ಮಾಜಿ ಸಚಿವ ಜನಾರ್ಧನರೆಡ್ಡಿ ಹಾಗೂ ಸಂಸದ ಶ್ರೀರಾಮುಲು ಪರಸ್ಪರ ಮುಖಾಮುಖಿ: ಮಾತುಕತೆ

ಬೆಂಗಳೂರು, ಏ.3- ಮಹತ್ವದ ಬೆಳವಣಿಗೆಯೊಂದರಲ್ಲಿ ನಾಳೆ ಮಾಜಿ ಸಚಿವ ಜನಾರ್ಧನರೆಡ್ಡಿ ಹಾಗೂ ಸಂಸದ ಶ್ರೀರಾಮುಲು ಪರಸ್ಪರ ಮುಖಾಮುಖಿಯಾಗಿ ಮಾತುಕತೆ ನಡೆಸಲಿದ್ದಾರೆ.

ಜನಾರ್ಧನರೆಡ್ಡಿಗೂ ಬಿಜೆಪಿಗೂ ಯಾವುದೇ ರೀತಿಯ ಸಂಬಂಧವಿಲ್ಲ ಎಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಹೇಳಿದ್ದರು. ಈ ನಡುವೆ ರಾಮುಲು ಮತ್ತು ರೆಡ್ಡಿ ಭೇಟಿಯಾಗುತ್ತಿರುವುದು ರಾಜಕೀಯ ವಲಯದಲ್ಲಿ ಭಾರೀ ಮಹತ್ವ ಪಡೆದುಕೊಂಡಿದೆ.
ಸದ್ಯ ಮುಂಬೈ ಪ್ರವಾಸದಲ್ಲಿರುವ ಜನಾರ್ಧನರೆಡ್ಡಿ ಇಂದು ಸಂಜೆ ಬೆಂಗಳೂರಿಗೆ ಆಗಮಿಸಲಿದ್ದಾರೆ. ನಾಳೆ ಉಭಯ ನಾಯಕರು ರಹಸ್ಯ ಸ್ಥಳವೊಂದರಲ್ಲಿ ಭೇಟಿಯಾಗಿ ಮಾತುಕತೆ ನಡೆಸಲಿದ್ದಾರೆ ಎಂದು ಆಪ್ತ ಮೂಲಗಳು ತಿಳಿಸಿವೆ.

ಅಮಿತ್ ಶಾ ಹೇಳಿಕೆಯಿಂದ ತುಸು ಮುನಿಸುಕೊಂಡಿರುವ ಜನಾರ್ಧನರೆಡ್ಡಿ ಸದ್ಯಕ್ಕೆ ಕಾದು ನೋಡುವ ತಂತ್ರಕ್ಕೆ ಮೊರೆ ಹೋಗಿದ್ದಾರೆ. ತಮ್ಮ ಸಹೋದರರಾದ ಕರುಣಾಕರರೆಡ್ಡಿಗೆ ಹರಪ್ಪನಹಳ್ಳಿಯಿಂದ, ಸೋಮಶೇಖರರೆಡ್ಡಿ ಬಳ್ಳಾರಿ ನಗರದಿಂದ ಹಾಗೂ ಶ್ರೀರಾಮುಲುಗೆ ಬಳ್ಳಾರಿ ಗ್ರಾಮೀಣ ಮೀಸಲು ಕ್ಷೇತ್ರದಿಂದ ಟಿಕೆಟ್ ನೀಡಿದರೆ ಅವರ ಪರ ತೆರೆಮರೆಯಲ್ಲಿ ಜನಾರ್ಧನರೆಡ್ಡಿ ಪ್ರಚಾರ ನಡೆಸಲು ಮುಂದಾಗಿದ್ದಾರೆ.

ನಿನ್ನೆಯಷ್ಟೇ ರಾಮುಲು ಯಡಿಯೂರಪ್ಪರವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದ್ದರು. ಮೂಲಗಳ ಪ್ರಕಾರ ಅಮಿತ್ ಶಾ ಹೇಳಿಕೆಯನ್ನು ಗಂಭೀರವಾಗಿ ಪರಿಗಣಿಸದೆ ನಿಮ್ಮ ಕೆಲಸವನ್ನು ನೀವು ಮುಂದವರೆಸಿರಿ, ಉಳಿದದ್ದನ್ನು ನನಗೆ ಬಿಡಿ ಎಂದು ರಾಮುಲುಗೆ ಬಿಎಸ್‍ವೈ ತಿಳಿಸಿದ್ದರು ಎನ್ನಲಾಗಿದೆ.
ಯಡಿಯೂರಪ್ಪನವರ ಸಂದೇಶವನ್ನೇ ಜನಾರ್ಧನರೆಡ್ಡಿಗೆ ರಾಮುಲು ತಿಳಿಸಲಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ