ಮತದಾನದ ವೇಳೆ ಕಾಂಗ್ರೆಸ್ ಶಾಸಕರಿಬ್ಬರಿಗೆ ಎರಡು ಬಾರಿ ಮತದಾನ ಮಾಡಲು ಅವಕಾಶ : ಜೆಡಿಎಸ್

 

ಬೆಂಗಳೂರು, ಮಾ.23-ರಾಜ್ಯ ವಿಧಾನಸಭೆಯಿಂದ ರಾಜ್ಯಸಭೆಗೆ ಇಂದು ನಡೆದ ಚುನಾವಣೆಯ ಮತದಾನದ ವೇಳೆ ಕಾಂಗ್ರೆಸ್ ಶಾಸಕರಿಬ್ಬರಿಗೆ ಎರಡು ಬಾರಿ ಮತದಾನ ಮಾಡಲು ಅವಕಾಶ ನೀಡಲಾಗಿದೆ ಎಂದು ಆರೋಪಿಸಿ ಜೆಡಿಎಸ್ ಪಕ್ಷದ ಚುನಾವಣಾ ಏಜೆಂಟರಾದ ಮಾಜಿ ಸಚಿವ ಎಚ್.ಡಿ.ರೇವಣ್ಣ ಹಾಗೂ ಚುನಾವಣಾ ಏಜೆಂಟರಾದ ವಿಧಾನಪರಿಷತ್ ಸದಸ್ಯ ರಮೇಶ್‍ಬಾಬು ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ.

ವಿಧಾನಸೌಧದ ಮೊದಲ ಮಹಡಿಯ ಕೊಠಡಿ ಸಂಖ್ಯೆ 106ರಲ್ಲಿ ರಾಜ್ಯಸಭೆ ಚುನಾವಣೆಗೆ ಮತದಾನ ನಡೆಯುವಾಗ ಕಾಂಗ್ರೆಸ್ ಪಕ್ಷದ ಕಾಗೋಡು ತಿಮ್ಮಪ್ಪ ಹಾಗೂ ಬಾಬುರಾವ್ ಚಿಂಚನಸೂರ್ ಅವರು ಮತಪತ್ರದಲ್ಲಿ ಮತದಾನ ಮಾಡುವಾಗ ತಪ್ಪಾಗಿ ಮತ ಚಲಾಯಿಸಿದ್ದಾರೆ. ಕಾಂಗ್ರೆಸ್ ಪಕ್ಷದ ಏಜೆಂಟ್ ತಪ್ಪಾಗಿ ಮತ ಚಲಾಯಿಸಿರುವುದನ್ನು ಗಮನಕ್ಕೆ ತಂದಾಗ ಮತ್ತೊಮ್ಮೆ ಹೊಸದಾಗಿ ಮತಪತ್ರ ಪಡೆದು ಮತ ಚಲಾಯಿಸಿದ್ದಾರೆ.

ಎರಡು ಬಾರಿ ಮತ ಪತ್ರ ನೀಡಿ ಮತ ಚಲಾಯಿಸಲು ಅವಕಾಶ ನೀಡಿದ ಚುನಾವಣಾಧಿಕಾರಿ ಎಸ್.ಮೂರ್ತಿ ಅವರ ನಿಲುವಿನ ವಿರುದ್ಧ ರೇವಣ್ಣ ಹಾಗೂ ರಮೇಶ್‍ಬಾಬು ಪ್ರತಿಭಟನೆ ನಡೆಸಿದ್ದಾರೆ. ಜೊತೆಗೆ ಚುನಾವಣಾ ವೀಕ್ಷಕರಾಗಿರುವ ರಾಜ್ಯ ಮುಖ್ಯ ಚುನಾವಣಾಧಿಕಾರಿ ಸಂಜೀವ್‍ಕುಮಾರ್ ಅವರ ಗಮನಕ್ಕೂ ತಂದು ಚುನಾವಣಾಧಿಕಾರಿ ಕ್ರಮವನ್ನು ಆಕ್ಷೇಪಿಸಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ