ್ಖಾನೆಗಳನ್ನು ತಾಲೂಕಿನಲ್ಲಿ ನಿರ್ಮಿಸುವ ಮೂಲಕ ಮಾವು ಬೆಳೆಗಾರರಿಗೆ ಆಗುವ ನಷ್ಟವನ್ನು ತಪ್ಪಿಸುವಂತೆ ಒತ್ತಾಯಿಸಿದರು. ಮಾವಿಗೆ ಸೂಕ್ತ ಬೆಂಬಲ ಬೆಲೆ ನಿಗದಿಗೊಳಿಸದಿದ್ದರೆ ಬುಧವಾರ ಅಥವಾ ಗುರುವಾರ ವಿಧಾನಸೌಧಕ್ಕೆ ಮುತ್ತಿಗೆ ಹಾಕಿ ರೈತ ಕುಟುಂಬ ಆತ್ಮಹತ್ಯೆ ಮಾಡಿಕೊಳ್ಳಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ