ಮತ್ತೆ ನಗರದಲ್ಲಿ ಪೋಲೀಸರ ಪಿಸ್ತೂಲ್ ಸದ್ದು:

ಬೆಂಗಳೂರು, ಏ.5- ಮತ್ತೆ ನಗರದಲ್ಲಿ ಪೋಲೀಸರ ಪಿಸ್ತೂಲ್ ಸದ್ದು ಮಾಡಿದೆ.
ಯುವಕನೊಬ್ಬನ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿ ತಲೆಮರೆಸಿಕೊಂಡಿದ್ದ ಆರೋಪಿಯನ್ನು ಹಿಡಿಯಲು ಹೋದ ಕಾನ್‍ಸ್ಟೇಬಲ್ ಮೇಲೆ ಲಾಂಗ್‍ನಿಂದ ಹಲ್ಲೆ ನಡೆಸಿದಾಗ ಆತ್ಮ ರಕ್ಷಣೆಗಾಗಿ ಪೋಲೀಸರು ಗಾಳಿಯಲ್ಲಿ ಗುಂಡು ಹಾರಿಸಿದ್ದಾರೆ. ಈ ವೇಳೆ ಒಂದು ಗುಂಡು ಆರೋಪಿ ಚರಣ್ ರಾಜ್ ಕಾಲಿಗೆ ತಗುಲಿದ್ದು, ಆತನನ್ನು ವಶಕ್ಕೆ ಪಡೆಯಲಾಗಿದೆ.
ಘಟನೆ ವಿವರ:
ಕಳೆದ ಮೂರು ದಿನಗಳ ಹಿಂದೆ ಮಹದೇವಪುರ ಬಳಿ ಅಜಯ್ ಎಂಬುವರನ್ನು ಅಡ್ಡಗಟ್ಟಿದ್ದ ಚರಣ್ ರಾಜ್ ಅವರ ಮೇಲೆ ಮಾರಕಾಸ್ತ್ರಗಳಿಂದ ದಾಳಿ ನಡೆಸಿ ಪರಾರಿಯಾಗಿದ್ದ.
ತೀವ್ರವಾಗಿ ಗಾಯಗೊಂಡಿದ್ದ ಅಜಯ್ ಅವರನ್ನು ಆಸ್ಪತ್ರೆಗೆ ಸೇರಿಸಿ ತನಿಖೆ ಕೈಗೊಂಡ ಪೋಲೀಸರು ಇಂದು ಆರೋಪಿ ಚರಣ್ ರಾಜ್ ಹೂಡಿ ಸಮೀಪದ ರೈಲ್ವೆ ಹಳಿ ಬಳಿ ಇರುವ ಬಗ್ಗೆ ಖಚಿತ ಮಾಹಿತಿ ಪಡೆದು ಕಾರ್ಯಾಚರಣೆ ಆರಂಭಿಸಿದರು.
ಮಹದೇವಪುರ ಠಾಣೆ ಸಬ್‍ಇನ್‍ಸ್ಪೆಕ್ಟರ್ ನಾರಾಯಣಸ್ವಾಮಿ ಮತ್ತವರ ಸಿಬ್ಬಂದಿ ಆತನನ್ನು ಪತ್ತೆಹಚ್ಚಿ ಸೆರೆ ಹಿಡಿಯಲು ಹೋದಾಗ ಆತ ತಪ್ಪಿಸಿಕೊಳ್ಳಲು ಪ್ರಯತ್ನಿಸಿದ್ದಾನೆ.
ಈ ನಡುವೆ ಕಾನ್‍ಸ್ಟೇಬಲ್ ಮಣಿ ಹಿಡಿಯಲು ಹೋದಾಗ ಲಾಂಗ್‍ನಿಂದ ಅವರ ಮೇಲೆ ಹಲ್ಲೆ ನಡೆಸಿದ್ದಾನೆ. ತಕ್ಷಣ ಎಚ್ಚೆತ್ತುಕೊಂಡ ಸಬ್‍ಇನ್‍ಸ್ಪೆಕ್ಟರ್ ಆರೋಪಿಗೆ ಶರಣಾಗುವಂತೆ ಸೂಚನೆ ನೀಡಿ ಗಾಳಿಯಲ್ಲಿ ಗುಂಡು ಹಾರಿಸಿದ್ದಾರೆ. ಇದನ್ನೂ ಲೆಕ್ಕಿಸದೆ ಪೋಲೀಸರು ಮೇಲೆ ಮುಗಿಬೀಳಲು ಯತ್ನಿಸಿದಾಗ ಸಬ್‍ಇನ್‍ಸ್ಪೆಕ್ಟರ್ ಹಾರಿಸಿದ ಗುಂಡು ಅವನ ಕಾಲಿಗೆ ಬಿದ್ದಿದೆ.
ಗುಂಡೇಟಿನಿಂದ ಕುಸಿದುಬಿದ್ದ ಚರಣ್‍ರಾಜ್‍ನನ್ನು ವಶಕ್ಕೆ ಪಡೆದು ಆಸ್ಪತ್ರೆಗೆ ಸೇರಿಸಿದ್ದಾರೆ. ಕಾನ್‍ಸ್ಟೇಬಲ್ ಮಣಿ ಅವರಿಗೂ ಕೂಡ ಚಿಕಿತ್ಸೆ ಕೊಡಿಸಲಾಗಿ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ