ಮೊಘಲರ ಕಾಲದ 8 ಸ್ಮಾರಕಗಳಿಗೆ ಹಿಂದೂ ದೇಗುಲಗಳ ಹೆಸರು: ಹೊಸ ವಿವಾದ ಹುಟ್ಟುಹಾಕಿದ ಹಿಂದೂ ಮಹಾಸಭಾ

ಆಗ್ರಾ:ಮಾ-19: ಮೊಘಲರ ಕಾಲದ ಸ್ಮಾರಕಗಳು ಮತ್ತು ಕೆಲವು ಮಸೀದಿಗಗಳನ್ನು ಹೊಸವರ್ಷದ ಕ್ಯಾಲೆಂಡರ್‌ನಲ್ಲಿ ಹಿಂದೂ ದೇಗುಲಗಳೆಂದು ಹೆಸರಿಸಿ ಅಲಿಗಢದ ಹಿಂದೂ ಮಹಾಸಭಾ ಹೊಸ ವಿವಾದಕ್ಕೆ ನಾಂದಿ ಹಾಡಿದೆ.

ಮೊಘಲರ ಕಾಲದಲ್ಲಿ ನಿರ್ಮಾಣಗೊಂಡಿರುವ ಎಂಟು ಕಟ್ಟಡಗಳಿಗೆ ಹಿಂದೂ ದೇಗುಲಗಳೆಂದು ಮಹಾಸಭಾ ಹೆಸರಿಸಿದೆ. ತಾಜ್‌ ಮಹಲ್‌ ಅನ್ನು ತೇಜೋ ಮಹಾಲಯ ದೇಗುಲ, ಮಧ್ಯಪ್ರದೇಶದ ಕಮಲ್‌ ಮೌಲಾ ಮಸೀದಿಯನ್ನು ಭೋಜ್‌ ಶಾಲಾ ಎಂದು ಹೆಸರಿಸಿದೆ.

ಅದೇ ರೀತಿ ಕಾಶಿಯ ಜ್ಞಾನವ್ಯಾಪಿ ಮಸೀದಿಗೆ ವಿಶ್ವನಾಥ ದೇವಾಲಯ, ಕುತುಬ್‌ ಮಿನಾರ್‌ಗೆ ವಿಷ್ಣುಸ್ತಂಭ ಎಂದು ನಾಮಕರಣ ಮಾಡಿದೆ. ಜೌನ್‌ಪುರದಲ್ಲಿರುವ ಅತಾಲ ಮಸೀದಿಗೆ ಅತ್ಲಾ ದೇವಿ ದೇಗುಲ, ಬಾಬರಿ ಮಸೀದಿಗೆ ರಾಮಜನ್ಮಭೂಮಿ ಎಂದು ಕ್ಯಾಲೆಂಡರ್‌ನಲ್ಲಿ ಹೆಸರಿಡಲಾಗಿದೆ.

ದೇಶವನ್ನು ಹಿಂದೂ ರಾಷ್ಟ್ರವೆಂದು ಘೋಷಿಸುವ ನಿಟ್ಟಿನಲ್ಲಿ ನಾವು ಈ ಕಾರ್ಯಕ್ರಮ ಆರಂಭಿಸಿದ್ದು, ಸರಕಾರ ನಮ್ಮ ಬೇಡಿಕೆಯನ್ನು ಪರಿಗಣಿಸಿ ಹಿಂದೂ ರಾಷ್ಟ್ರ ಎಂದು ಘೋಷಿಸುವ ಭರವಸೆ ಇದೆ ಎಂದು ಮಹಾಸಭಾದ ರಾಷ್ಟ್ರೀಯ ಕಾರ್ಯದರ್ಶಿ ಪೂಜಾ ಶಕುನ್‌ ಪಾಂಡೆ ಹೇಳಿದ್ದಾರೆ.

ವಿದೇಶದಿಂದ ಬಂದವರು ಹಿಂದೂ ಮಂದಿರಗಳನ್ನು ಮಸೀದಿಗಳನ್ನಾಗಿ ಪರಿವರ್ತಿಸಿ ಹೆಸರು ಬದಲಿಸಿದ್ದಾರೆ. ನಾವು ಅವುಗಳನ್ನು ವಾಪಸ್‌ ಪಡೆದು ಹಿಂದೂ ದೇಗುಲಗಳ ಹೆಸರು ಇರಿಸುತ್ತಿದ್ದೇವೆ ಎಂದು ಪಾಂಡೆ ಸಮರ್ಥಿಸಿಕೊಂಡಿದ್ದಾರೆ.

ಈ ನಡುವೆ ಹಿಂದೂ ಮಹಾಸಭಾದ ಈ ಕಾರ್ಯಕ್ಕೆ ತೀವ್ರ ಅಸಮಾಧಾನ ವ್ಯಕ್ತಪಡಿಸಿರುವ ಆಲ್‌ ಇಂಡಿಯಾ ಮುಸ್ಲಿಂ ಪರ್ಸನಲ್‌ ಲಾ ಬೋರ್ಡ್‌ ಸಮಿತಿಯ ಸದಸ್ಯ ಮೌಲಾನ ಖಾಲಿದ್‌ ರಶೀದ್‌ ಫಿರಂಗಿ ಮಹಾಲಿ ಮಹಾಸಭಾದವರು ಅನಗತ್ಯವಾಗಿ ಆಧಾರ ರಹಿತ ಹೇಳಿಕೆಗಳ ಮೂಲಕ ಕೋಮು ವೈಷಮ್ಯವನ್ನು ಹುಟ್ಟು ಹಾಕುವ ಕೆಲಸ ಮಾಡುತ್ತಿದ್ದಾರೆ. ಇಂಥವರ ವಿರುದ್ಧ ಸರಕಾರ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಹೇಳಿದ್ದಾರೆ.

ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಅಲಿಗಢದ ಮಾಜಿ ಶಾಸಕ ಜಮೀರ್‌ ಉಲ್ಲಾ ಖಾನ್‌, ದೇಶದಲ್ಲಿ ಸೌಹಾರ್ದತೆಗೆ ಧಕ್ಕೆ ತರುವ ಮಹಾಸಭಾದವರಿಗೆ ಮತ್ತು ಪಾಕ್ ನಲ್ಲಿರುವ ಹಫೀಜ್‌ ಮೊಹಮ್ಮದ್‌ ಸಯೀದ್‌ಗೆ ಯಾವುದೇ ವ್ಯತ್ಯಾಸವಿಲ್ಲ. ಎರಡು ಸಮುದಾಯಗಳ ಮಧ್ಯೆ ಮತ್ತೊಮ್ಮೆ ಸಂಘರ್ಷ ಹುಟ್ಟು ಹಾಕುವುದೇ ಇವರ ಉದ್ದೇಶ ಎಂದು ಗುಡುಗಿದ್ದಾರೆ.

Hindu Mahasabha,released, controversial Hindu New Year calendar,refers,Hindu temples

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ