ನಾಳೆಯಿಂದ ಆಯವ್ಯಯ ಮಂಡನೆಯ ಪೂರ್ವಭಾವಿ ಸಭೆ

 

ಬೆಂಗಳೂರು,ಜೂ.20- ರಾಜ್ಯ ಸರ್ಕಾರದ ನೂತನ ಆಯವ್ಯಯ ಮಂಡನೆಯ ಪೂರ್ವಭಾವಿ ಸಭೆಗಳು ನಾಳೆಯಿಂದ ಆರಂಭವಾಗಲಿದೆ.
ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ನಾಳೆಯಿಂದ ಜೂ.30ರವರೆಗೂ ನಿರಂತರವಾಗಿ ಇಲಾಖಾವಾರು ಸಭೆಗಳನ್ನು ನಡೆಸಲಿದ್ದಾರೆ.
ಜುಲೈ ತಿಂಗಳಿನಲ್ಲಿ ಮಂಡಿಸಲಿರುವ ಬಜೆಟ್‍ನಲ್ಲಿ ರೈತರ ಸಾಲಮನ್ನಾ ಸೇರಿದಂತೆ ಹಲವು ಮಹತ್ವದ ಯೋಜನೆಗಳನ್ನು ಪ್ರಕಟಿಸಲು ಮುಖ್ಯಮಂತ್ರಿ ಉದ್ದೇಶಿಸಿದ್ದು , ಇದರ ಪೂರ್ವಭಾವಿಯಾಗಿ ಚರ್ಚೆ ನಡೆಸಲು ಬಜೆಟ್ ತಯಾರಿ ನಡೆಸಲಿದ್ದಾರೆ.

ನಾಳೆ ಕರ್ನಾಟಕ ವಿದ್ಯುತ್ ನಿಗಮದ ಸಭಾಂಗಣದಲ್ಲಿ ಆರೋಗ್ಯ, ಕುಟುಂಬ ಕಲ್ಯಾಣ, ವೈದ್ಯಕೀಯ ಶಿಕ್ಷಣ, ಜಲಸಂಪನ್ಮೂಲ, ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ, ಕಂದಾಯ, ಕೌಶಲ್ಯಾಭಿವೃದ್ದಿ, ಕಾರ್ಮಿಕ ಇಲಾಖೆಗಳ ಸಭೆ ನಡೆಸಲಿದ್ದಾರೆ.
ಸಭೆಯಲ್ಲಿ ಸಂಬಂಧಪಟ್ಟ ಇಲಾಖೆಗಳ ಸಚಿವರು, ಹೆಚ್ಚುವರಿ ಮುಖ್ಯ ಕಾರ್ಯದರ್ಶಿಗಳು, ಪ್ರಧಾನ ಕಾರ್ಯದರ್ಶಿಗಳು ಪಾಲ್ಗೊಂಡು ಬಜೆಟ್ ಸಿದ್ಧತೆಗೆ ಪೂರಕವಾದ ಮಾಹಿತಿಗಳನ್ನು ಮುಖ್ಯಮಂತ್ರಿಗೆ ಒದಗಿಸಲಿದ್ದಾರೆ.

ಈಗಾಗಲೇ ಎಲ್ಲ ಸಚಿವರಿಗೆ ಹಾಗೂ ಎಲ್ಲ ಇಲಾಖೆಗಳ ಮುಖ್ಯಸ್ಥರಿಗೆ ಸಭೆ ನಡೆಸುವ ಬಗ್ಗೆ ಮಾಹಿತಿಯನ್ನು ಮುಖ್ಯಮಂತ್ರಿ ಸಚಿವಾಲಯ ನೀಡಿದೆ. ನಿಗದಿಪಡಿಸಿದ ದಿನಾಂಕ ಮತ್ತು ಸಮಯದಲ್ಲಿ ಬಜೆಟ್ ಪೂರ್ವ ಸಿದ್ಧತಾ ಸಭೆಯಲ್ಲಿ ಪಾಲ್ಗೊಳ್ಳುವಂತೆ ತಿಳಿಸಲಾಗಿದೆ.
ಆಯಾ ಇಲಾಖೆಗೆ ವಾರ್ಷಿಕ ನಿಗದಿಪಡಿಸಬೇಕಿರುವ ಅನುದಾನ, ಹಳೆ ಯೋಜನೆಗಳ ಮುಂದುವರೆಕೆ, ಹೊಸ ಯೋಜನೆಗಳ ಘೋಷಣೆಗೆ ಸಂಬಂಧಿಸಿದಂತೆ ಸಮಗ್ರವಾಗಿ ಚರ್ಚಿಸಿ ಬಜೆಟ್ ತಯಾರಿ ನಡೆಸಲಾಗುತ್ತದೆ.

ಜೂ.22ರಂದು ಹಿರಿಯ ಪೆÇಲೀಸ್ ಅಧಿಕಾರಿಗಳ ಸಭೆಯನ್ನು ನಡೆಸಲಾಗುತ್ತದೆ. ನಂತರ ಸಮಾಜ ಕಲ್ಯಾಣ ಹಿಂದುಳಿದ ವರ್ಗಗಳ ಕಲ್ಯಾಣ, ಕನ್ನಡ ಮತ್ತು ಸಂಸ್ಕøತಿ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಗಳಿಗೆ ಸಂಬಂಧಿಸಿದಂತೆ ಸಭೆಗಳನ್ನು ನಡೆಸಲಿದ್ದಾರೆ.
ಜೂ.23ರಂದು ವಿಧಾನಸೌಧದಲ್ಲಿ ರೈತ ಸಂಘಸಂಸ್ಥೆಗಳ ಪ್ರತಿನಿಧಿಗಳ ಬಗ್ಗೆ ಕುಮಾರಸ್ವಾಮಿ ಸಭೆ ನಡೆಸಿ ಬಜೆಟ್‍ನಲ್ಲಿ ರೈತರಿಗೆ ಒದಗಿಸಬೇಕಿರುವ ಆದ್ಯತೆ ಬಗ್ಗೆ ಚರ್ಚೆ ಮಾಡಲಿದ್ದಾರೆ.
ಹೀಗೆ ಜೂ.30ರವರೆಗೂ ಪ್ರತಿದಿನ ಇಲಾಖಾವಾರು ಸಭೆಗಳನ್ನು ನಡೆಸಿ ಬಜೆಟ್ ಸಿದ್ಧತೆ ಮಾಡಲಿದ್ದಾರೆ ಎಂದು ಉನ್ನತ ಮೂಲಗಳು ತಿಳಿಸಿವೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ