ರಾತ್ರಿ ಸರಗಳ್ಳರು ಸರ ಅಪಹರಿಸಿ ಮತ್ತೊಬ್ಬ ಮಹಿಳೆಯ ವಿಫಲಯತ್ನ

ಬೆಂಗಳೂರು, ಫೆ.26- ರಾತ್ರಿ ಒಂದೇ ಕಡೆ ಬೈಕ್‍ನಲ್ಲಿ ಸುತ್ತಾಡಿದ ಸರಗಳ್ಳರು ಮಹಿಳೆಯೊಬ್ಬರ 65 ಗ್ರಾಂ ಸರ ಅಪಹರಿಸಿ, ಮತ್ತೊಬ್ಬ ಮಹಿಳೆಯ ಸರ ಎಗರಿಸಲು ವಿಫಲಯತ್ನ ನಡೆಸಿರುವ ಘಟನೆ ಬಗಲಗುಂಟೆ ಪೋಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

ಎಂಎಸ್‍ಆರ್ ಲೇಔಟ್ ನಿವಾಸಿ ಮೋಹನ್‍ಕುಮಾರಿ ಎಂಬುವರು ನಿನ್ನೆ ರಾತ್ರಿ 10.45ರಲ್ಲಿ ಒಬ್ಬರೇ ಮನೆಗೆ ನಡೆದು ಹೋಗುತ್ತಿದ್ದರು. ಹೈಟೆನ್ಷನ್ ರಸ್ತೆಯ ಐಸಿಐಸಿ ಬ್ಯಾಂಕ್ ಎಟಿಎಂ ಮುಂಭಾಗ ಇಬ್ಬರು ಬೈಕ್‍ನಲ್ಲಿ ಬಂದ ಸರಗಳ್ಳರು ಇವರನ್ನು ಹಿಂಬಾಲಿಸಿ ಬಂದು ಅವರ ಕೊರಳಲ್ಲಿದ್ದ 65 ಗ್ರಾಂ ಸರ ಎಗರಿಸಿ ಪರಾರಿಯಾಗಿದ್ದಾರೆ.

ವಿಫಲಯತ್ನ:
ಇದೇ ವ್ಯಾಪ್ತಿಯಲ್ಲಿ ಮಲ್ಲಸಂದ್ರದ ಬಿಎಚ್‍ಇಎಲ್ ಮಿಲ್ಕ್‍ಕಾಲೋನಿ ನಿವಾಸಿ ಸುಂದರಮ್ಮ ಎಂಬುವರು ರಾತ್ರಿ 10.15ರಲ್ಲಿ ಮನೆ ಮುಂದೆ ನಿಂತಿದ್ದಾಗ ಇಬ್ಬರು ಬೈಕ್‍ನಲ್ಲಿ ಬಂದು ಸರ ಎಗರಿಸಲು ಕೊರಳಿಗೆ ಕೈ ಹಾಕಿದ್ದಾರೆ.
ತಕ್ಷಣ ಎಚ್ಚೆತ್ತುಕೊಂಡ ಸುಂದರಮ್ಮ ಸರ ಬಿಗಿಯಾಗಿ ಹಿಡಿದುಕೊಂಡು ಸಹಾಯಕ್ಕಾಗಿ ಕೂಗಿಕೊಳ್ಳುತ್ತಿದ್ದಂತೆ. ಸರಗಳ್ಳರು ಅಲ್ಲಿಂದ ಪರಾರಿಯಾಗಿದ್ದಾರೆ.

ಬಗಲಗುಂಟೆ ಪೋಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರೆಸಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ