ಮಹಾಘಟಬಂಧನ್ ಜನರ ಭಾವನೆಯ ಪ್ರತೀಕವಾಗಿದೆ – ರಾಹುಲ್ ಗಾಂಧಿ

ಮುಂಬೈ, ಜೂ.13-ಪ್ರಧಾನಿ ನರೇಂದ್ರ ಮೋದಿ, ಬಿಜೆಪಿ ಹಾಗೂ ಆರ್‍ಎಸ್‍ಎಸ್ ವಿರುದ್ಧ ವಿರೋಧ ಪಕ್ಷಗಳ ಮಹಾಘಟಬಂಧನ್(ಮಹಾ ಮೈತ್ರಿ) ಜನರ ಭಾವನೆಯ ಪ್ರತೀಕವಾಗಿದೆ ಎಂದು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಹೇಳಿದ್ದಾರೆ.
ಮುಂಬೈನಲ್ಲಿ ಇಂದು ಸುದ್ದಿಗಾರರೊಂದಿಗೆ ಮಾತನಾಡಿ ಮೋದಿ ಮತ್ತು ಬಿಜೆಪಿ ವಿರುದ್ಧ ವಾಗ್ದಾಳಿ ಮುಂದುವರಿಸಿದ ರಾಹುಲ್, ಕೇವಲ ರಾಜಕೀಯ ಪಕ್ಷಗಳ ಉದ್ದೇಶ ಮಾತ್ರವಲ್ಲ. ಇದು ಜನರ ಭಾವನೆಗಳ ಪ್ರತೀಕವೂ ಆಗಿದೆ. ಪ್ರಧಾನಿ ಮತ್ತು ಅವರ ಪಕ್ಷವನ್ನು ಮಣಿಸಲು ಮಹಾಘಟಬಂಧನ್ ರಚನೆಯಾಗಬೇಕೆಂಬುದು ಜನರ ಅಭಿಲಾಷೆಯಾಗಿದೆ ಎಂದು ಹೇಳಿದರು.
ಮಹಾಮೈತ್ರಿಯ ಸಾರಥ್ಯವನ್ನು ಯಾರೂ ವಹಿಸುತ್ತಾರೆ ಎಂಬ ಪ್ರಶ್ನೆಗೆ ಕಾಂಗ್ರೆಸ್ ಅಧ್ಯಕ್ಷರು ಉತ್ತರಿಸಲಿಲ್ಲ. ಮೋದಿ ಮತ್ತು ಬಿಜೆಪಿ ವಿರುದ್ಧ ಎದ್ದಿರುವ ಧ್ವನಿಯೊಂದಿಗೆ ಸೇರಲು ಕಾಂಗ್ರೆಸ್ ಯತ್ನಿಸುತ್ತಿದೆ ಹಾಗೂ ಈ ನಿಟ್ಟಿನಲ್ಲಿ ಪಕ್ಷ ಕಾರ್ಯೋನ್ಮುಖವಾಗಿದೆ ಎಂದು ಅವರು ತಿಳಿಸಿದರು.
ಮೋದಿ ಮತ್ತು ಬಿಜೆಪಿ, ಸಂವಿಧಾನ ಮತ್ತು ದೇಶದ ಇತರ ಸಂಸ್ಥೆಗಳ ಮೇಲೆ ಆಕ್ರಮಣಗಳನ್ನು ನಡೆಸುತ್ತಿವೆ ಎಂದು ರಾಹುಲ್ ಆರೋಪಿಸಿದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ