ಸಿದ್ದಾರೂಢ ಮಠಕ್ಕೆ ಬಿಜೆಪಿ ರಾಷ್ಟ್ರಾಧ್ಯಕ್ಷ ಶಾ ಭೇಟಿ: ಹೊಟೇಲ್‌ನಲ್ಲಿ ಬೀಡು ಬಿಟ್ಟ ಟಿಕೆಟ್‌ ಆಕಾಂಕ್ಷಿಗಳು!

ಹುಬ್ಬಳ್ಳಿ,ಏ.12

ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಮಂಗಳವಾರ ತಡರಾತ್ರಿಯೇ ಹುಬ್ಬಳ್ಳಿಗೆ ಆಗಮಿಸಿದ್ದು, ಬುಧವಾರ ಬೆಳಿಗ್ಗೆ ಸುಪ್ರಸಿದ್ಧ ಸಿದ್ಧಾರೂಢ ಮಠಕ್ಕೆ ಭೇಟಿ‌ ನೀಡಿ ಶ್ರೀಗಳ ಗದ್ದುಗೆ ದರ್ಶನ ಪಡೆದುಕೊಂಡರು. ಅಮಿತಾ ಶಾ ಆಗಮನಕ್ಕೆ ಪೂರ್ಣಕುಂಭ ಮೆರವಣಿಗೆಯ ಮೂಲಕ ಅದ್ಧೂರಿ ಸ್ವಾಗತ ನೀಡಲಾಯಿತು.
ಸಿದ್ದಾರೂಢ ಸ್ವಾಮಿಗಳ ಗದ್ದುಗೆ ದರ್ಶನ ಪಡೆದ ಅಮಿತ್ ಶಾ ಸಿದ್ದಾರೂಢ ಗದ್ದುಗೆಗೆ ಮಹಾಮಂಗಳಾರತಿ ಪೂಜೆ ನೆರವೇರಿಸಿದರು. ಬಳಿಕ ಮಠದ ಟ್ರಸ್ಟ್ ಕಮಿಟಿಯಿಂದ ಅಮಿತ್ ಶಾ ಅವರಿಗೆ ಶಾಲು ಹೊದಿಸಿ ಸನ್ಮಾನಿಸಲಾಯಿತು. ಈ ವೇಳೆ ಬಿ.ಎಸ್. ಯಡಿಯೂರಪ್ಪ, ಜಗದೀಶ್ ಶೆಟ್ಟರ್, ಪ್ರಹ್ಲಾದ್ ಜೋಶಿ ಉಪಸ್ಥಿತರಿದ್ದರು.

ಇನ್ನು ಬಿಜೆಪಿ ಟಿಕೆಟ್ ಆಕಾಂಕ್ಷಿಗಳ ದಂಡು ಅಮಿತ್ ಶಾ ವಾಸ್ತವ್ಯ ಹೂಡಿರುವ ಖಾಸಗಿ ಹೊಟೇಲ್‌ನಲ್ಲಿ ಬೀಡು ಬಿಟ್ಟಿದ್ದಾರೆ.
ನಗರದ ಡೆನೀಸನ್ಸ್ ಹೊಟೇಲ್‌ನಲ್ಲಿ ಕುಂದಗೋಳ ಕ್ಷೇತ್ರದ ಟಿಕೆಟ್ ಆಕಾಂಕ್ಷಿ ಎಸ್. ಐ ಚಿಕ್ಕನಗೌಡ್ರ, ನವಲಗುಂದ ಕ್ಷೇತ್ರದ ಆಕಾಂಕ್ಷಿ ಈಶ್ವರಚಂದ್ರ ಹೊಸಮನಿ, ಕಲಘಟಗಿ ಕ್ಷೇತ್ರದ ಆಕಾಂಕ್ಷಿ ಮಹೇಶ ಟೆಂಗಿನಕಾಯಿ ಸೇರಿದಂತೆ ಹಲವರಿದ್ದು, ಅಮಿತ್ ಶಾ ಭೇಟಿಗಾಗಿ ಕಾದು ಕುಳಿತ್ತಿದ್ದಾರೆ. ಅಮಿತ್ ಅವರನ್ನು ಭೇಟಿ ಮಾಡಿ ಟಿಕೆಟ್ ನೀಡುವಂತೆ ಮನವೊಲಿಸುವ ಯತ್ನ ಟಿಕೆಟ್‌ ಆಕಾಂಕ್ಷಿಗಳದ್ದಾಗಿದೆ.
 

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ