ಶಾಸಕ ಎನ್.ಎ.ಹ್ಯಾರಿಸ್ ಪುತ್ರ ಮಹಮ್ಮದ್ ಹ್ಯಾರಿಸ್ ನಲ್‍ಪಾಡ್‍ಗೆ ಹೈಕೋರ್ಟ್‍ನಿಂದ ಷರತ್ತುಬದ್ಧ ಜಾಮೀನು

 

ಬೆಂಗಳೂರು, ಜೂ.14- ಉದ್ಯಮಿ ಪುತ್ರ ವಿದ್ವತ್ ಮೇಲೆ ಹಲ್ಲೆ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾಯಾಂಗ ಬಂಧನದಲ್ಲಿರುವ ಶಾಸಕ ಎನ್.ಎ.ಹ್ಯಾರಿಸ್ ಪುತ್ರ ಮಹಮ್ಮದ್ ಹ್ಯಾರಿಸ್ ನಲ್‍ಪಾಡ್‍ಗೆ ಹೈಕೋರ್ಟ್‍ನಿಂದ ಷರತ್ತುಬದ್ಧ ಜಾಮೀನು ದೊರೆತಿದೆ.

ಕಳೆದ 116 ದಿನಗಳಿಂದ ಪರಪ್ಪನ ಅಗ್ರಹಾರ ಜೈಲಿನಲ್ಲಿರುವ ನಲ್‍ಪಾಡ್‍ನ ಜಾಮೀನು ಅರ್ಜಿ ಕುರಿತ ವಿಚಾರಣೆಯನ್ನು ನಿನ್ನೆ ಪೂರ್ಣಗೊಳಿಸಿ ಕಾಯ್ದಿರಿಸಿದ್ದ ತೀರ್ಪನ್ನು ಇಂದು ನೀಡಿದ ನ್ಯಾಯಮೂರ್ತಿ ಜಾನ್ ಮೈಕೆಲ್ ಕುನ್ನಾ ಅವರು ಕೋರ್ಟ್ ಅನುಮತಿ ಇಲ್ಲದೆ ಬೆಂಗಳೂರು ಬಿಟ್ಟು ತೆರಳುವಂತಿಲ್ಲ, ನ್ಯಾಯಾಲಯದ ವಶಕ್ಕೆ ಪಾಸ್‍ಪೆÇೀರ್ಟ್ ನೀಡಬೇಕು. 2 ಲಕ್ಷ ಭದ್ರತಾ ಠೇವಣಿ, ಇಬ್ಬರ ಶ್ಯೂರಿಟಿ ಮತ್ತು ವಿಚಾರಣೆಗೆ ಸಹಕರಿಸಬೇಕು ಎಂಬುದು ಸೇರಿದಂತೆ ಹಲವು ಷರತ್ತುಗಳನ್ನು ವಿಧಿಸಿ ಜಾಮೀನು ಮಂಜೂರು ಮಾಡಿದ್ದಾರೆ.

ಕಳೆದ ಫೆ.17ರಂದು ನಗರದ ಯುಬಿ ಸಿಟಿಯಲ್ಲಿರುವ ಫರ್ಜಿ ಕೆಫೆ ರೆಸ್ಟೋರೆಂಟ್‍ನಲ್ಲಿ ಊಟ ಮಾಡುತ್ತಿದ್ದ ವೇಳೆ ಕಾಲು ತಗುಲಿತು ಎಂಬ ಕಾರಣಕ್ಕೆ ಮಹಮ್ಮದ್ ಹ್ಯಾರಿಸ್ ನಲ್‍ಪಾಡ್ ಮತ್ತು ಆತನ ಸ್ನೇಹಿತರು ಉದ್ಯಮಿ ಪುತ್ರ ವಿದ್ವತ್ ಮೇಲೆ ಮನಬಂದಂತೆ ಹಲ್ಲೆ ನಡೆಸಿದ್ದರು.
ನಂತರ ತಲೆಮರೆಸಿಕೊಂಡಿದ್ದ ನಲ್‍ಪಾಡ್ ಫೆ.19ರಂದು ಪೆÇಲೀಸರಿಗೆ ಶರಣಾಗಿದ್ದರು. ಈ ಪ್ರಕರಣದ ತನಿಖೆಯನ್ನು ಸಿಸಿಬಿ ಪೆÇಲೀಸರು ನಡೆಸಿದ್ದು, 600 ಪುಟಗಳ ಚಾರ್ಜ್‍ಶೀಟ್ ಸಲ್ಲಿಸಿದ್ದರು.

ಪ್ರಕರಣದಲ್ಲಿ ಮಹಮ್ಮದ್ ನಲ್‍ಪಾಡ್, ಅರುಣ್‍ಬಾಬು, ಶ್ರೀಕೃಷ್ಣ, ಮಂಜುನಾಥ್, ಅಶ್ರಫ್, ಬಾಲಕೃಷ್ಣ, ಅಭಿಷೇಕ್ ಆರೋಪಿಗಳಾಗಿದ್ದರು. ಜಾಮೀನು ಪಡೆಯಲು ಐದು ಬಾರಿ ನಡೆಸಿದ ಪ್ರಯತ್ನ ವಿಫಲವಾಗಿತ್ತು. ಅಧೀನ ನ್ಯಾಯಾಲಯ ಹಾಗೂ ಹೈಕೋರ್ಟ್‍ನಲ್ಲಿ ಜಾಮೀನು ದೊರೆತಿರಲಿಲ್ಲ. ಚಾರ್ಜ್‍ಶೀಟ್ ಸಲ್ಲಿಕೆಯಾದ ನಂತರ ಸುದೀರ್ಘ ವಿಚಾರಣೆಯಾಗಿ ಸದ್ಯ ಜಾಮೀನು ದೊರೆತಿದೆ.
ನಲ್‍ಪಾಡ್ ಪರ ಬಿ.ವಿ.ಆಚಾರ್ಯ ಹಾಗೂ ಪ್ರಾಸಿಕ್ಯೂಷನ್ ಪರ ವಿಶೇಷ ಅಭಿಯೋಜಕರಾಗಿ ಶಾಮ್‍ಸುಂದರ್ ವಾದ ಮಂಡಿಸಿದ್ದರು. ವಿದ್ವತ್ ಮೇಲೆ ಹಲ್ಲೆ ನಡೆಸಿದ್ದ ಪ್ರಕರಣ ರಾಜ್ಯ ಹಾಗೂ ದೇಶಾದ್ಯಂತ ದೊಡ್ಡ ಸುದ್ದಿಯಾಗಿತ್ತು.

ಫರ್ಜಿ ಕೆಫೆಯಲ್ಲಿ ಹಲ್ಲೆ ನಡೆಸಿದ್ದಲ್ಲದೆ ಆಸ್ಪತ್ರೆಗೂ ನುಗ್ಗಿ ಹಲ್ಲೆ ನಡೆಸಿದ್ದಾರೆಂಬ ವಿಷಯ ಭಾರೀ ಚರ್ಚೆಗೆ ಕಾರಣವಾಗಿ ದೇಶಾದ್ಯಂತ ಸುದ್ದಿಯಾಗಿತ್ತಲ್ಲದೆ ರಾಜಕೀಯ ಪಕ್ಷಗಳ ಆರೋಪ-ಪ್ರತ್ಯಾರೋಪಕ್ಕೂ ಕಾರಣವಾಗಿತ್ತು.
ಈ ಪ್ರಕರಣದಲ್ಲಿ ಆರೋಪಿ ಜಾಮೀನು ಪಡೆಯಲು ನಡೆಸಿದ ಪ್ರಯತ್ನ ನಾಲ್ಕೈದು ಬಾರಿ ವಿಫಲವಾಗಿತ್ತು.
ಸಂಭ್ರಮಿಸಬೇಡಿ: ಜಾಮೀನು ದೊರೆಯಿತೆಂದು ಪಟಾಕಿ ಸಿಡಿಸಿ ಸಂಭ್ರಮಿಸಬೇಡಿ ಎಂದು ನಲ್‍ಪಾಡ್ ಪರ ವಕೀಲರಾದ ಬಿ.ವಿ.ಆಚಾರ್ಯ ಅವರು ನಲ್‍ಪಾಡ್ ಕುಟುಂಬದವರಿಗೆ ಸಲಹೆ ಮಾಡಿದ್ದಾರೆ.

ನ್ಯಾಯಾಲಯದಿಂದ ಜಾಮೀನು ದೊರೆತ ಬಳಿಕ ನಲ್‍ಪಾಡ್ ಸ್ನೇಹಿತರು, ಅವರ ಕುಟುಂಬದವರು ಜೈಲಿನ ಮುಂದೆ ಪಟಾಕಿ ಸಿಡಿಸಿ ಸಂಭ್ರಮಿಸುವುದಾಗಲಿ, ಮೆರವಣಿಗೆ ಮಾಡುವುದಾಗಲಿ, ಜೈಲಿನ ಬಳಿ ಗುಂಪು ಸೇರುವುದಾಗಲಿ ಯಾವುದನ್ನೂ ಮಾಡದಿರುವುದು ಒಳ್ಳೆಯದು. ಅವರ ಕುಟುಂಬದವರು ಕೆಲವರು ಜೈಲಿನ ಬಳಿ ಹೋದರಷ್ಟೆ ಸಾಕು ಎಂದು ಕಿವಿಮಾತು ಹೇಳಿದ್ದಾರೆ.
ಇಂದೇ ಬಿಡುಗಡೆ ಸಾಧ್ಯತೆ: ಜಾಮೀನು ಪ್ರತಿ ಇಂದು ಸಂಜೆ 4 ಗಂಟೆ ವೇಳೆಗೆ ಸಿಗುವ ಸಾಧ್ಯತೆಯಿದ್ದು, 5 ಗಂಟೆ ವೇಳೆಗೆ ಪರಪ್ಪನ ಅಗ್ರಹಾರ ತಲುಪಲಿದೆ. ಇಂದೇ ನಲ್‍ಪಾಡ್ ಜೈಲಿನಿಂದ ಬಿಡುಗಡೆಯಾಗುವ ಸಾಧ್ಯತೆ ಇದೆ.
ಜೈಲಿನಲ್ಲೇ ಸಂಭ್ರಮ: ಜಾಮೀನು ದೊರೆತ ಸುದ್ದಿ ಕೇಳುತ್ತಿದ್ದಂತೆ ಜೈಲಿನಲ್ಲೇ ನಲ್‍ಪಾಡ್ ನಿಟ್ಟುಸಿರು ಬಿಟ್ಟಿದ್ದಾನೆ. ಪ್ರತಿ ಬಾರಿ ಜಾಮೀನು ಅರ್ಜಿ ವಿಚಾರಣೆಗೆ ಬರುತ್ತಿದ್ದಂತೆ ಟಿವಿ ಮುಂದೆ ಹಾಜರಾಗುತ್ತಿದ್ದ ನಲ್‍ಪಾಡ್ ಜಾಮೀನು ದೊರೆಯದೆ ತೀವ್ರ ಬೇಸರಗೊಳ್ಳುತ್ತಿದ್ದ. ಕೆಲವೊಮ್ಮೆ ಕಿರುಚಾಡುತ್ತಿದ್ದ ಎಂದು ತಿಳಿದುಬಂದಿದೆ.
ಆದರೆ, ಇಂದು ಜಾಮೀನು ಅರ್ಜಿಯ ತೀರ್ಪು ಇದ್ದುದರಿಂದ ಬೆಳಗ್ಗೆ 10 ಗಂಟೆಗೆ ಟಿವಿ ಮುಂದೆ ಹಾಜರಾಗಿದ್ದ ನಲ್‍ಪಾಡ್ ಜಾಮೀನು ದೊರೆತ ತೀರ್ಪು ಹೊರಬೀಳುತ್ತಿದ್ದಂತೆ ಸಂಭ್ರಮಪಟ್ಟಿದ್ದಾನೆ.
116 ದಿನಗಳಿಂದ ಜೈಲಿನಲ್ಲಿದ್ದಾತನಿಗೆ ಜಾಮೀನು ದೊರೆಯುತ್ತಿದ್ದಂತೆ ಖುಷಿಯಿಂದ ಸಂಭ್ರಮಿಸಿದ ಎಂದು ಜೈಲಿನ ಮೂಲಗಳಿಂದ ತಿಳಿದುಬಂದಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ