ಸಚಿವ ಸುರೇಶ್ ಪ್ರಭು ಅವರಿಗೆ ಹೆಚ್ಚುವರಿಯಾಗಿ ನಾಗರಿಕ ವಾಯು ಯಾನ ಖಾತೆ

ನವದೆಹಲಿ:ಮಾ:10: ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕಾ ಸಚಿವ ಸುರೇಶ್‌ ಪ್ರಭು ಅವರಿಗೆ ಹೆಚ್ಚುವರಿಯಾಗಿ ನಾಗರಿಕ ವಾಯು ಯಾನ ಖಾತೆಯನ್ನು ನೀಡಲಾಗಿದೆ.

ಟಿಡಿಪಿಯ ಅಶೋಕ್ ಗಜಪತಿ ರಾಜು ಅವರ ರಾಜಿನಾಮೆಯಿಂದ ತೆರವಾದ ನಾಗರಿಕ ವಿಮಾನಯಾನ ಖಾತೆಯನ್ನು ಪ್ರಧಾನಿ ನರೇಂದ್ರ ಮೋದಿಯವರು ಸುರೇಶ್ ಪ್ರಭು ಅವರಿಗೆ ಹೆಚ್ಚುವರಿಯಾಗಿ ನೀಡಿದ್ದಾರೆ ಎಂದು ತಿಳಿದುಬಂದಿದೆ.

ಪ್ರಧಾನಿ ಮೋದಿ ಅವರು ಒಂದು ದಿನದ ಮಟ್ಟಿಗೆ ಈ ಖಾತೆಯ ಹೊಣೆಗಾರಿಕೆ ವಹಿಸಿದ್ದರು. ಬಳಿಕ ಸುರೇಶ್‌ ಪ್ರಭು ಅವರನ್ನು ನೂತನ ವಾಯುಯಾನ ಸಚಿವರನ್ನಾಗಿ ನೇಮಿಸಲಾಯಿತು.

ಟಿಡಿಪಿಯ ಇನ್ನೋರ್ವ ಸಂಸದ ವೈ ಎಸ್‌ ಚೌಧರಿ ಅವರು ಕೂಡ ತಾವು ಸಹಾಯಕ ಸಚಿವರಾಗಿ ನಿರ್ವಹಿಸುತ್ತಿದ್ದ ವಿಜ್ಞಾನ ಮತ್ತು ತಂತ್ರಜ್ಞಾನ ಹಾಗೂ ಭೂ ವಿಜ್ಞಾನ ಖಾತೆಗೆ ರಾಜೀನಾಮೆ ನೀಡಿದ್ದರು. ಈ ಖಾತೆಯನ್ನು ಮೋದಿಯವರೇ ನಿರ್ವಹಿಸಲಿದ್ದಾರೆ ಎನ್ನಲಾಗಿದೆ.

ಆಂಧ್ರ ಪ್ರದೇಶಕ್ಕೆ ವಿಶೇಷ ಸ್ಥಾನಮಾನ ನೀಡಲಿಲ್ಲ ಎಂಬ ಕಾರಣಕ್ಕೆ ಟಿಡಿಪಿ ಮುಖ್ಯಸ್ಥ ಹಾಗೂ ಆಂಧ್ರ ಮುಖ್ಯಮಂತ್ರಿ ಎನ್ ಚಂದ್ರಬಾಬು ನಾಯ್ಡು ಅವರ ಸೂಚನೆಯಂತೆ ಅಶೋಕ್ ಗಜಪತಿ ರಾಜು ಮತ್ತು  ಎಂಪಿ ವೈಎಸ್ ಚೌಧರಿ ಅವರು ಸಚಿವ ಸ್ಥಾನಕ್ಕೆ ರಾಜಿನಾಮೆ ನೀಡುವ ಮೂಲಕ ಕೇಂದ್ರ ಸರ್ಕಾರದಿಂದ ಹೊರಬಂದಿದ್ದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ