ಮಹಿಳೆ ಮೇಲೆ ಗುಂಡು ಹಾರಿಸಿ ಬೈಕ್‍ನಲ್ಲಿ ಪರಾರಿ

ಬೆಂಗಳೂರು,ಮಾ.10-ಮಹಿಳೆ ಮೇಲೆ ಗುಂಡು ಹಾರಿಸಿ ಬೈಕ್‍ನಲ್ಲಿ ಪರಾರಿಯಾಗಿರುವ ಇಬ್ಬರು ದುಷ್ಕರ್ಮಿಗಳಿಗಾಗಿ ವಿದ್ಯಾರಣ್ಯಾಪುರ ಠಾಣೆ ಪೆÇಲೀಸರು ಶೋಧ ಕೈಗೊಂಡಿದ್ದಾರೆ.
ಖಾಸಗಿ ಕಂಪನಿಯೊಂದರಲ್ಲಿ ಅಕೌಂಟೆಂಟ್ ಆಗಿರುವ ಸಿಂಧು ಅವರ ಮೇಲೆ ಯಾವ ಕಾರಣಕ್ಕಾಗಿ ಗುಂಡು ಹಾರಿಸಿ ಕೊಲೆಗೆ ಯತ್ನಿಸಲಾಗಿದೆ ಎಂಬುದು ನಿಗೂಢವಾಗಿದೆ.
ಬೈಕ್‍ನಲ್ಲಿ ಬಂದ ಈ ಇಬ್ಬರು ದರೋಡೆಕೋರರೇ ಅಥವಾ ವೈಯಕ್ತಿಕ ದ್ವೇಷದಿಂದ ಸಿಂಧು ಮೇಲೆ ಗುಂಡು ಹಾರಿಸಿ ಕೊಲೆ ಯತ್ನಿಸಿದ್ದಾರೆಯೇ ಎಂಬ ಬಗ್ಗೆ ತನಿಖೆ ಮುಂದುವರೆದಿದೆ.
ಘಟನೆ ಹಿನ್ನೆಲೆ:
ವಿದ್ಯಾರಣ್ಯಾಪುರ ಸಮೀಪದ ರಾಮಚಂದ್ರಪುರ ನಿವಾಸಿಯಾದ ಸಿಂಧು ರಾತ್ರಿ 9.30ರಲ್ಲಿ ಸ್ನೇಹಿತೆ ಮನೆಗೆ ಹೋಗಿ ತಮ್ಮ ದ್ವಿಚಕ್ರ ವಾಹನದಲ್ಲಿ ಮನೆಗೆ ವಾಪಸ್ಸಾಗುತ್ತಿದ್ದಾಗ ಬೈಕ್‍ನಲ್ಲಿ ಹಿಂಬಾಲಿಸಿ ಬಂದ ಇಬ್ಬರು ದುಷ್ಕರ್ಮಿಗಳು ಇವರ ಮೇಲೆ ಗುಂಡು ಹಾರಿಸಿ ಪರಾರಿಯಾಗಿದ್ದಾರೆ.
ಅದೃಷ್ಟವಶಾತ್ ಮೂರು ಗುಂಡುಗಳ ಪೈಕಿ ಒಂದು ಗುಂಡು ಮಾತ್ರ ಇವರ ಬೆನ್ನನ್ನು ತಾಗಿಕೊಂಡು ಹೋಗಿದೆ. ಪರಿಣಾಮವಾಗಿ ತರಿಚಿದ ಗಾಯವಾಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಮನೆಗೆ ತೆರಳಿದ್ದಾರೆ.
ಸುದ್ದಿ ತಿಳಿಯುತ್ತಿದ್ದಂತೆ ವಿದ್ಯಾರಣ್ಯಾಪುರ ಠಾಣೆ ಪೆÇಲೀಸರು ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡು ಕೃತ್ಯ ಎಸಗಿ ಪರಾರಿಯಾಗಿರುವ ಇಬ್ಬರು ದುಷ್ಕರ್ಮಿಗಳಿಗಾಗಿ ಶೋಧ ಕಾರ್ಯ ಕೈಗೊಂಡಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ