ಕರ್ನಾಟಕ ಬಜೆಟ್ 2018 – ಪೂರ್ಣ ಮತ್ತು ಸಮಗ್ರ ವರದಿ

ಕರ್ನಾಟಕ ಬಜೆಟ್ 2018 – ಪೂರ್ಣ ಮತ್ತು ಸಮಗ್ರ ವರದಿ

 

12 ಲಕ್ಷ ಸರ್ಕಾರಿ ನೌಕರರಿಗೆ ಶೇ.30ರಷ್ಟು ವೇತನವನ್ನು ಹೆಚ್ಚಿಸಲು 10508 ಕೋಟಿ ರೂ.ಗಳ ಆರ್ಥಿಕ ಹೊರೆಯಾಗಲಿದೆ

ಆರನೇ ವೇತನ ಆಯೋಗ ನೀಡಿರುವ ಶಿಫಾರಸುಗಳನ್ನು ಸಂಪೂರ್ಣ ಜಾರಿಗೊಳಿಸಲು ಮತ್ತು 12 ಲಕ್ಷ ಸರ್ಕಾರಿ ನೌಕರರಿಗೆ ಶೇ.30ರಷ್ಟು ವೇತನವನ್ನು ಹೆಚ್ಚಿಸಲು 10508 ಕೋಟಿ ರೂ.ಗಳ ಆರ್ಥಿಕ ಹೊರೆಯಾಗಲಿದೆ ಎಂದು ಹೇಳುವ ಮೂಲಕ ಮುಖ್ಯಮಂತ್ರಿ ಸಿದ್ದರಾಮಯ್ಯ ಸರ್ಕಾರಿ ನೌಕರರ ಆಸೆಗೆ ತಣ್ಣಿರು ಎರಚಿದ್ದಾರೆ.

ವೇತನ ಪರಿಷ್ಕರಣೆಯಾಗಲಿದೆ ಎಂದು ಚಾತಕ ಪಕ್ಷಿಗಳಂತೆ ಕಾಯುತ್ತಿದ್ದ  ಸರ್ಕಾರಿ ನೌಕರರಿಗೆ  ಮುಖ್ಯಮಂತ್ರಿ ಸಿದ್ದರಾಮಯ್ಯ ಅಡ್ಡ ಗೋಡೆ ಮೇಲೆ ದೀಪ ಇಟ್ಟಂತೆ ಭರವಸೆಯನ್ನು ನೀಡಿದ್ದಾರೆ. ಸಿದ್ದರಾಮಯ್ಯ ತಮ್ಮ ಬಜೆಟ್ ಭಾಷಣದಲ್ಲಿ ವೇತನ ಹೆಚ್ಚಳವನ್ನು ನೇರ ಹಾಗೂ ಸ್ಪಷ್ಟವಾಗಿ ಘೋಷಿಸದೆ ಪರೋಕ್ಷವಾಗಿ 6ನೇ ವೇತನ ಆಯೋಗದ ಎಲ್ಲಾ ಶಿಫಾರಸುಗಳನ್ನು ಜಾರಿಗೊಳಿಸುವ ಭರವಸೆ ನೀಡಿದ್ದಾರೆ.

ವೇತನ ಪರಿಷ್ಕರಣೆ ಮಾಡುವಂತೆ ಸರ್ಕಾರಿ ನೌಕರರು ಸಲ್ಲಿಸಿದ್ದ ಬೇಡಿಕೆಯನ್ನು ಪರಿಶೀಲಿಸಲು  ಕಳೆದ ಆಯವ್ಯಯದಲ್ಲಿ  6ನೇ ವೇತನ ಆಯೋಗವನ್ನು ಘೋಷಿಸಲಾಗಿತ್ತು. 2017ರ ಜೂನ್‍ನಲ್ಲಿ  ಆಯೋಗವನ್ನು ರಚಿಸಲಾಗಿದೆ. ಆಯೋಗ ತನ್ನ ಮೊದಲ ವರದಿಯನ್ನು ಇತ್ತೀಚೆಗೆ ಸಲ್ಲಿಸಿದ್ದು, ಒಟ್ಟಾರೆ ಶೇ.30ರಷ್ಟು ವೇತನವನ್ನು ಹೆಚ್ಚಿಸಲು ಶಿಫಾರಸು ಮಾಡಿದೆ. ಇದರಿಂದ ರಾಜ್ಯದಲ್ಲಿರುವ 5.93ಲಕ್ಷ ನೌಕರರು ಹಾಗೂ 5.73ಲಕ್ಷ ಪಿಂಚಣಿದಾರರು ಪ್ರಯೋಜನ ಪಡೆಯಲಿದ್ದಾರೆ.

ವೇತನ ಆಯೋಗದ ಅವಧಿಯನ್ನು 2018ರ ಏಪ್ರಿಲ್ 30ರವರೆಗೂ ವಿಸ್ತರಿಸಲಾಗಿದೆ. ನೌಕರರ ಉತ್ಪಾದಕತೆ ಹಾಗೂ ಸರ್ಕಾರದ ವಿವಿಧ ಇಲಾಖೆಗಳ ಕಾರ್ಯದಕ್ಷತೆಯನ್ನು ಹೆಚ್ಚಿಸಲು ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಆಯೋಗ ಮುಂದಿನ ವರದಿಯಲ್ಲಿ ಶಿಫಾರಸು ಮಾಡಲಿದೆ.

ವೇತನ ಹೆಚ್ಚಳ ಹಾಗೂ ಕಾರ್ಯದಕ್ಷತೆ ಮತ್ತು ಶ್ರಮತೆಯನ್ನು ಹೆಚ್ಚಿಸಲು ರಾಜ್ಯ ಸರ್ಕಾರ ಕ್ರಮ ಕೈಗೊಳ್ಳಲಿದೆ. ಈ ಮೂಲಕ ತನ್ನ ಕಲ್ಯಾಣ ಕಾರ್ಯಕ್ರಮಗಳನ್ನು ಇನ್ನಷ್ಟು ಉತ್ತಮವಾಗಿ ಅನುಷ್ಠಾನಗೊಳಿಸಲು ಸಾಧ್ಯವಾಗಲಿದೆ.

ಆಯೋಗದ ಎಲ್ಲಾ ಶಿಫಾರಸುಗಳನ್ನು ಪರಿಣಾಮಕಾರಿಯಾಗಿ ಜಾರಿಗೆ ತರುವುದರಿಂದ 10,508 ಕೋಟಿ ರೂ.ಗಳು ಹೆಚ್ಚುವರಿ ಆರ್ಥಿಕ ಹೊರೆಯಾಗಲಿದೆ ಎಂದು ಹೇಳಿರುವ ಸಿದ್ದರಾಮಯ್ಯ, ಈ ಆರ್ಥಿಕ ಹೊರೆಯನ್ನು ನಿಭಾಯಿಸುವ ಮೂಲಕ ರಾಜ್ಯದ ಅಭಿವೃದ್ಧಿ ಯೋಜನೆಗಳಿಗೆ ಸಂಪನ್ಮೂಲಗಳ ಕೊರತೆಯಾಗದಂತೆ ಆರ್ಥಿಕ ನಿರ್ವಹಣೆ ಮಾಡುವುದಾಗಿ ಭರವಸೆ ನೀಡಿದ್ದಾರೆ.

 

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹಣಕಾಸು ಸಚಿವರಾಗಿ 13ನೇ ಹಾಗೂ ಮುಖ್ಯಮಂತ್ರಿಯಾಗಿ 6ನೇ ಬಜೆಟ್ ಮಂಡಿಸುವ ಮೂಲಕ ಹೊಸ ದಾಖಲೆ ನಿರ್ಮಿಸಿದರು

ವಿಧಾನಸಭೆಯಲ್ಲಿಂದು ಸಭಾಧ್ಯಕ್ಷ ಕೆ.ಬಿ.ಕೋಳಿವಾಡ ಅವರು ಆಯವ್ಯಯ ಮಂಡನೆಗೆ ಆಹ್ವಾನ ನೀಡಿದ ಕೂಡಲೇ ಮುಖ್ಯಮಂತ್ರಿ ಅವರ ದಾಖಲೆ ಬಜೆಟ್ ಮಂಡನೆಯನ್ನು ಆಡಳಿತ ಪಕ್ಷದ ಶಾಸಕರು ಮೇಜು ಕುಟ್ಟಿ ಸ್ವಾಗತಿಸಿದರು.

ಮುಖ್ಯಮಂತ್ರಿ ಅವರು ಆಯವ್ಯಯ 2018-19ನೇ ಸಾಲಿನ ರಾಜ್ಯ ಬಜೆಟ್ ಮಂಡನೆಗೆ ಮುಂದಾಗುತ್ತಿದ್ದಂತೆ ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಯು.ಟಿ ಖಾದರ್, ಅತಿ ಹೆಚ್ಚು ಬಜೆಟ್ ಮಂಡಿಸಿದ ಬಗ್ಗೆ ಮೆಚ್ಚುಗೆ ವ್ಯಕ್ತ ಪಡಿಸಿದರು.

ಬಿಜೆಪಿ ಶಾಸಕ ಸಿ.ಟಿರವಿ, ಬಜೆಟ್ ಮಂಡನೆ ಆಗಲಿ ನಂತರ ಪ್ರತಿಕ್ರಿಯೆ ನೀಡಿ ಎಂದರು.

ಆಯವ್ಯಯ ಮಂಡನೆ ಆರಂಭಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು 14ನೇ ವಿಧಾನಸಭೆಯ ಕೊನೆ ಅಧಿವೇಶನಕ್ಕೆ ನಾವು-ನೀವೆಲ್ಲಾ ಸಾಕ್ಷೀಭೂತರಾಗಿದ್ದೇವೆ. 4 ದಶಕಗಳಲ್ಲಿ 5 ವರ್ಷ ಅವಧಿ ಪೂರ್ಣಗೊಳಿಸುವ ಮೂಲಕ ರಾಜ್ಯದ ಜನತೆಯ ಸುಭದ್ರ ಸರ್ಕಾರದ ಆಶಯವನ್ನು ಸಹಕಾರಗೊಳಿಸಿದ ಹೆಮ್ಮೆ ನಮ್ಮದು ಎಂದು ಹೇಳಿದರು.

ಮುಖ್ಯಮಂತ್ರಿ ಆಗಿ 6ನೇ ಸೇರಿದಮತೆ ಒಟ್ಟು 13 ಆಯವ್ಯಯ ಪತ್ರ ಮಂಡಿಸಿದ ಭಾಗ್ಯ ಒದಗಿ ಬಂದಿರುವುದು ಪ್ರಜಾಪ್ರಭುತ್ವದ ನಿಜವಾದ ಸೌಂದಯ್ಯ. ಸಾಮಾನ್ಯ ರೈತನ ಮಗನಿಗೂ ಇಂಥದೊಂದು ಭಾಗ್ಯ ಒದಗಿದೆ. ಇದಕ್ಕಾಗಿ ದೇಶದ ಸಂವಿಧಾನಕ್ಕೂ ಮತ್ತು ಅದನ್ನು ರೂಪಿಸಿದ ಡಾ.ಬಿ.ಆರ್ ಅಂಬೇಡ್ಕರ್ ಅವರಿಗೂ ತಲೆ ಬಾಗುತ್ತೇನೆ ಎಂದು ಹೇಳಿದರು.

 

ಪ್ರಸಕ್ತ ಸಾಲಿನ ಆಯವ್ಯಯ ಮಂಡನೆಯಲ್ಲಿ 2722 ಕಿಲೋ ಮೀಟರ್ ಉದ್ದದ ರಾಜ್ಯ ಹೆದ್ದಾರಿಗಳನ್ನು 3480 ಕೋಟಿ ರೂ. ವೆಚ್ಚದಲ್ಲಿ ಅಭಿವೃದ್ಧಿಪಡಿಸಲು ಯೋಜನಾ ವರದಿ ಸಿದ್ಧಪಡಿಸಲಾಗಿದೆ

ರಸ್ತೆ ಅಪಘಾತ ತಡೆಗಟ್ಟಲು 150 ಕೋಟಿ ರೂ. ಮೀಸಲು, ವಿಶ್ವಬ್ಯಾಂಕ್ ನೆರವಿನೊಂದಿಗೆ 300 ಕಿಲೋ ಮೀಟರ್ ಉದ್ದದ 500 ರಸ್ತೆಗಳನ್ನು ಪೂರ್ಣಗೊಳಿಸಲಾಗುವುದು.

ಬೆಂಗಳೂರು ಉತ್ತರ ತಾಲೂಕಿನ ಬ್ಯಾತ ಗ್ರಾಮದಿಂದ ಹೆಸರಘಟ್ಟ ಫಾರಂ ಮೂಲಕ ರಾಜಾನುಕುಂಟೆ-ಮಧುರೈ ಸೇರುವ ರಸ್ತೆಗೆ ಪರ್ಯಾಯವಾಗಿ ಬಸವಣ್ಣ ದೇವಸ್ಥಾನದ ಕುಕ್ಕರಹಳ್ಳಿ ಮಾರ್ಗವಾಗಿ ಹಾಗೂ ಮತ್ಕೂರು ಮಾರ್ಗವಾಗಿ ರಾಜಾನುಕುಂಟೆ-ಮಧುರೈ ಸೇರುವ ರಸ್ತೆ ಅಭಿವೃದ್ಧಿಗೆ 12 ಕೋಟಿ ರೂ. ನಿಗದಿಪಡಿಸಲಾಗಿದೆ.

ಬಿಡದಿ-ಹಾರೋಹಳ್ಳಿ ರಸ್ತೆ ಸರಪಳಿಯನ್ನು 4 ಪಥದ ರಸ್ತೆಯನ್ನಾಗಿ ಅಗಲೀಕರಣ ಮಾಡಲು 32 ಕೋಟಿ ರೂ. ಮೀಸಲಿರಿಸಲಾಗಿದೆ.  ನವದೆಹಲಿಯಲ್ಲಿರುವ ಕರ್ನಾಟಕ ಭವನವನ್ನು ಕೆಡವಿ ಎರಡು ವರ್ಷಗಳಲ್ಲಿ 30 ಕೋಟಿ ರೂ. ವೆಚ್ಚದಲ್ಲಿ ಹೊಸ ಭವನ ನಿರ್ಮಿಸಲು ತೀರ್ಮಾನಿಸಲಾಗಿದೆ.

ಬೆಂಗಳೂರಿನ ಎಂಎಸ್ ಬಿಲ್ಡಿಂಗ್ ಹತ್ತಿರ 20 ಕೋಟಿ ರೂ. ವೆಚ್ಚದಲ್ಲಿ ಮಲ್ಟಿ ಲೆವೆಲ್ ಕಾರ್ ಪಾರ್ಕಿಂಗ್ ನಿರ್ವಹಣೆ ಕೈಗೆತ್ತಿಕೊಳ್ಳಲಾಗುವುದು.

 

ರಾಜ್ಯದಲ್ಲಿ ತಲೆದೋರಿರುವ ವಿದ್ಯುತ್ ಅಭಾವ ತಪ್ಪಿಸಲು ವಿವಿಧ ಪ್ರದೇಶಗಳಲ್ಲಿ 35 ವಿದ್ಯುತ್ ಉಪಕೇಂದ್ರಗಳನ್ನು ಸ್ಥಾಪಿಸಲು ತೀರ್ಮಾನಿಸಿರುವ ಸರ್ಕಾರ ಪ್ರಸಕ್ತ ಸಾಲಿನ ಬಜೆಟ್‍ನಲ್ಲಿ ಇಂಧನ ಇಲಾಖೆಗೆ 14,136 ಕೋಟಿ ರೂ.ಗಳನ್ನು ಮೀಸಲಿರಿಸಿದೆ.

ಕರ್ನಾಟಕ ವಿದ್ಯುತ್ ಪ್ರಸರಣ ನಿಗಮದ ಮೂಲಕ ರಾಮಸಮುದ್ರ, ಯಾಪಲದಿನ್ನಿ, ಗಂಗಾವತಿ, ಗರಗ, ಮುಲ್ಕಿ, ಚನ್ನಗಿರಿ, ಬಂಗಾರಪೇಟೆ, ಟಿ.ಗೊಲ್ಲಹಳ್ಳಿ, ಆನೇಕಲ್, ಬೆಂಗಳೂರಿನ ಕೋರಮಂಗಲ, ದೂರವಾಣಿ ನಗರ, ಹೊಸಕೋಟೆಯ ಮಂಡೂರು, ಚನ್ನಪಟ್ಟಣದ ಬಿವಿ ಹಳ್ಳಿ, ರುದ್ರಾಪಟ್ಟಣ, ಚಾಮರಾಜನಗರದ ಬಡನಕುಪ್ಪೆ ಸೇರಿದಂತೆ 35 ವಿದ್ಯುತ್ ಉಪಕೇಂದ್ರಗಳನ್ನು ಸ್ಥಾಪಿಸಲು ಬಜೆಟ್‍ನಲ್ಲಿ ಪ್ರಸ್ತಾಪಿಸಲಾಗಿದೆ.

2013ರ ವರೆಗೂ 5361 ಮೆಗಾವ್ಯಾಟ್ ವಿದ್ಯುತ್ ಉತ್ಪಾದನಾ  ಸಾಮಥ್ರ್ಯವನ್ನು ನಮ್ಮ ಸರ್ಕಾರದ ಅವಧಿಯಲ್ಲಿ 9349 ಮೆಗಾವ್ಯಾಟ್‍ಗೆ ಹೆಚ್ಚಿಸಲಾಗಿದೆ.

ಇದರಲ್ಲಿ ನವೀಕರಿಸಬಹುದಾದ ಇಂಧನ ಮೂಲಗಳಿಂದಲೇ 5092 ಮೆಗಾವ್ಯಾಟ್ ವಿದ್ಯುತ್ ಉತ್ಪಾದಿಸಲಾಗುತ್ತಿದೆ. ಅಡಚಣೆ ರಹಿತ ವಿದ್ಯುತ್ ಸರಬರಾಜಿಗಾಗಿ 184 ಟ್ರಾನ್ಸ್‍ಫಾರ್ಮರ್ಸ್ ಬ್ಯಾಂಕ್, 143 ಟ್ರಾನ್ಸ್‍ಫಾರ್ಮರ್ ದುರಸ್ತಿ ಕೇಂದ್ರಗಳನ್ನು ಸ್ಥಾಪಿಸಲಾಗಿದೆ.

ಗ್ರಾಹಕರ ಕುಂದು-ಕೊರತೆ ನಿವಾರಣೆಗಾಗಿ 168 ಸಲಹಾ ಸಮಿತಿಗಳನ್ನು ರಚಿಸಲಾಗಿದೆ. ನಿರಂತರ ಜ್ಯೋತಿ ಯೋಜನೆಯಡಿ 2131 ವಿದ್ಯುತ್ ಮಾರ್ಗಗಳನ್ನು ಬೇರ್ಪಡಿಸುವ ಕಾಮಗಾರಿ ಪೂರ್ಣಗೊಳಿಸಲಾಗಿದೆ.

ಸೌರಶಕ್ತಿ ನೀತಿಯಡಿ 2304 ಮೆಗಾವ್ಯಾಟ್ ಸೌರ ವಿದ್ಯುತ್ ಉತ್ಪಾದನಾ ಸಾಮಥ್ರ್ಯಕ್ಕೆ ಒತ್ತು ನೀಡಲಾಗಿದೆ.

 

ಕೃಷಿ, ಶಿಕ್ಷಣ, ಆರೋಗ್ಯ, ನೀರಾವರಿಗೆ ಒತ್ತು ನೀಡುವ, ಸರ್ವರನ್ನೂ ಸಮಾಧಾನ ಪಡಿಸುವ ಜನಪ್ರಿಯವಾದ 2018-19ನೇ ಸಾಲಿನ ಆಯವ್ಯಯವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ವಿಧಾನಸಭೆಯಲ್ಲಿಂದು ಮಂಡಿಸಿದರು

ಮುಂದಿನ ವಿಧಾನಸಭಾ ಚುನಾವಣೆಯನ್ನು ದೃಷ್ಟಿಯಲ್ಲಿಟ್ಟುಕೊಂಡು ಸಮಾಜದ ಎಲ್ಲ ವರ್ಗದವರನ್ನು ಸಮಾಧಾನ ಪಡಿಸುವ ಕಸರತ್ತನ್ನು ನಡೆಸಿದ್ದು, ಹಲವು ಹೊಸ ಯೋಜನೆಗಳನ್ನು ಘೋಷಿಸಿದ್ದಾರೆ.

ಕಳೆದ 5 ವರ್ಷಗಳ ಸರ್ಕಾರದ ಸಾಧನೆಗಳನ್ನು ಬಣ್ಣಿಸಿದ ಸಿದ್ದರಾಮಯ್ಯನವರು ಸಿಎಂ ಆಗಿ 6ನೇ ಮತ್ತು ಹಣಕಾಸು ಸಚಿವರಾಗಿ 13ನೇ ಮುಂಗಡಪತ್ರ ಮಂಡಿಸುತ್ತಿರುವುದಾಗಿ ಘೋಷಿಸಿದರು.

2018-19ನೇ ಸಾಲಿನಲ್ಲಿ 2,90,181 ಕೋಟಿ ರೂ. ಅಂದಾಜು ವೆಚ್ಚ ಆಯವ್ಯಯ ಮಂಡಿಸಿದ ಮುಖ್ಯಮಂತ್ರಿ, ಕರ್ನಾಟಕ ವಿತ್ತೀಯ ಹೊಣೆಗಾರಿಕೆ ಅಧಿನಿಯಮದಡಿ ಮುಂದಿನ ಆರ್ಥಿಕ ಸಾಲಿಗೆ ನಿಗದಿಪಡಿಸಿರುವ ಶೇ.25ರ ಮಿತಿಯೊಳಗಿರುತ್ತದೆ ಎಂದು ಹೇಳಿದರು.

ರಾಜಸ್ವ ಹೆಚ್ಚುವರಿಯನ್ನು 127ಕೋಟಿ ರೂ.ನಿಂದ ಅಂದಾಜು ಮಾಡಲಾಗಿದ್ದು, ವಿತ್ತೀಯ ಕೊರತೆಯನ್ನು 35,127 ಕೋಟಿ ರೂ.ಗಳೆಂದು ನಿರೀಕ್ಷಿಸಲಾಗಿದೆ. ಇದು ರಾಜ್ಯದ ಆಂತರಿಕ ಉತ್ಪನ್ನದ ಶೇ.2.49ರಷ್ಟಾಗಿರುತ್ತದೆ. ಮುಂದಿನ ಆರ್ಥಿಕ ಸಾಲಿನ ಅಂತ್ಯದಲ್ಲಿ 2,86,790 ಕೋಟಿ ರೂ.ಗಳ ಒಟ್ಟು ಹೊಣೆಗಾರಿಕೆಯು ರಾಜ್ಯದ ಆಂತರಿಕ ಉತ್ಪನ್ನದ ಶೇ.20.36ರಷ್ಟಾಗಿರುತ್ತದೆ ಎಂದು ಎಂದಾಜು ಮಾಡಲಾಗಿರುತ್ತದೆ ಎಂದರು.

ರಾಜ್ಯದ ಒಟ್ಟು  ಸ್ವಂತ ತೆರಿಗೆ ರಾಜಸ್ವವನ್ನು 1,03,444 ಕೊಟಿ ರೂ.ಗಳಾಗಿರುತ್ತದೆ ಎಂದು ಅಂದಾಜು ಮಾಡಲಾಗಿದೆ. ತೆರಿಗೆಯೇತರ ರಾಜಸ್ವಗಳಿಂದ 8,163 ಕೋಟಿ ರೂ.ಗಳನ್ನು ಸಂಗ್ರಹಿಸಬಹುದೆಂದು ನಿರೀಕ್ಷಿಸಲಾಗಿದೆ.

 

ನವೋದ್ಯಮಗಳಿಗೆ ಉತ್ತೇಜನ ನೀಡಲು ಕಲಬುರಗಿಯ ದೇಶಪಾಂಡೆ ಫೌಂಡೇಶನ್ ಸಹಯೋಗದಲ್ಲಿ 5 ಕೋಟಿ ರೂ. ವೆಚ್ಚ ಮಾಡಿ ಇನ್‍ಕ್ಯೂಬಿಷನ್ ಸೆಂಟರ್ ಸ್ಥಾಪಿಸಲಾಗುತ್ತಿದೆ

ಹಾರ್ಡ್‍ವೇರ್ ಉಪಕರಣಗಳು, ಸೆಮಿ ಕಂಡಕ್ಟರ್ ಚಿಪ್‍ಗಳ ವಿನ್ಯಾಸ ಮತ್ತು ಅಭಿವೃದ್ಧಿಗೆ ಉತ್ತೇಜನ ನೀಡಲು ಸೆಮಿ ಕಂಡಕ್ಟರ್ ಫ್ಯಾಬಲಸ್ ಅಸ್ಕಲೇಟರ್ ಲ್ಯಾಬ್ ಸ್ಥಾಪಿಸಲಾಗುತ್ತಿದೆ.

ಕೃಷಿ ವಲಯದ ನವೀನ ಆವಿಷ್ಕಾರಕ್ಕಾಗಿ ಅಗ್ರಿ ಇನ್ನೋವೇಷನ್ ಸೆಂಟರ್‍ಗಳನ್ನು ಸ್ಥಾಪಿಸಲಾಗುವುದು. ಮುಖ್ಯಮಂತ್ರಿಗಳ ಅಧ್ಯಕ್ಷತೆಯಲ್ಲಿ ಕರ್ನಾಟಕ ನಾವೀನ್ಯ ಪ್ರಾಧಿಕಾರ ಸ್ಥಾಪಿಸಿ ವಿವಿಧ ವಲಯಗಳಲ್ಲಿನ ನಾವೀನ್ಯತೆಯನ್ನು ಪೊೀತ್ಸಾಹಿಸಲು ಉದ್ಯಮಗಳ ಹಾಗೂ  ಉತ್ಪನ್ನಗಳ ವಿನ್ಯಾಸವನ್ನು ಉತ್ತೇಜಿಸಲು ಸೆಂಟರ್ ಫಾರ್ ಎಕ್ಸಲೆನ್ಸಿ ಇನ್ ಡಿಸೈನ್ ಸಂಸ್ಥೆಯನ್ನು ಸ್ಥಾಪಿಸಲಾಗುವುದು.

ಪೇಟೆಂಟ್‍ಗಳ  ತಾಳೆ ನೋಡಲು ಮತ್ತು ಪೇಟೆಂಟ್ ವಿನಿಮಯಕ್ಕೆ ಅನುಕೂಲವಾಗುವಂತೆ ರಾಜ್ಯದಲ್ಲಿ ಪೇಟೆಂಟ್ ಭಂಡಾರ ಸ್ಥಾಪಿಸಲಾಗುತ್ತದೆ.

ಹೆರಿಗೆ ರಜೆ ಸೇರಿದಂತೆ ಸುದೀರ್ಘ ವ್ಯಾಸಂಗಕ್ಕೆ ತೆರಳುವ ಮಾಹಿತಿ ತಂತ್ರಜ್ಞಾನದ ಮಹಿಳೆಯರು ಮತ್ತೆ ಕೆಲಸಕ್ಕೆ ಹಾಜರಾದಾಗ ಕೌಶಲ್ಯದ ಕೊರತೆ ಕಂಡು ಬಂದಿದೆ. ಇದನ್ನು ಸರಿಪಡಿಸಲು ನಿರ್ದಿಷ್ಟ ಕಾರ್ಯಕ್ರಮಗಳನ್ನು ರೂಪಿಸಲಾಗುವುದು.

ಇಂಜಿನಿಯರಿಂಗ್, ವಿಜ್ಞಾನ, ಪಿಎಚ್‍ಡಿ ಸಂಶೋಧನೆಗಳಲ್ಲಿ ಡಿಎಸ್‍ಟಿ  ಶಿಷ್ಯ ವೇತನ ಪ್ರಾರಂಭಿಸಲು ಒಂದು ಕೋಟಿ ರೂ. ಅನುದಾನ ನೀಡಲಾಗಿದೆ.

ಬೆಳಗಾವಿಯಲ್ಲಿ ಮೂರು ಕೋಟಿ ವೆಚ್ಚದಲ್ಲಿ ಸಣ್ಣ ತಾರಾಲಯವನ್ನು ಸ್ಥಾಪಿಸಲಾಗುವುದು ಎಂದುಹೇಳಿರುವ ಅವರು, ಮಾಹಿತಿ ತಂತ್ರಜ್ಞಾನ ಇಲಾಖೆಗೆ 274 ಕೋಟಿ ರೂ. ಒದಗಿಸಿದ್ದಾರೆ.

 

ಪ್ರಸಕ್ತ ಸಾಲಿನಲ್ಲಿ ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ, ಮತ್ತು ಜೀವನೋಪಾಯ ಇಲಾಖೆ ವತಿಯಿಂದ 2.5 ಲಕ್ಷ ಜನರಿಗೆ ವೃತ್ತಿ ತರಬೇತಿ ಸಂಸ್ಥೆಗಳ ಮೂಲಕ ತರಬೇತಿ ನೀಡಲಾಗುವುದು ಎಂದು ಸರ್ಕಾರ ಪ್ರಕಟಿಸಿದೆ.

ಕಳೆದ ಐದು ವರ್ಷಗಳಲ್ಲಿ  ಬೃಹತ್ ಉದ್ಯೋಗ ಮೇಳಗಳನ್ನು ಆಯೋಜಿಸಿ 52,673 ಅಭ್ಯರ್ಥಿಗಳು ಉದ್ಯೋಗ ಪಡೆದುಕೊಳ್ಳಲು ನೆರವು ನೀಡಲಾಗಿದೆ. ಕರ್ನಾಟಕ ಉದ್ಯಮಶೀಲತಾ ಅಭಿವೃದ್ಧಿ ಕೇಂದ್ರ (ಸಿಡಾಕ್) ಪ್ರಸಕ್ತ ಸಾಲಿನಲ್ಲಿ ರಾಜ್ಯದ ಎಲ್ಲಾ ಜಿಲ್ಲೆಗಳಲ್ಲೂ 2 ಕೋಟಿ ರೂ. ಅನುದಾನದಲ್ಲಿ  1 ಲಕ್ಷ ಮಂದಿಗೆ ಈ ಯೋಜನೆಯ ಪ್ರಯೋಜನ ದೊರೆಯಲಿದೆ.

ಕೌಶಲ್ಯಾಭಿವೃದ್ಧಿ ಇಲಾಖೆಗೆ  2018-19ನೇ ಸಾಲಿನಲ್ಲಿ  794 ಕೋಟಿ ರೂ. ಗಳನ್ನು ಒದಗಿಸಲಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಬಜೆಟ್ ಭಾಷಣದಲ್ಲಿ ತಿಳಿಸಿದ್ದಾರೆ.

ಯುವ ಸಬಲೀಕರಣ ಮತ್ತು ಕ್ರೀಡೆ:

ಈ ಇಲಾಖೆಗೆ ಪ್ರಸಕ್ತ ಸಾಲಿನಲ್ಲಿ 237 ಕೋಟಿ ರೂ.ಗಳನ್ನು ಮೀಸಲಿಟ್ಟಿದೆ.  ಎಲ್ಲಾ ಜಿಲ್ಲಾ ಕೇಂದ್ರಗಳಲ್ಲಿ ಹೊರಾಂಗಣ ಜಿಮ್ ಸೌಕರ್ಯ, ಗ್ರಾಮೀಣ ಮಣ್ಣಿನ ಕುಸ್ತಿಗೆ ಉತ್ತೇಜನ ನೀಡಲು ಜಾಗತಿಕ ಮಟ್ಟದ ಕರ್ನಾಟಕ ಕುಸ್ತಿ ಹಬ್ಬ ಆಯೋಜನೆ, ನಾಡಹಬ್ಬ ದಸರಾ ಅಂಗವಾಗಿ ವಿವಿಧ ಹಂತಗಳಲ್ಲಿ ರಾಷ್ಟ್ರೀಯ ಕ್ರೀಡಾಕೂಟ ವ್ಯವಸ್ಥೆ ಮೊದಲಾದ ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸಲು ನಿರ್ಧರಿಸಲಾಗಿದೆ.

ಯುವಜನ ಸಂಘಗಳ ಬಲವರ್ಧನೆಗೆ ಯುವ ಚೈತನ್ಯ ಕಾರ್ಯಕ್ರಮದಡಿ 20 ಕೋಟಿ ರೂ. ವೆಚ್ಚದಲ್ಲಿ 5 ಸಾವಿರ ಯುವ ಸಂಘಗಳಿಗೆ   ಕ್ರೀಡಾಕಿಟ್‍ಗಳನ್ನು ವಿತರಿಸಲಾಗಿದೆ ಎಂದು ಅವರು ತಿಳಿಸಿದರು.

 

2018-19ನೇ ಸಾಲಿನಲ್ಲಿ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಗೆ ಒಟ್ಟಾರೆಯಾಗಿ 3,882 ಕೋಟಿ ರೂ.ಗಳನ್ನು ರಾಜ್ಯ ಸರ್ಕಾರ ಮೀಸಲಿಟ್ಟಿದೆ.

ವಿಧಾನಸಭೆಯಲ್ಲಿಂದು ಪ್ರಸಕ್ತ ಸಾಲಿನ ಬಜೆಟ್ ಮಂಡಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯನವರು, ಈ ಇಲಾಖೆಯ  ಹೊಸ ಯೋಜನೆಗಳನ್ನು ವಿವರಿಸಿದ್ದಾರೆ.

ಮುಖ್ಯಮಂತ್ರಿ ಅನಿಲ ಭಾಗ್ಯ ಯೋಜನೆಯಡಿ ಸರ್ಕಾರದಿಂದ 30 ಲಕ್ಷ ಫಲಾನುಭವಿಗಳಿಗೆ 1,350 ಕೋಟಿ ರೂ. ವೆಚ್ಚದಲ್ಲಿ ಉಚಿತ ಅನಿಲ ಸಂಪರ್ಕ, ಎರಡು ಬರ್ನಲ್ ಗ್ಯಾಸ್‍ಸ್ಟೌವ್ ಮತ್ತು ಎರಡು ರೀಫಿಲ್‍ಗಳನ್ನು ನೀಡಲಾಗುವುದು ಎಂದು ತಿಳಿಸಿದರು.

ಬಡತನ ರೇಖೆಗಿಂತ ಕೆಳಗಿರುವ ಕುಟುಂಬದ ಪ್ರತಿಯೊಂದು ಸದಸ್ಯರಿಗೂ  7 ಕೆಜಿ ಆಹಾರ ಧಾನ್ಯವನ್ನು ಉಚಿತವಾಗಿ ನೀಡುತ್ತಿರುವ ದೇಶದ ಏಕೈಕ ರಾಜ್ಯ ಕರ್ನಾಟಕ ಎಂದು ಹೆಮ್ಮೆಯಿಂದ ಹೇಳಿಕೊಂಡ ಮುಖ್ಯಮಂತ್ರಿ, ಇದಕ್ಕಾಗಿ ಸರ್ಕಾರ 2,450 ಕೋಟಿ ರೂ. ಸಹಾಯ ಧನ ನೀಡುತ್ತಿದೆ ಎಂದರು.

ಕಳೆದ ಐದು ವರ್ಷಗಳಲ್ಲಿ ರಾಜ್ಯವನ್ನು ಹಸಿವು ಮುಕ್ತ ಕರ್ನಾಟಕವನ್ನು ಮಾಡಲು ಅನ್ನಭಾಗ್ಯ ಯೋಜನೆಯಡಿ 11,564 ಕೋಟಿ ರೂ. ವೆಚ್ಚದಲ್ಲಿ ಪ್ರತಿವರ್ಷ 3.85 ಕೋಟಿ ಫಲಾನುಭವಿಗಳಿಗೆ ಆಹಾರ ಭದ್ರತೆ ಒದಗಿಸಲಾಗಿದೆ ಎಂದು ಅವರು ತಿಳಿಸಿದರು.

ಕಳೆದ ಐದು ವರ್ಷಗಳಲ್ಲಿ ಸರ್ಕಾರವು 35.3 ಲಕ್ಷ ಹೊಸ ಆದ್ಯತಾ ಮತ್ತು ಅಂತ್ಯೋದಯ ಪಡಿತರ ಚೀಟಿಗಳನ್ನು ವಿತರಿಸಿದೆ ಎಂದು ಸಿದ್ದರಾಮಯ್ಯ ತಿಳಿಸಿದರು.

 

ವನ್ಯಪ್ರಾಣಿಗಳ ದಾಳಿಯಿಂದ ಮೃತಪಟ್ಟವರ ಕುಟುಂಬಕ್ಕೆ ನೀಡುತ್ತಿರುವ 5 ಲಕ್ಷ ರೂ. ಪರಿಹಾರ ಜೊತೆಗೆ ಮೃತರ ಕುಟುಂಬಕ್ಕೆ 5 ವರ್ಷಗಳವರೆಗೆ 2 ಸಾವಿರ ರೂ.ಗಳ ಮಾಸಾಶನ ನೀಡಲಾಗುವುದು ಎಂದು  ಮುಖ್ಯಮಂತ್ರಿ ಸಿದ್ದರಾಮಯ್ಯ ಬಜೆಟ್‍ನಲ್ಲಿ ಪ್ರಕಟಿಸಿದರು.

ಇಂದು ತಾವು ಮಂಡಿಸಿದ ಬಜೆಟ್‍ನಲ್ಲಿ ಈ ನಿರ್ಧಾರ ಪ್ರಕಟಿಸಿದ ಅವರು, ವನ್ಯಪ್ರಾಣಿಗಳ ದಾಳಿ ವೇಳೆ ಮೃತಪಟ್ಟವರಿಗೆ ಸರ್ಕಾರ 5 ಲಕ್ಷ ರೂ.ಗಳ ಎಕ್ಸ್‍ಗ್ರೇಷಿಯಾ ಜೊತೆಗೆ ಮೃತರ ಕುಟುಂಬಕ್ಕೆ 5 ವರ್ಷಗಳವರೆಗೆ 2ಸಾವಿರ ರೂ.ಗಳ ಮಾಸಾಶನ ನೀಡಲಾಗುವುದು ಎಂದು ಹೇಳಿದರು.

ರಾಜ್ಯದಲ್ಲಿ ದಿನೇ ದಿನೇ ಹೆಚ್ಚುತ್ತಿರುವ ವಾಯುಮಾಲಿನ್ಯ ನಿಯಂತ್ರಿಸುವ ನಿಟ್ಟಿನಲ್ಲಿ  96 ಕೋಟಿ ರೂ. ವೆಚ್ಚದಲ್ಲಿ  42 ನಿರಂತರ ವಾಯು ಗುಣಮಟ್ಟ ಮಾಪನ ಕೇಂದ್ರಗಳನ್ನು ಸ್ಥಾಪಿಸಲು ಉದ್ದೇಶಿಸಲಾಗಿದೆ.

ರೈತರು ಬೆಳೆದ ಮರಗಳ ಮಾರಾಟದಲ್ಲಿನ ಅಡಚಣೆಗಳನ್ನು ನಿವಾರಿಸಿ ವ್ಯವಸ್ಥಿತ ಮಾರುಕಟ್ಟೆ ಕಲ್ಪಿಸಲು ಸಣ್ಣ ಮರ ಸಂಗ್ರಹಾಲಯಗಳನ್ನು ಸ್ಥಾಪಿಸಲಾಗುವುದು. ಎಪಿಎಂಸಿ ಸಮನ್ವಯದೊಂದಿಗೆ ಬಹಿರಂಗ ಹರಾಜು ಮಾರಾಟ ಮಾಡುವ ಉದ್ದೇಶಕ್ಕಾಗಿ 5 ಕೋಟಿ ರೂ. ಅನುದಾನ ಒದಗಿಸಲಾಗುವುದು ಎಂದು ಹೇಳಿದರು.

ನದಿಗಳ ಇಕ್ಕೆಲಗಳಲ್ಲಿ ಒಂದು ಕಿಲೋ ಮೀಟರ್ ವ್ಯಾಪ್ತಿಯಲ್ಲಿ  ಬೃಹತ್ ಪ್ರಮಾಣದ ಗಿಡ ನೆಡುವ ಕಾರ್ಯಕ್ರಮವನ್ನು ಎನ್‍ಜಿಒಗಳು, ಸಾರ್ವಜನಿಕರ ಸಹಯೋಗದಲ್ಲಿ ಹಮ್ಮಿಕೊಳ್ಳಲಾಗುವುದು. ಇದಕ್ಕಾಗಿ 10 ಕೋಟಿ ರೂ.ಗಳ ಅನುದಾನ ಒದಗಿಸಲಾಗುವುದು. ಒಟ್ಟಾರೆ ಅರಣ್ಯ ಇಲಾಖೆಗೆ 1,941 ಕೋಟಿ ರೂ. ಗಳ ಅನುದಾನವನ್ನು ಮೀಸಲಿರಿಸಲಾಗಿದೆ ಎಂದು ಹೇಳಿದರು.

 

ಬೃಹತ್ ಹಾಗೂ ಮಧ್ಯಮ ನೀರಾವರಿ ಕಾಮಗಾರಿಗಳಿಗೆ 2018-19ನೇ ಸಾಲಿಗೆ 15,998 ಕೋಟಿ ರೂ.ಗಳ ಅನುದಾನ ಒದಗಿಸಲಾಗಿದೆ

ಕೃಷ್ಣಾ ಮೇಲ್ದಂಡೆ ಯೋಜನೆ 2ನೆ ಹಂತ, ಅರಕಲಗೂಡು, ಹಾಸನ, ಚಿತ್ರದುರ್ಗ,  ದಾವಣಗೆರೆ ಜಿಲ್ಲೆಗಳ ಕೆರೆಗಳಿಗೆ ನೀರು ತುಂಬುವಿಕೆ, ಬೃಹತ್ ಹಾಗೂ ಮಧ್ಯಮ ನೀರಾವರಿ ಕಾಮಗಾರಿಗಳಿಗೆ 2018-19ನೇ ಸಾಲಿಗೆ 15,998 ಕೋಟಿ ರೂ.ಗಳ ಅನುದಾನ ಒದಗಿಸಲಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು

ಬಜೆಟ್‍ನಲ್ಲಿ ನೀರಾವರಿ ಇಲಾಖೆ ಕಾಮಗಾರಿಗಳ ಯೋಜನೆಗಳನ್ನು ಪ್ರಸ್ತಾಪಿಸಿದ ಅವರು, ನಂದವಾಡಗಿ ಏತನೀರಾವರಿ ಯೋಜನೆ, ಬೆಳಗಾವಿ ಜಿಲ್ಲೆ ರಾಮದುರ್ಗ ತಾಲೂಕಿನ 46 ಕೆರೆಗಳಿಗೆ 540 ಕೋಟಿ ರೂ. ವೆಚ್ಚದಲ್ಲಿ ಘಟಪ್ರಭಾ ನದಿಯಿಂದ ನೀರು ಹರಿಸುವ ಸಾಲಾಪುರ ಏತ ನೀರಾವರಿ ಯೋಜನೆ, 140 ಕೋಟಿ ರೂ. ವೆಚ್ಚದಲ್ಲಿ   ಬಾಗಲಕೋಟೆ ಜಿಲ್ಲೆ ಸಾಸಲಹಟ್ಟಿ ಏತನೀರಾವರಿ ಯೋಜನೆ, 210 ಕೋಟಿ ರೂ. ವೆಚ್ಚದಲ್ಲಿ ಸತ್ತಿಗೆರೆ ಏತನೀರಾವರಿ ಯೋಜನೆ, 137 ಕೋಟಿ ರೂ. ವೆಚ್ಚದಲ್ಲಿ ಬೆಳಗಾವಿ ಜಿಲ್ಲೆಯ ವಿವಿಧ ಯೋಜನೆಗಳು, ಕೃಷ್ಣಾ ನದಿಯಿಂದ ನೀರನ್ನು ಎತ್ತಿ ತುಂಬಿಸುವ ಯೋಜನೆ ಸೇರಿದಂತೆ ನೀರಾವರಿಯ ಹತ್ತು ಹಲವು ಯೋಜನೆಗಳಿಗೆ 15,999 ಕೋಟಿ ರೂ. ಅನುದಾನ ನೀಡಲಾಗಿದೆ.

ಸಣ್ಣ ನೀರಾವರಿ ಇಲಾಖೆಗೆ 2,114 ಕೋಟಿ ರೂ. ಅನುದಾನ ಒದಗಿಸಲಾಗಿದೆ. ಕೆ.ಆರ್.ಪುರಂ ಸಂಸ್ಕರಣಾ ಘಟಕದಿಂದ ಹೊಸಕೋಟೆ ತಾಲೂಕಿನ 30 ಕೆರೆಗಳಿಗೆ ನೀರು ತುಂಬಿಸುವ ಯೋಜನೆಯನ್ನು 100 ಕೋಟಿ ರೂ. ವೆಚ್ಚದಲ್ಲಿ ಕೈಗೆತ್ತಿಕೊಳ್ಳಲಾಗುವುದು ಎಂದು ಹೇಳಿದ್ದಾರೆ.

ಸಣ್ಣ ನೀರಾವರಿ ಇಲಾಖೆ ವ್ಯಾಪ್ತಿಯಲ್ಲಿ 403 ಏತನೀರಾವರಿ ಯೋಜನೆಗಳು ಹಲವಾರು ವರ್ಷಗಳಿಂದ ಕಾರ್ಯನಿರ್ವಹಿಸುತ್ತಿದ್ದು, ಇವುಗಳಲ್ಲಿ 183 ಯೋಜನೆಗಳು ತಾತ್ಕಾಲಿಕವಾಗಿ ಸ್ಥಗಿತಗೊಂಡಿವೆ. ಇವುಗಳನ್ನು 100 ಕೋಟಿ ರೂ. ವೆಚ್ಚದಲ್ಲಿ ಪುನಶ್ಚೇತನಗೊಳಿಸಲಾಗುವುದು ಎಂದು ಹೇಳಿದರು.

 

ರೈತರ ಮರಣದ ನಂತರ ಸಹಕಾರ ಬ್ಯಾಂಕುಗಳಿಂದ 1 ಲಕ್ಷ ರೂ. ಸಾಲದ ಮನ್ನಾ

ಪ್ರಾಥಮಿಕ ಮತ್ತು ಕೃಷಿ ಪತ್ತಿನ ಸಹಕಾರ ಸಂಘಗಳಲ್ಲಿ ಬೆಳೆ  ಸಾಲ ಪಡೆದ ರೈತ ಸದಸ್ಯರು ನಿಧನ ಹೊಂದಿದಲ್ಲಿ ಅವರ ಒಂದು ಲಕ್ಷ ರೂ.ವರೆಗಿನ ಮನ್ನಾ ಮಾಡುವ ಯೋಜನೆಯನ್ನು ಜಾರಿ ಮಾಡಲು ತೀರ್ಮಾನಿಸಲಾಗಿದೆ. ಅಪೆಕ್ಸ್ ಮತ್ತು ಡಿಸಿಸಿ ಬ್ಯಾಂಕ್‍ಗಳ ಸಹಭಾಗಿತ್ವದಲ್ಲಿ ಈ ವೆಚ್ಚವನ್ನು ಭರಿಸಲಾಗುವುದು ಎಂದು ಹಣಕಾಸು ಖಾತೆ ಹೊಂದಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಘೋಷಿಸಿದರು.

ಇಂದು ತಾವು ಮಂಡಿಸಿದ ಬಜೆಟ್‍ನಲ್ಲಿ ಈ ನಿರ್ಧಾರ ಪ್ರಕಟಿಸಿದ ಸಿದ್ದರಾಮಯ್ಯನವರು ಕರ್ನಾಟಕ ಸೆಂಟ್ರಲ್ ಕೋ-ಆಪರೇಟಿವ್ ಬ್ಯಾಂಕ್ ಧಾರವಾಡ ಹಾಗೂ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ ವಿಜಯಪುರದ ಶತಮಾನೋತ್ಸವದ ಅಂಗವಾಗಿ ನಿರ್ಮಾಣವಾಗುವ ಕಟ್ಟಡಕ್ಕೆ ತಲಾ 5 ಕೋಟಿ ರೂ.ಗಳಂತೆ ಸರ್ಕಾರ ಮತ್ತು ಅಪೆಕ್ಸ್ ಬ್ಯಾಂಕ್ ವತಿಯಿಂದ ಸಹಾಯಧನವನ್ನು   ನೀಡಲಾಗುವುದು. ರಾಜ್ಯದ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯಲ್ಲಿ ಸುಮಾರು 25 ಸಾವಿರಕ್ಕೂ ಹೆಚ್ಚು ಹಮಾಲಿಗಳು ಕಾರ್ಯನಿರ್ವಹಿಸುತ್ತಿದ್ದು, ಪ್ರಸಕ್ತ ಸಾಲಿನಲ್ಲಿ ವಸತಿ ರಹಿತ ಒಂದು ಸಾವಿರ ಹಮಾಲಿಗಳನ್ನು ಗುರುತಿಸಿ ಸರ್ಕಾರದ ವಿವಿಧ ವಸತಿ ಯೋಜನೆಗಳಡಿ ಆದ್ಯತೆ ಮೇಲೆ ವಸತಿ ಸೌಲಭ್ಯ ಕಲ್ಪಿಸಲಾಗುವುದು ಎಂದು ಹೇಳಿದರು.

ರೈತರ ಉತ್ಪನ್ನಗಳಿಗೆ ಹೆಚ್ಚಿನ ಧಾರಣೆ ದೊರಕಿಸಲು ಆಯ್ದ 25 ಕೃಷಿ ಉತ್ಪನ್ನ ಮಾರುಕಟ್ಟೆಗಳಲ್ಲಿ  ಗುಣವಿಶ್ಲೇಷಣಾ ಪ್ರಯೋಗಾಲಯಗಳನ್ನು ಸ್ಥಾಪಿಸಲು 2.5 ಕೋಟಿ ರೂ. ಅನುದಾನ ಸೇರಿದಂತೆ ಒಟ್ಟಾರೆ ಸಹಕಾರ ಇಲಾಖೆಗೆ 5,837 ಕೋಟಿ ರೂ. ಅನುದಾನ ಒದಗಿಸಲಾಗುವುದು ಎಂದು ಹೇಳಿದರು.

 

ಮಹಿಳಾ ಮೀನುಗಾರರಿಗೆ 50 ಸಾವಿರ ರೂ.ಗಳವರೆಗಿನ ಸಾಲವನ್ನು  ಪ್ರಸಕ್ತ ಸಾಲಿನಲ್ಲಿ  ಶೂನ್ಯ ಬಡ್ಡಿ ದರದಲ್ಲಿ ನೀಡಲು ನಿರ್ಧರಿಸಲಾಗಿದೆ

ಮೀನುಗಾರಿಕೆ ಚಟುವಟಿಕೆಗಳನ್ನು ಕೈಗೊಳ್ಳಲು ಮಹಿಳಾ ಮೀನುಗಾರರಿಗೆ ಶೇ.2ರ ಬಡ್ಡಿ ದರದಲ್ಲಿ ನೀಡಲಾಗುತ್ತಿದ್ದ  50 ಸಾವಿರ ರೂ.ಗಳವರೆಗಿನ ಸಾಲವನ್ನು  ಪ್ರಸಕ್ತ ಸಾಲಿನಲ್ಲಿ  ಶೂನ್ಯ ಬಡ್ಡಿ ದರದಲ್ಲಿ ನೀಡಲು ನಿರ್ಧರಿಸಲಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು

ಹಣಕಾಸು ಸಚಿವರೂ ಆದ ಅವರು ಇಂದು ಮಂಡಿಸಿದ ಬಜೆಟ್‍ನಲ್ಲಿ ಮಹಿಳಾ ಮೀನುಗಾರರಿಗೆ ಶೇ.2ರ ಬಡ್ಡಿ ದರದಲ್ಲಿ ವಾಣಿಜ್ಯ, ಗ್ರಾಮೀಣ, ಪ್ರಾದೇಶಿಕ ಬ್ಯಾಂಕ್‍ಗಳಿಂದ ನೀಡುತ್ತಿರುವ 50 ಸಾವಿರ ವರೆಗಿನ ಸಾಲವನ್ನು   ಹಾಗೂ 2018-19ನೆ ಸಾಲಿನಿಂದ ಶೂನ್ಯ ಬಡ್ಡಿ ದರದಲ್ಲಿ ನೀಡಲು ನಿರ್ಧರಿಸಲಾಗಿದೆ. ಒಟ್ಟಾರೆ ಮೀನುಗಾರಿಕೆಗೆ 252 ಕೋಟಿ ರೂ.ಗಳನ್ನು ಒದಗಿಸಲಾಗಿದೆ ಎಂದರು.

ಮೀನುಗಾರರಿಗೆ 35 ಎಂಎಂ ಸ್ಕ್ವೇರ್ ಮೆಷ್ ಬಲೆಗಳನ್ನು ಉಚಿತವಾಗಿ ನೀಡಲು ಉದ್ದೇಶಿಸಲಾಗಿದ್ದು, ಇದಕ್ಕೆ 2.5 ಕೋಟಿ ರೂ. ಅನುದಾನ ಒದಗಿಸಲಾಗುವುದು. ಮೀನು ಮಾರುಕಟ್ಟೆಗಳಲ್ಲಿ ಶೀತಲೀಕೃತ ಘಟಕಗಳನ್ನು ಸ್ಥಾಪಿಸಲು ಒಂದು ಕೋಟಿ ರೂ. ಅನುದಾನ ಒದಗಿಸಲಾಗುವುದು ಎಂದು ಹೇಳಿದರು.

 

ರೇಷ್ಮೆ ಟೂರಿಸಂ ಅಭಿವೃದ್ಧಿ ಪಡಿಸಲು ಉದ್ದೇಶಿಸಲಾಗಿದ್ದು, ಚನ್ನಪಟ್ಟಣದಲ್ಲಿ ಅಂತಾರಾಷ್ಟ್ರೀಯ ಮಟ್ಟದ ರೇಷ್ಮೆ ಕೃಷಿ ಕ್ಷೇತ್ರ ಸ್ಥಾಪನೆ

ಕೇಂದ್ರ ರೇಷ್ಮೆ ಮಂಡಳಿ ಸಹಯೋಗದೊಂದಿಗೆ ಬೆಂಗಳೂರು, ಮೈಸೂರು ಕಾರಿಡಾರ್‍ನಲ್ಲಿ ರೇಷ್ಮೆ ಟೂರಿಸಂ ಅಭಿವೃದ್ಧಿ ಪಡಿಸಲು ಉದ್ದೇಶಿಸಲಾಗಿದ್ದು, ಚನ್ನಪಟ್ಟಣದಲ್ಲಿ ಅಂತಾರಾಷ್ಟ್ರೀಯ ಮಟ್ಟದ ರೇಷ್ಮೆ ಕೃಷಿ ಕ್ಷೇತ್ರ ಸ್ಥಾಪನೆಗೆ ನಿರ್ಧರಿಸಲಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.

ಇಂದು ತಾವು ಮಂಡಿಸಿದ ಬಜೆಟ್‍ನಲ್ಲಿ ರೇಷ್ಮೆ ಇಲಾಖೆಗೆ 457 ಕೋಟಿ ರೂ. ಅನುದಾನ ಒದಗಿಸಲಾಗಿದೆ ಎಂದು ಹೇಳಿದರು.

ತಲಘಟ್ಟಪುರದ ರಾಜ್ಯ ರೇಷ್ಮೆ ಸಂಶೋಧನಾ ಮತ್ತು ಅಭಿವೃದ್ಧಿ ಸಂಸ್ಥೆಯಲ್ಲಿ ಹಿಪ್ಪುನೇರಳೆ ಕೃಷಿ ಚಟುವಟಿಕೆಯಿಂದ ರೇಷ್ಮೆ ವಸ್ತ್ರ ತಯಾರಿಸುವ ಸಿಲ್ಕ್ ಮ್ಯೂಸಿಯಂ ಅಭಿವೃದ್ಧಿ ಪಡಿಸಲಾಗುವುದು. ಹಿಪ್ಪು ನೇರಳೆ ಮರ ಕೃಷಿ ಅಭಿವೃದ್ಧಿ ಪಡಿಸಿ ಬಿಳಿಗಿರಿ ರಂಗನಬೆಟ್ಟದ ಸೋಲಿಗ ಜನಾಂಗಕ್ಕೆ ಪ್ರಯೋಜನವಾಗುವಂತೆ ಕಡಿಮೆ ವೆಚ್ಚದ ರೇಷ್ಮೆ ಹುಳು ಸಾಕಾಣಿಕೆ ಶೆಡ್‍ಗಳನ್ನು ನಿರ್ಮಿಸಿ ದ್ವಿತಳಿ ರೇಷ್ಮೆ ಹುಳು ಸಾಕಾಣಿಕೆ ಮಾಡಲು ಉದ್ದೇಶಿಸಲಾಗಿದೆ ಎಂದು ಹೇಳಿದರು.

 

ತೋಟಗಾರಿಕೆ ಇಲಾಖೆಗೆ 995 ಕೋಟಿ ರೂ.ಗಳ ಅನುದಾನ ನೀಡಲಾಗಿದೆ

ತೋಟಗಾರಿಕೆ ಇಲಾಖೆಗೆ 995 ಕೋಟಿ ರೂ.ಗಳ ಅನುದಾನ ನೀಡಲಾಗಿದೆ. ನಗರಗಳ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಟೊಮಾಟೋ, ದಪ್ಪ ಮೆಣಸಿನಕಾಯಿ, ಬದನೆ, ಸೊಪ್ಪು, ತರಕಾರಿ ಬೆಳೆ ಬೆಳೆಯಲು ಹೈಡ್ರೋ ಫೆÇೀನಿಕ್ಸ್ ತಂತ್ರಜ್ಞಾನದ ಉಪಯೋಗ ಉತ್ತೇಜಿಸಲು ತೀರ್ಮಾನಿಸಲಾಗಿರುವ ನಿರ್ಧಾರವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಇಂದು ತಮ್ಮ ಬಜೆಟ್‍ನಲ್ಲಿ ಪ್ರಸ್ತಾಪಿಸಿದ್ದಾರೆ.

ರಸಾಯನಿಕ ಔಷಧಗಳ ಸಿಂಪಡಣೆ ಕಡಿತಗೊಳಿಸಿ ತೋಟಗಾರಿಕೆ ಬೆಳೆಗಳನ್ನು ಕೀಟ ಮತ್ತು ರೋಗಗಳಿಂದ ರಕ್ಷಿಸಿ ಅಧಿಕ ಇಳುವರಿ ಪಡೆಯಲು ಒಂದು ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಸಮಗ್ರ ಪೊೀಷಕಾಂಶ ನಿರ್ವಹಣೆಗಾಗಿ ರೈತರಿಗೆ ನೆರವು ನೀಡಲು 10 ಕೋಟಿ ರೂ. ಅನುದಾನ ನೀಡುವುದಾಗಿ ತಿಳಿಸಿದ್ದಾರೆ.

 

ಸಿರಿಧಾನ್ಯ ಬೆಳೆಗೆ 24 ಕೋಟಿ ರೂ.ಗಳ ಅನುದಾನ ಒದಗಿಸಲು  ನಿರ್ಧರಿಸಲಾಗಿದೆ

ಸಿರಿಧಾನ್ಯ ಬೆಳೆಗೆ 24 ಕೋಟಿ ರೂ.ಗಳ ಅನುದಾನ ಒದಗಿಸಲು  ನಿರ್ಧರಿಸಲಾಗಿದೆ. ಪ್ರಸಕ್ತ ಸಾಲಿನಲ್ಲಿ ರಾಜ್ಯದಲ್ಲಿ ಅಂದಾಜು 42 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಸಿರಿಧಾನ್ಯ ಬೆಳೆಯಲಾಗುತ್ತಿದ್ದು, 2018-19ನೆ ಸಾಲಿನಲ್ಲಿ ಸಿರಿಧಾನ್ಯ ಬೆಳೆ  ವಿಸ್ತೀರ್ಣವನ್ನು 60 ಸಾವಿರ ಹೆಕ್ಟೇರ್‍ಗೆ ಹೆಚ್ಚಿಸಲು ವಿಶೇಷ ಕಾರ್ಯಕ್ಕೆ 24 ಕೋಟಿ ರೂ.ಗಳ ಅನುದಾನ ಒದಗಿಸುವ ನಿರ್ಧಾರ ಮಾಡಲಾಗಿದೆ ಎಂದು ಇಂದು ಮಂಡಿಸಿದ ಬಜೆಟ್‍ನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ.

 

 

 

ಖುಷ್ಕಿ ಭೂಮಿಯ ರೈತರ ಸಂಕಷ್ಟಗಳನ್ನು ನೇರವಾಗಿ ಪರಿಹರಿಸಲು ರೈತರ ನೇರ ಆದಾಯ ನೆರವು

ಖುಷ್ಕಿ ಭೂಮಿಯ ರೈತರ ಸಂಕಷ್ಟಗಳನ್ನು ನೇರವಾಗಿ ಪರಿಹರಿಸಲು ರೈತರ ನೇರ ಆದಾಯ ನೆರವು ನೀಡುವ ರೈತ ಬೆಳಕು ಎಂಬ ವಿಶಿಷ್ಟ ಯೋಜನೆಯನ್ನು ಇತಿಹಾಸದಲ್ಲೇ ಮೊದಲ ಬಾರಿಗೆ ಪ್ರಾರಂಭಿಸುತ್ತಿರುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.

ತಮ್ಮ ಬಜೆಟ್‍ನಲ್ಲಿ ಈ ವಿಷಯ ಪ್ರಸ್ತಾಪಿಸಿದ ಅವರು, 2018-19ನೇ ಸಾಲಿನಲ್ಲಿ ಮಳೆಯಾಶ್ರಿತ ಬೆಳೆ ಬೆಳೆಯುವ ಪ್ರತಿ ವರ್ಷ ರೈತರಿಗೆ ಗರಿಷ್ಠ 10 ಸಾವಿರ ಮಿತಿಗೊಳಪಟ್ಟು ಪ್ರತಿ ಹೆಕ್ಟೇರ್‍ಗೆ 5 ಸಾವಿರ ರೂ.ಗಳನ್ನು ನೀಡಲಾಗುವುದು. ಈ ಹಣವನ್ನು ರೈತರಿಗೆ ಬ್ಯಾಂಕ್ ಖಾತೆಗಳ ಮೂಲಕ ನೇರ ವರ್ಗಾವಣೆ ಮಾಡಲಾಗುವುದು. ಈ ಯೋಜನೆಯಿಂದ ಪ್ರತಿವರ್ಷ 3,500 ಕೋಟಿ ರೂ. ವೆಚ್ಚವಾಗಲಿದ್ದು, 70 ಲಕ್ಷಕ್ಕೂ ಹೆಚ್ಚು ರೈತರು ಪ್ರಯೋಜನ ಪಡೆಯಲಿದ್ದಾರೆ ಎಂದರು.

ಕೃಷಿ ಭಾಗ್ಯ ವಿಸ್ತರಣೆ:

ಕೃಷಿ ಭಾಗ್ಯ ಯೋಜನೆ ಮಹತ್ವದ ಪಾತ್ರ ವಹಿಸಿದ್ದು, ಈ ಸಾಲಿನಲ್ಲೂ ಈ ಯೋಜನೆ ವಿಸ್ತರಣೆಗೆ 600 ಕೋಟಿ ರೂ.ಗಳ ಅನುದಾನ ಒದಗಿಸಲಾಗುವುದು ಎಂದು ಹೇಳಿದರು.

ಕಳೆದ ಐದು ವರ್ಷಗಳಿಂದ ನಿರಂತರ ಬರ ಪರಿಸ್ಥಿತಿ ಎದುರಿಸುತ್ತಿದ್ದು, ರೈತರಿಗೆ ಆರ್ಥಿಕ ಸ್ಥಿರತೆ ಒದಗಿಸಲು ಕರ್ನಾಟಕ ರೈತ ಸುರಕ್ಷಾ ಪ್ರಧಾನ ಮಂತ್ರಿ ಫಸಲ್ ಭೀಮಾ  ಯೋಜನೆಯಡಿ ರಾಜ್ಯದ ವಂತಿಗೆಯೊಂದಿಗೆ ಸೂಕ್ತ ನೆರವು ನೀಡಲಾಗುತ್ತಿದೆ. 2018-19ನೆ ಸಾಲಿನಲ್ಲಿ ಮುಂಗಾರು ಮತ್ತು ಹಿಂಗಾರು ಹಂಗಾಮಿನಲ್ಲೂ ಕೂಡ ರಾಜ್ಯದ ಪಾಲನ್ನು ಭರಿಸಲು 854 ಕೋಟಿ ರೂ. ಅನುದಾನ ಒದಗಿಸಲಾಗುವುದು ಎಂದು ಹೇಳಿದರು.

ಸಾವಯವ ಕೃಷಿ ವಿಸ್ತರಣೆ:

ಸಾವಯವ ಕೃಷಿಗೆ ಹೆಚ್ಚಿನ ಆದ್ಯತೆ ನೀಡಿ ಪ್ರಸ್ತುತ ಒಂದು ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಅಳವಡಿಸಿದ್ದು, ಮುಂದಿನ ಮೂರು ವರ್ಷಗಳಲ್ಲಿ 1.5 ಹೆಕ್ಟೇರ್ ಪ್ರದೇಶಕ್ಕೆ ವಿಸ್ತರಿಸಲು ಉದ್ದೇಶಿಸಲಾಗಿದ್ದು, ಈ ಸಾಲಿನಲ್ಲಿ 50 ಕೋಟಿ ರೂ.  ಅನುದಾನ ಒದಗಿಸಲು  ನಿರ್ಧರಿಸಲಾಗಿದೆ.

 

ಕೃಷಿ, ತೋಟಗಾರಿಕೆ, ಪಶುಸಂಗೋಪನೆ, ರೇಷ್ಮೆ, ಜಲಸಂಪನ್ಮೂಲ, ಸಣ್ಣ ನೀರಾವರಿ, ಸಹಕಾರಿ ಕ್ಷೇತ್ರ, ವಿದ್ಯುತ್ ಸಬ್ಸಿಡಿ, ಹಾಲಿನ ಸಬ್ಸಿಡಿ, ಸಾಲದ ಮೇಲಿನ ಬಡ್ಡಿ  ಧನ ಸಹಾಯ

ಕೃಷಿ, ತೋಟಗಾರಿಕೆ, ಪಶುಸಂಗೋಪನೆ, ರೇಷ್ಮೆ, ಜಲಸಂಪನ್ಮೂಲ, ಸಣ್ಣ ನೀರಾವರಿ, ಸಹಕಾರಿ ಕ್ಷೇತ್ರ, ವಿದ್ಯುತ್ ಸಬ್ಸಿಡಿ, ಹಾಲಿನ ಸಬ್ಸಿಡಿ, ಸಾಲದ ಮೇಲಿನ ಬಡ್ಡಿ ಸಹಾಯಧನಕ್ಕಾಗಿ ಒಟ್ಟು 40 ಸಾವಿರ ಕೋಟಿ ರೂ.ಗಳ ಅನುದಾನ ನಿಗದಿಪಡಿಸಲಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು

ಇಂದು ತಾವು ಮಂಡಿಸಿದ ಬಜೆಟ್‍ನಲ್ಲಿ ಈ  ತಿಳಿಸಿದ ಅವರು, ಕೃಷಿಗೆ ಹೆಚ್ಚು ಆದ್ಯತೆ ನೀಡಲಾಗಿದ್ದು, ಕೃಷಿ 5,080 ಕೋಟಿ ರೂ., ತೋಟಗಾರಿಕೆ-1091, ಪಶುಸಂಗೋಪನೆ-2245ಕೋಟಿ ರೂ., ರೇಷ್ಮೆ-429 ಕೋಟಿ ರೂ., ಮೀನುಗಾರಿಕೆ-337 ಕೋಟಿ ರೂ., ಜಲಸಂಪನ್ಮೂಲ-15929, ಸಣ್ಣ ನೀರಾವರಿ-2099, ಸಹಕಾರ- 1666, ವಿದ್ಯುತ್ ಸಬ್ಸಿಡಿ-8841, ಹಾಲಿನ ಸಬ್ಸಿಡಿ-1200, ಸಾಲದ ಮೇಲಿನ ಬಡ್ಡಿ ಸಹಾಯಧನಕ್ಕಾಗಿ-800 ಕೋಟಿ ರೂ. ಒಟ್ಟಾರೆ ರೈತರ ಏಳಿಗೆಗಾಗಿ ಬಜೆಟ್‍ನಲ್ಲಿ 40 ಸಾವಿರ ಕೋಟಿ ರೂ.ಗಳನ್ನು ಅನುದಾನ ಮೀಸಲಿರಿಸಲಾಗಿದೆ.

ಕೃಷಿ ಹೊಂಡಗಳು, ಪಾಲಿಹೌಸ್ ನಿರ್ಮಾಣ, ಮಣ್ಣು ಆರೋಗ್ಯ ಕಾರ್ಡ್‍ಗಳ ವಿತರಣೆ, ಹನಿ ನೀರಾವರಿಗೆ ಎಲ್ಲಾ ವರ್ಗದ ರೈತರಿಗೆ ಶೇ.90ರಷ್ಟು ಸಹಾಯಧನ, ರೈತರಿಗೆ ಕೃಷಿ ಯಂತ್ರೋಪಕರಣ, ಕೃಷಿ ಸಲಕರಣೆಗಳ ಬಾಡಿಗೆ ನೀಡಿಕೆ, 5 ಕೋಟಿ ವೆಚ್ಚದಲ್ಲಿ ಗೋದಾಮು ನಿರ್ಮಾಣ, ಶೂನ್ಯ ಬಡ್ಡಿ ದರದಲ್ಲಿ  3 ಲಕ್ಷದವರೆಗೆ ಸಾಲ ನೀಡಿಕೆ, 3ರ ಬಡ್ಡಿ ದರದಲ್ಲಿ 3 ರಿಂದ 10 ಲಕ್ಷದವರೆಗೆ ಸಾಲ ನೀಡಿಕೆ, ಕಳೆದ ನಾಲ್ಕು ವರ್ಷಗಳ ಅವಧಿಯಲ್ಲಿ  10.7 ಲಕ್ಷ ರೂ.ಗಳ 2359 ಕೋಟಿ ರೂ. ಬಡ್ಡಿ ಮನ್ನಾ, 22,27,506 ರೈತರ 8,165 ಕೋಟಿ ರೂ. ಸಹಕಾರಿ ಬ್ಯಾಂಕ್‍ಗಳ ರೈತರ ತಲಾ 50 ಸಾವಿರ ಸಾಲ ಮನ್ನಾ  ಮಾಡಲಾಗಿದೆ ಎಂದು ಹೇಳಿದರು.

ಮಧ್ಯವರ್ತಿಗಳ ಹಾವಳಿ ತಪ್ಪಿಸಲು ಆನ್‍ಲೈನ್ ಮಾರುಕಟ್ಟೆ ವ್ಯವಸ್ಥೆ ಮಾಡಲಾಗಿದ್ದು, 157 ಕೃಷಿ ಮಾರುಕಟ್ಟೆಗಳನ್ನು ಇದಕ್ಕೆ ಒಳಪಡಿಸಲಾಗಿದೆ. ಹಳೇ ಸಾಲ ಮನ್ನಾ, ಬಡ್ಡಿ ರಹಿತ ಹೊಸ ಸಾಲ, ನ್ಯಾಯಬದ್ಧ ಬೆಂಬಲ ಬೆಲೆ, ಲೇವಾದೇವಿದಾರರ ವಿರುದ್ಧ ಕಟ್ಟುನಿಟ್ಟಿನ ಕ್ರಮದಿಂದ ರೈತರ ಆತ್ಮಹತ್ಯೆ ಇಳಿಕೆಯಾಗಿದೆ ಎಂದು ಸಿದ್ದರಾಮಯ್ಯ ತಿಳಿಸಿದರು.

 

ಕೃಷಿ ಇಲಾಖೆಗೆ ಪ್ರಸಕ್ತ ಸಾಲಿಗೆ 5,849ಕೋಟಿ ರೂ.ಗಳ ಅನುದಾನ ಒದಗಿಸಲಾಗಿದೆ

ಕೃಷಿ ಇಲಾಖೆಗೆ ಪ್ರಸಕ್ತ ಸಾಲಿಗೆ 5,849ಕೋಟಿ ರೂ.ಗಳ ಅನುದಾನ ಒದಗಿಸಲಾಗಿದೆ ಎಂದು ಹೇಳಿದ ಹಣಕಾಸು ಇಲಾಖೆಯನ್ನು ಹೊಂದಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಬೆಂಗಳೂರಿನ ಗಾಂಧಿ ಕೃಷಿ ವಿಜ್ಞಾನ ಕೇಂದ್ರದಲ್ಲಿ ಒಂದು ಕೋಟಿ ವೆಚ್ಚದಲ್ಲಿ ನಂಜುಂಡಸ್ವಾಮಿ ಸಂಶೋಧನಾ ಪೀಠವನ್ನು ಸ್ಥಾಪಿಸಲಾಗುವುದು ಎಂದು ಹೇಳಿದರು.

ಇಂದು ಮಂಡಿಸಿದ 2018-19ನೆ ಸಾಲಿನ ಆಯವ್ಯಯದಲ್ಲಿ ಈ ವಿಷಯ ಪ್ರಸ್ತಾಪಿಸಿದ ಅವರು, ರಾಜ್ಯದಲ್ಲಿ ಕೃಷಿಕರ ಬೇಡಿಕೆಗೆ ಅನುವಾಗುವಂತೆ  ಕೃಷಿಯಲ್ಲಿ ಹೆಚ್ಚಿನ ಸಂಶೋಧನೆಗೆ ಒತ್ತು ಕೊಡಲು ವಿಜಯಪುರ ಜಿಲ್ಲೆ ಮುದ್ದೆಬಿಹಾಳದಲ್ಲಿ ನೂತನ ಕೃಷಿ ಸಂಶೋಧನಾ ಕೇಂದ್ರವನ್ನು ಸ್ಥಾಪಿಸಲಾಗುವುದು. ಚಾಮರಾಜನಗರ ಜಿಲ್ಲೆಯಲ್ಲಿ ನೂತನ ಕೃಷಿ ಕಾಲೇಜು ಸ್ಥಾಪಿಸಲು ತೀರ್ಮಾನಿಸಲಾಗಿದೆ ಎಂದು ಹೇಳಿದರು.

ಬೆಳೆ ಕಟಾವು ನಂತರ ಶೇಖರಿಸಲ್ಪಟ್ಟ ಹುಲ್ಲು, ಮೆದೆ, ಬಣವೆಗಳು ಆಕಸ್ಮಿಕ ಬೆಂಕಿಯಿಂದ ನಷ್ಟವುಂಟಾಗುವ ಪ್ರಕರಣಗಳಿಗೆ ಹಾಲಿ ಇರುವ ಪರಿಹಾರ ಧನದ ಮೊತ್ತವನ್ನು  ದ್ವಿಗುಣಗೊಳಿಸಿ ಗರಿಷ್ಠ 20 ಸಾವಿರ ರೂ. ನೀಡಲು ತೀರ್ಮಾನಿಸಲಾಗಿದೆ ಎಂದು ಹೇಳಿದರು.

ಕೃಷಿ ಚಟುವಟಿಕೆಯಲ್ಲಿ ತೊಡಗಿದ ಸಮಯದಲ್ಲಿ ಹಾವು ಕಡಿತದಿಂದ ಆಕಸ್ಮಿಕವಾಗಿ ಮರಣ ಹೊಂದಿದ ರೈತನ ಕುಟುಂಬಕ್ಕೆ ನೀಡುತ್ತಿದ್ದ 1 ಲಕ್ಷ ಪರಿಹಾರವನ್ನು 2 ಲಕ್ಷ ರೂ.ಗಳವರೆಗೆ ಏರಿಕೆ ಮಾಡಲಾಗಿದೆ ಎಂದು ತಿಳಿಸಿದರು.

ಕಬ್ಬು ಬೆಳೆಯಲ್ಲಿ ಲಾಭದಾಯಕತೆ ಮತ್ತು ಸುಸ್ಥಿರತೆ ಹೊಂದಲು ಹಾಗೂ ಕೂಲಿ ವೆಚ್ಚ ಮತ್ತು ಕಾರ್ಮಿಕರ ಕೊರತೆಯನ್ನು ನಿವಾರಿಸಲು ಕಬ್ಬು ಕಟಾವು ಯಂತ್ರಗಳ ಬಳಕೆಗೆ ಸರ್ಕಾರ ಆದ್ಯತೆ ನೀಡುತ್ತಿದ್ದು, ಇದಕ್ಕಾಗಿ ಕೇಂದ್ರದ ನೆರವಿನೊಂದಿಗೆ ಖಾಸಗಿ ಸಹಭಾಗಿತ್ವದಲ್ಲಿ ಕಬ್ಬು ಕಟಾವು ಯಂತ್ರಕ್ಕಾಗಿ ಸಹಾಯಧನ ನೀಡಲು 20 ಕೋಟಿ ಒದಗಿಸಲಾಗುವುದು ಎಂದು ಸಿದ್ದರಾಮಯ್ಯ ಹೇಳಿದರು.

 

ಶೇಂಗಾ ಬೆಳೆಯುವ ರೈತರಿಗೆ ಸಹಾಯ ಮಾಡಲು  50 ಕೋಟಿ ರೂ.ಗಳ ವಿಶೇಷ ಪ್ಯಾಕೇಜ್‍ನ್ನು ಬಜೆಟ್‍ನಲ್ಲಿ ಘೋಷಿಸಲಾಗಿದೆ

ಮುಖ್ಯಮಂತ್ರಿ ಸಿದ್ದರಾಮಯ್ಯ ಇಂದು ಮಂಡಿಸಿದ ಬಜೆಟ್‍ನಲ್ಲಿ ಈ ವಿಷಯ ಪ್ರಸ್ತಾಪಿಸಿದ್ದು, ನೆಲಗಡಲೆ ಬೆಳೆಯು ನಮ್ಮ ರಾಜ್ಯದ ಪ್ರಮುಖ ಬೆಳೆಯಾಗಿದ್ದು, ಮುಖ್ಯವಾಗಿ ಮಳೆಯಾಶ್ರಿತ ಪ್ರದೇಶಗಳಲ್ಲಿ ಬೆಳೆ ಬೆಳೆಯಲಾಗುತ್ತಿದೆ. ಇತ್ತೀಚೆಗೆ ಈ ಬೆಳೆಯು ಇಳಿಮುಖವಾಗುತ್ತಿದೆ. ಇದನ್ನು ಉತ್ತೇಜಿಸುವ ಸಲುವಾಗಿ ರೈತರಿಗೆ ಸಹಾಯ ಮಾಡಲು 50 ಕೋಟಿ ರೂ.ಗಳ ವಿಶೇಷ ಪ್ಯಾಕೇಜ್ ಘೋಷಿಸಲಾಗುತ್ತಿದೆ ಎಂದು ಹೇಳಿದರು.

ಪ್ರಾರಂಭಿಕವಾಗಿ ತುಮಕೂರು ಜಿಲ್ಲೆಯ ಪಾವಗಡ, ಶಿರಾ, ಮಧುಗಿರಿ ತಾಲೂಕುಗಳು ಹಾಗೂ ಚಿತ್ರದುರ್ಗ ಜಿಲ್ಲೆಯ ಮೊಳಕಾಲ್ಮೂರು, ಚಳ್ಳಕೆರೆ ತಾಲೂಕುಗಳಲ್ಲಿ ಒದಗಿಸಲಾಗುತ್ತದೆ ಎಂದು ತಿಳಿಸಿದರು.

 

ಮುಂದಿನ ವರ್ಷ 8 ಹೊಸ ಕಬ್ಬಿಣ ಅದಿರು ಬ್ಲಾಕ್‍ಗಳನ್ನು ಹರಾಜು ಮಾಡಲಾಗುವುದು. 2020ಕ್ಕೆ ಅಂತ್ಯವಾಗಲಿರುವ 30 ಗಣಿ ಗುತ್ತಿಗೆಗಳ ಖನಿಜಾನ್ವೇಷಣೆಗಳನ್ನು ಕೈಗೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ

ವಾಣಿಜ್ಯ ಮತ್ತು ಕೈಗಾರಿಕಾ ಇಲಾಖೆಗಳಿಗೆ 1681 ಕೋಟಿ ರೂ. ಅನುದಾನ ಒದಗಿಸಿರುವ ಅವರು,  ಗ್ರಾಮೀಣ ಭಾಗದಲ್ಲಿ ಉದ್ಯಮ ವಲಯ ಘೋಷಣೆ ಸೇರಿದಂತೆ ಹಲವಾರು ಯೋಜನೆಗಳನ್ನು  ಪ್ರಕಟಿಸಿದ್ದಾರೆ.

ಎರಡು ಮತ್ತು ಮೂರನೆ ಶ್ರೇಣಿಯ ನಗರಗಳಾದ ಕೊಪ್ಪಳ, ಯಾದಗಿರಿ, ಬಳ್ಳಾರಿ, ಧಾರವಾಡ, ತುಮಕೂರು, ಮೈಸೂರು, ಚಾಮರಾಜನಗರ, ಬೆಂಗಳೂರು ಗ್ರಾಮಾಂತರ, ರಾಮನಗರ ಜಿಲ್ಲೆಗಳಲ್ಲಿ ಸಣ್ಣ ಕೈಗಾರಿಕಾ ಅಭಿವೃದ್ಧಿ ನಿಗಮದಿಂದ 11 ಹೊಸ ಕೈಗಾರಿಕಾ ವಸಹಾತುಗಳನ್ನು ಸ್ಥಾಪಿಸಲಾಗುವುದು.

ಕೆಎಸ್‍ಎಫ್‍ಸಿವತಿಯಿಂದ ಸಾಲ ಪಡೆದು ಸಣ್ಣ ಮತ್ತು ಸೂಕ್ಷ್ಮ ಕೈಗಾರಿಕೆ ಆರಂಭಿಸುವ ಉದ್ದಿಮೆದಾರರಿಗೆ ಆರಂಭದ 5ವರ್ಷಗಳ ವರೆಗೆ ಶೇ.10ರಷ್ಟು ಬಡ್ಡಿ ಸಹಾಯಧನ ನೀಡಲಾಗುತ್ತದೆ. ಬೆಳಗಾವಿಯಲ್ಲಿರುವ ಎಸ್.ನಿಜಲಿಗಪ್ಪ ಸಕ್ಕರೆ ಸಂಸ್ಥೆಯಲ್ಲಿ ಸಕ್ಕರೆ ತಂತ್ರಜ್ಞಾನಕ್ಕೆ ಸಂಬಂಧಪಟ್ಟಂತೆ ಹೊಸ ಪದವಿ ಕೋರ್ಸ್‍ನ್ನು ಸ್ಥಾಪಿಸಲಾಗುವುದು.

ರಾಜ್ಯದ ಕಬ್ಬು ಬೆಳೆಯುವ ವರಮಾನ ಹೆಚ್ಚಿಸುವ ಸಲುವಾಗಿ ಹೊಸ ಕಬ್ಬು ತಳಿ ಅಭಿವೃದ್ಧಿಗೆ 5ಕೋಟಿ ರೂ.ಗಳ ಅನುದಾನವನ್ನು ಶೇ.50ರಷ್ಟು ಸಹಾಯಧನದಂತೆ ನೀಡಲಾಗುವುದು.

ನೇಕಾರರಿಗೆ ನಿರಂತರ ಉದ್ಯೋಗ ಒದಗಿಸುವ ದೃಷ್ಟಿಯಿಂದ ಈಗ ನೀಡುತ್ತಿರುವ ರಿಬೆಟ್ ಅವಧಿಯನ್ನು 180ದಿನಗಳಿಂದ 360 ದಿನಗಳಿಗೆ ಹೆಚ್ಚಿಸಲಗುವುದು. ಜವಳಿ ಮತ್ತು ಸಿದ್ದ ಉಡುಪುಗಳ ಕಾರ್ಖಾನೆಗಳ ಅಭವೃದ್ಧಿಗಾಗಿ ಹೊಸ ಜವಳಿ ನೀತಿ ಘೋಷಿಸಲಾಗುವುದು.

ನ್ಯಾಷನಲ್  ಇನ್‍ಸ್ಟಿಟ್ಯೂಟ್ ಆಫ್ ಡಿಸೈನ್ ಸಹಯೋಗದಲ್ಲಿ  ಸ್ಮಾರ್ಟ್ ಹ್ಯಾಡ್‍ಲೂಮ್ ಸೆಂಟರನ್ನು ಸ್ಥಾಪಿಸಲಾಗುತ್ತದೆ.

ಗಣಿ ಮತ್ತು ಭೂ ವಿಜ್ಞಾನ ಇಲಾಖೆಯಲ್ಲಿ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದ  ವಿಶೇಷ  ಯೋಜನೆಯಡಿ ಮರಳು ಗಣಿ ಗುತ್ತಿಗೆ ಹೊಂದಿರುವವರಿಗೆ ಮರಳು ದಾಸ್ತಾನು ಪ್ರದೇಶದಲ್ಲಿ ವೇ ಬ್ರಿಡ್ಜ್ ಅಳವಡಿಸಲು ಎಂ ಸ್ಯಾಂಡ್ ತಯಾರಿಸುವ ಯಂತ್ರೋಪಕರಣ ಅಳವಡಿಸಲು ಸಾಂಪ್ರದಾಯಿಕವಾಗಿ ಕಲ್ಲು ಕಟ್ಟಡ ತೆಗೆಯುವ ಸಂಘಗಳಿಗೆ ಗುತ್ತಿಗೆ ಶುಲ್ಕ ಪಾವತಿಸಲು ಸಹಾಯಧನ ನೀಡಲಾಗುತ್ತದೆ.

ಉತ್ಪಾದನ ಸ್ಥಳದಿಂದ ಗ್ರಾಹಕರಿಗೆ ಸರಕುಗಳ ತಡೆರಹಿತ ಸಾಗಾಣಿಕೆಗಾಗಿ ಬಂದರು, ವಿಮಾನ ನಿಲ್ದಾಣ, ರಾಷ್ಟ್ರೀಯ ಹೆದ್ದಾರಿ, ರಾಜ್ಯ ಹೆದ್ದಾರಿ ಮತ್ತು ಗೋದಾಮುಗಳ ನಡುವೆ ಉತ್ತಮ ಸಮನ್ವಯಕ್ಕಾಗಿ ಪ್ರತ್ಯೇಕವಾದ ಲಾಜೆಸ್ಟಿಕ್ ನೀತಿಯನ್ನು ರಚಿಸಲು ನಿರ್ಧರಿಸಲಾಗಿದೆ.

ಸರಕು ಸಾಗಾಣಿಕೆಯ ಸೌಲಭ್ಯವನ್ನು ಸುಧಾರಿಸಲು ಬಹುಮಾದರಿಯ ಲಾಜೆಸ್ಟಿಕ್ ಪಾರ್ಕ್‍ಗಳನ್ನು ಬೆಂಗಳೂರು ಸಮೀಪ  400 ಎಕರೆಯಲ್ಲಿ ಮತ್ತು ಹುಬ್ಬಳ್ಳಿಯಲ್ಲಿ 500 ಎಕರೆಗಳಲ್ಲಿ ಸ್ಥಾಪಿಸಲಾಗುವುದು.

ಯುವಜನರ ಹೊಸತನದ ಪರಿಕಲ್ಪನೆಗಳನ್ನು ಮತ್ತು ನವೋದ್ಯಮಗಳನ್ನು ಉತ್ತೇಜಿಸಲು ಇನೋವೇಷನ್ ಪಾಲಿಸಿಯನ್ನೂ ಜಾರಿಗೆ ತರಲಾಗುತ್ತಿದೆ.

ಹೆಚ್ಚು ಉದ್ಯೋಗವಕಾಶಗಳನ್ನು ಕಲ್ಪಿಸುವ ಕೈಗಾರಿಕೆಗಳನ್ನು ಪ್ರೋತ್ಸಾಹಿಸಲು ಕಾರ್ಮಿಕ ಸಾಂದ್ರತೆಯ ಉದ್ಯಮಗಳ ನೀತಿಯನ್ನು ರೂಪಿಸಲಾಗುತ್ತದೆ. ಉನ್ನತ ಅಧಿಕಾರದ ಸಮಿತಿಯನ್ನು ರಚಿಸಿ ಸೇವಾ ವಲಯದ ವಿವಿಧ ಅಂಶಗಳನ್ನು ಪರಿಶೀಲಿಸಲಾಗುವುದು. ಸಮಿತಿಯ ವರದಿಯನ್ನು  ಆಧರಿಸಿ ಹೊಸ ನೀತಿಯನ್ನು ಜಾರಿಗೊಳಿಸಲಾಗುವುದು.

ಸೆಪ್ಟೆಂಬರ್ 2018ರೊಳಗೆ  ಕೈಗಾರಿಕಾ ಪ್ರದೇಶ-ವಸಾಹತುಗಳಲ್ಲಿರುವ ಕೈಗಾರಿಕೆಗಳು ಸ್ಥಳೀಯ ಸಂಸ್ಥೆಗಳಿಗೆ ಆಸ್ತಿ ತೆರಿಗೆಯನ್ನು ಒಂದೇ ಕಂತಿನಲ್ಲಿ ಪಾವತಿಸಿದರೆ ದಂಡ ಮನ್ನಾ ಮಾಡಲಾಗುವುದು.

ಭಾರತೀಯ ಕೈಗಾರಿಕೆಗಳ ಒಕ್ಕೂಟದ ಸಹಯೋಗಗಳಲ್ಲಿ 23 ಕೋಟಿ ವೆಚ್ಚದ   ಕೈಗಾರಿಕಾ ಕಲಿಕಾ ಶ್ರೇಷ್ಠತಾ ಕೇಂದ್ರವನ್ನು ಸ್ಥಾಪಿಸಲಾಗುತ್ತದೆ. ಯೋಜನಾ ವೆಚ್ಚದ ಶೇ.50ರಷ್ಟು ಮೊತ್ತದಲ್ಲಿ 5ಕೋಟಿ ರೂ.ಗಳನ್ನು ಈ ವರ್ಷ ನೀಡಲಾಗುವುದು. ಭೂಮಿ ಖರೀದಿಸುವ ಕಾರ್ಯವಿಧಾನಗಳನ್ನು ಸರಳೀಕರಣಗೊಳಿಸಿ  ಗ್ರಾಮೀಣ ಪ್ರದೇಶದಲ್ಲಿ ಉದ್ಯೋಗವಕಾಶಗಳನ್ನು ಹೆಚ್ಚಿಸಲು ಗ್ರಾಮೀಣ ಭಾಗದ 20ರಿಂದ 30 ಎಕರೆಗಳ ಬಂಜರು,ಒಣ ಭೂಮಿಯನ್ನು  ಉದ್ಯಮವಲಯವೆಂದು ಘೋಷಿಸಲಾಗುವುದು. ಇದರಿಂದ ನಗರಗಳತ್ತ ವಲಸೆ ಹೋಗುವುದನ್ನು ತಪ್ಪಿಸಲು ಸಾಧ್ಯವಾಗಲಿದೆ ಎಂದು ಹೇಳಿದ್ದಾರೆ.

ಕುಶಲಕರ್ಮಿಗಳು ಕೈಗಾರಿಕೆಯ ಆರ್ಥಿಕತೆಯ ಬೆನ್ನೆಲುಬಾಗಿದ್ದಾರೆ. ಈ ವಲಯದಗ ಕೊರತೆಗಳನ್ನು ನೀಗಿಸಲು ರಾಜ್ಯ  ಕ್ಲಸ್ಟರ್ ಅಭಿವೃದ್ಧಿ ಕಾರ್ಯಕ್ರಮಗಳನ್ನು ಪರಿಚಯಿಸಲು ಪ್ರಸ್ತಾಪಿಸಲಾಗಿದೆ.

ಸಾಮಾನ್ಯ ಸೌಲಭ್ಯ ಕೇಂದ್ರಗಳನ್ನು ಸ್ಥಾಪಿಸಲು ಗರಿಷ್ಠ 5 ಕೋಟಿ ಮಿತಿಯಲ್ಲಿ ಶೇ.50ರಷ್ಟು  ಅನುದಾನ ಒದಗಿಸಲಾಗುವುದು.

 

ನೋಂದಣಿ ಮತ್ತು ಮುದ್ರಾಂಕ ಇಲಾಖೆ ಅಡಿಯಲ್ಲಿ ಪಾರಂಪರಿಕ ಹಾಗೂ ಕಾನೂನಾತ್ಮಕ ದಾಖಲೆಗಳನ್ನು ಸ್ಕ್ಯಾನಿಂಗ್ ಮತ್ತು ಡಿಜಿಟೈಜ್ ಮಾಡಿ ಸಂರಕ್ಷಿಸಿಡಲು ಸುರಭಿ(ಸೂಕ್ಷ್ಮ ರಕ್ಷಣಾ ಅಭಿಲೇಖಗಳು)

ನೋಂದಣಿ ಮತ್ತು ಮುದ್ರಾಂಕ ಇಲಾಖೆ ಅಡಿಯಲ್ಲಿ ಪಾರಂಪರಿಕ ಹಾಗೂ ಕಾನೂನಾತ್ಮಕ ದಾಖಲೆಗಳನ್ನು ಸ್ಕ್ಯಾನಿಂಗ್ ಮತ್ತು ಡಿಜಿಟೈಜ್ ಮಾಡಿ ಸಂರಕ್ಷಿಸಿಡಲು ಸುರಭಿ(ಸೂಕ್ಷ್ಮ ರಕ್ಷಣಾ ಅಭಿಲೇಖಗಳು) ಯೋಜನೆಯನ್ನು ಜಾರಿಗೊಳಿಸಲಾಗುತ್ತಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ.

ತಮ್ಮ ಬಜೆಟ್ ಭಾಷಣದಲ್ಲಿ ಮುಂದಿನ ವರ್ಷ ನೋಂದಣಿ ಮತ್ತು ಮುದ್ರಾಂಕ ಶುಲ್ಕದಿಂದ 10,400ಕೋಟಿ ರೂ. ಗಳ ಆದಾಯ ಸಂಗ್ರಹಿಸುವ ಗುರಿ ನಿಗದಿಪಡಿಸಿದ್ದಾರೆ.

ಕಳೆದ ವರ್ಷ 9ಸಾವಿರ ಕೋಟಿ ರೂ. ಗುರಿ ನಿಗದಿಪಡಿಸಿದ್ದು, ಜನವರಿ ಅಂತ್ಯದವರೆಗೆ 7537.28 ಕೋಟಿ ರೂ.ಗಳಿಗಿಂತಲೂ 7291.58 ಕೋಟಿ ವಸೂಲಿ ಮಾಡಿ ಶೇ. 100.75ರಷ್ಟು  ಸಾಧನೆ ಮಾಡಲಾಗಿದೆ.

ಅಬಕಾರಿ:

ಮದ್ಯದ ಮೇಲಿನ 2ರಿಂದ 18ನೇ ಘೋಷಿತ ಬೆಲೆ ಸ್ಲ್ಯಾಬ್‍ಗಳ ಮೇಲಿನ ಅಬಕಾರಿ ಸುಂಕವನ್ನು ಶೇ.8ರಷ್ಟು ಹೆಚ್ಚಿಸುವುದಾಗಿ  ಹೇಳಿದ್ದಾರೆ

499ರೂ. ಮೇಲ್ಪಟ್ಟ ಮದ್ಯದ ಮೇಲಿನ ಅಬಕಾರಿ ಸುಂಕವನ್ನು  ಶೇ.8ರಷ್ಟು ಹೆಚ್ಚಿಸುತ್ತಿರುವುದರಿಂದ ಮದ್ಯದ ಬೆಲೆಯು ಹೆಚ್ಚಾಗುತ್ತಿದೆ.

ಸುಪ್ರೀಂಕೋರ್ಟ್ ಹೆದ್ದಾರಿಯಿಂದ 500ಮೀಟರ್ ಅಂತರದೊಳಗಿನ ಮದ್ಯದಂಗಡಿಗಳನ್ನು ಮುಚ್ಚಬೇಕು ಎಂದು ಆದೇಶಿಸಿರುವುದರಿಂದ ಸುಮಾರು ಮೂರು ಸಾವಿರ ಅಂಗಡಿಗಳು ನಷ್ಟಕ್ಕೊಳಗಾದವು. ಸುಪ್ರೀಂಕೋರ್ಟ್ ತೀರ್ಪನ್ನು ಬದಲಾವಣೆ ಮಾಡಿ ಅವಕಾಶ ನೀಡಿದೆ. ಜುಲೈ, ಆಗಸ್ಟ್, ಸೆಪ್ಟೆಂಬರ್ ತಿಂಗಳಲ್ಲಿ ಮದ್ಯದಂಗಡಿಗಳನ್ನು ಮುಚ್ಚಿದ್ದರಿಂದ ಸುಮಾರು ಒಂದೂವರೆ ಸಾವಿರ ಕೋಟಿ  ಆದಾಯ ಸಂಗ್ರಹಣೆ ಕುಂಠಿತವಾಗಿದೆ. 18,050 ಕೋಟಿ ಬದಲಾಗಿ 17600ಕೋಟಿ ಸಂಗ್ರಹವಾಗುವ ನಿರೀಕ್ಷೆ ಇದೆ. ಜನವರಿ ಅಂತ್ಯದವರೆಗೆ 14572 ಕೋಟಿ ಸಂಗ್ರಹವಾಗಿದೆ ಎಂದು ವಿವರಿಸಿದರು.

ಅಬಕಾರಿ ಇಲಾಖೆಗೆ ಮುಂದಿನ  ಆರ್ಥಿಕ ವರ್ಷದಲ್ಲಿ 18750 ಕೋಟಿ ಆದಾಯ ಸಂಗ್ರಹಿಸುವ ಗುರಿ ನಿಗದಿಪಡಿಸಲಾಗಿದೆ.

ಸಾರಿಗೆ ಇಲಾಖೆಯಿಂದ 6006ಕೋಟಿ ತೆರಿಗೆ ಸಂಗ್ರಹದ ಗುರಿ ನಿಗದಿಪಡಿಸಲಾಗಿತ್ತು. ಈ ವರ್ಷ 6600ಕೋಟಿಗಳ ತೆರಿಗೆ ಸಂಗ್ರಹ ಮಾಡುವ ಗುರಿ ನಿಗದಿಪಡಿಸಲಾಗಿದೆ.

ಲಘು ವಿಮಾನದ ಇಂಧನಕ್ಕೆ ರಿಯಾಯ್ತಿ:

ಲಘು ವಿಮಾನಗಳಿಗೆ ಬಳಸುವ ಎಟಿಎಫ್ ಇಂಧನದ ಮೇಲಿನ ತೆರಿಗೆಯನ್ನು ಶೇ.28ರಿಂದ ಶೇ.5ಕ್ಕೆ ಇಳಿಸುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ

ಇದರಿಂದ ದೂರದೂರುಗಳಿಗೆ ಸಂಪರ್ಕ ಕಲ್ಪಿಸುವ ಲಘು ವಿಮಾನಗಳ ಪ್ರಯಾಣ ದರ ಕಡಿಮೆಯಾಗುವ ನಿರೀಕ್ಷೆ ಇದೆ. ಕರ್ನಾಟಕ ವೃತ್ತಿಗಳು, ವ್ಯಾಪಾರಗಳು, ಅಜೀವಿಕೆಗಳು ಮತ್ತು ಉದ್ಯೋಗಗಳ ಮೇಲಿನ ತೆರಿಗೆ ಕಾಯ್ದೆ 1976ಕ್ಕೆ ತಿದ್ದುಪಡಿ ತಂದು ಹಿರಿಯ ನಾಯಕರಿಗೆ ನೀಡುತ್ತಿರುವ ವಿನಾಯ್ತಿಯಿಂದ ಕಂಪೆನಿಗಳು, ಸಂಸ್ಥೆಗಳು, ಹಿಂದು ಅವಿಭಕ್ತ ಕುಟುಂಬ, ನಿಗಮ, ಸೊಸೈಟಿ, ಕ್ಲಬ್‍ಗಳು, ಅಸೋಸಿಯೇಷನ್‍ಗಳನ್ನು ಹೊರತುಪಡಿಸಲು ತೀರ್ಮಾನಿಸಲಾಗಿದೆ.

ಜಿಎಸ್‍ಟಿ ನೋಂದಣಿಗೆ ನಿಗದಿಪಡಿಸಿರುವ ವಹಿವಾಟು ಮಿತಿಗೆ ಪೂರಕವಾಗಿ ಕೆಲವು ವರ್ಗದ ವ್ಯಕ್ತಿಗಳಿಗೆ ವಿಧಿಸುವ ವೃತ್ತಿತೆರಿಗೆ ಮಿತಿಯನ್ನು ಹೆಚ್ಚಿಸುವುದಾಗಿ ಹೇಳಿದ್ದಾರೆ.

 

ಜಿಎಸ್‍ಟಿ ಜಾರಿಯ ನಂತರವೂ 2018-19ನೇ ಸಾಲಿಗೆ ವಾಣಿಜ್ಯ ತೆರಿಗೆ ಇಲಾಖೆಯ ರಾಜಸ್ವ ತೆರಿಗೆ ಸಂಗ್ರಹಣೆ ಗುರಿಯನ್ನು 65,800 ಕೋಟಿ ಗೆ ನಿಗದಿ ಮಾಡಲಾಗಿದೆ

ಕಳೆದ ವರ್ಷ  55 ಸಾವಿರ ಕೋಟಿ ರೂ.ಗಳ ತೆರಿಗೆ ಸಂಗ್ರಹದ ಗುರಿ ನಿಗದಿಪಡಿಸಲಾಗಿತ್ತು.  ವರ್ಷದ ಮಧ್ಯಭಾಗ ಜುಲೈ 1ರಿಂದ ಜಿಎಸ್‍ಟಿ ಜಾರಿಯಾಗಿದೆ. ಪೆಟ್ರೋಲ್ ಮತ್ತು ಡಿಸೆಲನ್ನು ಜಿಎಸ್‍ಟಿಯಿಂದ ಹೊರಗಿಡಲಾಗಿದೆ. ಪ್ರತಿ ಲೀಟರ್ ಪೆಟ್ರೋಲ್‍ಗೆ 3.21ರೂ., ಡಿಸೆಲ್‍ನಿಂದ  2.68ರೂ.ಗಳು ತೆರಿಗೆ ಸಂಗ್ರಹವನ್ನು ಕಡಿಮೆಗೊಳಿಸಲಾಗಿದೆ.  ಈ ತೆರಿಗೆ ರಿಯಾಯ್ತಿಯ ಸೌಲಭ್ಯವನ್ನು ಗ್ರಾಹಕರಿಗೆ ವರ್ಗಾಯಿಸಲಾಗಿದೆ. ಆಗಿದ್ದರೂ ಡಿಸೆಲ್ ಮತ್ತು ಪೆಟ್ರೋಲ್ ಮಾರಾಟದಿಂದ ಸಂಗ್ರಹವಾಗಬೇಕಿದ್ದ  2200ಕೋಟಿ ಗುರಿಯನ್ನು ಮೀರಿ ಸರ್ಕಾರಕ್ಕೆ ಆದಾಯ ಸಂಗ್ರಹಣೆಯಾಗುವ ನಿರೀಕ್ಷೆ ಇದೆ ಎಂದು ಸಿದ್ದರಾಮಯ್ಯ ತಮ್ಮ ಬಜೆಟ್‍ನಲ್ಲಿ ತಿಳಿಸಿದ್ದಾರೆ.

 

ಜಿಎಸ್‍ಟಿಯಲ್ಲಿ ಗುಣಾತ್ಮಕ ಬದಲಾವಣೆ ಹಾಗೂ ಸಂಗ್ರಹಣೆಯನ್ನು ಸುಗಮವಾಗಿಸಲು ದೇಶದಲ್ಲೇ ಪ್ರಥಮಬಾರಿ ಇ-ವೇ ಬಿಲ್ಲನ್ನು  ಜಾರಿ ಮಾಡಲಾಗುತ್ತಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಮ್ಮ ಬಜೆಟ್ ಭಾಷಣದಲ್ಲಿ ಹೇಳಿದ್ದಾರೆ

ಜಿಎಸ್‍ಟಿ ಜಾರಿಯ ಆರಂಭದಲ್ಲಿ ದತ್ತಾಂಶದ ವ್ಯವಸ್ಥಿತ ವಿಶ್ಲೇಷಣೆ ಹಾಗೂ ಸಂಗ್ರಹಣೆ ಸಾಧ್ಯವಾಗಲಿಲ್ಲ. ಇದಕ್ಕಾಗಿ ಇ-ವೇ ಬಿಲ್ಲನ್ನು ರಾಷ್ಟ್ರದಲ್ಲೇ ಮೊದಲ ಬಾರಿಗೆ ಜಾರಿಗೊಳಿಸಲಾಗಿದೆ. ಇದರಿಂದ ಮುಂದಿನ ದಿನಗಳಲ್ಲಿ ಜಿಎಸ್‍ಟಿ ಸುಧಾರಣೆಗೆ ಅನುಕೂಲವಾಗಲಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.

2017ರ ಜುಲೈ 1ರಿಂದ ಜಿಎಸ್‍ಟಿ ಜಾರಿಯಾಗಿದ್ದು, ಭಾರತದಲ್ಲಿ ತೆರಿಗೆ ಪದ್ದತಿ ಸುಧಾರಣೆಗೆ ಮಹತ್ವದ ಮೈಲಿಗಲ್ಲು ಎಂದು ಹೇಳಲಾಗಿದೆ. ತಂತ್ರಾಂಶದ ತಾಂತ್ರಿಕ ತೊಡಕುಗಳಿಂದಾಗಿ ಜಿಎಸ್‍ಟಿ ಜಾರಿಯಲ್ಲಿ ಅನೇಕ ಸವಾಲುಗಳನ್ನು ವಾಣಿಜ್ಯೋದ್ಯಮಗಳು ಎದುರಿಸಬೇಕಾಗಿದೆ. ಇದನ್ನು ಮುಂದಿನ ದಿನಗಳಲ್ಲಿ ನಿವಾರಿಸಲು  ಸಚಿವರ ತಂಡವನ್ನು ರಚಿಸಲಾಗಿದೆ.

ಮಧ್ಯಮಾವಧಿ ವಿತ್ತೀಯ ಯೋಜನೆ 2015-19ರಲ್ಲಿ ಅಂದಾಜಿಸಿದಂತೆ ಜಿಎಸ್‍ಟಿಯಿಂದಾಗುವ ನಷ್ಟವನ್ನು ಭರಿಸುವುದಾಗಿ ಕೇಂದ್ರ ಸರ್ಕಾರದ ಕಾಯ್ದೆಯಲ್ಲಿ ಭರವಸೆ ನೀಡಲಾಗಿದೆ. ಹಾಗಾಗಿ ನಮ್ಮ ಸರ್ಕಾರದ ಆರ್ಥಿಕತೆ ನಿಶ್ಚಿಂತತೆಯಿಂದ ಇದೆ ಎಂದು ಹೇಳಿದ್ದಾರೆ.

 

ರಾಜ್ಯದಲ್ಲಿರುವ ಎಲ್ಲಾ ವಿದ್ಯಾರ್ಥಿಗಳಿಗೂ ವರ್ಷದಿಂದ ಉಚಿತ ಬಸ್ ಪಾಸ್ ನೀಡುವುದಾಗಿ ಘೋಷಿಸಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಶಿಕ್ಷಣಕ್ಕೆ ನೀಡುವ ಸೌಲಭ್ಯದಲ್ಲಿ ಮತ್ತೊಂದು ಹೆಜ್ಜೆ ಮುಂದಿಟ್ಟಿದ್ದಾರೆ

ದೂರದ ಶಾಲಾ-ಕಾಲೇಜುಗಳಿಗೆ ಪ್ರಯಾಣಿಸುವ ವಿದ್ಯಾರ್ಥಿಗಳಿಗೆ ಸಾರಿಗೆ ವೆಚ್ಚ ಭರಿಸಲು ತೊಡಕಾಗಬಾರದು ಎಂಬ ಕಾರಣದಿಂದ ಈಗ ನೀಡುತ್ತಿರುವ ರಿಯಾಯ್ತಿ ಬಸ್ ಪಾಸ್‍ಗಳ ಬದಲಾಗಿ 2018-19ನೇ ಸಾಲಿನಿಂದ ಸಂಪೂರ್ಣ ಉಚಿತ ಬಸ್ ಪಾಸ್‍ಗಳನ್ನು ನೀಡಲಾಗುವುದು. ಸುಮಾರು 19.60 ಲಕ್ಷ ವಿದ್ಯಾರ್ಥಿಗಳು  ಇದರ ಪ್ರಯೋಜನ ಪಡೆಯಲಿದ್ದಾರೆ ಎಂದು ತಮ್ಮ ಬಜೆಟ್ ಭಾಷಣದಲ್ಲಿ ಸಿಎಂ ಹೇಳಿದ್ದಾರೆ.

ಧಾರವಾಡ, ಬೆಂಗಳೂರಿನಲ್ಲಿರುವ  ಭಾರೀ ವಾಹನಗಳ ಚಾಲಕರ ತರಬೇತಿ ಸಂಸ್ಥೆಗಳಲ್ಲಿ ನೂರು ಮಹಿಳೆಯರಿಗೆ, 200 ಪರಿಶಿಷ್ಟ ಜಾತಿ, ಪಂಗಡದವರಿಗೆ ಮತ್ತು ಬೆಂಗಳೂರು ಮಹಾನಗರ ಸಂಸ್ಥೆಯಲ್ಲಿರುವ ತರಬೇತಿ ಶಾಲೆಯಲ್ಲಿ ಸಾವಿರ ಮಹಿಳಾ ಅಭ್ಯರ್ಥಿಗಳಿಗೆ ಲಘು ಮೋಟಾರ್ ವಾಹನ ತರಬೇತಿ ನೀಡಲಾಗುವುದು.

ದೇಶದಲ್ಲೇ ಪ್ರಥಮಬಾರಿಗೆ ನಗರಗಳ ಸಂಚಾರಕ್ಕೆ ಕೆಎಸ್‍ಆರ್‍ಟಿಸಿಯಿಂದ 10 ಡಬ್ಬಲ್‍ಡಕ್ಕರ್ ಬಸ್‍ಗಳನ್ನು ಖರೀದಿಸಿ ನೀಡಲಾಗುವುದು. 30 ಬಸ್ ನಿಲ್ದಾಣ, 8 ಬಸ್ ಘಟಕಗಳು, 325 ಬಸ್ ತಂಗುದಾಣಗಳನ್ನು ಮೇಲ್ದರ್ಜೆಗೇರಿಸಲಾಗುವುದು.

ಸುಮಾರು 13 ಸಾವಿರ ಯುವಜನರಿಗೆ ಚಾಲನೆ ಮತ್ತು ಮ್ಯಾಕಾನಿಕಲ್ ತರಬೇತಿ ನೀಡುವ ಮೂಲಕ ಕೌಶಲ್ಯ ಹಾಗೂ ಸಾಮಥ್ರ್ಯವನ್ನು ಹೆಚ್ಚಿಸಲಾಗುವುದು. ನಿರ್ಭಯ ಯೋಜನೆಯಡಿ ಬಿಎಂಟಿಸಿ ಸಾವಿರ ಬಸ್‍ಗಳಿಗೆ ಸಿಸಿ ಕ್ಯಾಮೆರಾ ಅಳವಡಿಸಲಾಗುವುದು.

ಬೆಂಗಳೂರು ವಿಮಾನ ನಿಲ್ದಾಣದಿಂದ ಎರಡು ಸ್ಥಳಗಳಿಗಷ್ಟೇ ಇರುವ ಫ್ಲೈಬಸ್‍ಗಳ ಸೇವೆಯನ್ನು ಇನ್ನೂ 7 ಸ್ಥಳಗಳಿಗೆ ವಿಸ್ತರಿಸಲಾಗುವುದು. ಭಾರೀ ಚಾಲನಾ ತರಬೇತಿ ಪಡೆದ 200 ಮಂದಿ ಎಸ್ಸಿ-ಎಸ್ಟಿ ಅಭ್ಯರ್ಥಿಗಳಿಗೆ  ಸರಕು ಸಾಗಾಣಿಕೆ ವಾಹನ ಖರೀದಿಸಲು ಕರ್ನಾಟಕ ಹಣಕಾಸು ನಿಗಮ ಹಾಗೂ  ದೇವರಾಜು ಅರಸು ಟ್ರಕ್ ಟರ್ಮಿನಲ್ ನಿಗಮದಿಂದ ಶೂನ್ಯ ಬಡ್ಡಿ ದರದಲ್ಲಿ 15 ಲಕ್ಷ  ಸಾಲ ಕೊಡಿಸಲಾಗುವುದು. ಇದರ  ಸಹಾಯಧನಕ್ಕಾಗಿ ಎರಡೂವರೆ ಕೋಟಿಯನ್ನು ಈ ಬಜೆಟ್‍ನಲ್ಲಿ ಮೀಸಲಿಡಲಾಗಿದೆ.

ದೇವರಾಜು ಅರಸು ಟ್ರಕ್ ಟರ್ಮಿನಲ್ ಮುಖಾಂತರ ಸಾರ್ವಜನಿಕ ಸಹಭಾಗಿತ್ವದಲ್ಲಿ ಮೈಸೂರಿನ ನಂಜನಗೂಡು ವರ್ತುಲ ರಸ್ತೆಯಲ್ಲಿ 6.5 ಎಕರೆ ಪ್ರದೇಶದಲ್ಲಿ 45 ಕೋಟಿ ವೆಚ್ಚದ ಎರಡನೇ ಹಂತದ ಟ್ರಕ್ ಟರ್ಮಿನಲ್ ನಿರ್ಮಿಸಲಾಗುವುದು.

ಧಾರವಾಡದ ಅಂಚಟಗೇರಿ ಗ್ರಾಮದ 56.13 ಎಕರೆಯಲ್ಲಿ 110 ಕೋಟಿ ವೆಚ್ಚ ಮಾಡಿ ಟರ್ಮಿನಲ್ ಲಾಜೆಸ್ಟಿಕ್ ಪಾರ್ಕ್ ವೇರ್ ಹೌಸ್ ನಿರ್ಮಿಸಲಾಗುವುದು. ಯಶವಂತ ಟ್ರಕ್ ಟರ್ಮಿನಲ್‍ನಲ್ಲಿ 40 ಕೋಟಿ ವೆಚ್ಚದ ಮಲ್ಟಿಲೆವಲ್ ಕಟ್ಟಡ ನಿರ್ಮಾಣ ಮತ್ತು ಮೂಲ ಸೌಲಭ್ಯ ಉನ್ನತ್ತೀಕರಣ ಮಾಡಲಾಗುವುದು.

ಚಿತ್ರದುರ್ಗದಲ್ಲಿ 14 ಎಕರೆ ಪ್ರದೇಶದಲ್ಲಿ 35 ಕೋಟಿ ವೆಚ್ಚ ಮಾಡಿ ಟ್ರಕ್ ಟರ್ಮಿನಲ್ ಮತ್ತು ಹೈವೇ ಹೆದ್ದಾರಿ ಸೌಲಭ್ಯ ಕೇಂದ್ರ ನಿರ್ಮಿಸಲಾಗುವುದು. ಒಟ್ಟಾರೆ ಸಾರಿಗೆ ಇಲಾಖೆಗೆ 2208ಕೋಟಿ ಅನುದಾನ ಒದಗಿಸಲಾಗಿದೆ ಎಂದು ಸಿದ್ದರಾಮಯ್ಯ ಹೇಳಿದರು.

 

ಪೊಲೀಸ್ ನೇಮಕಾತಿಗಳನ್ನು ನಡೆಸಲು ಶಾಶ್ವತವಾದ ಪೊಲೀಸ್ ಸೇವೆಗಳ ನೇಮಕಾತಿ ಮಂಡಳಿಯನ್ನು ಸ್ಥಾಪಿಸುವುದು ಹಾಗೂ ಐದು ಕೋಟಿ ರೂ. ವೆಚ್ಚದಲ್ಲಿ ಸೈಬರ್ ಫೊರೆನ್ಸಿಕ್ ಪ್ರಯೋಗಾಲಯಗಳನ್ನು ಸ್ಥಾಪಿಸುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ತಮ್ಮ ಬಜೆಟ್‍ನಲ್ಲಿ ಘೋಷಿಸಿದ್ದಾರೆ

ರಾಜ್ಯದ ಎಲ್ಲಾ ಪೊಲೀಸ್ ಕಮಿಷನರೇಟ್‍ಗಳಲ್ಲಿ ನಿರ್ಭಯ ಕೇಂದ್ರಗಳನ್ನು ಸ್ಥಾಪಿಸುವುದು ಮತ್ತು ಪೊಲೀಸ್ ಇಲಾಖೆಯಲ್ಲಿ ಮಹಿಳಾ ಪ್ರಾತಿನಿಧ್ಯವನ್ನು ಶೇ.25ಕ್ಕೆ ಹೆಚ್ಚಿಸುವುದಾಗಿಯೂ ಹೇಳಿರುವ ಅವರು, ರಾಜ್ಯದಲ್ಲಿರುವ ಪೊಲೀಸ್ ತರಬೇತಿ ಶಾಲೆಗಳ ಸಾಮಥ್ರ್ಯವನ್ನು 50 ಕೋಟಿ ರೂ. ವೆಚ್ಚದಲ್ಲಿ ಅಭಿವೃದ್ಧಿಪಡಿಸಿ 3200 ಮಂದಿ ತರಬೇತಿ ಸಾಮಥ್ರ್ಯ ಇರುವ 5ಸಾವಿರ ಮಂದಿಗೆ ಹೆಚ್ಚಿಸಲು ಕ್ರಮ ಕೈಗೊಳ್ಳಲಾಗಿದೆ.

ಪೊಲೀಸರ ಸಾಹಸ, ಶೌರ್ಯಗಳನ್ನು ಗೌರವಿಸಲು ಬೆಂಗಳೂರಿನಲ್ಲಿ 5 ಕೋಟಿ ರೂ. ವೆಚ್ಚದಲ್ಲಿ ಶಾಶ್ವತ ಪೊಲೀಸ್ ಸ್ಮಾರಕವನ್ನು ನಿರ್ಮಿಸಲಾಗಿದೆ. ಸೈಬರ್ ಅಪರಾಧಗಳನ್ನು  ಪರಿಣಾಮಕಾರಿಯಾಗಿ ತನಿಖೆ ಮಾಡಲು ಮತ್ತು ನಿಯಂತ್ರಿಸಲು ಐದು ಕೋಟಿ ವೆಚ್ಚದಲ್ಲಿ ಸೈಬರ್ ಫೊರೆನ್ಸಿಕ್ ಪ್ರಯೋಗಾಲಯವನ್ನು ಸ್ಥಾಪಿಸಲಾಗುವುದು.

ಪೊಲೀಸ್ ವ್ಯವಸ್ಥೆ ಇನ್ನಷ್ಟು ನಾಗರಿಕ ಸ್ನೇಹಿ ಆಗಲು ಸಾಫ್ಟ್‍ವೇರ್‍ಗಳನ್ನು ಅಳವಡಿಸಲಾಗುವುದು. ರಾಜ್ಯದ ಎಲ್ಲಾ ಪೊಲೀಸ್ ಠಾಣೆಗಳಿಗೂ ಬ್ರಾಡ್‍ಬ್ಯಾಂಡ್ ಒದಗಿಸಲಾಗುವುದು. ಜಿಲ್ಲಾ ಮಹಿಳಾ ಪೊಲೀಸ್ ಠಾಣೆಗಳನ್ನು ಒನ್ ಸ್ಟಾಪ್ ಸರ್ವೀಸ್ ಸೆಂಟರ್‍ಗಳನ್ನಾಗಿ ಅಭಿವೃದ್ಧಿಪಡಿಸಲಾಗುವುದು. ಎಲ್ಲಾ ಪೊಲೀಸ್ ಠಾಣೆ ಹಾಗೂ ಕಚೇರಿಗಳಲ್ಲಿ ಮಹಿಳೆಯರಿಗೆ ಶೌಚಾಲಯಗಳನ್ನು ನಿರ್ಮಿಸಲಾಗುವುದು.

ಬಾಕಿ ಉಳಿದಿರುವ ವಿಚಾರಣೆಗಳನ್ನು ತ್ವರಿತವಾಗಿ ಪೂರ್ಣಗೊಳಿಸಲು ಜಿಲ್ಲಾ ಕಾರಾಗೃಹಗಳು ಮತ್ತು ನ್ಯಾಯಾಲಯಗಳಿಗೆ ವೀಡಿಯೋ ಲಿಂಕಿಂಗ್ ವ್ಯವಸ್ಥೆ ಕಲ್ಪಿಸಲಾಗುವುದು. ಮಂಗಳೂರಿನಲ್ಲಿ 85 ಕೋಟಿ ವೆಚ್ಚದ ಅತ್ಯುನ್ನತ ಭದ್ರತಾ ವ್ಯವಸ್ಥೆಯ ಕಾರಾಗೃಹ ನಿರ್ಮಿಸಲಾಗುವುದು. ಕೈದಿಗಳಿಗೆ ಕೌಶಲ್ಯ ತರಬೇತಿ ನೀಡಿ ಪುನರ್‍ವಸತಿಗೆ ನೆರವಾಗಲು ಕಾರಾಗೃಹ ಅಭಿವೃದ್ಧಿ ಮಂಡಳಿ ಸ್ಥಾಪಿಸಲಾಗುವುದು. ಬೆಂಗಳೂರು ಕೇಂದ್ರ ಕಾರಾಗೃಹದಲ್ಲಿ ಅತ್ಯುನ್ನತ ಭದ್ರತಾ ವಿಭಾಗವನ್ನು ಸ್ಥಾಪಿಸಲು 100 ಕೋಟಿ ಖರ್ಚು ಮಾಡಲಾಗುವುದು.

ಈಗಾಗಲೇ 213 ಅಗ್ನಿ ಶಾಮಕ ಠಾಣೆ ಸ್ಥಾಪಿಸುವ ಮೂಲಕ 176 ತಾಲ್ಲೂಕುಗಳ ಪೈಕಿ 174 ತಾಲ್ಲೂಕುಗಳಲ್ಲಿ ಅಗ್ನಿ ಸುರಕ್ಷತೆ ವ್ಯವಸ್ಥೆ ಮಾಡಲಾಗಿದೆ. ಹೊಸ 50 ತಾಲ್ಲೂಕುಗಳಿಗೂ ಕೆಎಸ್‍ಎಎಫ್‍ಇ ಎರಡನೇ ಹಂತದ ಯೋಜನೆಯಲ್ಲಿ ಮುಂದಿನ ಐದು ವರ್ಷದಲ್ಲಿ ಅಗ್ನಿಶಾಮಕ ಠಾಣೆಗಳನ್ನು ಸ್ಥಾಪಿಸಲಾಗುತ್ತದೆ.

ನಿವೃತ್ತಿಯ ನಂತರ ಪುನರ್ ವಸತಿ ಒದಗಿಸುವ ಸಲುವಾಗಿ ರಾಜ್ಯದ ಮಾಜಿ ಸೈನಿಕರ ದತ್ತಾಂಶವನ್ನು ಸಿದ್ದಪಡಿಸಿ ಕೌಶಲ್ಯಾಭಿವೃದ್ಧಿ ಇಲಾಖೆಗೆ ಜೋಡಣೆ ಮಾಡಲಾಗುವುದು ಎಂದು ಹೇಳಿರುವ ಸಿಎಂ, ಕಳೆದ ಐದು ವರ್ಷಗಳಲ್ಲಿ ಹೊಸದಾಗಿ ಆದ ನೇಮಕಾತಿಗಳು, ವಸತಿ ಗೃಹ ನಿರ್ಮಾಣ ಸೇರಿದಂತೆ ತಮ್ಮ ಸರ್ಕಾರದ ಸಾಧನೆಗಳನ್ನು  ವಿವರಿಸಿದ್ದಾರೆ. ಈ ಸಾಲಿನಲ್ಲಿ ಗೃಹ ಇಲಾಖೆಗೆ 6647ಕೋಟಿ ರೂ.ಗಳನ್ನು ಒದಗಿಸಿದ್ದಾರೆ.

 

ವೃತ್ತಿ ನಿರ್ವಹಣೆ ವೇಳೆ ಅಪಘಾತ ಅಥವಾ ಅವಘಡಗಳಿಗೆ ಒಳಗಾಗಿ ನಿಧನರಾಗುವ ಪತ್ರಕರ್ತರ ಕುಟುಂಬಗಳಿಗೆ 5 ಲಕ್ಷ ವರೆಗಿನ ಜೀವ ವಿಮೆ ಖಾತರಿ ನೀಡುವ ಮಾಧ್ಯಮ ಸಂಜೀವಿನಿ ಎಂಬ ಹೊಸ ಯೋಜನೆಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಘೋಷಿಸಿದ್ದಾರೆ

ತಮ್ಮ ಬಜೆಟ್ ಭಾಷಣದಲ್ಲಿ ರಾಜೀವ್ ಆರೋಗ್ಯ ಯೋಜನೆಯನ್ನು ಮತ್ತಷ್ಟು ಬಲವರ್ಧನೆಗೊಳಿಸುವ ಮೂಲಕ ಪತ್ರಕರ್ತರ ಆರೋಗ್ಯ ಸೌಲಭ್ಯವನ್ನು ವಿಸ್ತರಿಸಲಾಗುವುದು. ಡಾ.ರಾಜ್‍ಕುಮಾರ್ ಪುಣ್ಯಭೂಮಿ ಆವರಣದಲ್ಲಿ ಸುಸಜ್ಜಿತವಾದ ಯೋಗ ಕೇಂದ್ರ ಸ್ಥಾಪಿಸಲಾಗುವುದು. ಪತ್ರಿಕೆಗಳನ್ನು ಮನೆ ಮನೆಗಳಿಗೆ ಹಂಚಿ ಅನಿಶ್ಚಿತ ಬದುಕು ಸಾಗಿಸುವ ಸಿಬ್ಬಂದಿಗಳ ಕ್ಷೇಮಾಭಿವೃದ್ಧಿಗೆ 2 ಕೋಟಿ ರೂ.ಗಳ ಕ್ಷೇಮ ನಿಧಿ ಸ್ಥಾಪಿಸಲಾಗುವುದು. ಬೆಂಗಳೂರಿನಲ್ಲಿ 5ಕೋಟಿ ರೂ.ಗಳ ವೆಚ್ಚದಲ್ಲಿ ಪತ್ರಕರ್ತರ ಭವನ ನಿರ್ಮಿಸಲಾಗುವುದು ಎಂದು ತಿಳಿಸಿದ್ದಾರೆ.

ಕರ್ನಾಟಕ ಚಲನಚಿತ್ರ ಅಕಾಡೆಮಿಯ ಜೇನುಗೂಡು ಕಥಾ ಕಣಜದಿಂದ ಕಥೆಗಳನ್ನು ಆಯ್ದುಕೊಂಡು ಚಿತ್ರ ನಿರ್ಮಿಸುವ ನಿರ್ಮಾಪಕರಿಗೆ 20 ಲಕ್ಷ ಸಹಾಯಧನ ಮತ್ತು ಕಥಾ ಲೇಖಕರಿಗೆ 5 ಲಕ್ಷ ವಿಶೇಷ ಸಹಾಯಧನವನ್ನು ಪ್ರತಿ ವರ್ಷ 8 ಚಿತ್ರಗಳಿಗೆ ನೀಡಲಾಗುವುದು ಎಂದು ಹೇಳಿರುವ ಅವರು, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಗೆ 239 ಕೋಟಿ ರೂ.ಗಳ ಅನುದಾನವನ್ನು  ಒದಗಿಸಿದ್ದಾರೆ.

ಕಳೆದ 5 ವರ್ಷದಲ್ಲಿ ಪತ್ರಕರ್ತರ ಮಾಸಾಶನವನ್ನು 3ರಿಂದ 10 ಸಾವಿರ ರೂ.ಗೆ ಹೆಚ್ಚಿಸಲಾಗಿದೆ. ಮೃತ ಪತ್ರಕರ್ತರ ಕುಟುಂಬದ ಮಾಸಶನವನ್ನು 1ರಿಂದ 3 ಸಾವಿರ ರೂ.ಗೆ ಹೆಚ್ಚಿಸಲಾಗಿದೆ. ರಾಜೀವ್  ಆರೋಗ್ಯ ವಿಮಾ ಯೋಜನೆಯನ್ನು ಜಾರಿಗೆ ತರಲಾಗಿದೆ. ಜಿಲ್ಲಾ ಮಟ್ಟದ ಪತ್ರಕರ್ತರಿಗೆ ಉಚಿತ ಬಸ್‍ಪಾಸ್ ಒದಗಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.

 

ಸರಕುಸಾಗಣಿಕೆ ಮತ್ತು ಪ್ರಯಾಣಿಕರ ಸಾರಿಗೆಯನ್ನು ಹೆಚ್ಚು ಸಮರ್ಪಕವಾಗಿಸಲು ಮತ್ತು ರಸ್ತೆ ಸಾಂದ್ರತೆಯನ್ನು ಕಡಿಮೆಗೊಳಿಸಲು ರೋಲ್ ಆನ್ ಮತ್ತು ರೋಲ್ ಆಫ್ ಮಾದರಿಯನ್ನು ಜಾರಿಗೆ ತರಲಾಗುತ್ತಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ

ಬಜೆಟ್ ಭಾಷಣದಲ್ಲಿ ಮೂಲಸೌಕರ್ಯ ಅಭಿವೃದ್ಧಿಗೆ 601 ಕೋಟಿ ರೂ.ಗಳನ್ನು ಮೀಸಲಿಟ್ಟಿರುವುದಾಗಿ ಹೇಳಿರುವ ಅವರು, ಯಾವುದೇ ಹೊಸ ಯೋಜನೆಗಳನ್ನು ಘೋಷಿಸದೆ ಹಳೆಯ ಸಾಧನೆಗಳನ್ನೇ ಹೆಚ್ಚು ವೈಭವೀಕರಿಸಿದ್ದಾರೆ.

ಮಲ್ಟಿಮಾಡೆಲ್ ಲಾಜೆಸ್ಟಿಕ್ ಪಾರ್ಕ್ ಹಾಗೂ ಸಮುದ್ರ, ವಿಮಾನ ಸೇವೆಯನ್ನು ಸಾರ್ವಜನಿಕ ಖಾಸಗಿ ಸಹಭಾಗಿತ್ವದಲ್ಲಿ ಅನುಷ್ಠಾನಗೊಳಿಸುವ ಕುರಿತು ಕಾರ್ಯಸಾಧ್ಯತಾ ಅಧ್ಯಯನವನ್ನು ಕೈಗೊಳ್ಳುವುದಾಗಿ ಹೇಳಿದ್ದಾರೆ.

ಕೋಲಾರದಲ್ಲಿ 1461 ಕೊಟಿ ರೂ. ವೆಚ್ಚದ ರೈಲ್ವೆ ಕೋಚ್ ಪ್ಯಾಕ್ಟರಿ ಸ್ಥಾಪಿಸಲು 2014ರಲ್ಲಿ ಮಾಡಿಕೊಂಡಿರುವ ಒಪ್ಪಂದದಂತೆ ಶೇ.50ರಷ್ಟು ವೆಚ್ಚವನ್ನು ರಾಜ್ಯ ಸರ್ಕಾರ ಭರಿಸಲಿದ್ದು, ಉಚಿತವಾಗಿ ಭೂಮಿಯನ್ನೂ ನೀಡಲಿದೆ. ಈ ವರ್ಷ ಯೋಜನೆಯನ್ನು ಆರಂಭಿಸುವಂತೆ  ರೈಲ್ವೆ ಮಂತ್ರಾಲಯಕ್ಕೆ ಮನವಿ ಮಾಡಿಕೊಳ್ಳಲಾಗಿದೆ ಎಂದು ತಿಳಿಸಿದ್ದಾರೆ.

ಈಗ ಜಾರಿಯಲ್ಲಿರುವ ಮೂಲಸೌಲಭ್ಯ ನೀತಿಯು ಸಾರ್ವಜನಿಕ ಖಾಸಗಿ ಸಹಭಾಗಿತ್ವ ಯೋಜನೆಗಳಿಗೆ ಮಾತ್ರ ಸೀಮಿತವಾಗಿದೆ. ಕೈಗಾರಿಕೆ, ಸಾಮಾಜಿಕ ಹಾಗೂ ಆರ್ಥಿಕ ವಲಯಗಳ ಬೆಳವಣಿಗೆಗಳನ್ನು ಪರಿಗಣಿಸಿ ಮೂಲಸೌಲಭ್ಯ ಅಭಿವೃದ್ಧಿ ಯೋಜನೆಗಳನ್ನು ವಿಶೇಷ ವಾಹಕ ಸಂಸ್ಥೆ, ಜಂಟಿ ವಲಯ ಕಂಪೆನಿ ಇತ್ಯಾದಿಗಳ ಮೂಲಕ ಅನುಷ್ಠಾನಗೊಳಿಸುವ ಸಾಧ್ಯತೆಗಳನ್ನು ಅಳವಡಿಸಿ ಹೊಸ ಮೂಲ ಸೌಲಭ್ಯ ನೀತಿಯನ್ನು ರೂಪಿಸುವುದಾಗಿ ಸಿದ್ದರಾಮಯ್ಯ ಪ್ರಕಟಿಸಿದ್ದಾರೆ.

ಕಳೆದ ಐದು ವರ್ಷದಲ್ಲಿ ಯಾದಗಿರಿ ರೈಲ್ವೆ ಕೋಚ್ ಕಾರ್ಖಾನೆ ಪೂರ್ಣಗೊಳಿಸಲಾಗಿದೆ. ಬೆಂಗಳೂರು, ಬೀದರ್, ಕಲಬುರ್ಗಿ ರೈಲ್ವೆ ಮಾರ್ಗಗಳನ್ನು ಪೂರ್ಣಗೊಳಿಸಲಾಗಿದೆ.  8ರಸ್ತೆ ಮೇಲ್ಸೇತುವೆ ಮತ್ತು ಕೆಳಸೇತುವೆ ಕಾಮಗಾರಿಗಳನ್ನು ಪೂರ್ಣಗೊಳಿಸಲಾಗಿದೆ.

ಬೆಳಗಾವಿ, ಹುಬ್ಬಳ್ಳಿ ವಿಮಾನ ನಿಲ್ದಾಣ ವಿಸ್ತರಣಾ ಕಾಮಗಾರಿ ಪೂರ್ಣಗೊಳಿಸಿ ಕಾರ್ಯ ಆರಂಭಿಸಲಾಗಿದೆ. ಕಲಬುರ್ಗಿ ವಿಮಾನ ನಿಲ್ದಾಣ ಕಾಮಗಾರಿ ಲೋಕೋಪಯೋಗಿ ಇಲಾಖೆಯಿಂದ ನಡೆಯುತ್ತಿದ್ದು, ಶೀಘ್ರ ಪೂರ್ಣಗೊಳಿಸಲಾಗುವುದು. ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ 2ನೇ ರನ್‍ವೇ ವಿಸ್ತರಣಾ ಕಾಮಗಾರಿ ಪ್ರಗತಿಯಲ್ಲಿದೆ.

ಕೊಡಗು, ಚಿಕ್ಕಮಗಳೂರು, ಉತ್ತರ ಕನ್ನಡ ಜಿಲ್ಲೆಗಳ ಕಿರು ವಿಮಾನ ನಿಲ್ದಾಣ ಹಾಗೂ ಕಾರವಾರ, ಕೊಡಗು, ಬಾಗಲಕೋಟೆ, ವಿಜಯಪುರಗಳಲ್ಲಿ ಹೆಲಿಪ್ಯಾಡ್ ಮತ್ತು ಹೆಲಿ ಸೇವೆಗಳನ್ನು ಅಭಿವೃದ್ಧಿಪಡಿಸಲು ಅನುಮೋದಿಸಲಾಗಿದೆ.

ಮೈಸೂರು-ಚನ್ನೈ, ಬಳ್ಳಾರಿ-ಹೈದರಾಬಾದ್ ವಿಮಾನ ಸೇವೆಗಳನ್ನು ಪ್ರಾರಂಭಿಸಲಾಗಿದೆ. ಪ್ರಾದೇಶಿಕ ಸಂಪರ್ಕ ಯೋಜನೆಯ ಎರಡನೇ ಸುತ್ತಿನ ಬಿಡ್ಡಿಂಗ್‍ನಲ್ಲಿ ಹುಬ್ಬಳ್ಳಿ ಮತ್ತು ಕೊಪ್ಪಳದ ಬಾಲ್ದೋಟಾ ವಿಮಾನ ನಿಲ್ದಾಣಗಳು ಆಯ್ಕೆಯಾಗಿವೆ.

ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಸಮೀಪ 407 ಎಕರೆ ಜಮೀನಿನಲ್ಲಿ 935 ಕೊಟಿ ಖರ್ಚು ಮಾಡಿ ಬೆಂಗಳೂರು ಸಿಗ್ನೇಚರ್ ಬ್ಯುಸಿನೆಸ್ ಪಾರ್ಕ್ ಅಭಿವೃದ್ಧಿಪಡಿಸಲಾಗುತ್ತಿದೆ. ಬೆಂಗಳೂರು ಅಂತಾರಾಷ್ಟ್ರೀಯ ಕನ್ವೆಷನ್ ಸೆಂಟರನ್ನು ಮಂಜೂರು ಮಾಡಲಾಗಿದೆ ಎಂದು ಸಿದ್ದರಾಮಯ್ಯ ಹೇಳಿದರು.

 

ರಾಜ್ಯದ ಪ್ರವಾಸಿ ತಾಣಗಳನ್ನು ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ  ಚಲನಚಿತ್ರಗಳಲ್ಲಿ  ಪ್ರದರ್ಶಿಸಿ ಪ್ರಸಿದ್ಧಗೊಳಿಸಲು ನೀತಿಯನ್ನು ಜಾರಿಗೊಳಿಸಲಾಗುತ್ತಿದೆ

ರಾಜ್ಯದ ಪ್ರವಾಸಿ ತಾಣಗಳನ್ನು ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ  ಚಲನಚಿತ್ರಗಳಲ್ಲಿ  ಪ್ರದರ್ಶಿಸಿ ಪ್ರಸಿದ್ಧಗೊಳಿಸಲು ಅನುಕೂಲವಾಗುವಂತೆ ಚಲನಚಿತ್ರ ಪ್ರವಾಸೋದ್ಯಮ ನೀತಿಯನ್ನು ಜಾರಿಗೊಳಿಸಲಾಗುತ್ತಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು

20 ಪರಂಪರಾ ತಾಣಗಳಲ್ಲಿ  ಸಮಗ್ರ ಸೌಲಭ್ಯಗಳನ್ನು ಅಭಿವೃದ್ಧಿಪಡಿಸಲು  ಕ್ರಮ ಕೈಗೊಳ್ಳಲಾಗಿದೆ. ಹಂಪಿ, ಬೇಲೂರು-ಹಳೇಬೀಡು, ಶ್ರವಣಬೆಳಗೊಳ, ನಂದಿಬೆಟ್ಟ, ಸನ್ನತ್ತಿ ಹಾಗೂ ಕಲಬುರಗಿ ಕೋಟೆಗಳಲ್ಲಿ ಅಭಿವೃದ್ಧಿ ಕಾಮಗಾರಿಗಳನ್ನು ಆರಂಭಿಸಲಾಗುತ್ತಿದೆ.

ದೆಹಲಿಯ ಹಾಟ್ ಮಾದರಿಯಲ್ಲಿ ಮೈಸೂರಿನಲ್ಲಿರುವ ಕರ್ನಾಟಕ ವಸ್ತು ಪ್ರದರ್ಶನ ಪ್ರಾಧಿಕಾರಕ್ಕೆ ಸೇರಿದ ಜಮೀನಿನಲ್ಲಿ ಮೈಸೂರು ಹಾಟ್‍ನ್ನು  ಅಭಿವೃದ್ಧಿ ಪಡಿಸಲಾಗುವುದು.

ರಾಜ್ಯದ ಪ್ರವಾಸಿ ತಾಣಗಳಿಗೆ ಭೇಟಿ ನೀಡುವ ದೇಶ-ವಿದೇಶಿ ಪ್ರವಾಸಿಗರ ಅಂಕಿಅಂಶಗಳನ್ನು ನಿಖರವಾಗಿ ಸಂಗ್ರಹಿಸಲಾಗುವುದು. ಕರಾವಳಿ ಪ್ರದೇಶದ ಆಯ್ದ ಸ್ಥಳಗಳಲ್ಲಿ ಹೌಸ್‍ಬೋರ್ಡ್ ಹಾಗೂ ತೇಲುವ ಉಪಹಾರ ಗೃಹಗಳ ಸೌಲಭ್ಯವನ್ನು ಒದಗಿಸಲಾಗುವುದು. ಪ್ರಾಚ್ಯ ವಸ್ತು ಇಲಾಖೆಯ ಅಧೀನದಲ್ಲಿರುವ ಸ್ಮಾರಕಗಳ ಸಂರಕ್ಷಣೆಯ ಜವಾಬ್ದಾರಿಯನ್ನು ಪ್ರವಾಸೋದ್ಯಮ ಇಲಾಖೆಗೆ ಹಸ್ತಾಂತರಿಸಲಾಗುವುದು ಎಂದು ಹೇಳಿದ ಅವರು, ಪ್ರವಾಸೋದ್ಯಮ ಇಲಾಖೆಗೆ ಒಟ್ಟು 459 ಕೋಟಿ ರೂ. ಅನುದಾನ ಒದಗಿಸಿದ್ದಾರೆ.

 

ಹದಿನೇಳು ಸಾವಿರ ಕೋಟಿ ರೂ. ಯೋಜನಾ ವೆಚ್ಚದ ಕೇಂದ್ರ ಸರ್ಕಾರದ ಬೆಂಗಳೂರು ಉಪನಗರ ರೈಲು ಯೋಜನೆಯನ್ನು ಅನುಷ್ಠಾನಗೊಳಿಸಲು ರೈಲ್ವೆ ಇಲಾಖೆಯೊಂದಿಗೆ ಕೈ ಜೋಡಿಸಲಾಗುವುದು ಎಂದು ಬಜೆಟ್‍ನಲ್ಲಿ ಭರವಸೆ ನೀಡಲಾಗಿದೆ

2013ರಿಂದ ಬೆಂಗಳೂರಿನಲ್ಲಿ ವಿಶ್ವದರ್ಜೆಯ ಉಪನಗರ ರೈಲು ಸಂಪರ್ಕ ಕಲ್ಪಿಸುವ ಕನಸನ್ನು ಸಾಕಾರಗೊಳಿಸುವಲ್ಲಿ ನಮ್ಮ ಸರ್ಕಾರ ಸತತವಾಗಿ ಕಾರ್ಯೋನ್ಮುಖವಾಗಿದೆ.

10,929 ಕೋಟಿ ರೂ.ಗಳ ಈ ಯೋಜನೆಯ ವಿಸ್ತೃತ ಯೋಜನಾ ವರದಿಯ ಕರಡುಪ್ರತಿಯನ್ನು 2016ರಲ್ಲಿ ರೈಲ್ವೆ ಮಂತ್ರಾಲಯಕ್ಕೆ ಸಲ್ಲಿಸಲಾಗಿದೆ.

ಕಳೆದ ವರ್ಷ ಕನ್ವೆನ್ಷನಲ್ ಕೋಚ್‍ಗಳನ್ನು ಮೆಮೂ ರೈಲುಗಳಿಗೆ ಪರಿವರ್ತಿಸುವ ಯೋಜನಾ ವೆಚ್ಚದ 180 ಕೋಟಿ ರೂ.ಗಳನ್ನು ನಮ್ಮ ಸರ್ಕಾರ ಒದಗಿಸಿದೆ.

ಒಟ್ಟಾರೆ, ಉಪನಗರ ರೈಲು ಯೋಜನೆಯನ್ನು ಸಾಕಾರಗೊಳಿಸಲು ಕೇಂದ್ರ ಸರ್ಕಾರಕ್ಕೆ ಎಲ್ಲ ಅಗತ್ಯ ಕ್ರಮ ಕೈಗೊಳ್ಳುವ ಭರವಸೆ ನೀಡಲಾಗಿದೆ.

ಸೈಕಲ್ ಹಂಚಿಕೆ ಯೋಜನೆಗಳು ಮತ್ತು ಪಾದಚಾರಿ ಪ್ರಯಾಣಗಳಿಗೆ ಹೆಚ್ಚಿನ ಉತ್ತೇಜನ ನೀಡುವ ಸಲುವಾಗಿ ಪಾದಚಾರಿ ಮಾರ್ಗ ಸುಧಾರಣೆ ಮತ್ತು ಸೈಕಲ್ ಪಥಗಳ ಮೂಲ ಸೌಕರ್ಯ ಅಭಿವೃದ್ಧಿಯನ್ನು ಟೈರ್-2 ನಗರಗಳ ಆದ್ಯತೆ ಪ್ರದೇಶಗಳಲ್ಲಿ 25 ಕೋಟಿ ರೂ. ವೆಚ್ಚದಲ್ಲಿ ಕೈಗೆತ್ತಿಕೊಳ್ಳಲಾಗುವುದು.

ಬೆಂಗಳೂರಿನಲ್ಲಿ ಮೈಸೂರು ಮಾದರಿಯಂತೆ ಸಾರ್ವಜನಿಕರ ಬೈಸಿಕಲ್ ವ್ಯವಸ್ಥೆಯನ್ನು ಬಿಬಿಎಂಪಿ ವ್ಯಾಪ್ತಿಯಲ್ಲಿ ಪರ್ಮಿಟ್ ಸಿಸ್ಟಂ ಮೂಲಕ ಬಹು ನಿರ್ವಾಹಕರಿಗೆ ಅನುಮತಿ ನೀಡಲು ಬಜೆಟ್‍ನಲ್ಲಿ ಪ್ರಸ್ತಾಪಿಸಲಾಗಿದೆ.

ಬೆಂಗಳೂರಿನ ಮುಖ್ಯ ಪ್ರದೇಶಗಳಲ್ಲಿ ಸುಧಾರಿತ ಮಾಹಿತಿ ಮತ್ತು ಸಂಚಾರ ನಿರ್ವಹಣಾ ವ್ಯವಸ್ಥೆ ಅನುಷ್ಠಾನಕ್ಕಾಗಿ ಜಪಾನ್ ಸರ್ಕಾರದೊಂದಿಗೆ ಒಡಂಬಡಿಕೆ ಮಾಡಿಕೊಳ್ಳಲಾಗಿದ್ದು, ಒಟ್ಟಾರೆ 2018-19ನೆ ಸಾಲಿನಲ್ಲಿ ನಗರಾಭಿವೃದ್ಧಿ ಇಲಾಖೆಗೆ 17,196 ಕೋಟಿ ರೂ.ಗಳನ್ನು ಒದಗಿಸಲಾಗುತ್ತಿದೆ.

 

ಕಾವೇರಿಯಿಂದ ಸರಬರಾಜಾಗುತ್ತಿರುವ ಕುಡಿಯುವ ನೀರಿನಲ್ಲಿ ಸಾಕಷ್ಟು ಸೋರಿಕೆಯಾಗುತ್ತಿದ್ದು, ವರ್ಷದಲ್ಲಿ ಸೋರಿಕೆ ಪ್ರಮಾಣವನ್ನು ಶೇ.40 ರಿಂದ ಶೇ.37ಕ್ಕೆ ಇಳಿಸಲು ಕ್ರಮ ವಹಿಸಲಾಗಿದೆ

 

ನಗರದ ಕುಡಿಯುವ ನೀರಿನ ಅಭಾವ ತಪ್ಪಿಸಲು ಈ ಬಾರಿಯ ಬಜೆಟ್‍ನಲ್ಲಿ ಹೆಚ್ಚು ಒತ್ತು ನೀಡಲಾಗಿದ್ದು, ನೀರು ಸೋರಿಕೆ ಪ್ರಮಾಣವನ್ನು ಶೇ.37ಕ್ಕೆ ಇಳಿಸುವುದರ ಜತೆಗೆ ಅಗತ್ಯ ಯೋಜನೆಗಳಿಂದ 2023ರ ವೇಳೆಗೆ ಪ್ರತಿದಿನ 2375 ದಶಲಕ್ಷ ಲೀಟರ್ ನೀರು ಒದಗಿಸಲು ಆದ್ಯತೆ ನೀಡಲಾಗಿದೆ

ಕಾವೇರಿಯಿಂದ ಸರಬರಾಜಾಗುತ್ತಿರುವ ಕುಡಿಯುವ ನೀರಿನಲ್ಲಿ ಸಾಕಷ್ಟು ಸೋರಿಕೆಯಾಗುತ್ತಿದ್ದು, ಈ ವರ್ಷದಲ್ಲಿ ಸೋರಿಕೆ ಪ್ರಮಾಣವನ್ನು ಶೇ.40 ರಿಂದ ಶೇ.37ಕ್ಕೆ ಇಳಿಸಲು ಕ್ರಮ ವಹಿಸಲಾಗಿದೆ.

ಜಪಾನ್ ಅಂತಾರಾಷ್ಟ್ರೀಯ ಸಹಕಾರ ಸಂಸ್ಥೆ ಸಹಾಯದೊಂದಿಗೆ ಕಾವೇರಿ 5ನೆ ಹಂತದ ಯೋಜನೆಗಾಗಿ 5500 ಕೋಟಿ ರೂ.ಗಳ ಒಡಂಬಡಿಕೆ ಮಾಡಿಕೊಳ್ಳಲಾಗಿದ್ದು, ಈ ಯೋಜನೆಯನ್ನು 2023ರೊಳಗೆ ಪೂರ್ಣಗೊಳಿಸಲು ಉದ್ದೇಶಿಸಲಾಗಿದೆ.ಇದರಿಂದ ಬೆಂಗಳೂರು ನಗರಕ್ಕೆ 775 ದಶಲಕ್ಷ ಲೀಟರ್ ಕಾವೇರಿ ನೀರನ್ನು ಪ್ರತಿದಿನ ಹೆಚ್ಚುವರಿಯಾಗಿ  ಒದಗಿಸಲಾಗುವುದು ಮತ್ತು 110 ಹಳ್ಳಿಗಳಲ್ಲಿ ಕೊಳಚೆ ನೀರು ಸಂಸ್ಕರಣಾ ಘಟಕಗಳು ಹಾಗೂ ಕೊಳಚೆ ನೀರು ಮೈನ್‍ಸೀವರ್ಸ್‍ಗಳನ್ನು ಅಳವಡಿಸಲಾಗುವುದು.

340 ಕೋಟಿ ರೂ. ವೆಚ್ಚದಲ್ಲಿ ತಿಪ್ಪಗೊಂಡನಹಳ್ಳಿ ಮತ್ತು ಹೆಸರಘಟ್ಟ ಜಲಾಶಯಗಳನ್ನು ಪುನಶ್ಚೇತನಗೊಳಿಸಿ ಎತ್ತಿನ ಹೊಳೆ ಯೋಜನೆಯಿಂದ ಲಭ್ಯವಾಗುವ 2.5 ಟಿಎಂಸಿ ನೀರನ್ನು ಬೆಂಗಳೂರು ನಗರದ ದಾಹ ತೀರಿಸಲು ಬಳಕೆ ಮಾಡಿಕೊಳ್ಳಲು ತೀರ್ಮಾನಿಸಲಾಗಿದೆ.

ಇದರಿಂದ ಪ್ರತಿದಿನ ಸುಮಾರು 200 ದಶಲಕ್ಷ ಲೀಟರ್ ನೀರನ್ನು 2021ರ ವೇಳೆಗೆ ಬೆಂಗಳೂರು ನಗರಕ್ಕೆ ಒದಗಿಸಲು ಸಾಧ್ಯವಾಗುತ್ತದೆ.

ಬಿಬಿಎಂಪಿಗೆ ಸೇರ್ಪಡೆಗೊಂಡ 110 ಗ್ರಾಮಗಳಿಗೆ ಕುಡಿಯುವ ನೀರು ಒದಗಿಸಲು ಹಾಗೂ ಲೆಕ್ಕಕ್ಕೆ ಸಿಗದ ನೀರಿನ ಪ್ರಮಾಣ ಕಡಿಮೆ ಮಾಡುವ ಯೋಜನೆಯನ್ನು 1500 ಕೋಟಿ ರೂ.  ಮತ್ತು 1000 ಕೋಟಿ ರೂ. ವೆಚ್ಚದಲ್ಲಿ 110 ಗ್ರಾಮಗಳಿಗೆ ಒಳಚರಂಡಿ ವ್ಯವಸ್ಥೆಯ ಜಾಲವನ್ನು 2019ರ ವೇಳೆಗೆ ವಿಸ್ತರಿಸಲು ತೀರ್ಮಾನಿಸಲಾಗಿದೆ.

ಮೆಗಾಸಿಟಿ ಯೋಜನೆಯಡಿ 1209 ಕೋಟಿ ರೂ. ವೆಚ್ಚದಲ್ಲಿ 440 ದಶಲಕ್ಷ ಲೀಟರ್ ಸಾಮಥ್ರ್ಯದ 4 ತ್ಯಾಜ್ಯನೀರು ಸಂಸ್ಕರಣಾ ಘಟಕ ಆರಂಭಿಸಲಾಗಿದ್ದು, ಈ ಯೋಜನೆ ಮೇ 2020ರೊಳಗೆ ಪೂರ್ಣಗೊಳ್ಳಲಿದೆ. ಅಲ್ಲದೆ, ಅಮೃತ್ ಯೋಜನೆಯಡಿ 75 ದಶಲಕ್ಷ ಲೀಟರ್ ಸಾಮಥ್ರ್ಯದ 5 ತ್ಯಾಜ್ಯನೀರು ಸಂಸ್ಕರಣಾ ಘಟಕವನ್ನು 129 ಕೋಟಿ ರೂ. ವೆಚ್ಚದಲ್ಲಿ ಸ್ಥಾಪಿಸಲಾಗುತ್ತಿದೆ.

ಒಟ್ಟಾರೆ, 2020ರೊಳಗೆ ನಗರದ 1572 ದಶಲಕ್ಷ ಲೀಟರ್ ಸಾಮಥ್ರ್ಯದ ತ್ಯಾಜ್ಯನೀರು ಸಂಸ್ಕರಣಾ ಘಟಕ ಸ್ಥಾಪನೆಯಾಗಲಿದ್ದು, ಇದರಿಂದ ಎಲ್ಲ ಕೆರೆಗಳನ್ನೂ ಸಂರಕ್ಷಿಸಬಹುದಾಗಿದೆ.

 

 

 

 

ನಗರ ಪ್ರದೇಶದ ಪ್ರತಿ ಮನೆಗೂ ನೀರು ಪೂರೈಕೆ ಮಾಡುವ ಉದ್ದೇಶ ಹೊಂದಲಾಗಿದ್ದು, ಪ್ರಸಕ್ತ ಸಾಲಿನ ಬಜೆಟ್‍ನಲ್ಲಿ ರಾಜ್ಯದ 10 ಪಟ್ಟಣಗಳಲ್ಲಿ ಎಲ್ಲ ವಾಸದ ಮನೆಗಳಿಗೆ ಪ್ರತ್ಯೇಕ ನೀರಿನ ಸಂಪರ್ಕ ಕಲ್ಪಿಸಲು ಉದ್ದೇಶಿಸಲಾಗಿದೆ

ನೀರು ಸರಬರಾಜು ಮತ್ತು ಒಳಚರಂಡಿ ವಲಯಗಳಲ್ಲಿ ಅಳವಡಿಸಲಾಗಿದ್ದ ಪಂಪ್‍ಸೆಟ್‍ಗಳ ಕಾರ್ಯಕ್ಷಮತೆಯನ್ನು ಉತ್ತಮಗೊಳಿಸಲು ಬೆಳಗಾವಿ ನಗರ ನೀರು ಸರಬರಾಜು ಯೋಜನೆಯನ್ನು ಪ್ರಾಯೋಗಿಕವಾಗಿ ಸಾರ್ವಜನಿಕ ಖಾಸಗಿ ಸಹಭಾಗಿತ್ವದಲ್ಲಿ ಕೈಗೆತ್ತಿಕೊಳ್ಳಲು ಯೋಜಿಸಲಾಗಿದೆ.

ನೀರು ಸರಬರಾಜು ಯೋಜನೆಗಳ ಮಾಹಿತಿ, ಪ್ರಮಾಣಿತ ಸೇವಾ ಮಟ್ಟದ ಸೂಚಕಗಳು ಒಳಗೊಂಡಂತೆ ಮಾಹಿತಿ-ತಂತ್ರಜ್ಞಾನ ಉಪಕರಣಗಳನ್ನು ಬಳಸಿಕೊಂಡು ಸ್ಥಳೀಯ ಸಂಸ್ಥೆಗಳಿಗೆ ನಿಯಮಿತ ಕಾಲದಲ್ಲಿ ಆಧುನೀಕರಿಸಿ ಅಂತರ್ಜಾಲದಲ್ಲಿ ಲಭ್ಯವಾಗುವಂತೆ ಮಾಡಲು ತೀರ್ಮಾನಿಸಲಾಗಿದೆ.

ಪ್ರಾಯೋಗಿಕವಾಗಿ 10 ಸ್ಥಳೀಯ ಸಂಸ್ಥೆಗಳಲ್ಲಿ 25 ಕೋಟಿ ರೂ. ವೆಚ್ಚದಲ್ಲಿ ಈ ಯೋಜನೆಯನ್ನು ಜಾರಿಗೊಳಿಸಲು ತೀರ್ಮಾನಿಸಲಾಗಿದ್ದು, ಹಂತ ಹಂತವಾಗಿ ಉಳಿದ ಸ್ಥಳೀಯ ಸಂಸ್ಥೆಗಳಿಗೂ ಇದನ್ನು ವಿಸ್ತರಿಸಲು ತೀರ್ಮಾನಿಸಲಾಗಿದೆ.

ಯುಐಡಿಎಸ್‍ಎಸ್‍ಎಂಟಿ, ಅಮೃತ್ ಯೋಜನೆ ಹಾಗೂ ಮಂಡಳಿಯ ಅನುದಾನ ಸೇರಿದಂತೆ 1304 ಕೋಟಿ ರೂ. ಅಂದಾಜು ವೆಚ್ಚದಲ್ಲಿ 10 ನೀರು ಸರಬರಾಜು ಯೋಜನೆ ಹಾಗೂ 18 ಒಳಚರಂಡಿ ಯೋಜನೆಗಳನ್ನು ಜಾರಿಗೊಳಿಸಲು ತೀರ್ಮಾನಿಸಲಾಗಿದೆ.

 

ಕೋನದಾಸನಪುರದಲ್ಲಿ 166 ಎಕರೆ ವಿಸ್ತೀರ್ಣದಲ್ಲಿ ಇನ್ನೋವೇಟಿವ್ ಟೌನ್‍ಶಿಪ್ ನಿರ್ಮಾಣಕ್ಕೆ ಚಿಂತನೆ

ಬಿಡಿಎ ವತಿಯಿಂದ ಕೋನದಾಸನಪುರದಲ್ಲಿ 166 ಎಕರೆ ವಿಸ್ತೀರ್ಣದಲ್ಲಿ ಇನ್ನೋವೇಟಿವ್ ಟೌನ್‍ಶಿಪ್ ನಿರ್ಮಾಣಕ್ಕೆ ಚಿಂತನೆ ನಡೆಸಲಾಗಿದ್ದು, ಈ ಜಮೀನಿನ 25 ಎಕರೆ ಪ್ರದೇಶದಲ್ಲಿ ಬೃಹತ್ ವಸತಿ ಸಮುಚ್ಚಯ ನಿರ್ಮಿಸುವ ಯೋಜನೆಯನ್ನು ಈ ಬಾರಿಯ ಆಯವ್ಯಯದಲ್ಲಿ ಪ್ರಸ್ತಾಪಿಸಲಾಗಿದೆ

ಈಗಾಗಲೇ ಬಿಡಿಎ ವತಿಯಿಂದ ನಿರ್ಮಿಸಲಾಗುತ್ತಿರುವ ನಾಡಪ್ರಭು ಕೆಂಪೇಗೌಡ ಬಡಾವಣೆಯಲ್ಲಿ 5000 ನಿವೇಶನಗಳನ್ನು ಹಂಚಿಕೆ ಮಾಡಲಾಗಿದ್ದು, ಉಳಿದ 5000 ನಿವೇಶನ ಹಂಚಿಕೆ ಮಾಡುವ ಕಾರ್ಯ ಪ್ರಗತಿಯಲ್ಲಿದೆ.

ಪ್ರಾಧಿಕಾರದ ವಶದಲ್ಲಿರುವ ಜಮೀನಿನಲ್ಲಿ ಇದುವರೆಗೂ 29 ಯೋಜನೆಗಳ ಮೂಲಕ 13,000 ಮನೆಗಳ ನಿರ್ಮಾಣ ಕೈಗೊಳ್ಳಲಾಗಿದೆ. ಇದರಲ್ಲಿ 16 ಯೋಜನೆಗಳು ಪೂರ್ಣಗೊಂಡಿದ್ದು, ಇದುವರೆಗೂ 6830 ಮನೆಗಳನ್ನು ಸಾರ್ವಜನಿಕರಿಗೆ ಹಂಚಿಕೆ ಮಾಡಲಾಗಿದೆ.

ಮುಂದಿನ ಅಭಿವೃದ್ಧಿ ಯೋಜನೆಗಳನ್ನು ಗಮನದಲ್ಲಿಟ್ಟುಕೊಂಡು ಬೆಂಗಳೂರನ್ನು ದೇಶದಲ್ಲಿಯೇ ಪ್ರಮುಖ ಮಾದರಿ ನಗರವನ್ನಾಗಿ ಪರಿವರ್ತಿಸಲು ಪರಿಷ್ಕøತ ಮಹಾಯೋಜನಾ ನಕ್ಷೆ-2031 ಸಿದ್ಧಪಡಿಸಲಾಗುತ್ತಿದೆ.

ಬೆಳ್ಳಂದೂರು ಕೆರೆ ಪುನಶ್ಚೇತನಕ್ಕೆ ಪ್ರಸಕ್ತ ಸಾಲಿನಲ್ಲೂ 50 ಕೋಟಿ ರೂ.ಗಳನ್ನು ಮೀಸಲಿರಿಸಿದ್ದು, ಪ್ರಾಧಿಕಾರದ ವ್ಯಾಪ್ತಿಯ 117 ಕೆರೆಗಳಲ್ಲಿ 62 ಕೋಟಿ ರೂ.ವೆಚ್ಚದಲ್ಲಿ 17 ಕೆರೆಗಳನ್ನು ಸಮಗ್ರವಾಗಿ ಅಭಿವೃದ್ಧಿಪಡಿಸಲಾಗಿದೆ. 70 ಕೆರೆಗಳ ಒತ್ತುವರಿ ತೆರವುಗೊಳಿಸಲು ಕ್ರಮ ಕೈಗೊಳ್ಳಲಾಗಿದೆ.

 

ಮೆಟ್ರೋ ರೈಲು ಮೂರನೆ ಹಂತದ ಮೆಟ್ರೋ ಯೋಜನೆಯ ವಿಸ್ತೃತ ವರದಿಯನ್ನು  ಪ್ರಸ್ತಾಪಿಸಲಾಗಿದೆ.

ಮೆಟ್ರೋ ರೈಲು ಮಾರ್ಗವನ್ನು 105.55 ಕಿಲೋ ಮೀಟರ್‍ನಿಂದ 266 ಕಿಲೋ ಮೀಟರ್‍ಗೆ ವಿಸ್ತರಿಸಲು ತೀರ್ಮಾನಿಸಲಾಗಿದ್ದು, ಮೂರನೆ ಹಂತದ ಮೆಟ್ರೋ ಯೋಜನೆಯ ವಿಸ್ತೃತ ವರದಿಯನ್ನು ತಯಾರು ಮಾಡುವ ವಿಷಯವನ್ನು ಈ ಬಾರಿಯ ಆಯವ್ಯಯದಲ್ಲಿ  ಪ್ರಸ್ತಾಪಿಸಲಾಗಿದೆ.

ಮೂರನೆ ಹಂತದಲ್ಲಿ ಜೆಪಿ ನಗರದಿಂದ ಹೆಬ್ಬಾಳದ ಮೂಲಕ ಕೆಆರ್ ಪುರಂಗೆ, ಟೋಲ್‍ಗೇಟ್‍ನಿಂದ ಕಡಬಗೆರೆ, ಗೊಟ್ಟಿಗೆಯಿಂದ ಬಸವಾಪುರ, ಆರ್‍ಕೆ ಹೆಗಡೆ ನಗರದಿಂದ ಏರೋಸ್ಪೇಸ್ ಪಾರ್ಕ್, ಕೋಗಿಲು ಕ್ರಾಸ್‍ನಿಂದ ರಾಜಾನುಕುಂಟೆ, ಬೊಮ್ಮಸಂದ್ರದಿಂದ ಅತ್ತಿಬೆಲೆ ಮತ್ತು ಇಬ್ಬಲೂರಿನಿಂದ ಕರ್ಮಲ್‍ರಾವ್ ಮಾರ್ಗಗಳಲ್ಲಿ ಮೆಟ್ರೋ ರೈಲು ಆರಂಭಿಸಲು ತೀರ್ಮಾನಿಸಲಾಗಿದೆ.

ಎರಡನೆ ಹಂತದಲ್ಲಿ ಬಯ್ಯಪ್ಪನಹಳ್ಳಿಯಿಂದ ವೈಟ್‍ಫೀಲ್ಡ್‍ವರೆಗೆ, ಮೈಸೂರು ರಸ್ತೆಯಿಂದ ಕೆಂಗೇರಿವರೆಗೆ, ನಾಗಸಂದ್ರದಿಂದ ಬಿಐಇಸಿವರೆಗೆ, ಎಲಚೇನಹಳ್ಳಿಯಿಂದ ಅಂಜನಾಪುರ ಟೌನ್‍ಶಿಪ್‍ವರೆಗೆ, ಆರ್‍ವಿ ರಸ್ತೆಯಿಂದ ಬೊಮ್ಮಸಂದ್ರದವರೆಗೆ ಮತ್ತು ಗೊಟ್ಟಿಗೆರೆಯಿಂದ ನಾಗವಾರದವರೆಗೆ ಒಟ್ಟು 72.095 ಕಿಲೋ ಮೀಟರ್ ಉದ್ದದ 26,405.14 ಕೋಟಿ ರೂ. ವೆಚ್ಚದಲ್ಲಿ ಕೈಗೆತ್ತಿಕೊಳ್ಳಲಾಗಿರುವ ಕಾಮಗಾರಿಯನ್ನು 2021ರ ಅಂತ್ಯದೊಳಗೆ ಸಾರ್ವಜನಿಕ ಸೇವೆಗೆ ಸಮರ್ಪಿಸಲು ತೀರ್ಮಾನಿಸಲಾಗಿದೆ.

ಹಂತ 2ಎ ಯೋಜನೆಯಲ್ಲಿ ಸೆಂಟ್ರಲ್ ಸಿಲ್ಕ್‍ಬೋರ್ಡ್‍ನಿಂದ ಕೆಆರ್ ಪುರಂವರೆಗಿನ 17 ಕಿಮೀ ಹೊರವರ್ತುಲ ಮಾದರಿಯಲ್ಲಿ ಸಂಚರಿಸುವ  4202 ಕೋಟಿ ರೂ. ವೆಚ್ಚದ ಹೊಸ ಮೆಟ್ರೋ ಮಾರ್ಗಕ್ಕೆ ಅನುಮೋದನೆ ನೀಡಲಾಗಿದೆ.

 

ಕಳೆದ ಬಜೆಟ್‍ನಲ್ಲಿ ಬೆಂಗಳೂರಿನ ಸಮಗ್ರ ಅಭಿವೃದ್ಧಿಗೆ 2441 ಕೋಟಿ ರೂ.ಗಳನ್ನು ಮೀಸಲಿರಿಸಿದ್ದ ಸರ್ಕಾರ ಬಾರಿಯ ಆಯವ್ಯಯದಲ್ಲೂ ನಗರಾಭಿವೃದ್ಧಿಗೆ 2500 ಕೋಟಿ ರೂ.ಗಳ ಬಂಪರ್ ಕೊಡುಗೆ ಘೋಷಿಸಿದೆ

ಮುಂದಿನ ಐದು ವರ್ಷಗಳಲ್ಲಿ ನಗರದ ಎಲ್ಲ ಆರ್ಟೀರಿಯಲ್ ಮತ್ತು ಸಬ್ ಆರ್ಟೀರಿಯಲ್ ರಸ್ತೆಗಳನ್ನು ವೈಟ್ ಟಾಪಿಂಗ್ ಮಾಡಲು ಉದ್ದೇಶಿಸಲಾಗಿದ್ದು, ಒಟ್ಟಾರೆ 2018-19ನೆ ಸಾಲಿನಲ್ಲಿ 150 ಕಿಲೋ ಮೀಟರ್ ಉದ್ದದ ರಸ್ತೆಗಳನ್ನು ವೈಟ್ ಟಾಪಿಂಗ್ ಮಾಡಲು ತೀರ್ಮಾನಿಸಲಾಗಿದೆ.

88 ಕೆರೆಗಳನ್ನು ಅಭಿವೃದ್ಧಿಪಡಿಸಲಾಗುತ್ತಿದ್ದು, ಆರಂಭಿಕ ಹಂತದಲ್ಲಿ 40 ಕೆರೆಗಳನ್ನು ಅಭಿವೃದ್ಧಿಪಡಿಸಲು ಕ್ರಮ ಕೈಗೊಳ್ಳಲಾಗಿದೆ.

150 ಕಿಲೋ ಮೀಟರ್ ಉದ್ದದ ಬೃಹತ್ ನೀರುಗಾಲುವೆ ಅಭಿವೃದ್ಧಿ, 250 ಕಿಲೋ ಮೀಟರ್ ಉದ್ದದ ಪಾದಚಾರಿ ಮಾರ್ಗಗಳ ಅಭಿವೃದ್ಧಿ, ಪಾಲಿಕೆಗೆ ಸೇರಿರುವ 110 ಹಳ್ಳಿಗಳ ರಸ್ತೆ ಅಭಿವೃದ್ಧಿ, ಪಾಲಿಕೆ ವ್ಯಾಪ್ತಿಯ 100 ಕಿಲೋ ಮೀಟರ್ ಉದ್ದದ ಪ್ರಮುಖ ರಸ್ತೆಗಳ ಸಮಗ್ರ ಅಭಿವೃದ್ಧಿ ಹಾಗೂ ವಾಹನ ದಟ್ಟಣೆ ನಿಲ್ಲಿಸಲು 8 ಜಂಕ್ಷನ್‍ಗಳಲ್ಲಿ ಗ್ರೇಡ್ ಸಪರೇಟರ್ ನಿರ್ಮಾಣಕ್ಕೆ ಒತ್ತು ನೀಡಲಾಗಿದೆ.

ವೈಟ್‍ಫೀಲ್ಡ್ ಪ್ರದೇಶದಲ್ಲಿ ಮೆಟ್ರೋ ಕಾಮಗಾರಿಯಿಂದ ಉಂಟಾಗುತ್ತಿರುವ ವಾಹನ ದಟ್ಟಣೆ ತಪ್ಪಿಸಲು ಐಟಿಪಿಎಲ್‍ಗೆ ಪರ್ಯಾಯ ಸಂಪರ್ಕ ಕಲ್ಪಿಸುವ 14 ರಸ್ತೆಗಳನ್ನು ಅಭಿವೃದ್ಧಿಪಡಿಸಲಾಗುವುದು.

ಹಳೆ ವಿಮಾನ ನಿಲ್ದಾಣ ರಸ್ತೆಯ ಸಿಗ್ನಲ್ ಮುಕ್ತ ಕಾರಿಡಾರ್ ಕಾಮಗಾರಿಗೆ ಸಂಬಂಧಿಸಿದಂತೆ ಎಚ್‍ಎಎಲ್ ಸಂಸ್ಥೆಯವರು ನೀಡಿರುವ ಸ್ವತ್ತಿಗೆ ಬದಲಾಗಿ ಎನ್‍ಎಎಲ್ ವಿಂಡ್ ಟನಲ್ ರಸ್ತೆ ನಿರ್ಮಿಸಲು ತೀರ್ಮಾನ ಕೈಗೊಳ್ಳಲಾಗಿದೆ.

ನಗರದಲ್ಲಿ ಯಶಸ್ವಿಯಾಗಿರುವ ಇಂದಿರಾ ಕ್ಯಾಂಟಿನ್‍ಗಳ ನಿರ್ವಹಣೆಗೆ ವಾರ್ಷಿಕ 120 ಕೋಟಿ ರೂ.ಗಳನ್ನು ಒದಗಿಸಲಾಗಿದೆ.

ಕಳೆದ ವರ್ಷದ ಆಯವ್ಯಯದಲ್ಲಿ ಘೋಷಣೆ ಮಾಡಲಾಗಿದ್ದ 650 ಕೋಟಿ ರೂ. ವೆಚ್ಚದ 60.76 ಕಿಲೋ ಮೀಟರ್ ಉದ್ದದ 48 ರಸ್ತೆಗಳನ್ನು ಟೆಂಡರ್ ಶೂರ್ ಮಾದರಿಯಡಿ ಅಭಿವೃದ್ಧಿಪಡಿಸುವ ಕಾರ್ಯವನ್ನು 2018ರ ವೇಳೆಗೆ ಪೂರ್ಣಗೊಳಿಸಲು ಕ್ರಮ ವಹಿಸಲಾಗಿದೆ.

ಡಾ.ರಾಜ್‍ಕುಮಾರ್ ರಸ್ತೆ, ಹಳೆ ವಿಮಾನ ನಿಲ್ದಾಣ ರಸ್ತೆ, ಮೇಕ್ರಿ ಸರ್ಕಲ್‍ನಿಂದ ಓಪ್ ಫಾರಂ ಮತ್ತು ಹೊರವರ್ತುಲ ರಸ್ತೆಗಳಲ್ಲಿ 51.36 ಕಿಲೋ ಮೀಟರ್ ಉದ್ದದ ರಸ್ತೆಗಳನ್ನು ಸಿಗ್ನಲ್‍ಮುಕ್ತ ಕಾರಿಡಾರ್‍ಗಳನ್ನಾಗಿ ಪರಿವರ್ತಿಸುವ 440 ಕೋಟಿ ರೂ. ವೆಚ್ಚದ 12 ಮೇಲ್ಸೇತುವೆ ಮತ್ತು ಕೆಳಸೇತುವೆ ಕಾಮಗಾರಿಯನ್ನು 2018ರ ಅಂತ್ಯಕ್ಕೆ ಪೂರ್ಣಗೊಳಿಸುವ ಭರವಸೆ ನೀಡಲಾಗಿದೆ.

ಅದೇ ರೀತಿ ಸ್ಮಾರ್ಟ್ ಸಿಟಿ ಯೋಜನೆಯಡಿ ಕೈಗೊಳ್ಳಬೇಕಾದ ಯೋಜನೆಗಳ ಅನುಷ್ಠಾನಕ್ಕೆ ಕೇಂದ್ರ ಸರ್ಕಾರದ 500 ಕೋಟಿ ರೂ.ಗಳ ಅನುದಾನದೊಂದಿಗೆ ರಾಜ್ಯದ 500 ಕೋಟಿ ರೂ.ಗಳ ಪಾಲನ್ನು ಸೇರಿಸಿ ಕ್ರಿಯಾಯೋಜನೆ ಅಂತಿಮಗೊಳಿಸಲಾಗಿದೆ.

ಈ ಯೋಜನೆಯಡಿ ನಗರದ 25 ಪ್ರಮುಖ ರಸ್ತೆಗಳನ್ನು ಟೆಂಡರ್ ಶೂರ್ ಮಾದರಿಯಲ್ಲಿ ಅಭಿವೃದ್ಧಿ, ಐತಿಹಾಸಿಕ ಕೆಆರ್ ಮಾರುಕಟ್ಟೆ ಪ್ರದೇಶದ ಪುನಶ್ಚೇತನ, ಶಿವಾಜಿನಗರದಲ್ಲಿ ಸಂಯೋಜಿತ ಸಂಚಾರಿ ಕೇಂದ್ರ, ಕಬ್ಬನ್ ಉದ್ಯಾನ ಅಭಿವೃದ್ಧಿ, ಸ್ವತಂತ್ರ್ಯ ಪಾಳ್ಯ, ಹಲಸೂರು ಕೆರೆ, ಸ್ಯಾಂಕಿ ಕೆರೆಗಳ ಅಭಿವೃದ್ಧಿ ಹಾಗೂ ಕೆಸಿ ಜನರಲ್ ಆಸ್ಪತ್ರೆಯ ನವೀಕರಣಕ್ಕೆ ರೂಪುರೇಷೆ ಸಿದ್ಧಪಡಿಸಲಾಗಿದೆ.

ಗಾಂಧಿಬಜಾರ್, ಗಾಂಧಿನಗರ, ಡಿಸ್ಪೆನ್ಸರಿ ರಸ್ತೆ, ರೇಸ್‍ಕೋರ್ಸ್, ಶೇಷಾದ್ರಿ ರಸ್ತೆ, ಕೋರಮಂಗಲ 4ನೆ ಬಡಾವಣೆ, ಜಯನಗರ ಕಾಂಪ್ಲೆಕ್ಸ್ ಹಾಗೂ ಪಾಲಿಕೆಯ ಕೇಂದ್ರ ಕಚೇರಿ ಆವರಣದಲ್ಲಿ ಬಹುಮಹಡಿ ವಾಹನ ನಿಲ್ದಾಣ ನಿರ್ಮಿಸಲು ಕ್ರಮ ಕೈಗೊಳ್ಳಲಾಗಿದೆ.

ಬಿಬಿಎಂಪಿ ಸೇರಿದಂತೆ ಎಲ್ಲ ನಗರ ಸ್ಥಳೀಯ ಸಂಸ್ಥೆಗಳ ನಾಗರಿಕರ ಕಟ್ಟಡ ನಕ್ಷೆ, ಖಾತಾ ಬದಲಾವಣೆ, ನೀರು ಮತ್ತು ವಿದ್ಯುತ್ ಸಂಪರ್ಕ, ರೋಡ್ ಕಟಿಂಗ್ ಅನುಮತಿ ಇತ್ಯಾದಿ ನಾಗರಿಕರ ಸೇವೆಗಳಿಗೆ ಸ್ವಯಂಚಾಲಿತ ಆನ್‍ಲೈನ್ ತಂತ್ರಾಂಶ ಅಭಿವೃದ್ಧಿಪಡಿಸಲು ತೀರ್ಮಾನಿಸಲಾಗಿದೆ.

 

ಅಸಂಘಟಿತ ಅಗಸರು, P್ಷËರಿಕರು, ಅಕ್ಕಸಾಲಿಗರು, ಕಮ್ಮಾರರು, ಕುಂಬಾರರು ಹಾಗೂ ಭಟ್ಟಿ ಕಾರ್ಮಿಕರಿಗೂ ಸಹ ಅಂಬೇಡ್ಕರ್ ಕಾರ್ಮಿಕ ಸಹಾಯ ಹಸ್ತ ಯೋಜನೆ ಅಡಿ ಸ್ಮಾರ್ಟ್ ಕಾರ್ಡ್‍ಗಳನ್ನು ವಿತರಿಸಲಾಗುವುದು

ಅಸಂಘಟಿತ ಅಗಸರು, P್ಷËರಿಕರು, ಅಕ್ಕಸಾಲಿಗರು, ಕಮ್ಮಾರರು, ಕುಂಬಾರರು ಹಾಗೂ ಭಟ್ಟಿ ಕಾರ್ಮಿಕರಿಗೂ ಸಹ ಅಂಬೇಡ್ಕರ್ ಕಾರ್ಮಿಕ ಸಹಾಯ ಹಸ್ತ ಯೋಜನೆ ಅಡಿ ಸ್ಮಾರ್ಟ್ ಕಾರ್ಡ್‍ಗಳನ್ನು ವಿತರಿಸಲಾಗುವುದು. ಇದರೊಂದಿಗೆ 25 ಕೋಟಿ ರೂ. ವೆಚ್ಚದಲ್ಲಿ ವಂತಿಗೆ ಆಧಾರಿತ ಪಿಂಚಣಿ ಯೋಜನೆಯನ್ನು ಜಾರಿಗೊಳಿಸಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ.

2018-19ನೇ ಸಾಲಿನ ಬಜೆಟ್ ಭಾಷಣದಲ್ಲಿ ಕಾರ್ಮಿಕ ವರ್ಗದ ಯೋಜನೆಗಳ ಬಗ್ಗೆ ವಿವರಿಸಿದ ಅವರು, ಪ್ರಸ್ತಕ ಸಾಲಿನಲ್ಲಿ ಕಾರ್ಮಿಕ ಇಲಾಖೆಗೆ 531 ಕೋಟಿ ರೂ.ಗಳನ್ನು ಒದಗಿಸಲಾಗಿದೆ ಎಂದು ಹೇಳಿದರು.

ಮಾರ್ಚ್ 1 ರಂದು ರಾಜ್ಯ ಮತ್ತು ಜಿಲ್ಲಾ ಮಟ್ಟದಲ್ಲಿ ಕಾರ್ಮಿಕರ ಸಮ್ಮಾನ ದಿನ ಆಚರಿಸಲಾಗುವುದು ಹಾಗೂ ಅಸಂಘಟಿತ ವಲಯದಲ್ಲಿ ವಿಶೇಷ ಸಾಧನೆ ಮಾಡಿದ ಕಾರ್ಮಿಕರಿಗೆ ಕಾರ್ಮಿಕ ಸಮ್ಮಾನ ಪ್ರಶಸ್ತಿ ನೀಡಲಾಗುವುದು ಎಂದು ಸಿದ್ದರಾಮಯ್ಯ ಪ್ರಕಟಿಸಿದರು.

ತಮ್ಮ ಸರ್ಕಾರವು ಕಳೆದ 5 ವರ್ಷಗಳಲ್ಲಿ  ಕಾರ್ಮಿಕ ರಾಜ್ಯ ವಿಮಾ ಇಲಾಖೆಗೆ 1339 ಕೋಟಿ ರೂ.ಗಳ ಅನುದಾನ ಒದಗಿಸಿದ್ದು, ಕಳೆದ ಸಾಲಿನಲ್ಲಿ 30.73 ಲಕ್ಷ ವಿಮಾದಾರರಿಗೆ ಕಾರ್ಮಿಕ ರಾಜ್ಯ ವಿಮಾ ಯೋಜನೆಯ ವ್ಯಾಪ್ತಿಯನ್ನು ವಿಸ್ತರಿಸಲಾಗಿದೆ ಎಂದು ತಿಳಿಸಿದರು.

4 ಕೋಟಿಗೂ ಅಧಿಕ ಸಂಘಟಿತ ಮತ್ತು ಅಸಂಘಟಿತ ಕಾರ್ಮಿಕರ ಕ್ಷೇಮಾಭಿವೃದ್ದಿಗಾಗಿ ಸರ್ಕಾರ ಹಲವಾರು ಜನಪರ ಕಾರ್ಯಕ್ರಮಗಳನ್ನು ಯಶಸ್ವಿಯಾಗಿ ಅನುಷ್ಠಾನಗೊಳಿಸಿದೆ. ಈ ಎರಡೂ ವರ್ಗದ ಕಾರ್ಮಿಕರಿಗಾಗಿ ವಿವಿಧ ಸಾಮಾಜಿಕ ಮತ್ತು ಆರ್ಥಿಕ ಸೌಲಭ್ಯಗಳನ್ನು ಒದಗಿಸಲಾಗಿದೆ. ಕಾರ್ಖಾನೆ ಕಾರ್ಮಿಕರ ನಿವೃತ್ತಿ ವಯಸ್ಸನ್ನು 58 ವರ್ಷಗಳಿಂದ 60 ವರ್ಷಗಳಿಗೆ ಏರಿಸಲಾಗಿದೆ. ಕಟ್ಟಡ ಕಾರ್ಮಿಕರ ಗೃಹ ನಿರ್ಮಾಣ ಮುಂಗಡ ಮೊತ್ತವನ್ನು 50,000 ರೂ.ಗಳಿಂದ 2 ಲಕ್ಷ ರೂ.ಗಳಿಗೆ ಹೆಚ್ಚಿಸಲಾಗಿದೆ. ಕರ್ನಾಟಕ ರಾಜ್ಯ ಖಾಸಗಿ ವಾಣಿಜ್ಯ ವಾಹನ ಚಾಲಕರ ಅಪಘಾತ ಪರಿಹಾರ ಯೋಜನೆ ಅಡಿ ಪರಿಹಾರ ಮೊತ್ತವನ್ನು 2 ಲಕ್ಷ ರೂ.ಗಳಿಂದ 5 ಲಕ್ಷ ರೂ.ಗಳಿಗೆ ಏರಿಕೆ ಮಾಡಲಾಗಿದೆ ಎಂದು ಅವರು ವಿವರಿಸಿದರು.

 

ಗಾಮೀಣಾಭಿವೃದ್ದಿ ಮತ್ತು ಪಂಚಾಯತ್ ರಾಜ್ ಇಲಾಖೆಗೆ 2018-19ನೇ ಸಾಲಿನಲ್ಲಿ ಒಟ್ಟು 14,268 ಕೋಟಿ ರೂ.ಗಳನ್ನು ಒದಗಿಸಲಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ

ಇಂದು ವಿಧಾನಸೌಧದಲ್ಲಿ ಮಂಡಿಸಿದ ಪ್ರಸಕ್ತ ಸಾಲಿನ ಬಜೆಟ್‍ನಲ್ಲಿ ಈ ಇಲಾಖೆಗೆ ನೀಡಿರುವ ಅನುದಾನಗಳು ಮತ್ತು ಯೋಜನೆಗಳ ಬಗ್ಗೆ ವಿವರಿಸಿದರು.

ರಾಷ್ಟ್ರದಲ್ಲೇ ಮೊದಲ ಬಾರಿಗೆ ಕರ್ನಾಟಕ ರಾಜ್ಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ವಿಶ್ವವಿದ್ಯಾಲಯವನ್ನು ಗದಗ್ ಜಿಲ್ಲೆಯಲ್ಲಿ ಸ್ಥಾಪಿಸಲಾಗಿದೆ. 2017-18ನೇ ಶೈಕ್ಷಣಿಕ ವರ್ಷದಿಂದ ಐದು ಸ್ನಾತಕೋತ್ತರ ಕೋರ್ಸ್‍ಗಳನ್ನು ಆರಂಭಿಸಲಾಗಿದೆ ಎಂದು ಅವರು ಹೇಳಿದರು.

2013-14ನೇ ಸಾಲಿನಿಂದ ರಾಜ್ಯದ 16 ಜಿಲ್ಲೆಗಳು, 97 ತಾಲ್ಲೂಕುಗಳು, 3,500 ಗ್ರಾಮ ಪಂಚಾಯಿತಿಗಳು ಮತ್ತು 18,107 ಗ್ರಾಮಗಳನ್ನು ಬಯಲು ಬಹಿರ್ದೆಸೆ ಮುಕ್ತ ಮಾಡುವ ಮೂಲಕ ಒಟ್ಟು 37,63 ಲಕ್ಷ ಶೌಚಾಲಯಗಳನ್ನು ನಿರ್ಮಿಸಿ ಶೇ.87ರಷ್ಟು ಸಾಧನೆ ಮಾಡಿ ಕರ್ನಾಟಕ ರಾಷ್ಟ್ರಮಟ್ಟದಲ್ಲೇ ಮುಂಚೂಣಿಯಲ್ಲಿದೆ ಎಂದು ಮುಖ್ಯಮಂತ್ರಿ ಹೆಮ್ಮೆಯಿಂದ ಹೇಳಿಕೊಂಡರು.

ಮಹಾತ್ಮಗಾಂಧಿ ನರೇಗಾ ಯೋಜನೆ ಅಡಿ 2013-14ರಿಂದ ಗ್ರಾಮೀಣ ಜನರು ಹಂಗಿನ ಬದುಕಿನಿಂದ ಹಕ್ಕಿನ ಬದುಕು ನಡೆಸುವಂತೆ ಮಾಡಲು 32.93 ಕೋಟಿ ಮಾನವ ದಿನಗಳನ್ನು ಸೃಷ್ಟಿಸಿ, 14.90 ಲಕ್ಷ ಆಸ್ತಿಗಳ ರಚನೆಗೆ 11,037 ಕೋಟಿ ರೂ.ಗಳನ್ನು ವಿನಿಯೋಗಿಸಲಾಗಿದೆ ಎಂದು ಅವರು ತಿಳಿಸಿದರು.

ನಮ್ಮ ಗ್ರಾಮ-ನಮ್ಮ ರಸ್ತೆ ಯೋಜನೆ ಅಡಿ ಈವರೆಗೆ 4,832 ಕೋಟಿ ರೂ. ವೆಚ್ಚದಲ್ಲಿ 9,983 ಕಿ.ಮೀ. ರಸ್ತೆಗಳನ್ನು ಅಭಿವೃದ್ದಿಗೊಳಿಸಲಾಗಿದೆ. ಸುವರ್ಣ ಗ್ರಾಮ ಯೋಜನೆ ಅಡಿ 1,954 ಕೋಟಿ ರೂ. ವೆಚ್ಚದಲ್ಲಿ 3,220 ಗ್ರಾಮಗಳಲ್ಲಿ ವಿವಿಧ ಅಭಿವೃದ್ದಿ ಕಾರ್ಯಗಳನ್ನು ಪೂರ್ಣಗೊಳಿಸಲಾಗಿದೆ. 1,000 ಕೋಟಿ ರೂ. ವೆಚ್ಚದಲ್ಲಿ 875 ಗ್ರಾಮಗಳಲ್ಲಿ ಮುಖ್ಯಮಂತ್ರಿ ಗ್ರಾಮ ವಿಕಾಸ ಯೋಜನೆ ಈ ಸಾಲಿನಿಂದ ಆರಂಭಗೊಂಡಿದೆ ಎಂದು ಅವರು ಹೇಳಿದರು.

ಜಿಲ್ಲಾ ಪಂಚಾಯಿತಿ ಅಧ್ಯಕ್ಷರು, ಉಪಾಧ್ಯಕ್ಷರು ಮತ್ತು ಸದಸ್ಯರಿಗೆ ಗೌರವಧನವನ್ನು ಕ್ರಮವಾಗಿ 35,000 ರೂ, 15,000 ರೂ. ಮತ್ತು 5,000 ರೂ.ಗಳಿಗೆ ಹೆಚ್ಚಿಸಲಾಗಿದೆ. ಅದೇ ರೀತಿ ತಾಲ್ಲೂಕು ಮತ್ತು ಗ್ರಾಮ ಪಂಚಾಯಿತಿಯ ಸದಸ್ಯರ ಗೌರವಧನವನ್ನು ಪರಿಷ್ಕರಣೆ ಮಾಡಲಾಗಿದೆ ಎಂದು ಅವರು ತಿಳಿಸಿದರು.

 

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇಂದು ಮಂಡಿಸಿದ 2018-19ನೇ ಸಾಲಿನ ಬಜೆಟ್‍ನಲ್ಲಿ ಯೋಜನೆ ಮತ್ತು ಪ್ರದೇಶಾಭಿವೃದ್ದಿಗಾಗಿ ಹಲವಾರು ಹೊಸ ಯೋಜನೆಗಳನ್ನು ಪ್ರಕಟಿಸಲಾಗಿದೆ

2018-19ನೇ ಸಾಲಿನಲ್ಲಿ ಯೋಜನೆ ಮತ್ತು ಪ್ರದೇಶಾಭಿವೃದ್ದಿ ಇಲಾಖೆಗೆ ಒಟ್ಟಾರೆಯಾಗಿ 1,763 ಕೋಟಿ ರೂ.ಗಳನ್ನು ಒದಗಿಸಲಾಗಿದೆ ಎಂದು ಸಿದ್ದರಾಮಯ್ಯ ತಿಳಿಸಿದ್ಧಾರೆ.

ಪ್ರಾದೇಶಿಕ ಅಸಮತೋಲನ ಕಡಿಮೆ ಮಾಡಲು ವಿಶೇಷಾಭಿವೃದ್ಧಿ ಯೋಜನೆಯ ಅನುಷ್ಠಾನವನ್ನು ಮುಂದುವರಿಸಲು ನಿರ್ಧರಿಸಿರುವ ಸರ್ಕಾರವು, ಈ ಯೋಜನೆ ಅಡಿ 5 ವರ್ಷಗಳಲಿ 13,492 ಕೋಟಿ ರೂ.ಗಳನ್ನು ಒದಗಿಸಿದೆ.

ಮಲೆನಾಡು ಅಭಿವೃದ್ದಿ ಮಂಡಲಿ, ಬಯಲುಸೀಮೆ ಅಭಿವೃದ್ಧಿ ಮಂಡಳಿ ಮತ್ತು ಕರಾವಳಿ ಪ್ರದೇಶಗಳ ಅಭಿವೃದ್ದಿ ಮಂಡಳಿಗಳಿಗೆ ಕ್ರಮವಾಗಿ 70 ಕೋಟಿ ರೂ. 55 ಕೋಟಿ ರೂ. 25 ಕೋಟಿ ರೂ.ಗಳನ್ನು ಒದಗಿಸಲು ಉದ್ದೇಶಿಸಲಾಗಿದೆ.

ಶಾಸಕರ ಸ್ಥಳೀಯ ಅಭಿವೃದ್ದಿ ಯೋಜನೆ ಅಡಿ 5 ವರ್ಷಗಳಲ್ಲಿ 3,000 ಕೋಟಿ ರೂ.ಗಳನ್ನು ಒದಗಿಸಲಾಗಿದ್ದು, ಈ ಸಾಲಿನಲ್ಲಿ  600 ಕೋಟಿ ರೂ.ಗಳನ್ನು ಒದಗಿಸಲು ನಿರ್ಧರಿಸಲಾಗಿದೆ ಎಂದು ಸಿದ್ದರಾಮಯ್ಯ ತಿಳಿಸಿದರು.

ವಿಶೇಷಾಭಿವೃದ್ಧಿ ಯೋಜನೆ ಅಡಿ 3,000 ಕೋಟಿ ರೂ.ಗಳನ್ನು ಮೀಸಲಿಡಲಾಗಿದೆ. ಎಲ್ಲ 114 ಹಿಂದುಳಿದ ತಾಲ್ಲೂಕುಗಳಲ್ಲಿ ಮಾನವ ಅಭಿವೃದ್ಧಿ ಸೂಚ್ಯಂಕವನ್ನು ಸುಧಾರಿಸಲು ಅಗತ್ಯಕ್ಕೆ ಅನುಗುಣವಾಗಿ ಶಾಲಾ-ಕಾಲೇಜುಗಳು ಮತ್ತು ಆಸ್ಪತ್ರೆಗಳನ್ನು ಪ್ರಾರಂಭಿಸಲಾಗುತ್ತಿದೆ.

ಮೂಲಭೂತ ಸೌಕರ್ಯಗಳನ್ನು ಅಭಿವೃದ್ದಿಗೊಳಿಸಲು ಹಾಗೂ ಪ್ರಾದೇಶಿಕ ಅಸಮಾನತೆ ಅಂತರವನ್ನು ಕಡಿಮೆ ಮಾಡಲು ಹೈದರಾಬಾದ್ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿ ಮೂಲಕ ಈ ವರ್ಷ 500 ಕೋಟಿ ರೂ.ಗಳ ಕಾಮಗಾರಿಗಳನ್ನು ಅನುಷ್ಠಾನಗೊಳಿಸಲು ತೀರ್ಮಾನಿಸಲಾಗಿದೆ ಎಂದರು.

ಪ್ರತಿ ಇಲಾಖೆಯ ಭೌತಿಕ ಮತ್ತು ಆರ್ಥಿಕ ಪ್ರಗತಿ ದತ್ತಾಂಶದ ಮಾಹಿತಿಯನ್ನು ಪಡೆಯಲು ಮತ್ತು ಪರಸ್ಪರ ಇಲಾಖೆಗಳ ದತ್ತಾಂಶಗಳನ್ನು ವಿಶ್ಲೇಷಿಸಿ, ಸಹಕಾರ ಬಲಗೊಳಿಸುವ ಮೂಲಕ ಕಾರ್ಯಕ್ರಮ ಸಂಯೋಜನೆಯನ್ನು ಅರ್ಥಪೂರ್ಣಗೊಳಿಸುವ ಸಲುವಾಗಿ ಕರ್ನಾಟಕ ಮಾಹಿತಿ ಕೇಂದ್ರ ಸ್ಥಾಪಿಸಲು ಉದ್ದೇಶಿಸಲಾಗಿದೆ ಎಂದು ಮುಖ್ಯಮಂತ್ರಿ ವಿವರಿಸಿದರು.

 

 

 

ಅಲ್ಪಸಂಖ್ಯಾತರ ಅಭಿವೃದ್ದಿಗೆ ರಾಜ್ಯ ಸರ್ಕಾರ ಪ್ರಸಕ್ತ ಸಾಲಿನ ಬಜೆಟ್‍ನಲ್ಲಿ  ಅಲ್ಪಸಂಖ್ಯಾತರು ವಾಸಿಸುವ ಪ್ರದೇಶಗಳಲ್ಲಿ ಮೂಲಭೂತ ಸೌಕರ್ಯಗಳನ್ನು ಕಲ್ಪಿಸಲು 800 ಕೋಟಿ ಅನುದಾನ ಒದಗಿಸಿದೆ

ಒಟ್ಟು ಈ ಬಾರಿಯ ಬಜೆಟ್‍ನಲ್ಲಿ ಅಲ್ಪಸಂಖ್ಯಾತ ಕಲ್ಯಾಣ ಇಲಾಖೆಗೆ 2221 ಕೋಟಿ ಅನುದಾನ ನೀಡಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ, ವಕ್ಫ್ ಆಸ್ತಿಗಳ ಸಂರಕ್ಷಣೆ ಹಾಗೂ ಅಭಿವೃದ್ಧಿಗಾಗಿ 15 ಕೋಟಿ ಆರ್ಥಿಕ ನೆರವು ನೀಡುವುದಾಗಿ ಘೋಷಿಸಿದ್ದಾರೆ.

ಅಲ್ಪಸಂಖ್ಯಾತ ಕಲ್ಯಾಣ ಇಲಾಖೆ ವತಿಯಿಂದ ವಿದ್ಯಾರ್ಥಿಗಳು ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಪ್ರವೇಶ ಪಡೆಯಲು ಜೆಇಇ, ನೀಟ್, ಗೇಟ್, ಜಿಎಂಎಟಿ ಪರೀಕ್ಷೆಗಳಿಗೆ ಉಚಿತವಾಗಿ ತರಬೇತಿ ನೀಡಲಾಗುವುದು. ಪಿಯುಸಿ ವಿದ್ಯಾರ್ಥಿಗಳಿಗೆ ಸಿಇಟಿ, ಎನ್‍ಇಟಿ ಪಠ್ಯಪುಸ್ತಕಗಳ ವಿತರಣೆ, ಕಾನೂನು ಪದವೀಧರರಿಗೆ ಸಮಾಜ ಕಲ್ಯಾಣ ಇಲಾಖೆ ಮಾದರಿಯಲ್ಲಿ ಮಾಸಿಕ ತರಬೇತಿ ಭತ್ಯೆಯನ್ನು 4 ಸಾವಿರದಿಂದ 5 ಸಾವಿರಕ್ಕೆ ಹೆಚ್ಚಿಸಲಾಗಿದೆ.

ಎಸ್ಸೆಸ್ಸೆಲ್ಸಿ ಹಾಗೂ ಪಿಯುಸಿ ಪರೀಕ್ಷೆಯಲ್ಲಿ ಅತಿಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ಪ್ರೋತ್ಸಾಹಿಸಲು ವೈದ್ಯಕೀಯ ಹಾಗೂ ತಾಂತ್ರಿಕ ಕೋರ್ಸ್‍ಗಳಲ್ಲಿ ಒಂದನೇ  ವರ್ಷದ ಪ್ರವೇಶ ಹೊಂದಿರುವ ವಿದ್ಯಾರ್ಥಿಗಳಿಗೆ 25 ಸಾವಿರ, ಬಿಎಡ್ ಕೋರ್ಸ್‍ಗಳಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳಿಗೆ 25 ಸಾವಿರ ರೂ. ಪ್ರೋತ್ಸಾಹಧನ ನದಾಫ್, ಪಿಂಜಾರ್ ಸಮುದಾಯದ ಸಂಘಗಳಿಗೆ ಎರಡು ಕೋಟಿ, ಬ್ಯಾರಿ ವೆಲ್ಫೇರ್ ಅಸೋಸಿಯೇಷನ್‍ಗೆ ಎರಡು ಕೋಟಿ, ಮೈಸೂರಿನಲ್ಲಿ ಹಿರಿಯ ರಾಜಕಾರಣಿ ದಿವಂಗತ ಅಜೀತ್ ಸೇಠ್ ಸಮುದಾಯ ಭವನ ನಿರ್ಮಾಣಕ್ಕೆ ಮೂರು ಕೋಟಿ ಅನುದಾನವನ್ನು ಒದಗಿಸಲಾಗಿದೆ.

ಮೆಟ್ರಿಕ್ ನಂತರದ ಹಾಸ್ಟೆಲ್‍ಗಳಲ್ಲಿ ತಲಾ 25 ದಾಖಲಾತಿಗಳನ್ನು ಹೆಚ್ಚಿಸಲಾಗುವುದು. ಎಲ್ಲ ಮೆಟ್ರಿಕ್ ಪೂರ್ವದ ನಂತರ ಬಾಲಕಿಯರ ವಿದ್ಯಾರ್ಥಿನಿಲಯಗಳಲ್ಲಿ  ಪರಸ್ಪರ ಪ್ರವೇಶ ನೀಡಿ, ಹಾಸ್ಟೆಲ್‍ಗಳನ್ನು ಮೇಲ್ದರ್ಜೆಗೇರಿಸುವ ಆಶ್ವಾಸನೆ ನೀಡಲಾಗಿದೆ.

 

 ಹಿಂದುಳಿದ ವರ್ಗಗಳ ಇಲಾಖೆಯಲ್ಲಿ ಶಿಕ್ಷಣ ಮತ್ತು ಉದ್ಯೋಗದಲ್ಲಿ ಮೀಸಲಾತಿ ಪಡೆಯಲು ಹಾಲಿ ಇರುವ ಕೆನೆಪದರ ಆದಾಯದ  ಮಿತಿಯನ್ನು  ಆರು ಲಕ್ಷದಿಂದ 8 ಲಕ್ಷದವರೆಗೆ ಹೆಚ್ಚಿಸಲಾಗಿದೆ

ಮುಂದಿನ ಐದು ವರ್ಷಗಳಲ್ಲಿ 750 ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳನ್ನು ಉನ್ನತ ವ್ಯಾಸಂಗಕ್ಕಾಗಿ ವಿದೇಶಿ ವಿವಿಗಳಿಗೆ ಕಳಿಸುವ ಗುರಿ ಹೊಂದಿರುವ ಸರ್ಕಾರ ಪ್ರಸಕ್ತ ವರ್ಷದಲ್ಲಿ 150 ವಿದ್ಯಾರ್ಥಿಗಳನ್ನು ಆಯ್ಕೆ ಮಾಡುವ ಆಶ್ವಾಸನೆ ನೀಡಿದೆ.

ಪ್ರಸಕ್ತ ಸಾಲಿನ ಆಯವ್ಯಯದಲ್ಲಿ ಇದನ್ನು ಘೋಷಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ಹಿಂದುಳಿದ ವರ್ಗಗಳ ಎರಡು ಸಾವರ ವಿದ್ಯಾರ್ಥಿಗಳಿಗೆ ಐಎಎಸ್, ಕೆಎಎಸ್, ಬ್ಯಾಂಕಿಂಗ್ ಇತ್ಯಾದಿ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಹಾಜರಾಗಲು ಪ್ರತಿಷ್ಟಿತ ಸಂಸ್ಥೆಗಳ ಮೂಲಕ ವಿಶೇಷ ಕೋಚಿಂಗ್, ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಪ್ರವೇಶ ಪಡೆಯಲು ಉಚಿತವಾಗಿ ಜೆಇಇ, ನೀಟ್, ಗೇಟ್, ಜಿಎಂಎಟಿ ಇತ್ಯಾದಿಗಳ ಪೂರ್ವ ಪರೀಕ್ಷೆಯನ್ನು ಪ್ರತಿಷ್ಠಿತ ಸಂಸ್ಥೆಗಳ ಮೂಲಕ ನೀಡಲು ಸರ್ಕಾರ ಮುಂದಾಗಿದೆ.

ಪೂರ್ಣಾವಧಿ ಪಿಎಚ್‍ಡಿ ಅಧ್ಯಯನದಲ್ಲಿ ತೊಡಗಿರುವ ವಿದ್ಯಾರ್ಥಿಗಳಿಗೆ ಮಾಸಿಕ ವೇತನ ಫೆಲೋಶಿಪ್‍ನ್ನು 5000 ದಿಂದ 10 ಸಾವಿರದವರೆಗೆ ಹೆಚ್ಚಳ ಮಾಡಲಾಗಿದೆ.

ಮೆಟ್ರಿಕ್ ಪೂರ್ವ, ಮೆಟ್ರಿಕ್ ನಂತರದ ವಿದ್ಯಾರ್ಥಿಗಳ ಆಹಾರ ವೆಚ್ಚಕ್ಕಾಗಿ ನೀಡಲಾಗುತ್ತಿದ್ದ ತಿಂಗಳ ವೇತನವನ್ನು 750 ರಿಂದ 1500 ಹಾಗೂ 850ರಿಂದ 1600 ರೂ.ಗೆ ಹೆಚ್ಚಿಸಲಾಗಿದೆ.

ಮೆಟ್ರಿಕ್ ಪೂರ್ವ ವಿದ್ಯಾರ್ಥಿ ನಿಲಯಗಳಲ್ಲಿ ವಿದ್ಯಾರ್ಥಿಗಳಿಗೆ ನೀಡುತ್ತಿರುವ ಸುಚಿ ಸಂಭ್ರಮ ಕಿಟ್‍ನ್ನು ಮೆಟ್ರಿಕ್ ನಂತರದ ವಿದ್ಯಾರ್ಥಿಗಳಿಗೂ ಸಹ ವಿಸ್ತರಿಸಲು ಸರ್ಕಾರ ತೀರ್ಮಾನಿಸಿದೆ.

ಖಾಸಗಿ ಅನಾಥಾಲಯಗಳಲ್ಲಿ ವಿದ್ಯಾರ್ಥಿಗಳಿಗೆ ಊಟದ ವೆಚ್ಚಕ್ಕಾಗಿ 700ರಿಂದ 800 ರೂ. ಹೆಚ್ಚಳ, ವಿದ್ಯಾಸಿರಿ ಯೋಜನೆಯಡಿ ಫಲಾನುಭವಿಗಳ ಸಂಖ್ಯೆಯನ್ನು ಒಂದು ಲಕ್ಷಕ್ಕೆ ಏರಿಕೆ, ಡಾ.ಡಿ.ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮದ ಯೋಜನೆಗಳನ್ನು ಅನುಷ್ಠಾನಗೊಳಿಸಲು ಪುನರ್ ಸಂಘಟನೆ, ಹಿಂದುಳಿದ ವರ್ಗಗಳ ಸಂಘಸಂಸ್ಥೆಗಳು ನಡೆಸುತ್ತಿರುವ ಖಾಸಗಿ ವಸತಿ ನಿಲಯಗಳ ಮೂಲಸೌಕರ್ಯ ಅಭಿವೃದ್ದಿಗೆ  5 ಲಕ್ಷ, ಸವಿತಾ ಸಮಾಜ , ತಿಗಳ, ಮಡಿವಾಳ,ಕುಂಬಾರರ ಆರ್ಥಿಕಾಭಿವೃದ್ದಿಗೆ 100 ಕೋಟಿ ಅನುದಾನ ನೀಡಲಾಗಿದೆ.

ಹಿಂದುಳಿದ ವರ್ಗಗಳ ನಿರುದ್ಯೋಗಿ ಪದವೀಧರರು ಸ್ವಯಂ ಉದ್ಯೋಗ ಕೈಗೊಳ್ಳಲು ಶೇ.6ರ ಬಡ್ಡಿದರದಲ್ಲಿ 10 ಲಕ್ಷ ಸಾಲ ಸೌಲಭ್ಯ ಸೇರಿದಂತೆ ಪ್ರಸಕ್ತ ವರ್ಷ ಹಿಂದುಳಿದ ವರ್ಗಗಳ ಕಲ್ಯಾಣಕ್ಕೆ 3172 ಕೋಟಿ ಅನುದಾನ ನೀಡಿದೆ.

 

ಸಮಾಜದಲ್ಲಿ ಬೇರೂರಿರುವ ಅಸ್ಪೃಶ್ಯತೆಯನ್ನು ಹೋಗಲಾಡಿಸಲು ರಾಜ್ಯ ಸರ್ಕಾರ ಪರಿಶಿಷ್ಟ ಜಾತಿ ಯುವಕರು ಬೇರೊಂದು ಸಮುದಾಯದ ಹುಡುಗಿಯನ್ನು ವಿವಾಹ ಮಾಡಿಕೊಂಡರೆ ಮೂರು ಲಕ್ಷ ಪ್ರೋತ್ಸಾಹ ನೀಡುವುದಾಗಿ  ಪ್ರಕಟಿಸಲಾಗಿದೆ

ಇದೇ ರೀತಿ ಪರಿಶಿಷ್ಟ ಜಾತಿಯ ಹುಡುಗಿ ಬೇರೊಂದು ಜಾತಿಯ ಯುವಕನನ್ನು ವಿವಾಹವಾದರೆ ಹಾಲಿ ಇರುವ ಮೂರು ಲಕ್ಷ ಪ್ರೋತ್ಸಾಹಧನದ ಬದಲಿಗೆ 5 ಲಕ್ಷ ಹಣವನ್ನು ನೀಡುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ತಮ್ಮ ಬಜೆಟ್‍ನಲ್ಲಿ ಘೋಷಿಸಿದರು.

ಪರಿಶಿಷ್ಟ ಜಾತಿಯ ಯುವಕ, ಬೇರೊಂದು ಸಮುದಾಯದ ಯುವತಿಯನ್ನು ಮದುವೆಯಾದರೆ ಈ ಹಿಂದೆ ಎರಡು ಲಕ್ಷ ಪ್ರೋತ್ಸಾಹ ನೀಡಲಾಗುತ್ತಿತ್ತು. ಈ ಹಣವನ್ನು ಮೂರು ಲಕ್ಷಕ್ಕೆ ಏರಿಕೆ ಮಾಡಲಾಗಿದೆ.

ಇದೇ ರೀತಿ ಪರಿಶಿಷ್ಟ ಜಾತಿಯ ಯುವತಿ ಅನ್ಯ ಜಾತಿಯ ಯುವಕನನ್ನು ವಿವಾಹವಾದರೆ ಹಿಂದೆ ನೀಡಲಾಗುತ್ತಿದ್ದ ಮೂರು ಲಕ್ಷ ಪ್ರೋತ್ಸಾಹ ಧನವನ್ನು 5 ಲಕ್ಷದವರೆಗೆ ಹೆಚ್ಚಳ ಮಾಡುವ ಮೂಲಕ ಸಿದ್ದರಾಮಯ್ಯ ಈ ಸಮುದಾಯದ ಒಲವು ಗಳಿಸಲು ಯತ್ನಿಸಿದ್ದಾರೆ.

ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದ ವಿದ್ಯಾರ್ಥಿ ನಿಲಯಗಳಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳು ರಾಷ್ಟ್ರ ಮಟ್ಟದ ವೈದ್ಯಕೀಯ ತಾಂತ್ರಿಕ ಶಿಕ್ಷಣ ಸಂಸ್ಥೆಗಳಲ್ಲಿ ಪ್ರವೇಶ ಪಡೆಯುವಂತಾಗಲು ಎಸ್ಸೆಸ್ಸೆಲ್ಸಿ ಸೇರಿದಂತೆ ಮತ್ತಿತರ ಪರೀಕ್ಷೆಗಳಲ್ಲಿ ಪ್ರಥಮ ಶ್ರೇಣಿಯಲ್ಲಿ ಉತ್ತೀರ್ಣರಾಗಿ ಅತಿಹೆಚ್ಚು ಅಂಕ ಪಡೆದಿರುವ  100 ಬಾಲಕರು ಹಾಗೂ 100 ಬಾಲಕಿಯರಿಗೆ ಬೆಂಗಳೂರಿನಲ್ಲಿ ವಿಶೇಷ ಪರೀಕ್ಷಾ ಪೂರ್ವ ತರಬೇತಿ ನೀಡಲಾಗುವುದು.

ರಾಷ್ಟ್ರೀಯ ಶಿಕ್ಷಣ ಸಂಸ್ಥೆಗಳಾದ ಐಐಟಿ, ಐಐಎಂ, ಐಐಎಸ್‍ಸಿ,  ಎನ್‍ಐಟಿ ಸೇರಿದಂತೆ ಮತ್ತಿತರ ಶಿಕ್ಷಣ ಸಂಸ್ಥೆಗಳಲ್ಲಿ ಶಿಕ್ಷಣ ಪಡೆಯುತ್ತಿರುವ  ಎಸ್ಸಿ-ಎಸ್ಟಿ ವಿದ್ಯಾರ್ಥಿಗಳಿಗೆ ನೀಡಲಾಗುತ್ತಿದ್ದ ಒಂದು ಲಕ್ಷ ರೂ. ಪ್ರೋತ್ಸಾಹ ಧನವನ್ನು ಎರಡು ಲಕ್ಷಕ್ಕೆ ಏರಿಕೆ ಮಾಡಲಾಗಿದೆ.

ನಗರ ಸಾರಿಗೆ ಸಂಸ್ಥೆಗಳಿಗೆ ಸದಸ್ಯರನ್ನು ನಾಮನಿರ್ದೇಶನ ಮಾಡುವ ರೀತಿಯಲ್ಲಿ ಬಿಬಿಎಂಪಿ, ಮಹಾನಗರಪಾಲಿಕೆ, ಪುರಸಭೆಗಳಲ್ಲಿ ಪೌರಕಾರ್ಮಿಕರಿಗೆ ಸೇರಿದ ಒಬ್ಬ ವ್ಯಕ್ತಿಯನ್ನು ನಾಮನಿರ್ದೇಶನ ಮಾಡಲು ಸರ್ಕಾರ ಮುಂದಾಗಿದೆ.

ಇದೇ ರೀತಿ ಅರಣ್ಯ ಅವಲಂಬಿತ ಆದಿವಾಸಿಗಳಿಗೆ ಕೃಷಿ, ಯಂತ್ರೋಪಕರಣ, ನೀರಾವರಿ ಸೌಲಭ್ಯ, ಅರಣ್ಯ ಹಕ್ಕು ಕಾಯ್ದೆಯಡಿ ಮಂಜೂರಾದ  ಜಮೀನುಗಳಲ್ಲಿ ಸೋಲಿಗ, ಜೇನುಕುರುಬ, ಇತರೆ ಬುಡಕಟ್ಟು ಜನಾಂಗದವರಿಗೆ   ಕಾಫಿ ಬೆಳೆಯಲು  ಉತ್ತೇಜನ, ಬೆಂಗಳೂರು ಗ್ರಾಮಾಂತರ ಜಿಲ್ಲೆ ದೇವನಹಳ್ಳಿಯಲ್ಲಿ ಮಹರ್ಷಿ ವಾಲ್ಮೀಕಿ ಅಧ್ಯಯನ ಮತ್ತು ಸಂಶೋಧನಾ ಸಂಸ್ಥೆ,ಹಿರಿಯ ಮುತ್ಸದ್ದಿಗಳಾದ ಮಲ್ಲಿಕಾರ್ಜುನ ಸ್ವಾಮಿ, ಕೆ.ಪ್ರಭಾಕರ್, ಕೆ.ಎಚ್.ಪ್ರಭಾಕರ್ ಹೆಸರಿನಲ್ಲಿ ಸ್ಮಾರಕ ಭವನ ನಿರ್ಮಾಣಕ್ಕೆ ಒಂದು ಕೋಟಿ  ಅನುದಾನ ನೀಡಲಾಗಿದೆ.

ಎಸ್ಸಿ- ಎಸ್ಟಿ ಗುತ್ತಿಗೆದಾರರಿಗೆ ಕೆಟಿಪಿಟಿ ಕಾಮಗಾರಿಗಳಿಗೆ ನಿಗದಿಪಡಿಸಿರುವ 50 ಲಕ್ಷವರೆಗಿನ ಮಿತಿಯನ್ನು ಒಂದು ಕೋಟಿಗೆ ಹೆಚ್ಚಳ ಮಾಡಿದ್ದರೆ, ಗುರು ಮಾತಂಗ ಮಹರ್ಷಿಗಳ ಸ್ಮರಣಾರ್ಥವಾಗಿ ಹಂಪಿಯಲ್ಲಿ ಸ್ಮಾರಕ ಭವನ  ತಲೆಎತ್ತಲಿದೆ.

ಮಂಗಳೂರಿನ ವಿಕಾಸಸೌಧ ಪಕ್ಕದಲ್ಲಿ 25 ಕೋಟಿ ರೂ. ವೆಚ್ಚದಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಸ್ಪೂರ್ತಿ ಭವನವನ್ನು ಸಮಾಜ ಕಲ್ಯಾಣ ಇಲಾಖೆ ವತಿಯಿಂದ ನಿರ್ಮಾಣ ಮಾಡಲಾಗುವುದು.

ಕರ್ನಾಟಕ ಖಾದಿ ಮಂಡಳಿ ವತಿಯಿಂದ ಬಿಪಿಎಲ್ ಕುಟುಂಬಗಳ ಮರುಪಾವತಿಗಾಗಿ ಸಾಲ ಮನ್ನಾ, ಆಶ್ರಮ ಶಾಲೆ, ಮೆಟ್ರಿಕ್‍ಪೂರ್ವ ಹಾಗೂ ಮೆಟ್ರಿಕ್ ನಂತರದ ವಿದ್ಯಾರ್ಥಿಗಳಿಗೆ ಆಹಾರ ವೆಚ್ಚಕ್ಕಾಗಿ ನೀಡಲಾಗುತ್ತಿದ್ದ ಹಣವನ್ನು 1300, 1500 ಹಾಗೂ 1600 ರೂ.ಗೆ ಹೆಚ್ಚಿಸಲಾಗಿದೆ.

ಹುಣಸೂರು ಹಾಗೂ ಎಚ್‍ಡಿಕೋಟೆಯಲ್ಲಿ ಆದಿವಾಸಿ ಸಮುದಾಯ ಭವನ ನಿರ್ಮಾಣಕ್ಕೆ ಒಂದು ಕೋಟಿ, ಸೋಲಿಗ, ಜೇನುಕುರುಬ, ಕಾಡುಕುರುಬ, ಇರುಳಿಗ, ಕೊರಗ, ಎರವ, ಅಸಲರು, ಹಕ್ಕಿಪಿಕ್ಕಿ, ಸಿದ್ದಿ ಇತ್ಯಾದಿ ಆದಿವಾಸಿಗಳ ಸಮಗ್ರ ಅಭಿವೃದ್ಧಿಗೆ ಅನುದಾನ ಒದಗಿಸಲಾಗಿದೆ.

 

ಮುಖ್ಯಮಂತ್ರಿಗಳ ನಗರ ವಸತಿ ಯೋಜನೆ ರಾಜ್ಯ ಸರ್ಕಾರ ಪ್ರಕಟಿಸಿದೆ

ಬೆಂಗಳೂರು ಮಹಾನಗರದಲ್ಲಿ ಜಾರಿಯಲ್ಲಿರುವ  ಬಹುಮಹಡಿ ಕಟ್ಟಡ ನಿರ್ಮಾಣದ ಯೋಜನೆಯನ್ನು ರಾಜ್ಯದ ಎಲ್ಲ ನಗರ ಪ್ರದೇಶಗಳಿಗೂ ವಿಸ್ತರಿಸುವ ಉದ್ದೇಶದಿಂದ ಮುಖ್ಯಮಂತ್ರಿಗಳ ನಗರ ವಸತಿ ಯೋಜನೆ ಎಂಬ ವಿನೂತನ ಯೋಜನೆಯನ್ನು ರಾಜ್ಯ ಸರ್ಕಾರ ಪ್ರಕಟಿಸಿದೆ

ಈ ಯೋಜನೆಯಡಿ ಮುಂದಿನ ಐದು ವರ್ಷದಲ್ಲಿ ನಗರ ಹಾಗೂ ಗ್ರಾಮೀಣ ಪ್ರದೇಶಗಳಲ್ಲಿ 20 ಲಕ್ಷ ಮನೆಗಳನ್ನು ನಿರ್ಮಾಣ ಮಾಡುವ ಗುರಿಯನ್ನು ಸರ್ಕಾರ ಹೊಂದಿದೆ ಎಂದು ಹಣಕಾಸು ಖಾತೆ ಹೊಂದಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.

ನಗರ ಪ್ರದೇಶಗಳಲ್ಲಿ ವಸತಿ ಯೋಜನೆಗಳ ಅನುಷ್ಠಾನಕ್ಕಾಗಿ ಬಿಬಿಎಂಪಿ ವ್ಯಾಪ್ತಿಯಲ್ಲಿ ಎರಡು ಸಾವಿರ ಎಕರೆ, ಮಹಾನಗರ ಪಾಲಿಕೆಗಳಲ್ಲಿ 500 ಎಕರೆ, ನಗರಸಭೆ-ಪುರಸಭೆ ಪ್ರದೇಶಗಳಲ್ಲಿ 250 ಎಕರೆ, ಪಟ್ಟಣ ಪ್ರದೇಶಗಳಲ್ಲಿ 100 ಜಮೀನುಗಳನ್ನು ವಸತಿ ಯೋಜನೆಗಾಗಿ ಮೀಸಲಿಡಲಾಗಿದೆ.

ರಾಜ್ಯದಲ್ಲಿರುವ ಕೊಳಗೇರಿಗಳಲ್ಲಿ 40 ಲಕ್ಷಕ್ಕೂ ಹೆಚ್ಚು ಜನಸಂಖ್ಯೆ ಇರುವುದನ್ನು ಅಂದಾಜಿಸಲಾಗಿದ್ದು, ಇವುಗಳನ್ನು ಖಾಸಗಿ ಸಹಭಾಗಿತ್ವದಲ್ಲಿ ಅಭಿವೃದ್ಧಿಪಡಿಸಲು ಉದ್ದೇಶಿಸಲಾಗಿದೆ. ಇದಕ್ಕಾಗಿ ವಿಸ್ತೃತವಾದ ಮಾರ್ಗಸೂಚಿಗಳನ್ನು ಜಾರಿ ಮಾಡುವುದಾಗಿ ತಿಳಿಸಿದರು.

ಪ್ರಸಕ್ತ ಸಾಲಿನಲ್ಲಿ ವಸತಿ ಯೋಜನೆಗೆ 3942 ಕೋಟಿ ಅನುದಾನವನ್ನು ನೀಡಲಾಗಿದೆ.

 

ನಗರ ಪ್ರದೇಶಗಳಲ್ಲಿ ಪ್ರಸಕ್ತ ವರ್ಷ 250 ಅಂಗನವಾಡಿ ಕೇಂದ್ರಗಳನ್ನು ಪ್ರಾರಂಭಿಸಲು ಸರ್ಕಾರ ತೀರ್ಮಾನಿಸಿದೆ

ಸುಮಾರು 17.5 ಕೋಟಿ ರೂ. ವೆಚ್ಚದಲ್ಲಿ 250 ಅಂಗನವಾಡಿ ಕೇಂದ್ರಗಳು ನಗರಪ್ರದೇಶದಲ್ಲಿ ಪ್ರಾರಂಭವಾಗಲಿದೆ. ಜೊತೆಗೆ ಕೂಲಿ ಕಾರ್ಮಿಕರು ಕೆಲಸ ನಿರ್ವಹಿಸುತ್ತಿರುವ ಪ್ರದೇಶಗಳಲ್ಲಿ ಅವರ ಮಕ್ಕಳ ಪಾಲನೆ ಮಾಡಲು 10 ಕೋಟಿ ರೂ. ವೆಚ್ಚದಲ್ಲಿ 100 ಸಂಚಾರಿ ಅಂಗನವಾಡಿ ಕೇಂದ್ರ ಹಾಗೂ ಶಿಶುಪಾಲನ ಕೇಂದ್ರಗಳನ್ನು ಸಹ ಪ್ರಾರಂಭ ಮಾಡುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಮ್ಮ ಆಯವ್ಯಯದಲ್ಲಿ ಪ್ರಕಟಿಸಿದ್ದಾರೆ.

ಮಕ್ಕಳ ಸುರಕ್ಷತೆಯು ಸರ್ಕಾರದ ಆದ್ಯತೆಯಾಗಿದ್ದು, ಇಲಾಖೆಯ ಯೋಜನೆಗಳನ್ನು ಪರಿಣಾಮಕಾರಿಯಾಗಿ ಅನುಷ್ಠಾನ ಮಾಡಲು ಈ ಬಾರಿ ಪ್ರತ್ಯೇಕ ನಿರ್ದೇಶನಾಲಯ ಆರಂಭ, ಇಲಾಖೆಯಲ್ಲಿರುವ ಮೇಲ್ವಿಚಾರಕಿಯರ ಕಾರ್ಯ  ದಕ್ಷತೆ ಹೆಚ್ಚಿಸಲು 2503 ಮೇಲ್ಚಿಚಾರಕಿಯರಿಗೆ ಕರ್ನಾಟಕ ಮಹಿಳಾ ಅಭಿವೃದ್ಧಿ ನಿಗಮದ ಮೂಲಕ ಸ್ಕೂಟರ್ ಖರೀದಿಸಲು ಬಡ್ಡಿ ರಹಿತವಾಗಿ 50 ಸಾವಿರ ರೂ. ಸಾಲ ಸೌಲಭ್ಯ, ಇಂಧನ ವೆಚ್ಚಕ್ಕಾಗಿ ಮಾಸಿಕ ಒಂದು ಸಾವಿರ ರೂ. ಆರ್ಥಿಕ ನೆರವು ನೀಡುವುದಾಗಿ ಘೋಷಿಸಿದ್ದಾರೆ.

ಅಂಗನವಾಡಿಯಲ್ಲಿರುವ ಮಕ್ಕಳ ಪೌಷ್ಠಿಕ ಮಟ್ಟವನ್ನು ಮಾಪನ ಮಾಡಲು ನ್ಯೂಟ್ರಿಷ್ಯನ್ ಸರ್ವೆಯನ್ನು ನಡೆಸಲಾಗುವುದು. ಎಸ್ಸಿ-ಎಸ್ಟಿ ಉಪಯೋಜನೆಯಡಿ 1000 ಅಂಗನವಾಡಿ ಕಟ್ಟಡಗಳನ್ನು ಉನ್ನತೀಕರಿಸಲು 20 ಕೋಟಿ, ಎಚ್‍ಐವಿ, ಏಡ್ಸ್‍ನಿಂದ ಬಾಧಿತರಾದ ಕುಟುಂಬಗಳು ಹಾಗೂ ಸಮಾಜದಿಂದ ನಿರ್ಲಕ್ಷ್ಯಕ್ಕೊಳಗಾದ ಮಹಿಳೆಯರ ಪೊೀಷಣೆಗಾಗಿ ವಿಭಾಗೀಯ  ಮಟ್ಟದಲ್ಲಿ ಆಶ್ರಯ ಕೇಂದ್ರ ಸ್ಥಾಪಿಸಲು ಸ್ವಯಂ ಸೇವಾ ಸಂಸ್ಥೆಗಳಿಗೆ ಒಂದು ಕೋಟಿ  ಅನುದಾನ ನೀಡಿದ್ದಾರೆ.

ಬಾಲಮಂದಿರಗಳು, ಸ್ಪರ್ಧಾತ್ಮಕ ಪರೀಕ್ಷೆಗಳ ಪೂರ್ವ ಸಿದ್ದತೆಗಾಗಿ ಕೌಶಲ್ಯ ತರಬೇತಿ ಪಡೆಯಲು ಒಂದು ಕೋಟಿ, ಆಯ್ದ 10 ಜಿಲ್ಲೆಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ ಮಕ್ಕಳ ನ್ಯಾಯಾಲಯಗಳನ್ನು ಮಕ್ಕಳ ಸ್ನೇಹಿ ನ್ಯಾಯಾಲಯಗಳನ್ನಾಗಿ ಪರಿವರ್ತಿಸಲು ಒಂದು ಕೋಟಿ ಒದಗಿಸಿದ್ದಾರೆ.

ಶೇ.75ಕ್ಕೂ ಹೆಚ್ಚಿನ ಅಂಗವೈಕಲ್ಯತೆ ಹೊಂದಿರುವ ವಿಕಲಚೇತನರಿಗೆ ನೀಡುತ್ತಿರುವ ಮಾಸಾಶನವನ್ನು 200 ರೂ. ಹೆಚ್ಚಳ ಮಾಡಲಾಗಿದೆ. ಶೇ.75ಕ್ಕೂ ಕಡಿಮೆ ಅಂಗವೈಕಲ್ಯತೆ ಹೊಂದಿರುವ ವಿಕಲಚೇತನರಿಗೆ ಮಾಸಾಶನವನ್ನು 100 ರೂ.ಗಳಷ್ಟು ಏರಿಕೆ ಮಾಡಲಾಗಿದೆ.

ಈ ಬಾರಿಯ ಬಜೆಟ್‍ನಲ್ಲಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಗೆ 5371 ಕೋಟಿ ಅನುದಾನ ಒದಗಿಸಿದ್ದಾರೆ.

 

ಪ್ರಸಕ್ತ ಸಾಲಿನ ಬಜೆಟ್‍ನಲ್ಲಿ ಶಿವಮೊಗ್ಗ ಜಿಲ್ಲೆಗೆ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯನ್ನು ಘೋಷಣೆ ಮಾಡಲಾಗಿದೆ

ಸುಮಾರು 7.81 ಕೋಟಿ ರೂ. ವೆಚ್ಚದಲ್ಲಿ ಹೃದ್ರೋಗ ಚಿಕಿತ್ಸಾ ಸೌಲಭ್ಯವಿರುವ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯನ್ನು ಪ್ರಾರಂಭಿಸುವುದಾಗಿ ಹಣಕಾಸು ಖಾತೆಯನ್ನು ಹೊಂದಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಇಂದು ಪ್ರಕಟಿಸಿದ್ದಾರೆ.

ಬೆಂಗಳೂರು ವೈದ್ಯಕೀಯ ಕಾಲೇಜು ಮತ್ತು ಸಂಶೋಧನ ಸಂಸ್ಥೆಯಲ್ಲಿ ಸಾವಿರ ಹಾಸಿಗೆ ಸಾಮಥ್ರ್ಯದ ಹೆಚ್ಚುವರಿ ವಾರ್ಡ್‍ಗಳ ನಿರ್ಮಾಣ, ಗದಗ, ಕೊಪ್ಪಳ ಮತ್ತು ಚಾಮರಾಜನಗರದಲ್ಲಿ ವೈದ್ಯಕೀಯ ಕಾಲೇಜುಗಳ ಕಟ್ಟಡ ನಿರ್ಮಾಣಕ್ಕೆ 100 ಕೋಟಿ, ಇದಕ್ಕಾಗಿ ಪ್ರಸಕ್ತ ಸಾಲಿನ ಬಜೆಟ್‍ನಲ್ಲಿ 90 ಕೋಟಿ ಅನುದಾನವನ್ನು ಸಹ ನೀಡಲಾಗಿದೆ.

ಬೆಂಗಳೂರಿನ ಕಿದ್ವಾಯಿ ಕ್ಯಾನ್ಸರ್ ಆಸ್ಪತ್ರೆಯಲ್ಲಿ 15ಕೋಟಿ ರೂ. ವೆಚ್ಚದಲ್ಲಿ ಒಂದು ಪೆಟ್ ಸಿಟಿ, ಸ್ಕ್ಯಾನ್ ಸೌಲಭ್ಯ, ಮೈಸೂರಿನಲ್ಲಿರುವ ನರ್ಸಿಂಗ್  ಕಾಲೇಜಿಗೆ 30 ಕೋಟಿ ರೂ. ವೆಚ್ಚದಲ್ಲಿ ಹೊಸ ಕಟ್ಟಡ, ಬೀದರ್ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ ಹಾಗೂ  ಗದಗದಲ್ಲಿ 15 ಕೋಟಿ ರೂ. ವೆಚ್ಚದಲ್ಲಿ ಕ್ಯಾಥ್‍ಲ್ಯಾಬ್ ಸೌಲಭ್ಯದೊಂದಿಗೆ ಹೃದ್ರೋಗ ಚಿಕಿತ್ಸಾ ಘಟಕ ಪ್ರಾರಂಭವಾಗಲಿದೆ.

ಗುಲ್ಬರ್ಗದ ವೈದ್ಯಕೀಯ ಕಾಲೇಜಿನಲ್ಲಿ ಹೈದರಾಬಾದ್ ಕರ್ನಾಟಕ ಪ್ರದೇಶಾಭಿವೃದ್ಧಿ  ಅನುದಾನದಲ್ಲಿ ಸುಟ್ಟ ಗಾಯಗಳ ಚಿಕಿತ್ಸಾ ವಾರ್ಡ್ ಪ್ರಾರಂಭ. ಹಾಸನ, ಮೈಸೂರು, ಕಾರವಾರ ವೈದ್ಯಕೀಯ ಕಾಲೇಜುಗಳಲ್ಲಿ 15 ಕೋಟಿ ರೂ. ವೆಚ್ಚದಲ್ಲಿ ಕ್ಯಾನ್ಸರ್ ಚಿಕಿತ್ಸಾ ಘಟಕ ಪ್ರಾರಂಭ ಸೇರಿದಂತೆ ವೈದ್ಯಕೀಯ ಶಿಕ್ಷಣ ಇಲಾಖೆಗೆ 2177 ಕೋಟಿ ಅನುದಾನವನ್ನು ಮೀಸಲಿಟ್ಟಿದ್ದಾರೆ.

 

ರಾಜ್ಯದ ಪ್ರತಿಯೊಬ್ಬ ಪ್ರಜೆಗೂ ಉತ್ತಮ ಆರೋಗ್ಯ ಒದಗಿಸುವ ಹಿತದೃಷ್ಟಿಯಿಂದ ರಾಜ್ಯ ಸರ್ಕಾರ ಆರೋಗ್ಯ ಕರ್ನಾಟಕ ಯೋಜನೆ ಎಂಬ ವಿನೂತನ ಯೋಜನೆಯನ್ನು ಬಾರಿಯ ಬಜೆಟ್‍ನಲ್ಲಿ ಪ್ರಕಟಿಸಿದೆ

ಈ ನೂತನ ಯೋಜನೆಯು ಫೆಬ್ರವರಿ ತಿಂಗಳಿನಲ್ಲಿ ಪ್ರಾರಂಭವಾಗಲಿದ್ದು, ವರ್ಷದ ಅಂತ್ಯದೊಳಗೆ ರಾಜ್ಯಾದ್ಯಂತ ಜಾರಿಯಾಗಲಿದೆ ಎಂದು  ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.

ಮುಂದಿನ ಏಳು ವರ್ಷಗಳಲ್ಲಿ ಉತ್ತಮ ಗುಣಮಟ್ಟದ ಆರೋಗ್ಯ ಸೇವೆಗಳ ಸೌಲಭ್ಯ ಒದಗಿಸಲು ಪ್ರತಿ ಐದು ಸಾವಿರ  ಜನಸಂಖ್ಯೆಗೆ ಇರುವ ಆರೋಗ್ಯ ಕೇಂದ್ರಗಳನ್ನು ಮೇಲ್ದರ್ಜೆಗೇರಿಸಿ ,9 ಸಾವಿರ ಆರೋಗ್ಯ ಮತ್ತು ಸೌಖ್ಯ ಕೇಂದ್ರಗಳನ್ನು ಸ್ಥಾಪಿಸಲಾಗುವುದು.

ಸಂತಾನೋತ್ಪತ್ತಿ ಮತ್ತು ಮಕ್ಕಳ ಆರೋಗ್ಯ ಸೇವೆಯನ್ನು ಬಲಪಡಿಸಲು ಶಿಶು ಹಾಗೂ ತಾಯಿ ಮರಣ ಪ್ರಮಾಣ ಕಡಿತಗೊಳಿಸಲು ಮಹಿಳಾ ಮತ್ತು ಮಕ್ಕಳ  ಕಲ್ಯಾಣ ಇಲಾಖೆಯ ಸಹಕಾರದೊಂದಿಗೆ ಉತ್ತಮ ತಾಂತ್ರಿಕ ಸೇವೆಗಳನ್ನು ಬಳಸುವುದಾಗಿ ಸಿಎಂ ತಿಳಿಸಿದ್ದಾರೆ.

ಸಾಂಕ್ರಾಮಿಕ ಕಾಯಿಲೆಗಳನ್ನು ಶೀಘ್ರ ಪತ್ತೆಹಚ್ಚಿ ನಿರ್ಮೂಲನೆ ಮಾಡಲು ತುರ್ತು ಕ್ರಮ, ಕಡಿಮೆ ಬೆಲೆಯಲ್ಲಿ ಉತ್ತಮ ಚಿಕಿತ್ಸೆ , ಕರ್ನಾಟಕ ಖಾಸಗಿ ವೈದ್ಯಕೀಯ ಕಾಯ್ದೆಯ ಅನುಷ್ಠಾನದ ಮೇಲ್ವಿಚಾರಣೆ ಮಾಡಲು ರಾಜ್ಯ ಆರೋಗ್ಯ ಪರಿಷತ್ ಸೇರಿದಂತೆ ಹಲವು ಹೊಸ ಕಾರ್ಯಕ್ರಮಗಳನ್ನು ಪ್ರಕಟಿಸಿದ್ದಾರೆ.

ಈ ಬಾರಿಯ ಬಜೆಟ್‍ನಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಗೆ 6645 ಕೋಟಿ ಅನುದಾನವನ್ನು ಒದಗಿಸಲಾಗಿದೆ.

 

ಹೆಣ್ಣು ಮಕ್ಕಳ ಶಿಕ್ಷಣಕ್ಕೆ ವಿಶೇಷ ಒತ್ತು ನೀಡಿರುವ ರಾಜ್ಯ ಸರ್ಕಾರ ಪದವಿಪೂರ್ವ, ಪದವಿ ಹಾಗೂ ಸ್ನಾತಕೋತ್ತರ ಪದವಿಗಳಿಗೆ ಪ್ರವೇಶ ಕೋರುವ ಎಲ್ಲಾ ವಿದ್ಯಾರ್ಥಿನಿಯರ ಪೂರ್ಣ ಶುಲ್ಕಕ್ಕೆ ವಿನಾಯ್ತಿ ನೀಡಲು ನಿರ್ಧರಿಸಿದೆ

ಇನ್ನು ಮುಂದೆ ಸರ್ಕಾರಿ ಕಾಲೇಜುಗಳಲ್ಲಿ ಉನ್ನತ ಶಿಕ್ಷಣ ಪಡೆಯುವ ವಿದ್ಯಾರ್ಥಿನಿಯರ ಪದವಿಪೂರ್ವ, ಪದವಿ ಹಾಗೂ ಸ್ನಾತಕೋತ್ತರ ಪದವಿಗಳಿಗೆ ಪೂರ್ಣ ಶುಲ್ಕ ವಿನಾಯ್ತಿ ನೀಡಲು 95 ಕೋಟಿ ಅನುದಾನವನ್ನು ಮೀಸಲಿಟ್ಟಿದೆ.

ವಿಧಾನಸಭೆಯಲ್ಲಿಂದು 2018-19ನೇ ಸಾಲಿನ ಆಯವ್ಯಯ ಮಂಡಿಸಿದ ಹಣಕಾಸು ಖಾತೆ ಹೊಂದಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ಸರ್ಕಾರದ ಈ ಯೋಜನೆಯಿಂದ 3.7 ಲಕ್ಷ  ವಿದ್ಯಾರ್ಥಿನಿಯರು  ಲಾಭ ಪಡೆಯಲಿದ್ದಾರೆ ಎಂದು ಹೇಳಿದರು.

ಉನ್ನತ ಶಿಕ್ಷಣವನ್ನು ಉತ್ಕøಷ್ಟಗೊಳಿಸಲು ಚಿಕ್ಕಮಗಳೂರಿನಲ್ಲಿ ಕುವೆಂಪು ವಿಶ್ವವಿದ್ಯಾಲಯ ಸ್ನಾತಕೋತ್ತರ ಕೇಂದ್ರ, ಬಾಗಲಕೋಟೆಯ ಜಮಖಂಡಿಯಲ್ಲಿ ರಾಣಿ ಚೆನ್ನಮ್ಮ ವಿವಿಯ ಸ್ನಾತಕೋತ್ತರ ಕೇಂದ್ರ ಸ್ಥಾಪಿಸಲು ತಲಾ ಒಂದು ಕೋಟಿ ರೂ. ಅನುದಾನ ಘೋಷಿಸಿದರು.

ಸಾಮಾಜಿಕ , ಸಮಾನತೆಯ ಹರಿಕಾರ ಬಸವಣ್ಣನವರ ಚಿಂತನೆಗಳನ್ನು ನಾಡಿನಾದ್ಯಂತ ಪಸರಿಸಲು ಮೈಸೂರು ವಿವಿಯಲ್ಲಿ ಬಸವ ಅಧ್ಯಯನ ಕೇಂದ್ರಕ್ಕೆ ಎರಡು ಕೋಟಿ ರೂ. ಒದಗಿಸಲಾಗಿದೆ.

ಇದಲ್ಲದೆ ಧಾರವಾಡದಲ್ಲಿರುವ ಕರ್ನಾಟಕ ವಿವಿಯಲ್ಲಿ ಕೊಂಕಣಿ ಅಧ್ಯಯನ ಪೀಠ ಸ್ಥಾಪನೆಗೆ ಒಂದು ಕೋಟಿ ಅನುದಾನವನ್ನು ಮೀಸಲಿಟ್ಟಿದ್ದು , ಪ್ರಸಕ್ತ ವರ್ಷ ಉನ್ನತ ಶಿಕ್ಷಣ ಇಲಾಖೆಗೆ 4514 ಕೋಟಿ ರೂ. ಅನುದಾನವನ್ನು ಮೀಸಲಿಟ್ಟಿದ್ದಾರೆ.

 

ಪ್ರಾಥಮಿಕ ಮತ್ತು ಪ್ರೌಢಶಾಲೆಗಳಲ್ಲಿ ಹೆಚ್ಚುತ್ತಿರುವ ಅನಾಹುತವನ್ನು ತಪ್ಪಿಸಲು ಸರ್ಕಾರ ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಲು ಮುಂದಾಗಿದೆ

ಮುಂದಿನ ದಿನಗಳಲ್ಲಿ ರಾಜ್ಯದ ಎಲ್ಲ ಪ್ರಾಥಮಿಕ ಮತ್ತು ಪ್ರೌಢಶಾಲೆಗಳಲ್ಲಿ ಮಕ್ಕಳ ಸುರಕ್ಷತಾ ದೃಷ್ಟಿಯಿಂದ ಹಂತ ಹಂತವಾಗಿ ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಇಂದು ಘೋಷಿಸಿದರು.

ವಿಧಾನಸಭೆಯಲ್ಲಿಂದು 2018-19ನೇ ಸಾಲಿನ ಆಯವ್ಯಯ ಮಂಡಿಸಿದ ಹಣಕಾಸು ಖಾತೆ ಹೊಂದಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ, ಸರ್ಕಾರಿ ಶಾಲೆಗಳ ಬಲವರ್ಧನೆಗೆ ನಮ್ಮ ಸರ್ಕಾರ ಬದ್ದವಾಗಿದೆ. ಶಾಲಾ ಮಕ್ಕಳ ಸುರಕ್ಷತೆಯೇ ನಮ್ಮ ಸರ್ಕಾರದ ಪ್ರಥಮ ಕರ್ತವ್ಯ ಎಂದು ಹೇಳಿದರು.

ಸರ್ಕಾರಿ ಪ್ರಾಥಮಿಕ ಮತ್ತು ಪ್ರೌಢಶಾಲೆಗಳಲ್ಲಿ ಅತ್ಯುತ್ತಮವಾಗಿ ಕಾರ್ಯ ನಿರ್ವಹಿಸುವ ಪ್ರತಿ ತಾಲ್ಲೂಕಿನ  ಒಂದು ಶಾಲಾಭಿವೃದ್ದಿ ಹಾಗೂ ಮೇಲುಸ್ತುವಾರಿ ಸಮಿತಿಗೆ ಅತ್ಯುತ್ತಮ ಎಸ್‍ಡಿಎಂಸಿ ಪ್ರಶಸ್ತಿ ನೀಡುವುದಾಗಿ ಘೋಷಣೆ ಮಾಡಿದೆ.

ರಾಜ್ಯದಲ್ಲಿ ನೂರು ವರ್ಷಗಳನ್ನು  ಪೂರೈಸಿದ 100 ಸರ್ಕಾರಿ ಪ್ರಾಥಮಿಕ ಮತ್ತು ಪ್ರೌಢಶಾಲೆಗಳನ್ನು ಪಾರಂಪರಿಕ ಶಾಲೆಗಳೆಂದು ಗುರುತಿಸಿ ಅವುಗಳನ್ನು ಹಂತ ಹಂತವಾಗಿ ಅಭಿವೃದ್ದಿಗೊಳಿಸಲಾಗುವುದು.

ಶಾಲೆ ಹಂತಗಳಲ್ಲೇ ವೈಜ್ಞಾನಿಕ ಮನೋಭಾವ ಬೆಳೆಸಲು ಎಲ್ಲಾ  ಪ್ರಾಥಮಿಕ ಮತ್ತು ಪ್ರೌಢಶಾಲೆಗಳಲ್ಲಿ ವಿಜ್ಞಾನ ಸಮಿತಿ ರಚನೆ, ಅಗಸ್ತ್ಯ ಫೌಂಡೇಷನ್ ಸಹಭಾಗಿತ್ವದೊಂದಿಗೆ ಎಲ್ಲ ಜಿಲ್ಲೆಗಳಲ್ಲಿ 7.5 ಕೋಟಿ ರೂ. ವೆಚ್ಚದಲ್ಲಿ ವಿಜ್ಞಾನ ಪ್ರಯೋಗಾಲಯ ಸೇರಿದಂತೆ ಪ್ರಸಕ್ತ  ವರ್ಷ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಇಲಾಖೆಗೆ ಬಜೆಟ್‍ನಲ್ಲಿ 22, 350 ಕೋಟಿ ರೂ. ಅನುದಾನವನ್ನು ಮೀಸಲಿಟ್ಟಿದ್ದಾರೆ.

ಪ್ರಸಕ್ತ ವರ್ಷ ಒಂದೇ ಸೂರಿನಡಿ ವಿದ್ಯಾಭ್ಯಾಸ  ಕಲ್ಪಿಸಿ ಶಿಕ್ಷಣದ ಗುಣಮಟ್ಟ  ಹೆಚ್ಚಿಸಲು ಗ್ರಾಮ ಪಂಚಾಯ್ತಿ ಕೇಂದ್ರ ಸ್ಥಾನದಲ್ಲಿ 12ನೇ ತರಗತಿಯವರೆಗೆ 176 ಸಂಯೋಜಿತ ಶಾಲೆಗಳನ್ನು ಪ್ರಾರಂಭಿಸಲಾಗಿದೆ. ಈ ವರ್ಷ 100 ಸಂಯೋಜಿತ ಕರ್ನಾಟಕ ಪಬ್ಲಿಕ್ ಶಾಲೆಗಳನ್ನು ಐದು ಲಕ್ಷದಂತೆ ಐದು ಕೋಟಿ ರೂ. ವೆಚ್ಚದಲ್ಲಿ ಪ್ರಾರಂಭ ಮಾಡುವುದಾಗಿ ಘೋಷಿಸಿದರು.

ಅಲ್ಲದೆ ವಿದ್ಯಾರ್ಥಿಗಳಲ್ಲಿ ಮಾನವೀಯ ಮೌಲ್ಯ ಹಾಗೂ ವಿಶ್ವ ಭಾತೃತ್ವ, ಸೇವಾ ಮನೋಭಾವ, ಶಾಂತಿ-ಶಿಸ್ತು, ಸಂಯಮ ಬೆಳೆಸಲು ಭಾರತ್ ಮತ್ತು ಸ್ಕೌಟ್ ಮತ್ತು ಗೈಡ್ಸ್ ಘಟಕಗಳನ್ನು ಎಲ್ಲೆಡೆ ಪ್ರಾರಂಭ ಮಾಡಲು ಸರ್ಕಾರ ಮುಂದಾಗಿದೆ.

 

ಮಹಾಕವಿ ಕುವೆಂಪು ಅವರ ಮೈಸೂರಿನ ನಿವಾಸ ಉದಯರವಿಯನ್ನು ರಾಷ್ಟ್ರಕವಿ ಸ್ಮಾರಕವಾಗಿ ಸಂರಕ್ಷಿಸಿ ಅಭಿವೃದ್ಧಿಗೊಳಿಸುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ

ತಮ್ಮ ಬಜೆಟ್ ಭಾಷಣದಲ್ಲಿ ಕನ್ನಡ ಮತ್ತು ಸಂಸ್ಕ್ರತಿ ಇಲಾಖೆಗೆ ಅನುಷ್ಠಾನಗೊಳಿಸಿರುವ ಕಾರ್ಯಕ್ರಮಗಳು ಮತ್ತು ಭವಿಷ್ಯದ ಯೋಜನೆಗಳ ಬಗ್ಗೆ ವಿವರಿಸಿದ ಅವರು. ಜನಪದ ಮತ್ತು ಸಾಂಸ್ಕøತಿಕ ಕಲೆಗಳನ್ನು ಪರಿಚಯಿಸುವ ಉದ್ಧೇಶದಿಂದ ಜನಪದ ಸಾಂಸ್ಕøತಿಕ ಭಾರತ ಕಾರ್ಯಕ್ರಮ ರೂಪಿಸಲಾಗುವುದು ಎಂದು ಹೇಳಿದರು.

ಕನ್ನಡದ ನವೋದಯ ಕಾವ್ಯದ ಪ್ರವರ್ತಕ ಡಾ. ಗೋಪಾಲಕೃಷ್ಣ ಅಡಿಗರ ಜನ್ಮ ದಿನೋತ್ಸವದ ಸ್ಮರಣಾರ್ಥ ಕಟ್ಟುವೆವು ನಾವು ಹೊಸ ನಾಡೊಂದನ್ನು ಎಂಬ ಸಾಹಿತ್ಯ-ಸಾಂಸ್ಕøತಿಕ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗುವುದು ಎಂದು ಸಿಎಂ ತಿಳಿಸಿದರು.

ವೃತ್ತಿ ರಂಗಭೂಮಿಯ ಸಮಗ್ರ ಅಧ್ಯಯನ, ಸಂಶೋಧನೆ ಮತ್ತು ರಂಗ ಶಿಕ್ಷಣಕ್ಕಾಗಿ ದಾವಣಗೆರೆಯಲ್ಲಿ ವೃತ್ತಿ ರಂಗಭೂಮಿ ಕೇಂದ್ರ ಸ್ಥಾಪಿಸಲಾಗುವುದು. ಸಮಗ್ರ ದಾಸ ಸಾಹಿತ್ಯದ ಅಧ್ಯಯನಕ್ಕಾಗಿ ನೂತನ ಅಧ್ಯಯನ ಪೀಠ ಸ್ಥಾಪಿಸಲಾಗುವುದು. ವಿವಿಧ ಅಕಾಡೆಮಿಗಳ ಅನುದಾನವನ್ನು ಹೆಚ್ಚಿಸಲಾಗುವುದು ಎಂದು ಅವರು ವಿವರಿಸಿದರು.

2018-19ನೇ ಸಾಲಿನಲ್ಲಿ ಕನ್ನಡ ಮತ್ತು ಸಂಸ್ಕøತಿ ಇಲಾಖೆಯಡಿ 425 ಕೋಟಿ ರೂ. ವೆಚ್ಚದಲ್ಲಿ ವಿವಿಧ ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸಲಾಗುವುದು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ