ಪಡಿತರ ಚೀಟಿಗೆ ಆಧಾರ್ ಸಂಖ್ಯೆಯನ್ನು ಸೇರಿಸಲು ಮತ್ತೊಮ್ಮೆ ಅವಕಾಶ: ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಜಮೀರ್ ಅಹಮ್ಮದ್ ಖಾನ್

 

ಬೆಂಗಳೂರು, ಜೂ.19- ಬಿಪಿಎಲ್ ಪಡಿತರ ಚೀಟಿಗೆ ಆಧಾರ್ ಸಂಖ್ಯೆಯನ್ನು ಸೇರಿಸಲು ಮತ್ತೊಮ್ಮೆ ಅವಕಾಶ ಕಲ್ಪಿಸುವುದಾಗಿ ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಜಮೀರ್ ಅಹಮ್ಮದ್ ಖಾನ್ ಹೇಳಿದರು.

ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಮೊದಲು ಆಧಾರ್ ಸಂಖ್ಯೆ ಜೋಡಣೆಗೆ ಅವಕಾಶ ನೀಡಲಾಗಿತ್ತು. ಆದರೆ, ಬಹಳಷ್ಟು ಮಂದಿ ಸಂಖ್ಯೆ ಜೋಡಣೆ ಮಾಡಲಾಗಿಲ್ಲ. ಒಂದು ಕುಟುಂಬದಲ್ಲಿ ಏಳು ಮಂದಿ ಇದ್ದರೆ, ನಾಲ್ಕು ಜನರ ಸಂಖ್ಯೆ ಮಾತ್ರ ಜೋಡಣೆಯಾಗಿದೆ. ಹಾಗಾಗಿ ಮತ್ತೊಮ್ಮೆ ಅವಕಾಶ ನೀಡಲು ಅಧಿಕಾರಿಗಳಿಗೆ ಸೂಚಿಸಿದ್ದೇನೆ ಎಂದು ಹೇಳಿದರು.

ಹಳೇ ಮೈಸೂರು ಭಾಗದಲ್ಲಿ ಪಡಿತರ ವ್ಯವಸ್ಥೆಯಲ್ಲಿ ಎರಡು ಕೆಜಿ ರಾಗಿ, ಐದು ಕೆಜಿ ಅಕ್ಕಿ ನೀಡಲಾಗುತ್ತಿದೆ. ರಾಗಿಗೆ ಮಾರುಕಟ್ಟೆಯಲ್ಲಿ 19ರೂ. ಬೆಲೆ ಇದ್ದರೂ ಇಲಾಖೆ ಅಧಿಕಾರಿಗಳು 25.47 ರೂ.ಗೆ ಖರೀದಿ ಮಾಡುತ್ತಿದ್ದಾರೆ. ನಾನು ರೈತರಿಗೆ ಅನ್ಯಾಯವಾಗಬೇಕೆಂದು ಬಯಸುತ್ತಿಲ್ಲ. ಆದರೆ, ಮರುಕಟ್ಟೆ ದರದಲ್ಲಿ ರಾಗಿ ಖರೀದಿ ಮಾಡುವಂತೆ ಸೂಚನೆ ನೀಡಿದ್ದೇನೆ ಎಂದು ತಿಳಿಸಿದರು.

ಜತೆಗೆ ಅನ್ನಭಾಗ್ಯ ಯೋಜನೆಯಡಿ ಎರಡು ಕೆಜಿ ಹೆಚ್ಚುವರಿಯಾಗಿ ಅಕ್ಕಿ ನೀಡಲು ಚರ್ಚೆ ನಡೆಯುತ್ತಿದೆ ಎಂದು ಹೇಳಿದರು.
ಹಜ್‍ಯಾತ್ರೆಗೆ ಈ ವರ್ಷ 5200ಮಂದಿಗೆ ಅವಕಾಶ ಕಲ್ಪಿಸಲಾಗಿದೆ. ಕಳೆದ ವರ್ಷದ ಕೋಟಾವನ್ನೇ ಈ ವರ್ಷ ಮುಂದುವರೆಸಲಾಗಿದೆ.ಇದೇ 29ಕ್ಕೆ ದೆಹಲಿಗೆ ತೆರಳುತ್ತಿದ್ದು, ಅಲ್ಲಿ ಕೇಂದ್ರ ಸಚಿವರನ್ನು ಭೇಟಿ ಮಾಡಿ ಇನ್ನೂ 2ಸಾವಿರ ಹೆಚ್ಚುವರಿ ಕೋಟಾವನ್ನು ಮಂಜೂರು ಮಾಡಿಸಿಕೊಂಡು ಬರುವುದಾಗಿ ತಿಳಿಸಿದರು.
ಸಚಿವ ಸ್ಥಾನ ಸಿಕ್ಕರೆ ಗಿನ್ನಿಸ್ ದಾಖಲೆಯಾಗುವಂತೆ ಕೆಲಸ ಮಾಡುವುದಾಗಿ ಹೇಳಿದ್ದೆ. ಅದಕ್ಕೆ ನಿಮ್ಮೆಲ್ಲರ ಸಹಕಾರ ಬೇಕು. ಒಳ್ಳೆಯ ಕೆಲಸ ಮಾಡಿ ತೋರಿಸುತ್ತೇನೆ ಎಂದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ