ದಿಲ್ಲಿಗೆ ಯಾರು ಬಾಸ್‌; ಸುಪ್ರೀಂ ಕೋರ್ಟ್ ಹೇಳಿದ್ದೇನು?

ಹೊಸದಿಲ್ಲಿ: ದಿಲ್ಲಿಗೆ ಯಾರು ಬಾಸ್ ಎಂಬ ವಿವಾದಕ್ಕೆ ಸುಪ್ರೀಂ ಕೋರ್ಟ್ ಬುಧವಾರ ತೆರೆ ಎಳೆದಿದೆ.

ದೆಹಲಿಗೆ ರಾಜ್ಯದ ಸ್ಥಾನಮಾನ ನೀಡಲು ಸಾಧ್ಯವಿಲ್ಲ. ರಾಜ್ಯ ಸರ್ಕಾರದೊಂದಿಗೆ ಲೆಫ್ಟಿನೆಂಟ್‌ ಗವರ್ನರ್‌ ಸೌಹಾರ್ದಯುತವಾಗಿ ನಡೆದುಕೊಳ್ಳಬೇಕು’ ಎಂದು ಹೇಳಿದೆ.

ಸಂವಿಧಾನವನ್ನು ಪಾಲಿಸುವುದು ಪ್ರತಿಯೊಬ್ಬರ ಕರ್ತವ್ಯ ಮತ್ತು ಜವಾಬ್ದಾರಿ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ನಡುವಿನ ಸಂಬಂಧ  ಆರೋಗ್ಯಕರವಾಗಿರಬೇಕು. ನಿರಂಕುಶವಾದ ಮತ್ತು ಅರಾಜಕತೆಗೆ ಸಂವಿಧಾನದಲ್ಲಿ ಸ್ಥಳವಿಲ್ಲ. ಲೆಫ್ಟಿನೆಂಟ್‌ ಗವರ್ನರ್‌ ರಾಜ್ಯದೊಂದಿಗೆ ಸೌಹಾರ್ದಯುತವಾಗಿ ಕಾರ್ಯನಿರ್ವಹಿಸಬೇಕು, ಲೆ.ಗವರ್ನರ್‌ ಮತ್ತು ಸಚಿವರ ನಡುವೆ ಹೊಂದಾಣಿಕೆ ಅಗತ್ಯ’ ಎಂದು ಮುಖ್ಯ ನ್ಯಾಯಮೂರ್ತಿ ದೀಪಕ್‌ ಮಿಶ್ರಾ ನೇತೃತ್ವದ ಐವರು ನ್ಯಾಯಮೂರ್ತಿಗಳ ಸಂವಿಧಾನ ಪೀಠ ಹೇಳಿತು.

ಸಂವಿಧಾನಾತ್ಮಕ ಅವಕಾಶವಿರದ ಹೊರತು ಲೆ.ಗವರ್ನರ್‌ ಸ್ವತಂತ್ರ ಆಡಳಿತ ಸಾಧ್ಯವಿಲ್ಲ. ಲೆ.ಗವರ್ನರ್‌ ಸರ್ಕಾರದ ಪ್ರತಿರೋಧಿಯಾಗಿ ವರ್ತಿಸುವಂತಿಲ್ಲ. ರಾಷ್ಟ್ರಪತಿಗಳಿಗೆ ಅವರ ಎಲ್ಲ ವಿಚಾರಗಳನ್ನು ಪ್ರಸ್ತಾಪಿಸುವ ಅಗತ್ಯವಿರುವುದಿಲ್ಲ ಹಾಗೂ ದೆಹಲಿಗೆ ಪೂರ್ಣ ರಾಜ್ಯದ ಸ್ಥಾನಮಾನವಿರುವುದಿಲ್ಲ ಎಂದಿದೆ.

ಲೆಫ್ಟಿನೆಂಟ್‌ ಗವರ್ನರ್‌ ದೆಹಲಿಯ ಆಡಳಿತದ ಸೂತ್ರ ಹಿಡಿದಿರುತ್ತಾರೆ ಎಂದು ದೆಹಲಿ ಹೈಕೋರ್ಟ್‌ 2016ರ ಆಗಸ್ಟ್‌ 4ರಂದು ನೀಡಿದ್ದ ತೀರ್ಪು ಪ್ರಶ್ನಿಸಿ ದೆಹಲಿ ಸರ್ಕಾರ ಅರ್ಜಿ ಸಲ್ಲಿಸಿತ್ತು. ಅರ್ಜಿ ವಿಚಾರಣೆ ನಡೆಸಿದ್ದ ಸುಪ್ರೀಂ ಕೋರ್ಟ್ ಸಂವಿಧಾನ ಪೀಠ, 2017ರ ಡಿಸೆಂಬರ್‌ 6ರಂದು ತೀರ್ಪು ಕಾಯ್ದಿರಿಸಿತ್ತು.

ಕಾಂಗ್ರೆಸ್‌ ಮುಖಂಡ ಪಿ.ಚಿದಂಬರಂ, ಮಾಜಿ ಹೆಚ್ಚುವರಿ ಸಾಲಿಸಿಟರ್‌ ಜನರಲ್‌ ಇಂದಿರಾ ಜೈಸಿಂಗ್‌ ಹಾಗೂ ಸಾಲಿಸಿಟರ್‌ ಜನರಲ್‌ ಗೋಪಾಲ್‌ ಸುಬ್ರಮಣಿಯಂ ಸೇರಿ ಅನೇಕ ಹಿರಿಯ ವಕೀಲರು ದೆಹಲಿ ಸರ್ಕಾರದ ಪರವಾಗಿ ವಾದ ಮಂಡಿದ್ದರು. ರಾಷ್ಟ್ರ ರಾಜಧಾನಿಯ ಆಡಳಿತ ನಿರ್ವಹಣಾ ಅಧಿಕಾರವನ್ನು ಚುನಾಯಿತ ಸರ್ಕಾರ ಹೊಂದಿರಬೇಕೆಂಬ ವಾದವನ್ನು ಕೇಂದ್ರ ಸರ್ಕಾರ ದೃಢವಾಗಿ ತಿರಸ್ಕರಿಸಿದೆ.

ಮುಖ್ಯಮಂತ್ರಿ ಕಚೇರಿಗೆ ಅಧಿಕಾರಿಗಳ ನೇಮಕಾತಿ ಮಾಡುವಾಗ

ಮುಖ್ಯಮಂತ್ರಿ ಸಮ್ಮತಿಯ ಅಗತ್ಯವನ್ನು ವಿವರಿಸಿ ಕೇಂದ್ರ ಗೃಹ ಸಚಿವ ರಾಜನಾಥ ಸಿಂಗ್‌ ಅವರಿಗೆ ಸಿಎಂ ಅರವಿಂದ್ ಕೇಜ್ರಿವಾಲ್‌ ಪತ್ರ ಬರೆದಿದ್ದರು. ಚುನಾಯಿತ ಮುಖ್ಯಮಂತ್ರಿಗೆ ಅವರ ಅಧಿಕಾರಿ ವರ್ಗವನ್ನು ‌ಆಯ್ಕೆ ಮಾಡುವ ಅವಕಾಶವಿರುತ್ತದೆ. ಆದರೆ, ದೆಹಲಿಯಲ್ಲಿ ಈ ಎಲ್ಲ ನಿಯಮಗಳು ಸದಾ ಉಲ್ಲಂಘನೆಯಲ್ಲಿವೆ ಎಂದು ಪತ್ರದಲ್ಲಿ ಅಸಮಾಧಾನ ವ್ಯಕ್ತಪ

ಡಿಸಿದ್ದರು.

ಕೇಂದ್ರ ಸರ್ಕಾರ ಮತ್ತು ಲೆ.ಗವರ್ನರ್‌ ಜತೆಗೆ ದೆಹಲಿ ಸರ್ಕಾರದ ಗುದ್ದಾಟ 2015ರಲ್ಲಿ ಎಎಪಿ ಅಧಿಕಾರವಹಿಸಿದಾಗಿನಿಂದಲೂ ಮುಂದುವರಿದಿದೆ. ದೆಹಲಿ

ಕೇಂದ್ರಾಡಳಿ ಪ್ರದೇಶವಾಗಿರುವ ಕಾರಣ, ದೆಹಲಿ ಸರ್ಕಾರಕ್ಕೆ ಭೂಮಿ, ಹಿರಿಯ ಅಧಿಕಾರಗಳ ನೇಮಕಾತಿ ಹಾಗೂ ಪೊಲೀಸ್‌ ಪಡೆಗಳ ಮೇಲೆ ನಿಯಂತ್ರಣದ ಅಧಿಕಾರವಿಲ್ಲ. ಲೆ.ಗವರ್ನರ್‌ ಈ ಮೂರರ ಮೇಲೂ ನಿಯಂತ್ರಣ ಹೊಂದಿದ್ದಾರೆ.

ಪ್ರಜಾಪ್ರಭುತ್ವಕ್ಕೆ ಸಿಕ್ಕ ಜಯ:

ಸುಪ್ರೀಂ ಕೋಟ್ ತೀರ್ಪು ಸಂಬಂಧ ಪ್ರತಿಕ್ರಿಯಿಸಿರುವ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಇದು ಪ್ರಜಾಪ್ರಭುತ್ವಕ್ಕೆ ಸಿಕ್ಕ ಜಯ ಎಂದು ತಿಳಿಸಿದ್ದಾರೆ.

ಇದೇ ವೇಳೆ ದೆಹಲಿ ಉಪ ಮುಖ್ಯಮಂತ್ರಿ ಮನೀಶ್‌ ಸಿಸೋಡಿಯ,ಇದೊಂದು ಮಹತ್ತರ ತೀರ್ಮಾನವಾಗಿದೆ. ಈಗ ದೆಹಲಿ ಸರ್ಕಾರ ಪ್ರತಿಯೊಂದು ಅನುಮತಿಗಾಗಿ ಲೆ.ಗವರ್ನರ್‌ಗೆ ಕಡತಗಳನ್ನು ರವಾನಿಸುವ ಅಗತ್ಯವಿಲ್ಲ, ಕಾರ್ಯಗಳು ಕುಂಠಿಗೊಳ್ಳುವುದಿಲ್ಲ. ಇದು ಪ್ರಜಾಪ್ರಭುತ್ವದ ಗೆಲುವು. ಸುಪ್ರೀಂ ಕೋರ್ಟ್‌ಗೆ ಧನ್ಯವಾದಗಳು.

ದಿಲ್ಲಿಯಲ್ಲಿ ನಮ್ಮ ಪಕ್ಷದ ಚುನಾಯಿತ ಸರಕಾರವಿದ್ದರೂ ಕೇಂದ್ರ ಸರಕಾರವು ಉಪ ರಾಜ್ಯಪಾಲ ಅನಿಲ್‌ ಬೈಜಲ್‌ ಅವರ ಮೂಲಕ ಆಡಳಿತದ ಮೇಲೆ ಸವಾರಿ ನಡೆಸುತ್ತಿದೆ. ಚುನಾಯಿತ ಸರಕಾರವನ್ನು ಹಲ್ಲಿಲ್ಲದ ಹಾವನ್ನಾಗಿ ಮಾಡಲಾಗದು. ಇದು ಸಂವಿಧಾನ ವಿರೋಧಿಯಾಗಿದೆ ಎಂದು ಆರೋಪಿಸಿ ಸಿಎಂ ಅರವಿಂದ್‌ ಕೇಜ್ರಿವಾಲ್‌ ಸರಕಾರ ಕಳೆದ ವರ್ಷ ಸುಪ್ರೀಂ ಮೊರೆ ಹೋಗಿತ್ತು. ಕಡತಗಳ ವಿಲೇವಾರಿಯಲ್ಲಿ ಅನಿಲ್‌ ಬೈಜಲ್‌ ಹಾಗೂ ಅರವಿಂದ ಕೇಜ್ರಿವಾಲ್‌ ಮಧ್ಯೆ ಸಾಕಷ್ಟು ಜಟಾಪಟಿ ನಡೆಯುತ್ತಲೇ ಬಂದಿದೆ. ಇತ್ತೀಚಿಗೆ ಸರಕಾರದ ಮುಖ್ಯ ಕಾರರ್ಯದರ್ಶಿ ಅಂಶು ಪ್ರಕಾಶ್‌ ಅವರ ಮೇಲೆ ನಡೆದ ಹಲ್ಲೆ ಪ್ರಕರಣದಲ್ಲಿ ಈ ಜಗಳ ತಾರಕಕ್ಕೇರಿತ್ತು.

 

 

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ