ರಾಹುಲ್ ದ್ರಾವಿಡ್ ಒತ್ತಾಯಕ್ಕೆ ಮಣಿದ ಬಿಸಿಸಿಐ: ಅಂಡರ್ 19 ವಿಶ್ವಕಪ್ ಗೆದ್ದ ತಂಡದ ಸದಸ್ಯರಿಗೆ ಸಮಾನ ಬಹುಮಾನ ಘೋಷಣೆ

ನವದೆಹಲಿ:ಫೆ-26: ಭಾರತ ಕ್ರಿಕೆಟ್ ತಂಡದ ಮಾಜಿ ಆಟಗಾರ, ಅಂಡರ್ 19 ಕ್ರಿಕೆಟ್ ತಂಡದ ಕೋಚ್ ರಾಹುಲ್ ದ್ರಾವಿಡ್ ಒತ್ತಾಯಕ್ಕೆ ಮಣಿದ ಬಿಸಿಸಿಐ ಕೊನೆಗೂ ಅಂಡರ್ 19 ಕ್ರಿಕೆಟ್ ತಂಡಕ್ಕೆ ಸಮಾನ ಬಹುಮಾನ ಘೋಷಣೆ ಮಾಡಿದೆ.

ಈ ಹಿಂದೆ ಕೋಟ್ ದ್ರಾವಿಡ್ ನೇತೃತ್ವದ ಅಂಡರ್ 19 ಕ್ರಿಕೆಟ್ ತಂಡಕ್ಕೆ ಬಿಸಿಸಿಐ ಪ್ರಶಸ್ತಿ ಘೋಷಣೆ ಮಾಡಿತ್ತು. ಅದರಂತೆ ಕೋಚ್ ದ್ರಾವಿಡ್ ಗೆ 50 ಲಕ್ಷ ಅವರ ಸಹಾಯಕ ಕೋಚ್ ಗಳಿಗೆ ತಲಾ 20 ಲಕ್ಷ ಘೋಷಣೆ ಮಾಡಿತ್ತು. ಇದಕ್ಕೆ ವಿರೋಧ ವ್ಯಕ್ತಪಡಿಸಿದ್ದ ಕೋಚ್ ರಾಹುಲ್ ದ್ರಾವಿಡ್, ತಂಡದ ಯಶಸ್ಸಿನಲ್ಲಿ ಎಲ್ಲರ ಪಾತ್ರ ಪ್ರಮುಖವಾದದ್ದು. ಹೀಗಾಗಿ ಎಲ್ಲರಿಗೂ ಸಮಾನ ಪುರಸ್ಕಾರ ನೀಡಬೇಕು. ನಗದು ಬಹುಮಾನ ಎಲ್ಲರಿಗೂ ಒಂದೇ ರೀತಿ ಇರಬೇಕು ಎಂದು ಒತ್ತಾಯಿಸಿದ್ದರು.

ಅಲ್ಲದೇ ತಮಗೆ ನೀಡುವ ನಗದು ಬಹುಮಾನದ ಮೊತ್ತವನ್ನು ಕಡಿಮೆ ಮಾಡಿ. ತಮ್ಮನ್ನು ಹಾಗೂ ಕೋಚಿಂಗ್ ಬಳಗದ ಸದಸ್ಯರನ್ನು ಸಮಾನವಾಗಿ ಪರಿಗಣಿಸುವಂತೆ ಬಿಸಿಸಿಐಗೆ ಮನವಿ ಮಾಡಿದ್ದರು. ಬಿಸಿಸಿಐ ತಮಗೆ ಘೋಷಣೆ ಮಾಡಿದ್ದ 50 ಲಕ್ಷ ರೂ.ಗಳನ್ನೂ ಕೂಡ ನಿರಾಕರಿಸಿದ್ದರು. ಇದೀಗ ರಾಹುಲ್ ದ್ರಾವಿಡ್ ಒತ್ತಾಯಕ್ಕೆ ಮಣಿದಿರುವ ಬಿಸಿಸಿಐ ತಂಡದ ಎಲ್ಲ ಸದಸ್ಯರಿಗೂ ತಲಾ 25 ಲಕ್ಷ ರೂ. ಘೋಷಣೆ ಮಾಡಿದೆ. ದ್ರಾವಿಡ್ ಅವರ ನಿಲುವಿನ ಬಗ್ಗೆ ಬಿಸಿಸಿಐ ಸದಸ್ಯರು ಅಚ್ಚರಿ ವ್ಯಕ್ತಪಡಿಸಿದ್ದರೂ, ಇದೀಗ ಅವರ ಮನವಿಯನ್ನು ಒಪ್ಪಿಕೊಂಡಿದ್ದಾರೆ.

ಈ ಹಿಂದೆ ಭಾರತದ ಅಂಡರ್-19 ತಂಡ ವಿಶ್ವಕಪ್ ಜಯಿಸಿದ ಬೆನ್ನಲ್ಲೇ ಬಿಸಿಸಿಐ ತಂಡದ ಕೋಚ್ ರಾಹುಲ್ ದ್ರಾವಿಡ್ಗೆ 50 ಲಕ್ಷ ರೂ, ಆಟಗಾರರಿಗೆ 30 ಲಕ್ಷ ರೂ. ಮತ್ತು ಕೋಚಿಂಗ್ ಸಿಬ್ಬಂದಿಗಳಿಗೆ ತಲಾ 20 ಲಕ್ಷ ರೂ. ನಗದು ಬಹುಮಾನ ಪ್ರಕಟಿಸಿತ್ತು. ದ್ರಾವಿಡ್ ಅವರ ಔದಾರ್ಯತೆಯಿಂದಾಗಿ ಸಹಾಯಕ ಕೋಚ್ ಗಳು ಇದೀಗ ತಲಾ 5 ಲಕ್ಷ ರೂ. ನಗದು ಪುರಸ್ಕಾರವನ್ನು ಹೆಚ್ಚುವರಿಯಾಗಿ ಪಡೆಯುವಂತಾಗಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ