ಪತ್ನಿಯ ಶೀಲ ಶಂಕಿಸಿದ ಪತಿ ಆಕೆಯನ್ನು ಕೊಲೆ ಮಾಡಿ ಕಿವಿಗಳನ್ನು ಕತ್ತರಿಸಿ ಜೇಬಿನಲ್ಲಿಟ್ಟುಕೊಂಡು ಬೆಂಕಿ ಹಚ್ಚಿದ

ಶಿಡ್ಲಘಟ್ಟ, ಫೆ.27- ಪತ್ನಿಯ ಶೀಲ ಶಂಕಿಸಿದ ಪತಿ ಆಕೆಯನ್ನು ಬರ್ಬರವಾಗಿ ಕೊಲೆ ಮಾಡಿ ಕಿವಿಗಳನ್ನು ಕತ್ತರಿಸಿ ಜೇಬಿನಲ್ಲಿಟ್ಟುಕೊಂಡು ಬೆಂಕಿ ಹಚ್ಚಿರುವ ಘಟನೆ ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ಚಿಕ್ಕಬಳ್ಳಾಪುರ ಜಿಲ್ಲೆ ಶಿಡ್ಲಘಟ್ಟ ಗ್ರಾಮದ ಚಿಕ್ಕದಾಸೇನಹಳ್ಳಿ ನಿವಾಸಿ ವೆಂಕಟಲಕ್ಷ್ಮಮ್ಮ (32) ಕೊಲೆಯಾದ ನತದೃಷ್ಟೆ.
ದಾಸೇನಹಳ್ಳಿ ನಿವಾಸಿ ಆದಿನಾರಾಯಣಪ್ಪ-ವೆಂಕಟಲಕ್ಷ್ಮಮ್ಮ ದಂಪತಿಯಾಗಿದ್ದು, ಇವರಿಗೆ ಇಬ್ಬರು ಮಕ್ಕಳಿದ್ದಾರೆ.
ದಂಪತಿ ನಡುವೆ ಕೌಟುಂಬಿಕ ವಿಚಾರವಾಗಿ ಆಗಾಗ್ಗೆ ಜಗಳ ನಡೆಯುತ್ತಿತ್ತು ಎನ್ನಲಾಗಿದೆ. ಅಲ್ಲದೆ, ಆಕೆಯ ಶೀಲದ ಮೇಲೆಯೂ ಶಂಕೆ ವ್ಯಕ್ತಪಡಿಸುತ್ತಿದ್ದನು.
ಇಂದು ಬೆಳಗ್ಗೆ ಆದಿನಾರಾಯಣಪ್ಪ ಉಪಾಯವಾಗಿ ಪತ್ನಿಯನ್ನು ಹುಲ್ಲು ತರಲೆಂದು ಕರೆದುಕೊಂಡು ತನ್ನ ಜಮೀನಿಗೆ ಹೋಗಿದ್ದಾನೆ. ಅಲ್ಲಿ ಆಕೆ ಜತೆ ಜಗಳವಾಡಿ ಬಲವಾದ ಆಯುಧದಿಂದ ತಲೆಗೆ ಒಡೆದು ಕೊಲೆ ಮಾಡಿದನಲ್ಲದೆ ಆಕೆಯ ಎರಡೂ ಕಿವಿಗಳನ್ನು ಕತ್ತರಿಸಿ ಜೇಬಿನಲ್ಲಿಟ್ಟುಕೊಂಡು ನಂತರ ಶವಕ್ಕೆ ಬೆಂಕಿ ಹಚ್ಚಿದ್ದಾನೆ.
ಈ ಸುದ್ದಿ ತಿಳಿಯುತ್ತಿದ್ದಂತೆ ಗ್ರಾಮಾಂತರ ಠಾಣೆಯ ಪಿಎಸ್‍ಐ ಪ್ರದೀಪ್ ಪೂಜಾರಿ, ಸಿಪಿಐ ಸಿದ್ದರಾಜು ಅವರು ಶ್ವಾನದಳದೊಂದಿಗೆ ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿ ಆರೋಪಿ ಆದಿನಾರಾಯಣಪ್ಪನನ್ನು ಬಂಧಿಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ