ಸಚಿವ ಕೆ.ಜೆ.ಜಾರ್ಜ್ ರಿಂದ ಮಾಜಿ ಸಚಿವ ಅಂಬರೀಶ್ ಅವರ ಮನವೊಲಿಕೆ ಯತ್ನ

ಬೆಂಗಳೂರು, ಏ.18- ಮಾಜಿ ಸಚಿವ ಅಂಬರೀಶ್ ಅವರ ಮನವೊಲಿಕೆ ಪ್ರಯತ್ನವನ್ನು ಬೆಂಗಳೂರು ನಗರಾಭಿವೃದ್ಧಿ ಸಚಿವ ಕೆ.ಜೆ.ಜಾರ್ಜ್ ಇಂದು ಮಾಡಿದರು.
ಅಂಬರೀಶ್ ಅವರ ನಿವಾಸಕ್ಕೆ ತೆರಳಿದ ಜಾರ್ಜ್ ಅವರು ಮುಖ್ಯಮಂತ್ರಿ ಪರವಾಗಿ ಅಂಬರೀಶ್ ಅವರ ಮನವೊಲಿಸಲು ಪ್ರಯತ್ನ ನಡೆಸಿದರು. ಸುಮಾರು ಒಂದು ಗಂಟೆ ಕಾಲ ಮಾತುಕತೆ ನಡೆಸಿದರು.

ಮಂಡ್ಯ ವಿಧಾನಸಭಾ ಕ್ಷೇತ್ರದಲ್ಲಿ ಸ್ಪರ್ಧಿಸಲು ಟಿಕೆಟ್ ನೀಡಿದ್ದರೂ ಅಂಬರೀಶ್ ಬಿ ಫಾರಂ ಪಡೆಯದ ಹಿನ್ನೆಲೆಯಲ್ಲಿ ಮನವೊಲಿಸುವ ಪ್ರಯತ್ನವನ್ನು ಸಚಿವರು ಮಾಡಿದ್ದಾರೆ.

ಅಂಬರೀಶ್ ಭೇಟಿ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವ ಜಾರ್ಜ್, ಅಂಬರೀಶ್ ಮತ್ತು ನಾನು ಒಳ್ಳೆಯ ಸ್ನೇಹಿತರಾಗಿದ್ದು, ಪ್ರತಿ ಚುನಾವಣೆ ಸಂದರ್ಭದಲ್ಲಿ ಭೇಟಿಯಾಗಿ ಮಾತುಕತೆ ನಡೆಸುತ್ತೇವೆ ಎಂದರು.

ಯಾವುದೇ ಸಂಧಾನದ ಮಾತುಕತೆಗಾಗಿ ಬಂದಿಲ್ಲ ಎಂದು ಸ್ಪಷ್ಟಪಡಿಸಿದ ಸಚಿವರು, ಅಂಬರೀಶ್‍ವರು ಬಿ ಫಾರಂ ಪಡೆಯುವುದು ಅಥವಾ ಬಿಡುವುದು ಇದರ ಬಗ್ಗೆ ನನಗೆ ಗೊತ್ತಿಲ್ಲ.ಅವರು ಸ್ಪರ್ಧಿಸುವ ಬಗ್ಗೆಯೂ ಅವರನ್ನೇ ಕೇಳಬೇಕು ಎಂದು ಹೇಳಿದರು.

ನನ್ನ ಸ್ವಕ್ಷೇತ್ರದಲ್ಲಿ ಬೆಂಬಲ ನೀಡುವಂತೆ ಕೇಳಿದ್ದೇನೆ. ಅವರು ಅದಕ್ಕೆ ಒಪ್ಪಿಗೆ ಸೂಚಿಸಿದ್ದು , ಪ್ರಚಾರದಲ್ಲಿ ಪಾಲ್ಗೊಳ್ಳುವ ಬಗ್ಗೆ ಏನೂ ಹೇಳಿಲ್ಲ ಎಂದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ