ಕೆಪಿಜೆಪಿಯಿಂದ ಹೊರ ಬಂದ ನಟ ಉಪೇಂದ್ರಗೆ ಜೆಡಿಎಸ್, ಬಿಜೆಪಿಯಿಂದ ಭಾರಿ ಆಹ್ವಾನ

ಕೆಪಿಜೆಪಿಯಿಂದ ಹೊರ ಬಂದ ನಟ ಉಪೇಂದ್ರಗೆ ಜೆಡಿಎಸ್, ಬಿಜೆಪಿಯಿಂದ ಭಾರಿ ಆಹ್ವಾನ

ಬೆಂಗಳೂರು, ಮಾ.6- ಪಕ್ಷದ ಸಂಸ್ಥಾಪಕ ಮಹೇಶ್ ಗೌಡ ಅವರೊಂದಿಗೆ ಭಿನ್ನಾಭಿಪ್ರಾಯದಿಂದ ನಟ ಉಪೇಂದ್ರ ಕೆಪಿಜೆಪಿಯಿಂದ ಹೊರ ಬಂದಿದ್ದಾರೆ. ಅದರ ಬೆನ್ನಲ್ಲೇ ಜೆಡಿಎಸ್, ಬಿಜೆಪಿಯಿಂದ ಉಪೇಂದ್ರರಿಗೆ ಭಾರಿ ಆಹ್ವಾನ ಸಿಕ್ಕಿದೆ.
ಕೆಪಿಜೆಪಿಗೆ ರಾಜೀನಾಮೆ ಘೋಷಿಸಿರುವ ನಟ ಉಪೇಂದ್ರ ತಾವು ಯಾವುದೇ ಪಕ್ಷ ಸೇರುವುದಿಲ್ಲ ಎಂದು ಸ್ಪಷ್ಟಪಡಿಸಿದ್ದು, ಮುಂದಿನ ದಿನಗಳಲ್ಲಿ ಪ್ರಜಾಕೀಯ ಹೆಸರಿನಲ್ಲಿ ಹೊಸ ಪಕ್ಷ ಸ್ಥಾಪಿಸುವುದಾಗಿ ಹೇಳಿದ್ದಾರೆ.
ಮುಂದಿನ ವಿಧಾನಸಭೆ ಚುನಾವಣೆಗೆ ಸ್ಪರ್ಧಿಸಲು ತಮ್ಮ ಬಳಿ ಅಭ್ಯರ್ಥಿಗಳಿದ್ದಾರೆ. ಆದರೆ ಪಕ್ಷವಿಲ್ಲ. ಹೀಗಾಗಿ ತಮ್ಮೊಂದಿಗೆ ಇರುವವರ ಜೊತೆ ಸೇರಿ ಪ್ರಜಾಕೀಯ ಪಕ್ಷ ಸ್ಥಾಪಿಸುತ್ತೇವೆ. ಈ ಚುನಾವಣೆಗೆ ಸಾಧ್ಯವಾಗಿದ್ದರೆ ಮುಂದಿನ ಲೋಕಸಭೆ ಚುನಾವಣೆ ಅಥವಾ ಮುಂದಿನ ಗ್ರಾಮೀಣ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಸ್ಪರ್ಧಿಸುವುದಾಗಿ ಹೇಳಿದ್ದಾರೆ.
ಖಾಸಗಿ ರೆಸಾರ್ಟ್‍ನಲ್ಲಿ ಇಂದು ತಮ್ಮ ಬೆಂಬಲಿಗರೊಂದಿಗೆ ಸಭೆ ನಡೆಸಿದ ನಂತರ ಮಾತನಾಡಿದ ಅವರು, ನಮ್ಮ ಬೆಂಬಲಿಗರ ಬಹುಮತದ ಅಭಿಪ್ರಾಯದಂತೆ ಪ್ರಜಾಕಿಯ ಹೊಸ ಪಕ್ಷವನ್ನು ಕಟ್ಟುವುದಾಗಿ ತಿಳಿಸಿದರು.
ತಾವು ಬೇರೆ ಪಕ್ಷಗಳಿಗೆ ಹೋಗುವುದಾಗಿ ಸುದ್ದಿಗಳು ಹರಡಿವೆ. ಆದರೆ, ಈ ಬಗ್ಗೆ ಸದ್ಯಕ್ಕೆ ಯಾವುದೇ ನಿರ್ಧಾರವನ್ನು ತೆಗೆದುಕೊಂಡಿಲ್ಲ. ಪ್ರಜಾಕಿಯ ಕಾನ್‍ಸೆಪ್ಟ್ ಇಟ್ಟುಕೊಂಡೇ ಮುಂದುವರೆಯಲು ನಿರ್ಧರಿಸಿದ್ದೇವೆ ಎಂದು ಹೇಳಿದರು.
ಪಕ್ಷ ಸ್ಥಾಪನೆ ಸಂಬಂಧ ವಕೀಲರೊಂದಿಗೆ ಚರ್ಚಿಸುತ್ತೇನೆ. ಪಕ್ಷದ ನೋಂದಣಿ ನಂತರ ಚಿಹ್ನೆ ಸಿಗಲಿದೆ. ಸಾಧ್ಯವಾದರೆ ಮುಂಬರುವ ಚುನಾವಣೆಯಲ್ಲಿ ಸ್ಪರ್ಧಿಸುವ ಇಚ್ಚೆ ಇದೆ. ಸಾಧ್ಯವಾಗದಿದ್ದರೆ ಮುಂದೆ ನೋಡೋಣ ಎಂದು ಹೇಳಿದರು.
ಕೆಪಿಜೆಪಿಯಲ್ಲಿ ಕೆಲವು ಗೊಂದಲ ಸೃಷ್ಟಿಯಾಗಿತ್ತು. ಸಮಸ್ಯೆಗಳನ್ನು ಬಗೆಹರಿಸಲು ಪ್ರಯತ್ನಿಸಿದೆವು. ಆದರೆ, ಸಾಧ್ಯವಾಗಿಲ್ಲ. ಹಾಗಾಗಿ ಒಮ್ಮತದ ನಿರ್ಧಾರ ತೆಗೆದುಕೊಂಡು ನಾನು ಆ ಪಕ್ಷದಿಂದ ಹೊರ ಬಂದಿದ್ದೇನೆ ಎಂದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ