ವೈದ್ಯರ ನಿರ್ಲಕ್ಷ್ಯದಿಂದ ಜಿಪಂ ಮಾಜಿ ಸದಸ್ಯ ಮೃತ:

ಚಾಮರಾಜನಗರ, ಏ.13- ವೈದ್ಯರ ನಿರ್ಲಕ್ಷ್ಯದಿಂದ ಜಿಪಂ ಮಾಜಿ ಸದಸ್ಯರೊಬ್ಬರು ಸೂಕ್ತ ಸಮಯಕ್ಕೆ ಚಿಕಿತ್ಸೆ ದೊರೆಯದೆ ಸಾವನ್ನಪ್ಪಿರುವ ಘಟನೆ ಇಂದು ಬೆಳಗ್ಗೆ ಜಿಲ್ಲಾಸ್ಪತ್ರೆಯಲ್ಲಿ ಸಂಭವಿಸಿದೆ.
ಚಾಮರಾಜನಗರ ಜಿಪಂ ಮಾಜಿ ಸದಸ್ಯರಾಗಿದ್ದ ಬಾಗಳಿ ಪುಟ್ಟಬುದ್ದಿ (60) ಮೃತ ದುರ್ದೈವಿ.
ಹೌಸಿಂಗ್‍ಬೋರ್ಡ್ ಕಾಲೋನಿ ನಿವಾಸಿಯಾದ ಇವರಿಗೆ ಇಂದು ಬೆಳಗ್ಗೆ 9.45ರಲ್ಲಿ ಹೃದಯ ಸ್ತಂಭನವಾಗಿದ್ದು, ಕೂಡಲೇ ಜಿಲ್ಲಾಸ್ಪತ್ರೆಗೆ ಕರೆತರಲಾಯಿತಾದರೂ ಆಸ್ಪತ್ರೆಯಲ್ಲಿ ವೈದ್ಯರೇ ಇಲ್ಲದೆ ಸುಮಾರು 30 ರಿಂದ 35 ನಿಮಿಷ ವೈದ್ಯರಿಗಾಗಿ ಕಾಯುವಂತಹ ಪರಿಸ್ಥಿತಿ ನಿರ್ಮಾಣವಾಗಿತ್ತು.
ಕೂಡಲೇ ವಿಷಯ ತಿಳಿದ ವೈದ್ಯರು ಚಿಕಿತ್ಸೆ ನೀಡಿದರೂ ತಡವಾಗಿದ್ದರಿಂದ ಚಿಕಿತ್ಸೆಗೆ ಸ್ಪಂದಿಸದೆ ಅವರು ಅಸುನೀಗಿದರು.
ಸರಿಯಾದ ಸಮಯಕ್ಕೆ ವೈದ್ಯರು ಆಸ್ಪತ್ರೆಯಲ್ಲಿ ಹಾಜರಿದ್ದಿದ್ದರೆ ಸೂಕ್ತ ಸಮಯಕ್ಕೆ ಚಿಕಿತ್ಸೆ ದೊರೆಯುತ್ತಿತ್ತು. ವೈದ್ಯರ ನಿರ್ಲಕ್ಷ್ಯವೇ ಅವರ ಸಾವಿಗೆ ಕಾರಣ ಎಂದು ಸಂಬಂಧಿಕರು ಆಕ್ರೋಶ ವ್ಯಕ್ತಪಡಿಸಿದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ