ಆಸ್ತಿ ವಿವಾದಕ್ಕೆ ಸಂಬಂಧಿಸಿದಂತೆ ಸಹೋದರರ ನಡುವೆ ಜಗಳ ನಡೆದು ಒಬ್ಬನ ಕೊಲೆಯಲ್ಲಿ ಅಂತ್ಯ:

ಕುಣಿಗಲ್, ಮಾ.17- ಆಸ್ತಿ ವಿವಾದಕ್ಕೆ ಸಂಬಂಧಿಸಿದಂತೆ ಸಹೋದರರ ನಡುವೆ ಜಗಳ ನಡೆದು ಒಬ್ಬನ ಕೊಲೆಯಲ್ಲಿ ಅಂತ್ಯವಾಗಿರುವ ಘಟನೆ ಹುಲಿಯೂರು ದುರ್ಗ ಪೆÇಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ತಾಲೂಕಿನ ಹುಲಿಯೂರು ದುರ್ಗ ಹೋಬಳಿ ಬೈರನಾಯಕನಹಳ್ಳಿ ಗ್ರಾಮದ ಕಪನಯ್ಯ (50) ಕೊಲೆಯಾದ ದುರ್ದೈವಿ.  ಸಹೋದರ ಚನ್ನಪ್ಪ ಸಹ ಗಂಭೀರ ಗಾಯಗೊಂಡಿದ್ದು, ಬೆಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ.
ಕಳೆದ ಏಳೆಂಟು ವರ್ಷಗಳಿಂದ ಕಪನಯ್ಯ ಹಾಗೂ ಮುದ್ದುರಾಜು ನಡುವೆ ಆಸ್ತಿ ವಿವಾದಕ್ಕೆ ಸಂಬಂಧಿಸಿದಂತೆ ನ್ಯಾಯಾಲಯದಲ್ಲಿ ವ್ಯಾಜ್ಯವಿದ್ದು, ಈ ಮಧ್ಯೆ ಎರಡು ಕುಟುಂಬಗಳ ನಡುವೆ ಪರಸ್ಪರ ಕಲಹವಿತ್ತು. ಮೊನ್ನೆ ಮಳೆ ಬಿದ್ದಿದ್ದರಿಂದ ಜಮೀನು ಉಳುಮೆ ಮಾಡುವ ಸಲುವಾಗಿ ಇವರಿಬ್ಬರ ನಡುವೆ ಜಗಳ ನಡೆದಿತ್ತು.  ಇದನ್ನೇ ಮುಂದುವರಿಸಿದ ಕುಟುಂಬಗಳು ರಾತ್ರಿ 8 ಗಂಟೆ ಸಮಯದಲ್ಲಿ ಮುದ್ದುರಾಜು ಮತ್ತು ಈತನ ಪತ್ನಿ ಶಿಲ್ಪಾ ದಂಪತಿ ಚೂರಿ ಸಮೇತ ಕಪನಯ್ಯ ಅವರ ಮನೆ ಬಳಿ ಹೋಗಿ ಜಗಳವಾಡಿದ್ದಾರೆ.
ಈ ವೇಳೆ ಇಬ್ಬರ ನಡುವೆ ಜಗಳವಾಗಿದ್ದು, ಮುದ್ದುರಾಜು ಚೂರಿಯಿಂದ ಕಪನಯ್ಯ ಹೊಟ್ಟೆಗೆ ಚುಚ್ಚಿದ್ದಾನೆ. ಈ ಸಂದರ್ಭದಲ್ಲಿ ಕಪನಯ್ಯನ ತಮ್ಮ ಚನ್ನಪ್ಪ ಮಧ್ಯ ಪ್ರವೇಶಿಸಿದಾಗ ಈತನಿಗೂ ಸಹ ಚೂರಿಯಿಂದ ಹೊಟ್ಟೆಗೆ ಇರಿದಿದ್ದಾನೆ.
ಘರ್ಷಣೆಯಲ್ಲಿ ಕಪನಯ್ಯ ಮೃತಪಟ್ಟರೆ, ಚನ್ನಪ್ಪನ ಸ್ಥಿತಿ ಗಂಭೀರವಾಗಿದೆ. ಹುಲಿಯೂರು ಪಿಎಸ್‍ಐ ಮಂಜು ಸ್ಥಳಕ್ಕೆ ತೆರಳಿ ಆರೋಪಿ ದಂಪತಿಯನ್ನು ಬಂಧಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ