ನಮ್ಮ ಕುಟುಂಬದ ಆಸ್ತಿ ಬಗ್ಗೆ ಅನುಮಾನ ಇದ್ದರೆ ತನಿಖೆ ಮಾಡಲಿ -ಎಚ್.ಡಿ.ರೇವಣ್ಣ

ಹಾಸನ ,ಏ.27- ನಮ್ಮ ಕುಟುಂಬದ ಆಸ್ತಿ ಬಗ್ಗೆ ಅನುಮಾನ ಇದ್ದರೆ ತನಿಖೆ ಮಾಡಲಿ ಅಕ್ರಮವಾಗಿದ್ದರೆ ಮುಟ್ಟುಗೋಲು ಹಾಕಿಕೊಳ್ಳಲಿ ಎಂದು ಮಾಜಿ ಸಚಿವ ಎಚ್.ಡಿ.ರೇವಣ್ಣ ಸವಾಲು ಹಾಕಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹೊಳೆನರಸೀಪುರ ಕಾಂಗ್ರೆಸ್ ಅಭ್ಯರ್ಥಿ ಬಾಗೂರು ಮಂಜೇಗೌಡ ವಿರುದ್ಧ ತೀವ್ರ ವಾಗ್ದಾಳಿ ನಡೆಸಿ ಮುಖ್ಯಮಂತ್ರಿಗಳಿಗೆ ತಾಕತ್ತಿದ್ದರೆ ಸಾರಿಗೆ ಇಲಾಖೆ ಕಮಿಷನ್ ಸಂಗ್ರಹದ ಬಗ್ಗೆ ತನಿಖೆ ನಡೆಸಲಿ ಎಂದು ಹೇಳಿದರು.
ಮಂಜೇಗೌಡ ಆದಾಯಕ್ಕಿಂತ 435 ಪರ್ಸೆಂಟ್ ಅಧಿಕ ಆಸ್ತಿ ಹೊಂದಿದ್ದಾರೆ. ಲೋಕಾಯುಕ್ತ ದಾಳಿಯಲ್ಲಿ ಇದು ಸಾಬೀತಾಗಿದೆ. ಇಂಥವರಿಗೆ ನಮ್ಮ ಕುಟುಂಬದ ಆಸ್ತಿ ಬಗ್ಗೆ ಮಾತನಾಡುವ ನೈತಿಕತೆ ಇಲ್ಲ ಎಂದರು.
ಮಂಜೇಗೌಡರ ಮೇಲೆ ಕೇಸು ಇದ್ದಾಗಲೆ ರಾಜೀನಾಮೆ ಹೇಗೆ ಅಂಗೀಕಾರ ಸಾಧ್ಯ ಎಂದು ಪ್ರಶ್ನಿಸಿದ ರೇವಣ್ಣ , ನನ್ನ ಬಳಿ ಏಳು ಸಾವಿರ ಕೋಟಿ ಆಸ್ತಿ ಇದೆ ಎಂದು ಹೇಳಿದ್ದಾರಲ್ಲ. ಅವರದೇ ಸರ್ಕಾರ ಇದೆ. ಯಾವುದೇ ತನಿಖೆ ಮಾಡಿಸಲಿ ನನ್ನ 32 ಕೋಟಿ ಬಿಟ್ಟು ಉಳಿದದ್ದನ್ನೆಲ್ಲ ಮುಟ್ಟುಗೋಲು ಹಾಕಿಕೊಳ್ಳಲಿ ಎಂದು ತಿಳಿಸಿದರು.
ಕಾಂಗ್ರೆಸ್‍ನಲ್ಲಿ ಬೇರೆ ಯಾರೂ ಸಮರ್ಥ ಅಭ್ಯರ್ಥಿ ಇರಲಿಲ್ಲವೆ. ಇಂತಹ ಭ್ರಷ್ಟ ಮಂಜೇಗೌಡರನ್ನು ತಂದು ಚುನಾವಣೆಗೆ ನಿಲ್ಲಿಸಿದ್ದಾರೆ. ಸಿಎಂಗೆ ನಾಚಿಕೆ, ಮಾನ ಏನಾದರೂ ಇದೆಯಾ ಎಂದು ಕೆಂಡಮಂಡಲರಾಗಿ ನುಡಿದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ