ನಟ ಸಾಯಿಕುಮಾರ್ ಬದಲಾವಣೆ ಬೇಡ-ಬಿಎಸ್‍ವೈಗೆ ಬೆಂಬಲಿಗರ ಬಿಗಿಪಟ್ಟು :

ಬಾಗೇಪಲ್ಲಿ,,ಏ.23- ಬಾಗೇಪಲ್ಲಿ ವಿಧಾನಸಭಾ ಕ್ಷೇತ್ರದಿಂದ ಈಗಾಗಲೇ ಬಿಜೆಪಿಯಿಂದ ಘೋಷಣೆ ಮಾಡಿರುವ ಚಿತ್ರನಟ ಸಾಯಿಕುಮಾರ್ ಅವರನ್ನು ಬದಲಾಯಿಸಬಾರದೆಂದು ಬೆಂಬಲಿಗರು ರಾಜ್ಯಾಧ್ಯಕ್ಷ ಯಡಿಯೂರಪ್ಪ ಅವರ ಮನೆ ಮುಂದೆ ಅಹೋರಾತ್ರಿ ಧರಣಿ ನಡೆಸಿದರು.
ಕಳೆದ ರಾತ್ರಿಯೇ ಡಾಲರ್ಸ್ ಕಾಲೋನಿಯ ದವಳಗಿರಿ ನಿವಾಸದ ಮುಂದೆ ಧರಣಿ ನಡೆಸಿದ ನೂರಾರು ಕಾರ್ಯಕರ್ತರು ಯಾವುದೇ ಕಾರಣಕ್ಕೂ ಸಾಯಿಕುಮಾರ್ ಅವರನ್ನು ಬದಲಾಯಿಸಬಾರದೆಂದು ಬಿಗಿಪಟ್ಟು ಹಿಡಿದರು.
ಸಾಯಿಕುಮಾರ್ ಅವರಿಗೆ ತಕ್ಷಣವೇ ಬಿ ಫಾರಂ ನೀಡಿ ನಾಮಪತ್ರ ಸಲ್ಲಿಸಲು ಅನುವು ಮಾಡಿಕೊಡಬೇಕು, ಈ ಬಾರಿ ಅವರನ್ನು ಹೆಚ್ಚಿನ ಮತಗಳ ಅಂತರದಿಂದ ಗೆಲ್ಲಿಸಿಕೊಡುತ್ತೇವೆ ಎಂದು ರಾಜ್ಯಾಧ್ಯಕ್ಷ ಯಡಿಯೂರಪ್ಪನವರಿಗೆ ಮನವಿ ಮಾಡಿದರು.
ಒಂದು ಹಂತದಲ್ಲಿ ಯಡಿಯೂರಪ್ಪನವರ ನಿವಾಸದ ಬಳಿ ಹಾಕಿದ್ದ ಬ್ಯಾರಿಕೇಡ್‍ನ್ನು ಮುರಿದು ಒಳನುಗ್ಗಲು ಯತ್ನಿಸಿದರು. ಈ ವೇಳೆ ಸ್ಥಳದಲ್ಲಿದ್ದ ಪೆÇಲೀಸರು ತಡೆದು ಬಿಎಸ್‍ವೈ ಅವರ ಭೇಟಿಗೆ ಅವಕಾಶ ಮಾಡಿಕೊಡುವ ಭರವಸೆ ನೀಡಿದರು.
ಬಳಿಕ ಯಡಿಯೂರಪ್ಪ ಬಂದು ಮನವಿ ಪತ್ರ ಸ್ವೀಕರಿಸಿದರು. ಬಾಗೇಪಲ್ಲಿಯಿಂದ ಸಾಯಿಕುಮಾರ್ ಅವರನ್ನು ಬದಲಾವಣೆ ಮಾಡುವುದು, ಬಿಡುವುದು ವರಿಷ್ಠರಿಗೆ ಬಿಟ್ಟ ವಿಷಯ. ಈ ಮೊದಲು ಮೊದಲ ಪಟ್ಟಿಯಲ್ಲಿ ಅವರಿಗೆ ಟಿಕೆಟ್ ಘೋಷಣೆ ಮಾಡಲಾಗಿತ್ತು. ಕೆಲವರು ವಿರೋಧ ವ್ಯಕ್ತಪಡಿಸಿರಬಹುದು. ಆದರೂ ಅವರನ್ನು ಮನವೊಲಿಸುವ ಆಶ್ವಾಸನೆ ನೀಡಿದರು.
ಸಾಯಿಕುಮಾರ್ ಗೆಲ್ಲುವ ಅಭ್ಯರ್ಥಿಯಾಗಿದ್ದರಿಂದಲೇ ಟಿಕೆಟ್ ಘೋಷಣೆ ಮಾಡಲಾಗಿತ್ತು. ಕಾರ್ಯಕರ್ತರು ಊಹಾಪೆÇೀಹಗಳಿಗೆ ತಲೆಕೆಡಿಸಿಕೊಳ್ಳದೆ ಅವರ ಪರ ಕ್ಷೇತ್ರದಲ್ಲಿ ಕೆಲಸ ಮಾಡಿ ಹೆಚ್ಚಿನ ಮತಗಳ ಅಂತರದಿಂದ ಗೆಲ್ಲಿಸಿಕೊಡಬೇಕೆಂದುಕಾರ್ಯಕರ್ತರಿಗೆ ಸೂಚಿಸಿದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ