ರಜನಿಕಾಂತ್ ಅಭಿನಯದ ಕಾಲಾ ಚಿತ್ರ ಪ್ರದರ್ಶನಕ್ಕೆ ಕನ್ನಡ ಪರ ಸಂಘಟನೆಗಳ ತೀವ್ರ ವಿರೋಧ: ಚಿತ್ರ ಮಂದಿಗಳ ಮುಂದೆ ಪ್ರತಿಭಟನೆ

ಬೆಂಗಳೂರು:ಜೂ-7: ಸೂಪರ್ ಸ್ಟಾರ್ ರಜನಿಕಾಂತ್ ಅಭಿನಯದ ಕಾಲಾ ಚಿತ್ರಕ್ಕೆ ರಾಜ್ಯಾದ್ಯಂತ ಭಾರೀ ವಿರೋಧ ಕಂಡುಬಂದಿದ್ದು ಕನ್ನಡ ಪರ ಸಂಘಟನೆಗಳು ಕಾಲಾ ಚಿತ್ರ ಪ್ರದರ್ಶನವನ್ನು ವಿರೋಧಿಸಿ ಪ್ರತಿಭಟನೆ ನಡೆಸುತ್ತಿದ್ದಾರೆ.

ರಾಜಧಾನಿ ಬೆಂಗಳೂರಿನಲ್ಲಿ ಕನ್ನಡ ಪರ ಸಂಘಟನೆಗಳ ಕಾರ್ಯಕರ್ತರು ಕಾಲಾ ಚಿತ್ರ ತೆರೆಕಾಣುತ್ತಿದ್ದ ಚಿತ್ರಮಂದಿರಗಳ ಮುಂದೆ ಪ್ರತಿಭಟನೆ ನಡೆಸಿ ಚಿತ್ರವನ್ನು ನೋಡದಂತೆ ಅಭಿಮಾನಿಗಳಿಗೆ ಮನವಿ ಮಾಡುತ್ತಿದ್ದಾರೆ. ಈ ವೇಳೆ ಹಲವು ಕಾರ್ಯಕರ್ತರನ್ನು ಪೊಲೀಸರು ಬಂಧಿಸಿದ್ದಾರೆ.

ಕನ್ನಡಪರ ಸಂಘಟನೆಗಳು ಪ್ರತಿಭಟನೆ ಹಿನ್ನೆಲೆಯಲ್ಲಿ ಮಲ್ಲೇಶ್ವರದ ಮಂತ್ರಿಮಾಲ್, ಓರಿಯನ್ ಮಾಲ್, ಗೋಪಾಲನ್ ಮಾಲ್ ಸೇರಿದಂತೆ ಪ್ರಮುಖ ಮಾಲ್ ಗಳಲ್ಲಿ ಚಿತ್ರ ಪ್ರದರ್ಶನ ರದ್ದಾಗಿದೆ ಎಂದು ತಿಳಿದುಬಂದಿದೆ. ಇನ್ನು ಮೈಸೂರಿನಲ್ಲೂ ಸಹ ಪ್ರತಿಭಟನಾಕಾರರ ಮನವಿಗೆ ಸ್ಪಂಧಿಸಿದ ಚಿತ್ರಮಂದಿರದ ಮಾಲೀಕರು ಚಿತ್ರವನ್ನು ರದ್ದು ಮಾಡಿದ್ದಾರೆ.

ತೀವ್ರ ವಿರೋಧದ ನಡುವೆಯೂ ಬಳ್ಳಾರಿಯ ರಾಧಿಕಾ ಚಿತ್ರಮಂದಿರದಲ್ಲಿ ಕಾಲಾ ಚಿತ್ರ ಪ್ರದರ್ಶನವಾಗುತ್ತಿದೆ. ಸದ್ಯಕ್ಕೆ ಕರ್ನಾಟಕದಲ್ಲಿ ಕಾಲಾ ಚಿತ್ರ ಪ್ರದರ್ಶನವಾಗುತ್ತಿರುವ ಮೊದಲ ಚಿತ್ರಮಂದಿರ ಇದಾಗಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ