ಚುನಾವಣೆಯಲ್ಲಿ ಹರಿಯುತ್ತಿದೆ ಹಣದ ಹೊಳೆ: ಭೈರಾಪೂರ ಚೆಕ್‍ಪೋಸ್ಟ್ ನಲ್ಲಿ 4 ಕೋಟಿ ರೂ. ಜಪ್ತಿ

ಬೆಳಗಾವಿ,ಏ.13

ವಿಧಾನಸಭೆ ಚುನಾವಣೆ ಘೋಷಣೆಯಾಗ್ತಿದ್ದಂತೆಯೇ ಹಣದ ಹೊಳೆಯೇ ಹರಿಯುತ್ತಿದೆ. ಈಗಾಗಲೇ ಚುನಾವಣಾಧಿಕಾರಿಗಳು ಅಪಾರ ಪ್ರಮಾಣದ ನಗದನ್ನು ವಶಪಡಿಸಿಕೊಂಡಿದ್ದಾರೆ.

ಅದೇ ರೀತಿ ಬೆಳಗಾವಿ ಜಿಲ್ಲೆ ಹುಕ್ಕೇರಿ ತಾಲೂಕಿನ ಭೈರಾಪುರ ಚೆಕ್ ಪೋಸ್ಟ್ ನಲ್ಲಿ ತಡರಾತ್ರಿ ಬರೋಬ್ಬರಿ 4 ಕೋಟಿ ರೂ. ಜಪ್ತಿ ಮಾಡಲಾಗಿದೆ. ಕೊಲ್ಹಾಪುರದಿಂದ ಗಡಹಿಂಗ್ಲಜಕ್ಕೆ ಖಾಸಗಿ ವಾಹನದಲ್ಲಿ ದಾಖಲೆ ಇಲ್ಲದೆ ಸಾಗಿಸುತ್ತಿದ್ದ ಹಣವನ್ನು ಸಂಕೇಶ್ವರ ಠಾಣೆ ಪೊಲೀಸರು ಹಾಗೂ ಚುನಾವಣಾಧಿಕಾರಿಗಳು ವಶಕ್ಕೆ ಪಡೆದಿದ್ದಾರೆ.

ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ಸ್ಥಳಕ್ಕಾಗಮಿಸಿ ಪರಿಶೀಲನೆ ನಡೆಸಿದ್ದಾರೆ. ಹಣ, ವಾಹನ ಜಪ್ತಿ ಮಾಡಲಾಗಿದ್ದು, ದಾಖಲಾತಿಗಳ ಪರಿಶೀಲನೆ ಬಳಿಕ ಬ್ಯಾಂಕಿನ ಹಣವೆಂದು ಅಧಿಕಾರಿಗಳು ಖಾತ್ರಿ ಪಡಿಸಿದ್ದಾರೆ. ಕೊಲ್ಹಾಪುರ ಡಿಸಿಸಿ ಬ್ಯಾಂಕಿನಿಂದ ಗಡಹಿಂಗ್ಲಜ ಶಾಖೆಗೆ ಸಾಗಾಟ ಮಾಡುತ್ತಿದ್ದ ಹಣವಾಗಿದ್ದು, ಬ್ಯಾಂಕಿನ ಕ್ಲರ್ಕ್ ಡಿಡಿ ಕೇರ್ಲೆ ಹಾಗೂ ಪ್ಯೂನ್ ವಿಜಯ ನಾಯಕ ಅವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ. ಈ ಘಟನೆ ಸಂಕೇಶ್ವರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

 

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ