ರಾಜ್ಯ ಬಿಟ್ಟು ಕಾವೇರಿ ನಿರ್ವಹಣಾ ಸಮಿತಿ ರಚನೆ

ಬೆಂಗಳೂರು: ಕರ್ನಾಟಕದ ವಿರೋಧದ ನಡುವೆಯೂ ಕೇಂದ್ರ ಸರ್ಕಾರ ಕಾವೇರಿ ನಿರ್ವಹಣಾ ಸಮಿತಿ ರಚಿಸಿ ಅಧಿಸುಚನೆ ಹೊರಡಿಸಿದೆ.

ಇತ್ತೀಚೆಗಷ್ಟೇ ಪ್ರಧಾನಿ ಭೇಟಿ ಮಾಡಿದ್ದ ಸಿಎಂ ಕುಮಾರಸ್ವಾಮಿ, ಸಮಿತಿ­ಯಲ್ಲಿನ ಕೆಲವು ಲೋಪ­ದೋಷ­­ಗಳನ್ನು ನಿವಾರಿ­ಸು­ವವರೆಗೆ ಪ್ರಾಧಿಕಾರ ರಚಿಸಿ ಅಧಿಸೂಚನೆ ಹೊರಡಿಸಬೇಡಿ ಎಂದು ಮನವಿ ಮಾಡಿದ್ದರು. ಅಷ್ಟೇ ಅಲ್ಲ, ಅಲ್ಲಿಯ­ವರೆಗೆ ರಾಜ್ಯದಿಂದ ಸಮಿತಿಗೆ ಸದಸ್ಯರನ್ನೂ ನೇಮಕ ಮಾಡುವುದಿಲ್ಲವೆಂದು ಹೇಳಿದ್ದರು.

ಇದೀಗ ಕುಮಾರಸ್ವಾಮಿ ಅವರ ಮನವಿ ಹೊರತಾ­ಗಿಯೂ ಕೇಂದ್ರ ಜಲ ಸಂಪನ್ಮೂಲ ಇಲಾಖೆ ಪ್ರಾಧಿಕಾರ ರಚಿಸಿ ಶುಕ್ರವಾರ ಅಧಿಸೂಚನೆ ಹೊರಡಿಸಿದೆ. ಕೇಂದ್ರ ಜಲ ಆಯೋಗದ ಅಧ್ಯಕ್ಷ ಎಸ್‌. ಮಸೂದ್‌ ಹುಸೇನ್‌ಅವರೇ ಸಮಿತಿಯ ನೇತೃತ್ವ ವಹಿಸಿರುತ್ತಾರೆ. ಮುಖ್ಯ ಎಂಜಿನಿ­ಯರ್‌ ನವೀನ್‌ ಕುಮಾರ್‌ ಕೇಂದ್ರದ ಪ್ರತಿನಿಧಿಯಾಗಿರಲಿದ್ದಾರೆ.

ರಾಜ್ಯ ಸರ್ಕಾರ ತನ್ನ ಪ್ರತಿನಿಧಿಯ ಹೆಸರನ್ನು ಶಿಫಾರಸು ಮಾಡದ ಕಾರಣ ಜಲ ಸಂಪನ್ಮೂಲ ಇಲಾಖೆಯ ಮುಖ್ಯ ಎಂಜಿನಿಯರ್‌ ಅವರನ್ನು ಸಮಿತಿಯ ಸದಸ್ಯ­ರೆಂದು ಪರಿಗಣಿಸಲಾಗಿದೆ. ಉಳಿದಂತೆ ಕೇರಳದ ಕೆ.ಎ.ಜೋಶಿ, ಪುದುಚೇರಿಯ ವಿ.ಶಣ್ಮುಗಸುಂದರಂ, ತಮಿಳು ನಾಡಿನ ಆರ್‌.ಸೆಂಥಿಲ್‌ಕುಮಾರ್‌, ಭಾರತೀಯ ಹವಾಮಾನ ಇಲಾ­ಖೆಯ ವಿಜ್ಞಾನಿ ಡಾ.ಎಂ.ಮೊಹಾ­ಪಾತ್ರ, ಕೇಂದ್ರ ಜಲ ಆಯೋಗ ಕೊಯಮತ್ತೂರು ವಿಭಾಗದ ಮುಖ್ಯ ಎಂಜಿನಿಯರ್‌ ಎನ್‌.ಎಂ.ಕೃಷ್ಣಮುನ್ನಿ, ಕೇಂದ್ರ ಕೃಷಿ ಸಚಿವಾಲಯದ (ರೈತ ಕಲ್ಯಾಣ) ತೋಟಗಾರಿಕಾ ಆಯುಕ್ತರು ಇತರೆ ಸದಸ್ಯರಾಗಿದ್ದಾರೆ. ರಾಷ್ಟ್ರೀಯ ಜಲ ಆಯೋಗದ ಮತ್ತೂಬ್ಬ ಮುಖ್ಯ ಎಂಜಿನಿಯರ್‌ ಎ.ಎಸ್‌.ಗೋಯೆಲ್‌ ಸಮಿತಿಯ ಸದಸ್ಯ ಕಾರ್ಯದರ್ಶಿ (ಹೆಚ್ಚುವರಿ ಜವಾಬ್ದಾರಿ) ಆಗಿರುತ್ತಾರೆ.

 

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ