ತಿರುವನಂತಪುರದಲ್ಲಿ ರೆಡಿಯೋ ಜಾಕಿಯೊಬ್ಬರ ಬರ್ಬರ ಹತ್ಯೆ

ತಿರುವನಂತಪುರ :ಮಾ-27: ಮಾಜಿ ರೇಡಿಯೋ ಜಾಕಿ ರಾಜೇಶ್‌ ಎಂಬುವವರನ್ನು ಅಪರಿಚಿತ ದುಷ್ಕರ್ಮಿಗಳು ಕೊಚ್ಚಿ ಕೊಲೆಗೈದಿರುವ ಘಟನೆ ತಿರುವನಂತಪುರದ ಮದವೂರು ಎಂಬಲ್ಲಿ ನಡೆದಿದೆ.

ವೇದಿಕೆ ಕಾರ್ಯಕ್ರಮವೊಂದನ್ನು ಮುಗಿಸಿ ತನ್ನ ಸ್ನೇಹಿತನ ಜತೆಗೆ ಮರಳುತ್ತಿದ್ದ ರಾಜೇಶ್‌ ಮೇಲೆ ದುಷ್ಕರ್ಮಿಗಳು ಮಾರಕಾಯುಧಗಳಿಂದ ದಾಳಿ ನಡೆಸಿದ್ದಾರೆ. ದಾಳಿ ನಡೆದಿದ್ದಾಗ ರಾಜೇಶ್‌ ಮತ್ತು ಆತನ ಸ್ನೇಹಿತ ತಮ್ಮ ಸಲಕರಣೆಗಳನ್ನು ಸ್ಟುಡಿಯೋದಲ್ಲಿ ಇರಿಸಿದ್ದರು. ದಾಳಿಕೋರರು ಕೆಂಪು ಬಣ್ಣದ ಮಾರುತಿ ಸ್ವಿಫ್ಟ್ ಕಾರಿನಲ್ಲಿ ಬಂದು ಹರಿತವಾದ ಆಯುಧಗಳಿಂದ ರಾಜೇಶ್‌ ಮತ್ತು ಆತನ ಸ್ನೇಹಿತನ ಮೇಲೆ ದಾಳಿ ನಡೆಸಿದ್ದಾರೆ.

ದಾಳಿ ನಡೆದ ಕೂಡಲೇ ಇದನ್ನು ಗಮನಿಸಿದ ಸ್ಥಳೀಯರು ಒಡನೆಯೇ ಪೊಲೀಸರಿಗೆ ಮಾಹಿ ತಿಳಿಸಿದ್ದಾರೆ. ತೀವ್ರ ಗಾಯಗೊಂಡಿದ್ದ ರಾಜೇಶ್‌ ಅವರು ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ. ಆತನ ಸ್ನೇಹಿತನಿಗೂ ಗಂಭೀರ ಗಾಯಗಳಾಗಿದ್ದು ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

ರಾಜೇಶ್‌ ರೆಡ್‌ ಎಫ್ಎಂನ ರೇಡಿಯೋ ಜಾಕಿಯಾಗಿ ಅನೇಕ ವರ್ಷಗಳ ಕಾಲ ದುಡಿದಿದ್ದರು. ದೋಹಾದಲ್ಲಿನ ವಾಯ್ಸ ಆಫ್ ಕೇರಳ ಎಫ್ಎಂ ಸ್ಟೇಶನ್‌ನಲ್ಲೂ ರಾಜೇಶ್‌ ಈ ಹಿಂದೆ ಕಾರ್ಯನಿರ್ವಹಿಸಿದ್ದರು. ಈಚೆಗಷ್ಟೇ ಅವರು ದೋಹಾದಿಂದ ಮರಳಿ ಸ್ಥಳೀಯ ಮಿಮಿಕ್ರಿ ತಂಡವೊಂದನ್ನು ಸೇರಿಕೊಂಡಿದ್ದರು.

ಪೊಲೀಸರು ಕೊಲೆ ಕೇಸನ್ನು ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ