ಬಾದಾಮಿಯಲ್ಲಿ ಸಿಎಂ ವಿರುದ್ಧ ಯಡಿಯೂರಪ್ಪ ಅವರೇನು ಅಮಿತ್ ಷಾ ಅವರೇ ಬಂದು ಸ್ಪರ್ಧಿಸಿದರೂ ಗೆಲ್ಲುವುದು ನಮ್ಮ ಸಿದ್ದರಾಮಯ್ಯನವರೇ: ಸಚಿವ ಆರ್.ಬಿ.ತಿಮ್ಮಾಪುರ್

ಬೆಂಗಳೂರು, ಏ.22-ಬಾದಾಮಿಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಯಡಿಯೂರಪ್ಪ ಅವರೇನು ಅಮಿತ್ ಷಾ ಅವರೇ ಬಂದು ಸ್ಪರ್ಧಿಸಿದರೂ ಗೆಲ್ಲುವುದು ನಮ್ಮ ಸಿದ್ದರಾಮಯ್ಯನವರೇ ಎಂದು ಸಚಿವ ಆರ್.ಬಿ.ತಿಮ್ಮಾಪುರ್ ಹೇಳಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನನಗೆ ಟಿಕೆಟ್ ಕೈ ತಪ್ಪಿದ್ದಕ್ಕೆ ಯಾವುದೇ ಬೇಸರವಿಲ್ಲ. ನಾನು ಪಕ್ಷದ ಶಿಸ್ತಿನ ಸಿಪಾಯಿ. ಹೈಕಮಾಂಡ್ ತೀರ್ಮಾನಕ್ಕೆ ಬದ್ಧನಾಗಿರುತ್ತೇನೆ. ಸಿದ್ದರಾಮಯ್ಯ ಅವರು ಬಾದಾಮಿಯಲ್ಲಿ ಸ್ಪರ್ಧಿಸಲು ಮುಂದಾಗಿರುವುದು ನಮಗೆ ಹೆಮ್ಮೆಯ ವಿಷಯ. ನಾವೆಲ್ಲರೂ ಸೇರಿ ಅವರನ್ನು ಗೆಲ್ಲಿಸುತ್ತೇನೆ. ಅವರ ವಿರುದ್ಧ ಯಡಿಯೂರಪ್ಪ ಆಗಲಿ, ಅಮಿತ್ ಷಾ ಬಂದು ನಿಂತರೂ ನಾವೇ ಗೆಲ್ಲುವುದು ಎಂದು ಹೇಳಿದರು.

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಉತ್ತರ ಕರ್ನಾಟಕ ಭಾಗದಲ್ಲಿ ಚುನಾವಣೆಗೆ ಸ್ಪರ್ಧಿಸಬೇಕೆಂದು ನಾವು ಮೊದಲಿನಿಂದ ಒತ್ತಡ ಹೇರುತ್ತಿದ್ದೆವು. ಅವರು ಇಲ್ಲಿ ಸ್ಪರ್ಧಿಸುವುದರಿಂದ ಕಾಂಗ್ರೆಸ್‍ಗೆ ಮತ್ತಷ್ಟು ಬಲ ಬರುತ್ತದೆ. ಹೆಚ್ಚಿನ ಸ್ಥಾನಗಳಲ್ಲಿ ಗೆಲ್ಲಲು ಸಾಧ್ಯವಾಗುತ್ತದೆ ಎಂದು ಆರ್.ಬಿ.ತಿಮ್ಮಾಪುರ್ ಹೇಳಿದರು.
ಉತ್ತಮ ಆಡಳಿತ ನಡೆಸಿರುವ ಸಿದ್ದರಾಮಯ್ಯನವರು ಯಾವುದೇ ಕ್ಷೇತ್ರದಲ್ಲಿ ಸ್ಪರ್ಧಿಸಿದರೂ ಗೆಲುವು ಸಾಧಿಸುತ್ತಾರೆ. ಚಾಮುಂಡೇಶ್ವರಿ ಬಾದಾಮಿ ಎರಡರಲ್ಲೂ ಅವರು ಜಯಗಳಿಸುತ್ತಾರೆ ಎಂದು ಹೇಳಿದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ