ಕೊಲೆ, ದರೋಡೆ, ಹಲ್ಲೆ ಪ್ರಕರಣಗಳಿಗೆ ಸಂಬಂಧಿಸಿದಂತೆ ರೌಡಿ ಗಾಳ ಅಲಿಯಾಸ್ ಸೂರ್ಯ ಬಂಧನ

ಬೆಂಗಳೂರು, ಏ.14- ಕೊಲೆ, ದರೋಡೆ, ಹಲ್ಲೆ ಪ್ರಕರಣಗಳಿಗೆ ಸಂಬಂಧಿಸಿದಂತೆ ರೌಡಿ ಗಾಳ ಅಲಿಯಾಸ್ ಸೂರ್ಯ (37) ಎಂಬಾತನನ್ನು ಗೂಂಡಾಕಾಯ್ದೆಯಡಿ ಕೆಂಗೇರಿ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಈತನ ವಿರುದ್ಧ ಕೆಂಗೇರಿ ಪೊಲೀಸ್ ಠಾಣೆಯಲ್ಲಿ ವಿವಿಧ ಪ್ರಕರಣಗಳಿಗೆ ಸಂಬಂಧಿಸಿದಂತೆ 13 ಪ್ರಕರಣಗಳು ದಾಖಲಾಗಿದ್ದು, ತಾವರೆಕೆರೆ ಠಾಣೆಯಲ್ಲಿ 2, ಹಾರೋಹಳ್ಳಿ ಪೊಲೀಸ್ ಠಾಣೆಯಲ್ಲಿ 1 ಸೇರಿ ಒಟ್ಟು 16 ಪ್ರಕರಣಗಳು ದಾಖಲಾಗಿವೆ.

ಹಲವಾರು ಬಾರಿ ಈತನಿಗೆ ಎಚ್ಚರಿಕೆ ನೀಡಿ ಮುಂಜಾಗ್ರತಾ ಕ್ರಮ ಕೈಗೊಂಡಿದ್ದರೂ ಈತ ತನ್ನ ರೌಡಿ ಚಟುವಟಿಕೆಗಳನ್ನು ಮುಂದುವರಿಸಿದ್ದನು.
ಸಾಕ್ಷಿದಾರರಿಗೆ ಹಾಗೂ ದೂರು ಕೊಟ್ಟವರಿಗೆ ಬೆದರಿಕೆ ಒಡ್ಡುತ್ತಿದ್ದುದರಿಂದ ಪಶ್ಚಿಮ ವಿಭಾಗದಲ್ಲಿ ರೌಡಿ ಚಟುವಟಿಕೆಗಳನ್ನು ನಿಯಂತ್ರಿಸುವ ಸಲುವಾಗಿ ಗೂಂಡಾ ಕಾಯ್ದೆಯಡಿ ಈತನನ್ನು ಬಂಧಿಸಲು ನಗರ ಪೊಲೀಸ್ ಆಯುಕ್ತರು ಆದೇಶಿಸಿದ್ದರು.

ಈ ಹಿನ್ನೆಲೆಯಲ್ಲಿ ಕೆಂಗೇರಿ ಠಾಣೆ ಪೊಲೀಸರು ಗೂಂಡಾಕಾಯ್ದೆಯಡಿ ಈತನನ್ನು ಬಂಧಿಸಿದ್ದಾರೆ. ರೌಡಿ ಚಟುವಟಿಕೆ ವಿರುದ್ಧ ಕಳೆದ ಎರಡು ದಿನಗಳಲ್ಲಿ ಬೆಂಗಳೂರು ನಗರ ಪಶ್ಚಿಮ ವಿಭಾಗದ ವ್ಯಾಪ್ತಿಯಲ್ಲಿ ಇದು ಎರಡನೆ ಗೂಂಡಾಕಾಯ್ದೆಯಡಿ ಬಂಧಿಸಿದ ಪ್ರಕರಣವಾಗಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ