ಹಣಕಾಸು ಸಚಿವ ಅರುಣ್ ಜೇಟ್ಲಿ ರಾಜ್ಯಸಭಾ ಸದಸ್ಯರಾಗಿ ಪ್ರಮಾಣ ವಚನ :

ನವದೆಹಲಿ, ಏ.15-ಹಣಕಾಸು ಸಚಿವ ಅರುಣ್ ಜೇಟ್ಲಿ ಆರು ವರ್ಷಗಳ ಹೊಸ ಅವಧಿಗೆ ರಾಜ್ಯಸಭಾ ಸದಸ್ಯರಾಗಿ ಇಂದು ಪ್ರಮಾಣ ವಚನ ಸ್ವೀಕರಿಸಿದರು.
ಮೂತ್ರಪಿಂಡ ಸಮಸ್ಯೆಯಿಂದಾಗಿ ಚಿಕಿತ್ಸೆ ಪಡೆಯುತ್ತಿರುವ ಅವರಿಗೆ ರಾಜ್ಯಸಭೆಯ ಸಭಾಪತಿ ಎಂ.ವೆಂಕಯ್ಯ ನಾಯ್ಡು ತಮ್ಮ ಕಚೇರಿಯಲ್ಲಿ ಇಂದು ಬೆಳಗ್ಗೆ ನಡೆದ ವಿಶೇಷ ಸಮಾರಂಭವೊಂದರಲ್ಲಿ ಪ್ರಮಾಣ ವಚನ ಬೋಧಿಸಿದರು.
ಕೇಂದ್ರ ಸಚಿವರಾದ ಅನಂತ್ ಕುಮಾರ್, ರವಿ ಶಂಕರ್ ಪ್ರಸಾದ್, ಪ್ರಕಾಶ್ ಜಾವಡೇಕರ್, ಪಿಯೂಷ್ ಗೋಯೆಲ್. ಹರ್‍ದೀಪ್ ಎಸ್.ಪುರಿ, ವಿಜಯ್ ಗೋಯೆಲ್ ಮತ್ತು ಶಿವ ಪ್ರತಾಪ್ ಶುಕ್ಲ, ರಾಜ್ಯ ಸಭೆ ವಿರೋಧಪಕ್ಷದ ನಾಯಕ ಗುಲಾಂ ನಬಿ ಅಜಾದ್ ಸೇರಿದಂತೆ ಅನೇಕ ಗಣ್ಯರು ಈ ಸಂದರ್ಭದಲ್ಲಿ ಹಾಜರಿದ್ದರು. ರಾಜ್ಯಸಭಾ ಸದಸ್ಯರಾದ ಭೂಪಿಂದರ್ ಯಾದವ್, ಜಗದಾಂಬಿಕಾ ಪಾಲ್. ಕಾರ್ನಾಡ್ ಸಂಗ್ಮಾ (ಮೇಘಾಲಯ ಮುಖ್ಯಮಂತ್ರಿ) ಹಾಗೂ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರೂ ಸಹ ಪಾಲ್ಗೊಂಡಿದ್ದರು.
65 ವರ್ಷಗಳ ಜೇಟ್ಲಿ ಉತ್ತರಪ್ರದೇಶದಿಂದ ಕಳೆದ ತಿಂಗಳು ಮೇಲ್ಮನೆಗೆ ಚುನಾಯಿತರಾಗಿದ್ದರು. ಅನಾರೋಗ್ಯದ ಕಾರಣ ಅವರು ರಾಜ್ಯಸಭೆಯಲ್ಲಿ ಪ್ರಮಾಣ ವಚನ ಸ್ವೀಕರಿಸಲು ಸಾಧ್ಯವಾಗಿರಲಿಲ್ಲ.
ಏಪ್ರಿಲ್ 15, 2018ರ ಈ ದಿನ ಉತ್ತರಪ್ರದೇಶದವನ್ನು ಪ್ರತಿನಿಧಿಸುವ ರಾಜ್ಯಸಭಾ ಸದಸ್ಯರಾಗಿ ನಾನು ಪ್ರಮಾಣ ವಚನ ಸ್ವೀಕರಿಸಿದ್ದೇನೆ ಎಂದು ಜೇಟ್ಲಿ ಟ್ವೀಟ್ ಮಾಡಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ