ಕನ್ನಡ ಭಾವುಟದ ನವವಿನ್ಯಾಸ

ಬೆಂಗಳೂರು, ಮಾ.8- ಕನ್ನಡ ಭಾವುಟದ ನವವಿನ್ಯಾಸದ ಬಗ್ಗೆ ಚರ್ಚಿಸಲು ಕರೆಯಲಾಗಿದ್ದ ಸಭೆಯಲ್ಲಿ ಕನ್ನಡ ಪಕ್ಷದ ಅಧ್ಯಕ್ಷರು ಆಡಿದ ಆಕ್ಷೇಪಾರ್ಹ ಮಾತುಗಳಿಗೆ ಕನ್ನಡ ಸಂಘಟನೆಗಳ ಹೋರಾಟಗಾರರು ತೀವ್ರ ವಿರೋಧ ವ್ಯಕ್ತಪಡಿಸಿ ತರಾಟೆಗೆ ತೆಗೆದುಕೊಂಡ ಬೆಳವಣಿಗೆ ನಡೆಯಿತು.
ಮುಖ್ಯಮಂತ್ರಿ ಸಿದ್ದರಾಮಯ್ಯ ಗೃಹ ಕಚೇರಿ ಕೃಷ್ಣಾದಲ್ಲಿ ಕರೆದಿದ್ದ ಸಭೆಯಲ್ಲಿ ಭಾಗವಹಿಸಿದ್ದ ಕನ್ನಡ ಪಕ್ಷದ ಅಧ್ಯಕ್ಷ ಪುರುಷೋತ್ತಮ್ ಅವರು, ಹಳದಿ ಮತ್ತು ಕೆಂಪು ಮಿಶ್ರಿತ ಕನ್ನಡ ಧ್ವಜವನ್ನು ಮೊದಲು ರೂಪಿಸಿದ್ದು ಕನ್ನಡ ಪಕ್ಷ. ಮಾ.ರಾಮಮೂರ್ತಿ ಅವರು ಅದರ ಮೂಲ ಕಾರಣಕರ್ತರು. ಮಾ.10ಕ್ಕೆ ಅವರ ಜನ್ಮಶತಮಾನೋತ್ಸವವಿದೆ. ಅದೇ ದಿನವೇ ಅಧಿಕೃತ ಧ್ವಜದ ಘೋಷಣೆ ಮಾಡಿ ಎಂದು ಸಭೆಯಲ್ಲಿ ಒತ್ತಾಯಿಸಿದರು.
ಇದಕ್ಕೂ ಮೊದಲು ಕನ್ನಡ ಭಾವುಟದ ಬಗ್ಗೆ ಯಾರಿಗೂ ಪೂರ್ಣ ಮಾಹಿತಿ ಇಲ್ಲ. ಎಲ್ಲರೂ ಅರೆ ತಿಳುವಳಿಕೆ ಹೊಂದಿದವರೇ ಎಂದು ಪುರುಷೋತ್ತಮ್ ಹೇಳಿದಾಗ ಸಭೆಯಲ್ಲಿ ಆಕ್ಷೇಪ ವ್ಯಕ್ತವಾಯಿತು.
ಸಭೆಯ ನಂತರ ಹೊರ ಬಂದ ಪುರುಷೋತ್ತಮ್ ಅವರನ್ನು ಸಾ.ರಾ.ಗೋವಿಂದು ಹಾಗೂ ಮತ್ತಿತರರು ತೀವ್ರವಾಗಿ ತರಾಟೆಗೆ ತೆಗೆದುಕೊಂಡರು.
ತಮ್ಮ ಹಿರಿತನಕ್ಕೆ ತಕ್ಕಂತೆ ಮಾತುಗಳನ್ನಾಡಬೇಕು. ನನ್ನದು ಒಂದು ಪಕ್ಷ ಎಂದು ಹೇಳಿಕೊಂಡು ರಾಜಕಾರಣ ಮಾಡುವುದಿಲ್ಲ. ನಿಮ್ಮ ಪಕ್ಷ ಎಲ್ಲಿ ಸ್ಪರ್ಧಿಸಿದೆ? ಎಷ್ಟು ಮತ ಪಡೆದಿದೆ ? ನೀವು ಯಾವ ಹೋರಾಟ ಮಾಡಿದ್ದೀರಿ ? ಎಲ್ಲರೂ ಹೊಸ ಧ್ವಜವನ್ನು ಒಪ್ಪಿಕೊಂಡಾಗ ನೀವು ಮನಸ್ಸಿಗೆ ಬಂದಂತೆ ಮಾತನಾಡುವುದು, ಇತರರ ಬಗ್ಗೆ ಹಗುರವಾಗಿ ಟೀಕಿಸುವುದು ಸರಿಯಲ್ಲ ಎಂದು ಕಿಡಿಕಾರಿದರು.
ಪರಿಸ್ಥಿತಿ ಕಾವೇರುತ್ತಿದ್ದಂತೆ ಮಧ್ಯ ಪ್ರವೇಶಿಸಿದ ಪೆÇಲೀಸರು ಪುರುಷೋತ್ತಮ್ ಅವರನ್ನು ವಾಹನ ಹತ್ತಿಸಿ ಸಾಗು ಹಾಕಿದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ