ನಗರದಲ್ಲಿ ನಿಲ್ಲದ ಬೈಕ್ ವ್ಹೀಲಿಂಗ್ ಹಾವಳಿ, ಯುವಕರನ್ನು ಸ್ಥಳೀಯರೇ ಹಿಡಿದು ಬೈಕ್‍ಗೆ ಬೆಂಕಿ ಹಚ್ಚಿ ಪೊಲೀಸರಿಗೆ ಒಪ್ಪಿಸಿದ್ದಾರೆ

ತುಮಕೂರು, ಮಾ.5- ನಗರದಲ್ಲಿ ನಿಲ್ಲದ ಬೈಕ್ ವ್ಹೀಲಿಂಗ್ ಹಾವಳಿ ಹಗಲು – ರಾತ್ರಿ ಎನ್ನದೆ ನಿರಂತರವಾಗಿ ಯುವಕರು ಬೈಕ್ ವ್ಹೀಲಿಂಗ್ ಮಾಡುತ್ತಾ ವಿವಿಧ ಬಡಾವಣೆ ನಿವಾಸಿಗಳ ನಿದ್ದೆಗೆಡಿಸುತ್ತಿದ್ದ ಮೂವರು ಯುವಕರನ್ನು ಸ್ಥಳೀಯರೇ ಹಿಡಿದು ಬೈಕ್‍ಗೆ ಬೆಂಕಿ ಹಚ್ಚಿ ಪೊಲೀಸರಿಗೆ ಒಪ್ಪಿಸಿರುವ ಘಟನೆ ನಡೆದಿದೆ.

ಕಳೆದ ಕೆಲ ದಿನಗಳ ಹಿಂದೆ ಪತ್ರಿಕೆಯಲ್ಲಿ ಬೈಕ್ ವ್ಹೀಲಿಂಗ್ ಸುದ್ದಿ ಪ್ರಕಟಗೊಂಡ ಹಿನ್ನೆಲೆಯಲ್ಲಿ ಎಚ್ಚೆತ್ತುಕೊಂಡ ಪೊಲೀಸರು ನಗರದ ವಿವಿಧೆಡೆ ಬೈಕ್ ವ್ಹೀಲಿಂಗ್ ಮಾಡುತ್ತಿದ್ದ ಹಲವರನ್ನು ಬಂಧಿಸಿದರು.

ಸ್ವಲ್ಪ ದಿನ ನಗರ ನಿಶ್ಯಬ್ಧವಾಗಿತ್ತು. ಆದರೆ ಮತ್ತೆ ಯುವಕರು ತಮ್ಮ ಬೈಕ್ ವ್ಹೀಲಿಂಗ್ ಕಯ್ಯಾಲಿಯನ್ನು ಪ್ರಾರಂಭಿಸಿದ್ದರು. ಕಳೆದ ರಾತ್ರಿ ದರ್ಗಾ ಜೋಡಿ ರಸ್ತೆಯಲ್ಲಿ ಫಾರುಕ್ (23), ಸಲ್ಮಾನ್ (20), ಶಮೀರ್ (19) ಇವರು ರಾತ್ರಿ ಬೈಕ್ ವ್ಹೀಲಿಂಗ್ ಮಾಡುತ್ತಾ ಪಾದಚಾರಿಯೊಬ್ಬರಿಗೆ ಡಿಕ್ಕಿ ಹೊಡೆದು ಸಾರ್ವಜನಿಕರ ನಿದ್ದೆಗೆಡಿಸಿದ್ದರು.

ಇದರಿಂದ ರೋಸಿ ಹೋದ ನಾಗರಿಕರು ಅಕ್ಕಪಕ್ಕದ ಮನೆಯವರ ಜತೆಗೂಡಿ ಮೂವರನ್ನು ಹಿಡಿದು ಥಳಿಸಿ ಬೈಕ್‍ಗೆ ಬೆಂಕಿ ಹಚ್ಚಿ ಪೆÇಲೀಸರಿಗೆ ಒಪ್ಪಿಸಿದ್ದಾರೆ.

ಮಳ್ಳೂರು ದಿಣ್ಣೆ, ಸದಾಶಿವನಗರ, ಬಿ.ಎಚ್.ರೋಡ್, ಕುಣಿಗಲ್ ರೋಡ್, ಎಂ.ಜಿ.ರಸ್ತೆಗಳಲ್ಲಿ ಯುವಕರು ವ್ಹೀಲಿಂಗ್ ಮಾಡುತ್ತಾ ವಾಹನ ಸವಾರರಿಗೆ ಹಾಗೂ ಪಾದಚಾರಿಗಳಿಗೆ ತೊಂದರೆ ನೀಡುತ್ತಿದ್ದರು.

ಮೂವರನ್ನು ನಗರ ಠಾಣೆ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದು ಘಟನೆ ನಡೆದ ಸ್ಥಳ ತಿಲಕ್ ಪಾರ್ಕ್ ಠಾಣೆ ಹಾಗೂ ನಗರ ಠಾಣೆ ಗಡಿ ವ್ಯಾಪ್ತಿಗೆ ಒಳಪಟ್ಟಿದ್ದು ಯಾವ ಠಾಣೆಯಲ್ಲಿ ಪ್ರಕರಣ ದಾಖಲಿಸಬೇಕೆಂದು ಗೊಂದಲ ಉಂಟಾಗಿದೆ.

ಎರಡೂ ಠಾಣೆಯ ಸಿಪಿಐಗಳಾದ ರಾಧಾಕೃಷ್ಣ ಮತ್ತು ಚಂದ್ರಶೇಖರ್ ಅವರುಗಳು ಮಾತುಕತೆ ನಡೆಸಿದ್ದು , ಬಹುತೇಕ ನಗರ ಠಾಣೆಯಲ್ಲೇ ಪ್ರಕರಣ ದಾಖಲಾಗಲಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ