ಮಹಾಲಕ್ಷ್ಮಿ ಲೇಔಟ್ ವಿಧಾನಸಭಾ ಕ್ಷೇತ್ರದಲ್ಲಿ ಜೆಡಿಎಸ್ ವಿಕಾಸಪರ್ವ ಯಾತ್ರೆ

ಬೆಂಗಳೂರು, ಮಾ.14-ನಗರದ ಮಹಾಲಕ್ಷ್ಮಿ ಲೇಔಟ್ ವಿಧಾನಸಭಾ ಕ್ಷೇತ್ರದಲ್ಲಿ ಇಂದು ಜೆಡಿಎಸ್ ವಿಕಾಸಪರ್ವ ಯಾತ್ರೆ ನಡೆಸಿತು.

ಶಾಸಕ ಕೆ.ಗೋಪಾಲಯ್ಯ ನೇತೃತ್ವದಲ್ಲಿ ವೃಷಭಾವತಿ ನಗರದಿಂದ ವಿಕಾಸಪರ್ವ ಯಾತ್ರೆಗೆ ಚಾಲನೆ ನೀಡಲಾಯಿತು.

ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು ಹಾಗೂ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿಯವರು ಅಧಿಕಾರದಲ್ಲಿದ್ದಾಗ ಬೆಂಗಳೂರು ಅಭಿವೃದ್ಧಿಗೆ ಮಾಡಿರುವ ಕಾರ್ಯಗಳನ್ನು ಜನರಿಗೆ ಮನವರಿಕೆ ಮಾಡಿಕೊಟ್ಟು ಮುಂದಿನ ಚುನಾವಣೆಯಲ್ಲಿ ಜೆಡಿಎಸ್ ಬೆಂಬಲಿಸುವಂತೆ ಮನವಿ ಮಾಡಲಾಯಿತು.

ಮುಂದೆ ಜೆಡಿಎಸ್ ಸರ್ಕಾರ ಅಧಿಕಾರಕ್ಕೆ ಬಂದರೆ ಬೆಂಗಳೂರಿನಲ್ಲಿ ಮಾಡಲಿರುವ ಕಾರ್ಯಗಳ ಮಾಹಿತಿಯನ್ನು ಜನರಿಗೆ ವಿಕಾಸಪರ್ವದ ಸಂದರ್ಭದಲ್ಲಿ ನೀಡಲಾಯಿತು.

ಅಲ್ಲದೆ ಐದು ವರ್ಷಗಳಲ್ಲಿ ಮಹಾಲಕ್ಷ್ಮಿ ಲೇಔಟ್ ವಿಧಾನಸಭಾ ಕ್ಷೇತ್ರದಲ್ಲಿ ಗೋಪಾಲಯ್ಯ ಮಾಡಿರುವ ಸಾಧನೆಗಳ ಮಾಹಿತಿಯನ್ನು ಜನರಿಗೆ ತಿಳಿಸಲಾಯಿತು.

ವೃಷಭಾವತಿ ನಗರದಿಂದ ಹೊರಟ ವಿಕಾಸಪರ್ವ ಯಾತ್ರೆ ಕುವೆಂಪು ಉದ್ಯಾನವನ, ಕೆರೆ ಅಂಗಳ, ಕಮಲಾನಗರ, ವಾಟರ್‍ಟ್ಯಾಂಕ್, ಶಂಕರಮಠ ವೃತ್ತ, ಕುರುಬರಹಳ್ಳಿ, ಗರುಡವೃತ್ತ, ನಾಗಪುರ, ಗೆಳೆಯರ ಬಳಗ, ಸರಸ್ವತಿಪುರ, ಜೈಮಾರುತಿನಗರ, ಕೃಷ್ಣಾನಂದನಗರ ಮತ್ತಿತರ ಬಡಾವಣೆಗಳಲ್ಲಿ ವಿಕಾಸಪರ್ವ ಯಾತ್ರೆ ನಡೆಸಿ ಜೆಡಿಎಸ್ ಪರವಾಗಿ ಜನಜಾಗೃತಿ ಮೂಡಿಸಲಾಯಿತು.

ಶಾಸಕ ಗೋಪಾಲಯ್ಯ ಅವರೊಂದಿಗೆ ಮಾಜಿ ಉಪಮೇಯರ್ ಎಸ್.ಪಿ.ಹೇಮಲತಾ ಗೋಪಾಲಯ್ಯ, ಬಿಬಿಎಂಪಿ ಸದಸ್ಯರಾದ ಎಂ.ಮಹದೇವ್, ಗಂಗಮ್ಮ ರಾಜಣ್ಣ, ಭದ್ರೇಗೌಡ, ಜಯರಾಂ, ಜೆಡಿಎಸ್ ಮುಖಂಡರಾದ ಶ್ರೀನಿವಾಸ್ ಮತ್ತಿತರರು ವಿಕಾಸಪರ್ವ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ