ಕದನ ವಿರಾಮ ಉಲ್ಲಂಘಿಸಿ ಪಾಕಿಸ್ತಾನಿ ಸೇನಾಪಡೆಗಳು ನಡೆಸಿದ ಅಪ್ರಚೋದಿತ ಷೆಲ್ ದಾಳಿಯಲ್ಲಿ ಭಾರತದ ಇಬ್ಬರು ಯೋಧರು ಹುತಾತ್ಮ

ಜಮ್ಮು, ಏ.10-ಗಡಿಯಲ್ಲಿ ಕದನ ವಿರಾಮ ಉಲ್ಲಂಘಿಸಿ ಪಾಕಿಸ್ತಾನಿ ಸೇನಾಪಡೆಗಳು ನಡೆಸಿದ ಅಪ್ರಚೋದಿತ ಷೆಲ್ ದಾಳಿಯಲ್ಲಿ ಭಾರತದ ಇಬ್ಬರು ಯೋಧರು ಹುತಾತ್ಮರಾಗಿದ್ದಾರೆ.

ಜಮ್ಮು ಮತ್ತು ಕಾಶ್ಮೀರದ ರಜೌರಿ ಜಿಲ್ಲೆಯ ಗಡಿ ನಿಯಂತ್ರಣ ರೇಖೆ(ಎಲ್‍ಒಸಿ) ಉದ್ದಕ್ಕೂ ಪಾಕಿಸ್ತಾನ ಯೋಧರು ನಿನ್ನೆ ರಾತ್ರಿಯಿಂದ ಭಾರೀ ಗುಂಡು ಮತ್ತು ಷೆಲ್ ದಾಳಿಗಳನ್ನು ನಡೆಸಿದರು. ಈ ದಾಳಿಯಲ್ಲಿ ರೈಫಲ್‍ಮ್ಯಾನ್‍ಗಳಾದ ವಿನೋದ್ ಸಿಂಗ್ ಮತ್ತು ಜಕಿ ಶರ್ಮ ಎಂಬ ಇಬ್ಬರು ಯೋಧರು ಗುಂಡೇಟಿನಿಂದ ತೀವ್ರ ಗಾಯಗೊಂಡು ಕೊನೆಯುಸಿರೆಳೆದರು ಎಂದು ರಕ್ಷಣಾ ವಕ್ತಾರರು ಹೇಳಿದ್ದಾರೆ.

ನಿನ್ನೆ ರಾತ್ರಿ ಎಲ್‍ಒಸಿಯ ಸುಂದರ್‍ಬನಿ ವಲಯದಲ್ಲಿ ಪಾಕಿಸ್ತಾನಿ ರೇಂಜರ್‍ಗಳು ಸಣ್ಣ ಶಸ್ತ್ರಾಸ್ತ್ರಗಳು, ಸ್ವಯಂಚಾಲಿತ ಬಂದೂಕುಗಳು ಮತ್ತು ಮಾರ್ಟರ್‍ಗಳಿಂದ ಅಪ್ರಚೋದಿತ ದಾಳಿ ನಡೆಸಿದರು. ಇದಕ್ಕೆ ಭಾರತೀಯ ಯೋಧರೂ ತಕ್ಕ ಪ್ರತ್ಯುತ್ತರ ನೀಡಿದ್ದಾರೆ ಎಂದು ಅವರು ತಿಳಿಸಿದ್ದಾರೆ.

ಹುತಾತ್ಮರಾದ ವಿನೋದ್ ಮತ್ತು ಶರ್ಮ ಅವರ ಸೇವೆಯನ್ನು ಹಿರಿಯ ಸೇನಾಧಿಕಾರಿಗಳು ಶ್ಲಾಘಿಸಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ