ಜಿಲ್ಲಾಧಿಕಾರಿ ಮೋಹನ್‍ರಾಜ್ ಅವರನ್ನು ಸರ್ಕಾರ ರಾತ್ರೋರಾತ್ರಿ ವರ್ಗಾವಣೆ:

ತುಮಕೂರು, ಏ.17-ಕಳೆದ ಮೂರು ವರ್ಷಗಳಿಂದ ಜಿಲ್ಲೆಯಲ್ಲಿ ಉತ್ತಮ ಕೆಲಸ ಮಾಡುತ್ತಾ ಜನಸಾಮಾನ್ಯರ, ರೈತರ, ನೊಂದವರ ದನಿಯಾಗಿದ್ದ ಜಿಲ್ಲಾಧಿಕಾರಿ ಮೋಹನ್‍ರಾಜ್ ಅವರನ್ನು ಸರ್ಕಾರ ರಾತ್ರೋರಾತ್ರಿ ವರ್ಗಾವಣೆ ಮಾಡಿ ಆದೇಶ ಹೊರಡಿಸಿದೆ.
ಮೋಹನ್‍ರಾಜ್ ಅವರು ತುಮಕೂರು ಜಿಲ್ಲೆಗೆ ಜಿಲ್ಲಾಧಿಕಾರಿಯಾಗಿ ಅಧಿಕಾರ ವಹಿಸಿಕೊಂಡ ನಂತರ ಹಲವಾರು ಕಾರ್ಯಕ್ರಮಗಳ ಜೊತೆಗೆ ಜನರ ಸಮಸ್ಯೆಗಳಿಗೆ ಶೀಘ್ರವಾಗಿ ಸ್ಪಂದಿಸುತ್ತಾ ಜಿಲ್ಲೆಯ ಮನೆ ಮಾತಾಗಿದ್ದರು.
ಸಾಮಾನ್ಯ ವ್ಯಕ್ತಿಯು ಸಹ ಜಿಲ್ಲಾಧಿಕಾರಿಯವರ ಬಳಿ ತಮ್ಮ ಸಮಸ್ಯೆಯನ್ನು ಹೇಳಿಕೊಂಡರೆ ಶೀಘ್ರ ಬಗೆಹರಿಸಿದ್ದಾರೆ. ಪ್ರತಿಭಾವಂತ ಬಡ ವಿದ್ಯಾರ್ಥಿಗಳನ್ನು ಕಂಡರೆ ಇವರಿಗೆ ಎಲ್ಲಿಲ್ಲದ ಪ್ರೀತಿ. ಅವರ ಸಮಸ್ಯೆಗಳಿಗೆ ಸ್ಪಂದಿಸಿ ವಿದ್ಯಾಭ್ಯಾಸಕ್ಕೆ ನೆರವಾಗುತ್ತಿದ್ದರು.
ಎರಡು ವರ್ಷ 10 ತಿಂಗಳ ಅವಧಿಯಲ್ಲಿ ಯಾವುದೇ ಗೊಂದಲಕ್ಕೆ ಸಿಲುಕದೆ ರೈತರು, ಬಡವರ ಪಾಲಿಗೆ ಆಶಾಕಿರಣವಾಗಿದ್ದರು. ಇವರ ದಿಢೀರ್ ವರ್ಗಾವಣೆ ಜಿಲ್ಲೆಯ ಜನತೆಗೆ ನುಂಗಲಾರದ ತುತ್ತಾಗಿ ಪರಿಣಮಿಸಿದೆ.
ಬೆಂಗಳೂರಿನ ಪೌರಾಡಳಿತ ನಿರ್ದೇಶನಾಲಯ ಇಲಾಖೆ ನಿರ್ದೇಶಕರಾದ ಡಾ.ವಿಶಾಲ್ ಅವರನ್ನು ಜಿಲ್ಲಾಧಿಕಾರಿಯಾಗಿ ವರ್ಗಾವಣೆ ಮಾಡಲಾಗಿದ್ದು, ಇಂದು ಅಧಿಕಾರ ವಹಿಸಿಕೊಂಡರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ