
ಬೆಂಗಳೂರು,ಫೆ.23- ರಾಜಕಾರಣಿ ಎಂದು ಪರಿಚಯಿಸಿಕೊಂಡ ವ್ಯಕ್ತಿಯೊಬ್ಬ ಟ್ರಸ್ಟ್ನಿಂದ ಲೋನ್ ಕೊಡಿಸುವುದಾಗಿ ಇಬ್ಬರು ಉದ್ಯಮಿಗಳನ್ನು ನಂಬಿಸಿ 1.88 ಕೋಟಿ ಬೆಲೆಯ ಚಿನ್ನದ ತಾಳಿಗಳು ಹಾಗೂ ಚಿನ್ನದ ಬಿಸ್ಕತ್ಗಳನ್ನು ಪಡೆದು ವಂಚಿಸಿ ಪರಾರಿಯಾಗಿರುವ ಘಟನೆ ಬಸವೇಶ್ವರನಗರ ಪೆÇಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ಬಸವೇಶ್ವರನಗರದ 3ನೇ ಹಂತದಲ್ಲಿನ ಶ್ರೀ ದರ್ಶನ್ ಜ್ಯುವೆಲರ್ಸ್ ಮಾಲೀಕ ಧೀರಜ್ (37) ಮತ್ತು ಬಟ್ಟೆ ವ್ಯಾಪಾರಿ ಸೂರಜ್ ಅವರು ಈ ಬಗ್ಗೆ ಬಸವೇಶ್ವರನಗರ ಠಾಣೆಗೆ ದೂರು ನೀಡಿದ್ದಾರೆ.
ಕಳೆದ ಅಕ್ಟೋಬರ್ನಲ್ಲಿ ಚಿನ್ನದ ವ್ಯಾಪಾರಿಗೆ ಪರಿಚಯವಿದ್ದ ಸೂರಜ್ ಸುವರ್ಣ ಎಂಬುವರು ಧೀರಜ್ ಅವರನ್ನು ಭೇಟಿ ಮಾಡಿ ನನಗೆ ಸೋಮಣ್ಣ ಎಂಬುವರು ಪರಿಚಯವಿದ್ದು , ಅವರು ಸಾಮೂಹಿಕ ವಿವಾಹ ಮಾಡಿಸುವ ಸಲುವಾಗಿ ತಾಳಿಗಳನ್ನು ಮಾಡಿಕೊಡಬೇಕೆಂದು ಹೇಳಿದ್ದಾನೆ.
ಈತನ ಮಾತನ್ನು ನಂಬಿದ ವ್ಯಾಪಾರಿ ಧೀರಜ್ ಅವರು ನನಗೂ ಸಹ ವ್ಯಾಪಾರ ಆಗುತ್ತಲ್ಲ ಎಂಬು ಉದ್ದೇಶದಿಂದ ಸೋಮಣ್ಣ ಅವರನ್ನು ಭೇಟಿ ಮಾಡಿಸಲು ಹೇಳಿದ್ದಾರೆ.
ತದನಂತರ ಸೂರಜ್ ಸದಾಶಿವನಗರದ ಕಾಫಿ ಡೇ ಬಳಿಗೆ ಧೀರಜ್ ಅವರನ್ನು ಕರೆದುಕೊಂಡು ಹೋಗಿ ಅಲ್ಲಿದ್ದ ಒಬ್ಬರನ್ನು ತೋರಿಸಿ ಇವರೇ ಸೋಮಣ್ಣ ಎಂದು ಪರಿಚಯಿಸಿದ್ದಾನೆ. ಇವರಿಬ್ಬರು ಒಬ್ಬರಿಗೊಬ್ಬರು ಪರಿಚಯಿಸಿಕೊಂಡು ಮಾತನಾಡಿದ್ದಾರೆ.
ನಂತರ ಆರೋಪಿ ಸೋಮಣ್ಣ ನಾನು ಮೈಸೂರಿನಲ್ಲಿ ಎಂಎಲ್ಎ ಎಲೆಕ್ಷನ್ಗೆ ನಿಲ್ಲುತ್ತಿದ್ದೇನೆ. ಅದಕ್ಕಾಗಿ ನಾನು ಸಾಮೂಹಿಕ ವಿವಾಹ ಮಾಡಿಸುತ್ತಿದ್ದು , ಅದಕ್ಕೆ ನೀವು ನನಗೆ ತಲಾ 5 ಗ್ರಾಂನ 320 ತಾಳಿ ಹಾಗೂ ಗೆಸ್ಟ್ ಮತ್ತು ಸ್ವಾಮೀಜಿಗಳಿಗೆ ಕೊಡಲು 50 ಗ್ರಾಂ ತೂಕದ 40 ಅಪರಂಜಿ ಬಿಸ್ಕತ್, 30 ಗ್ರಾಂ ತೂಕದ 40 ಅಪರಂಜಿ ಬಿಸ್ಕತ್ಗಳನ್ನು ಮಾಡಿಕೊಡುವಂತೆ ಹೇಳಿದ್ದಾನೆ.
ಅವರು ಹೇಳಿದ ಆಭರಣಗಳ ಬೆಲೆಯನ್ನು ಲೆಕ್ಕ ಹಾಕಿದ ಧೀರಜ್ ಅವರು 2.5 ಕೋಟಿ ಹಣ ಕೊಟ್ಟರೆ ಮಾಡಿಕೊಡುತ್ತೇನೆ ಎಂದು ಹೇಳಿದಾಗ ನಾನು ಸಾಮೂಹಿಕ ವಿವಾಹ ಟ್ರಸ್ಟ್ ವತಿಯಿಂದ ಈ ಕಾರ್ಯಕ್ರಮ ಮಾಡುತ್ತಿದ್ದು, ಅಡ್ವಾನ್ಸ್ ಕೊಡಲು ಆಗುವುದಿಲ್ಲ. ವೈಯಕ್ತಿಕವಾಗಿ ಅಡ್ವಾನ್ಸ್ ಕೊಡುತ್ತೇನೆ ಎಂದು ಸೋಮಣ್ಣ ಹೇಳಿದ್ದಾನೆ.
ಉಳಿದ ಹಣವನ್ನು ಆರ್ಟಿಜಿಎಸ್ ಮುಖಾಂತರ ನಿಮ್ಮ ಅಕೌಂಟ್ಗೆ ಟ್ರಾನ್ಸವರ್ ಮಾಡುತ್ತೇನೆ ಎಂದು ಹೇಳಿದಾಗ, ಧೀರಜ್ ಅವರು ಅಷ್ಟೊಂದು ಹಣ ನನ್ನ ಬಳಿ ಇಲ್ಲ ಎಂದು ಹೇಳಿದ್ದಾರೆ. ನಾನು ಟ್ರಸ್ಟ್ನಿಂದ ಲೋನ್ ಕೊಡಿಸುತ್ತೇನೆ. ನೀವು ಜಮೀನು ಅಥವಾ ಮನೆ ಪೇಪರ್ ಇದ್ದರೆ ತಂದು ಕೊಡಿ ಎಂದು ಹೇಳಿದ್ದಾನೆ. ತದನಂತರ ಸ್ಯಾಂಪಲ್ ತೋರಿಸಬೇಕೆಂದು ಹೇಳಿದಾಗ ಹೆಬ್ಬಾಳದ ಕೊಲಂಬಿಯಾ ಏಷ್ಯಾ ಆಸ್ಪತ್ರೆ ಬಳಿಯ ಗೋದ್ರೇಜ್ ಅಪಾರ್ಟ್ಮೆಂಟ್ಗೆ ಕರೆಸಿಕೊಂಡ ಸೋಮಣ್ಣ ಆಭರಣಗಳನ್ನು ನೋಡಿ ಒಪ್ಪಿಕೊಂಡು 20 ಲಕ್ಷ ಅಡ್ವಾನ್ಸ್ ಕೊಟ್ಟು ಉಳಿದ ಹಣವನ್ನು ನಿಮ್ಮ ಅಕೌಂಟ್ಗೆ ಆರ್ಟಿಜಿಎಸ್ ಮಾಡುವುದಾಗಿ ಹೇಳಿದ್ದಾನೆ.
ಇವರ ಮಾತನ್ನು ನಂಬಿದ ಧೀರಜ್ ತನ್ನ ಚಿಕ್ಕಪ್ಪ ಅವರಿಂದ ಸಾಲ ಪಡೆದು ತಮ್ಮ ಬಳಿ ಇದ್ದ ಒಡವೆಗಳನ್ನು ಅಡವಿಟ್ಟು ಇವರಿಗೆ ಆಭರಣಗಳನ್ನು ಮಾಡಿ ಜ.19ರಂದು ತನ್ನ ಮನೆಗೆ ಕರೆಸಿಕೊಂಡು ಸೋಮಣ್ಣನಿಗೆ ಆಭರಣ ಕೊಟ್ಟಿದ್ದಾನೆ. ಆಭರಣ ಪಡೆದುಕೊಳ್ಳುವ ವೇಳೆ ಧೀರಜ್ಹಣ ಕೇಳಿದಾಗ ನಿಮ್ಮ ಖಾತೆಗೆ ಆರ್ಟಿಜಿಎಸ್ ಮಾಡುತ್ತೇನೆಂದು ಹೇಳಿ ಹೋದ ವ್ಯಕ್ತಿ ಮೊಬೈಲ್ ಸ್ವಿಚ್ಆಫ್ ಮಾಡಿಕೊಂಡಿದ್ದಾನೆ.
ಮತ್ತೊಂದು ದಿನ ಮೊಬೈಲ್ಗೆ ಸಿಕ್ಕಾಗ ಹಣ ಕೊಡುವಂತೆ ಕೇಳಿದರೆ ನೀನು ಯಾರೋ ಗೊತ್ತಿಲ್ಲ. ಚಿನ್ನ ಕೊಟ್ಟಿಲ್ಲ. ಪದೇ ಪದೇ ಈ ರೀತಿ ಕರೆ ಮಾಡಿದರೆ ನಿನ್ನ ಕತೆ ಮುಗಿಸಿಬಿಡುತ್ತೇನೆ ಎಂದು ಪ್ರಾಣ ಬೆದರಿಕೆ ಹಾಕಿದ್ದಾನೆ.
ಇದರಿಂದ ಆಘಾತಗೊಂಡ ಧೀರಜ್ ಮೋಸ ಹೋಗಿರುವುದು ಅರಿತು ಈ ಕೃತ್ಯಕ್ಕೆ ಸಹಕರಿಸಿದ ಸಾಗರ್ ಮತ್ತು ಅಂತೋನಿ ಎಂಬ ವಿರುದ್ಧವೂ ದೂರು ನೀಡಿದ್ದಾರೆ.
ಧೀರಜ್ಗೆ ಮೋಸ ಮಾಡಿದ ರೀತಿಯಲ್ಲೇ ಬಸವೇಶ್ವರನಗರದ ನಿವಾಸಿ ಬಟ್ಟೆ ವ್ಯಾಪಾರಿ ಸೂರಜ್ಗೂ ಆರೋಪಿ 94 ಲಕ್ಷ ರೂ. ಬೆಲೆ ಚಿನ್ನದ ತಾಳಿ ಹಾಗೂ ಬಿಸ್ಕತ್ಗಳನ್ನು ಪಡೆದು ಮೋಸ ಮಾಡಿದ್ದಾನೆ.
ಸೂರಜ್ ಕೂಡ ಈ ಬಗ್ಗೆ ಬಸವೇಶ್ವರನಗರ ಪೆÇಲೀಸ್ ಠಾಣೆಗೆ ದೂರು ನೀಡಿದ್ದಾರೆ. ಪೆÇಲೀಸರು ಎರಡೂ ದೂರುಗಳನ್ನು ದಾಖಲಿಸಿಕೊಂಡು ಮುಂದಿನ ತನಿಖೆ ಕೈಗೊಂಡಿದ್ದಾರೆ.