![images (2)](http://kannada.vartamitra.com/wp-content/uploads/2018/03/images-2-3.jpg)
ಅಗರ್ತಲಾ, ಮಾ.9- ಈಶಾನ್ಯ ರಾಜ್ಯ ತ್ರಿಪುರಾದ ನೂತನ ಮುಖ್ಯಮಂತ್ರಿಯಾಗಿ ಬಿಪ್ಲವ್ ಕುಮಾರ್ ದೇಬ್ ಇಂದು ಪ್ರಮಾಣ ವಚನ ಸ್ವೀಕರಿಸಿದ್ದಾರೆ. ರಾಜ್ಯದಲ್ಲಿ 25 ವರ್ಷಗಳ ಎಡರಂಗ ಅಳ್ವಿಕೆ ಕೊನೆಗೊಂಡ ನಂತರ ಇದೇ ಮೊದಲ ಬಾರಿಗೆ ಬಿಜೆಪಿ ಸರ್ಕಾರ ರಚನೆಯಾಗಿದೆ.
ರಾಜಧಾನಿ ಅಗರ್ತಲಾದಲ್ಲಿ ನಡೆದ ಭವ್ಯ ಸಮಾರಂಭದಲ್ಲಿ ರಾಜ್ಯಪಾಲ ತಥಾಗತ ರಾಯ್ ಅವರು ಪ್ರಮಾಣವಚನ ಬೋಧಿಸಿದರು.
ಉಪಮುಖ್ಯಮಂತ್ರಿಯಾಗಿ ಜಿಷ್ಣು ದೇವ್ ಬರ್ಮಾನ್ ಇದೇ ಸಂದರ್ಭ ಪ್ರಮಾಣ ವಚನ ಸ್ವೀಕರಿಸಿದರು.
ಸಮಾರಂಭದಲ್ಲಿ ಪ್ರಧಾನಿ ನರೇಂದ್ರ ಮೋದಿ, ತ್ರಿಪುರಾದ ಮಾಜಿ ಸಿಎಂ ಮಾಣಿಕ್ ಸರ್ಕಾರ್, ಬಿಜೆಪಿ ಹಿರಿಯ ನಾಯಕರಾದ ಎಲ್.ಕೆ.ಅಡ್ವಾಣಿ, ಮುರಳಿ ಮನೋಹರ್ ಜೋಶಿ, ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಷಾ, ಕೇಂದ್ರ ಸಚಿವ ರಾಜನಾಥ್ ಸಿಂಗ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.
ಈ ಸಮಾರಂಭಕ್ಕಾಗಿ ನೂರು ಅಡಿಗಳ ಭವ್ಯ ವೇದಿಕೆ ನಿರ್ಮಿಸಲಾಗಿತ್ತು. ರಾಜಧಾನಿ ಅಗರ್ತಲಾ ಕೇಸರಿಮಯವಾಗಿತ್ತು.
48 ವರ್ಷ ವಯಸ್ಸಿನ ಬಿಪ್ಲಬ್ ದೇಬ್ ಅವರು ತ್ರಿಪುರಾ ಬಿಜೆಪಿ ಘಟಕದ ಅಧ್ಯಕ್ಷರಾಗಿದ್ದು, ಬಿಪ್ಲಬ್ ದೇಬ್ ಅವರು ಗೋಮತಿ ಜಿಲ್ಲೆಯವರಾಗಿದ್ದಾರೆ. 1999ರಲ್ಲಿ ತ್ರಿಪುರಾದ ಉದಯ್ ಪುರ ಕಾಲೇಜಿನ ಪದವಿ ಪಡೆದ ಬಿಪ್ಲಪ್ ದೇಬ್ ಅವರು, ಆರ್ಎಸ್ಎಸ್ ಸಂಘಟನೆ ಸೇರಿದ ಬಳಿಕ ದೆಹಲಿಯಲ್ಲೇ 16 ವರ್ಷ ಕಳೆದಿದ್ದರು. ಈ ಸಮಯದಲ್ಲಿ ಆರ್ಎಸ್ಎಸ್ನ ಪ್ರಮುಖರಾದ ಗೋಬಿಂದ್ ಆಚಾರ್ಯ ಮತ್ತು ಕೃಷ್ಣ ಗೋಪಾಲ್ ಶರ್ಮಾ ರೊಂದಿಗೆ ಕಾರ್ಯ ನಿರ್ವಹಿಸಿದ್ದರು.
ಎರಡು ವರ್ಷಗಳ ಹಿಂದಷ್ಟೇ ತವರು ರಾಜಕಾರಣಕ್ಕೆ ಮರಳಿದ್ದ ಬಿಪ್ಲಪ್ ದೇಬ್ ತ್ರಿಪುರಾ ಬಿಜೆಪಿ ಘಟಕದ ಮುಖ್ಯಸ್ಥರಾಗಿದ್ದರು. ಇದೀಗ ಇತ್ತೀಚಗೆ ನಡೆದ ವಿಧಾನಸಭಾ ಚುನಾವಣೆಯಲ್ಲಿ ಪಕ್ಷವನ್ಮು ಯಶಸ್ವಿಯಾಗಿ ಸಂಘಟಿಸಿ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ.