ಕುಡಿದ ಅಮಲಿನಲ್ಲಿ ಧಾಂಧಲೆ : ಭೋಜ್‌ಪುರಿ ನಟ ರಾಜಾ ಮತ್ತೆ ಅರೆಸ್ಟ್‌

ಹೊಸದಿಲ್ಲಿ : ಈ ಮೊದಲು ನಟಿ ಶ್ವೇತಾ ತಿವಾರಿ ಅವರನ್ನು ಮದುವೆಯಾಗಿ ಬಳಿಕ ಆಕೆಯಿಂದ ದೂರವಾಗಿ ಸುದ್ದಿಯ ಕೇಂದ್ರವಾಗಿದ್ದ ಭೋಜ್‌ಪುರಿ ನಟ ರಾಜಾ ಚೌಧರಿ ಇದೀಗ ಮತ್ತೂಮ್ಮೆ ಬಂಧನಕ್ಕೆ ಗುರಿಯಾಗಿದ್ದಾರೆ.
ವರದಿಗಳ ಪ್ರಕಾರ ರಾಜಾ ಚೌಧರಿ ಅವರು ಕುಡಿದ ಅಮಲಿನಲ್ಲಿ ಸೆಟ್‌ನಲ್ಲಿ ಧಾಂಧಲೆ ನಡೆಸಿ ಉತ್ತರ ಪ್ರದೇಶದ ಪೊಲೀಸರ ವಿರುದ್ಧ ಹರಿಹಾಯ್ದು ಚಿತ್ರ ನಿರ್ಮಾಪಕರು,ಪೊಲೀಸರು ಮತ್ತು ವೈದ್ಯರ ಮೇಲೆ ಹಲ್ಲೆ ನಡೆಸಿದ್ದಾರೆ. ಅದಕ್ಕಾಗಿ ಅವರನ್ನು ಬಂಧಿಸಲಾಗಿದೆ.
ಲೈವ್‌ ಹಿಂದುಸ್ಥಾನ್‌ ಡಾಟ್‌ ಕಾಮ್‌ ವರದಿಯ ಪ್ರಕಾರ ರಾಜಾ ಚೌಧರಿ ಅವರು ಅನೇಕರ ಮೇಲೆ ಹಲ್ಲೆಗೈದು ಜೀವ ಬೆದರಿಕೆ ಒಡ್ಡಿದ್ದಾರೆ ಎಂದು ಫಿಲಂ ಕ್ಯಾಮೆರಾ ನಿರ್ದೇಶಕ ರಾಜು ಆರ್‌ ದ್ವಿವೇದಿ ಅವರು ಪೊಲೀಸರಿಗೆ ದೂರು ನೀಡಿದ್ದರು. ಆ ಪ್ರಕಾರ ಆತನ ವಿರುದ್ಧ ಪೊಲೀಸರು ಐಪಿಸಿ ಸೆ.323, 504 ಮತ್ತು 506 ಪ್ರಕಾರ ಕೇಸು ದಾಖಲಿಸಿಕೊಂಡಿದ್ದಾರೆ.
ರಾಜಾ ಅವರು ಚಿತ್ರ ನಿರ್ಮಾಕ ಸರ್ವೇಶ್‌ ಠಾಕೂರ್‌ ಅವರ “ಸಂಗಂ ರಿಷ್‌ತೋಂ ಕಾ’ ಚಿತ್ರದಲ್ಲಿ ನಟಿಸುತ್ತಿದ್ದರು. ಆದರೆ ಸೆಟ್‌ನಲ್ಲಿ ಅತ್ಯಂತ ವ್ಯಗ್ರರಾಗಿ ಎಲ್ಲರ ವಿರುದ್ಧ ರೇಗುತ್ತಿದ್ದ ಕಾರಣಕ್ಕೆ ಠಾಕೂರ್‌ ಅವರು ರಾಜಾ ಅವರನ್ನು ತಮ್ಮ ನಿರ್ಮಾಣದಿಂದಲೇ ಹೊರಹಾಕಿದ್ದರು.
ಇದರಿಂದ ಸಿಟ್ಟಿಗೆದ್ದು ಕುಡಿದ ಅಮಲಿನಲ್ಲಿ ಸೆಟ್‌ಗೆ ಬಂದ ರಾಜಾ, ಠಾಕೂರ್‌ ಅವರ ಮೇಲೆ ಎರಗಿದರಲ್ಲದೆ ಚಿತ್ರದ ಛಾಯಾಚಿತ್ರಗ್ರಾಹಕ ದ್ವಿವೇದಿ ಅವರ ಮೇಲೂ ಎರಗಿದರು. ಯಾವುದೋ ಒಬ್ಬ ಸಾಧು ತನ್ನ ಮದ್ಯಪಾನದಲ್ಲಿ ಅದೇನೋ ಬೆರೆಸಿ ಕೊಟ್ಟದ್ದೇ ಈ ಎಡವಟ್ಟಿಗೆ ಕಾರಣವಾಯಿತೆಂದು ರಾಜಾ ಹೇಳಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ