ತ್ರಿಪುರಾ:ಮಕ್ಕಳ ಕಳ್ಳರೆಂದು ಶಂಕಿಸಿ ದಾಳಿ; ಇಬ್ಬರ ಹತ್ಯೆ,ಮೂವರು ಗಂಭೀರ

ಅಗರ್ತಲಾ: ದೇಶಾದ್ಯಂತ ಮಕ್ಕಳ ಕಳ್ಳರ ವದಂತಿ ವ್ಯಾಪಕವಾಗಿರುವ ವೇಳೆಯಲ್ಲಿ  ತ್ರಿಪುರಾದಲ್ಲಿ  ಗುರುವಾರ 2 ಪ್ರತ್ಯೇಕ ಕಡೆಗಳಲ್ಲಿ  ಗುಂಪು ದಾಳಿ ನಡೆದಿದ್ದು, ಇಬ್ಬರು ಸಾವನ್ನಪ್ಪಿ ಮೂವರು ಗಂಭೀರವಾಗಿ ಗಾಯಗೊಂಡಿದ್ದಾರೆ.

ಪಶ್ಚಿಮ ತ್ರಿಪುರಾದ ಮುರಾಬರಿ ಪ್ರದೇಶದಲ್ಲಿ ಒಂದು ಘಟನೆ ನಡೆದಿದ್ದು, ಇನ್ನೊಂದು ಘಟನೆ ಕಾಲಚೇರಾ ಪ್ರದೇಶದಲ್ಲಿ ನಡೆದಿದೆ.

ನಾಲ್ವರು ಶಂಕಿತರ ಮೇಲೆ ಉದ್ರಿಕ್ತರು ದಾಳಿ ನಡೆಸಿದ್ದು, ತಡೆಯಲು ಹೋದ ಪೊಲೀಸ್‌ ಸಿಬಂದಿಯ ಮೇಲೂ ದಾಳಿ ನಡೆದಿದೆ.

ಉತ್ತರ ಪ್ರದೇಶ ಮೂಲದ ಮೂವರು ಬಟ್ಟೆ ವ್ಯಾಪಾರಿಗಳ ಮೇಲೆ ಗುಂಪು ದಾಳಿ ನಡೆದಿದ್ದು, ಓರ್ವ ದಾಳಿಯಲ್ಲಿ ದಾರುಣವಾಗಿ ಹತನಾಗಿದ್ದಾನೆ. ಇಬ್ಬರು ಗಂಭೀರವಾಗಿ ಗಾಯಗೊಂಡಿದ್ದು ಅವರನ್ನು ಕರೆತಂದಿದ್ದ  ಸ್ಥಳೀಯ ಕಾರು ಚಾಲಕನ ಮೇಲೂ ದಾಳಿ ನಡೆಸಲಾಗಿದೆ.

ಬಾಂಗ್ಲಾ ಗಡಿ ಭಾಗಕ್ಕೆ ಹೊಂದಿಕೊಂಡಿರುವ ಪ್ರದೇಶದಲ್ಲಿ ಇನ್ನೋರ್ವನ ಮೇಲೆ ದಾಳಿ ನಡೆಸಿ ಹತ್ಯೆಗೈಯಲಾಗಿದೆ.

ಹತ್ಯೆಗೀಡಾದವರ ಪೈಕಿ  ಓರ್ವ ಉತ್ತರ ಪ್ರದೇಶದ ಜಹೀರ್‌ ಖಾನ್‌(35) ಎಂದು ತಿಳಿದು ಬಂದಿದೆ. ಇನೋರ್ವ ದಾಳಿಗೀಡಾದವನ ಸ್ಥಿತಿ ಚಿಂತಾಜನಕವಾಗಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ