ಆರ್‏ಎಸ್ಎಸ್ ಸಮಾವೇಶದಲ್ಲಿ ಪಾಲ್ಗೊಳ್ಳದಂತೆ ಹೇಳುವವರಿಗೆ ನಾಗ್‏ಪುರದಲ್ಲೇ ಉತ್ತರಿಸುವೆ: ಪ್ರಣಬ್ ಮುಖರ್ಜಿ

ದೆಹಲಿ: ಆರ್‏ಎಸ್ಎಸ್ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳದಂತೆ ಒತ್ತಡ ಹೇರುತ್ತಿರುವವರಿಗೆ ಜೂನ್ 7ರಂದು ನಾಗ್ ಪುರದಲ್ಲಿ ಉತ್ತರ ಹೇಳುವುದಾಗಿ ಮಾಜಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಹೇಳಿದ್ದಾರೆ.
“ನಾನು ಹೇಳಬೇಕಾಗಿರುವುದನ್ನು ನಾಗ್ ಪುರದಲ್ಲಿ ಹೇಳುತ್ತೇನೆ. ನನಗೆ ಆರ್‏ಎಸ್ಎಸ್ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳದಿರುವಂತೆ ಕೋರಿ ಹಲವು ಪತ್ರಗಳು, ದೂರವಾಣಿ ಕರೆಗಳು ಬಂದಿದೆ. ನಾನು ಯಾವುದಕ್ಕೂ ಪ್ರತಿಕ್ರಯಿಸಿಲ್ಲ. ಅವರಿಗೆಲ್ಲಾ ನಾನು ನಾಗ್ ಪುರದಲ್ಲಿಯೇ ಪ್ರತಿಕ್ರಿಯೆ ನೀಡುತ್ತೇನೆ” ಬೆಂಗಾಲಿ ದಿನಪತ್ರಿಕೆ ಆನಂದ್ ಬಜಾರ್ ಪತ್ರಿಕಾದಲ್ಲಿ ಮುಖರ್ಜಿ ಅವರ ಈ ಹೇಳಿಕೆ ದಾಖಲಾಗಿದೆ.
ಜೈರಾಮ್ ರಮೇಶ್, ಸಿ.ಕೆ. ಜಾಫರ್ ಶರೀಫ್ ಸೇರಿ ಹಲವಾರು ಹಿರಿಯ ಕಾಂಗ್ರೆಸ್ ನಾಯಕರು ಮುಖರ್ಜಿ ಅವರ ನಿರ್ಧಾರವನ್ನು ಮರುಪರಿಶೀಲಿಸುವಂತೆ ಮನವಿ ಮಾಡಿದ್ದರು.
ಕೇರಳ ವಿಧಾನಸಭೆ ವಿರೋಧ ಪಕ್ಷದ ನಾಯಕ ರಮೇಶ್ ಚೆನ್ನಿಠಲ ’ಮಾಜಿ ರಾಷ್ಟ್ರಪತಿಗಳು ಆರ್‏ಎಸ್ಎಸ್ ಸಮಾವೇಶದಲ್ಲಿ ಪಾಲ್ಗೊಳ್ಳುವುದರಿಂದ ಜಾತ್ಯಾತೀತ ಮನಸ್ಸುಗಳಿಗೆ ಘಾಸಿಯಾಗಲಿದೆ’ ಎಂದಿದ್ದಾರೆ.
ಆದರೆ ಕಾಂಗ್ರೆಸ್ ಮುಖಂಡರಾದ ಪಿ. ಚಿದಂಬರಂ ಮುಖರ್ಜಿಯವರು ಆರ್‏ಎಸ್ಎಸ್ ಕಾರ್ಯಕ್ರಮಕ್ಕೆ ಹಾಜರಾಗಬೇಕು. ಅಲ್ಲಿ ಮಾತನಾಡುವ ವೇಳೆ ಆರ್ ಎಸ್ ಎಸ್ ಸಿದ್ದಾಂತದಲಿರುವ ದೋಷಗಳನ್ನು ಎತ್ತಿ ತೋರಬೇಕು ಎಂದಿದ್ದಾರೆ. ಮುಖರ್ಜಿಯವರು ಆರ್‏ಎಸ್ಎಸ್ ಆಮಂತ್ರಣವನ್ನು ಒಪ್ಪಿದ್ದಾರೆ. ಅದರಂತೆ ಅವರು ಸಮಾವೇಶಕ್ಕೆ ಹಾಜರಾಗಬೇಕು ಎಂದು ಚಿದಂಬರಂ ಹೇಳಿದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ