
ನವದೆಹಲಿ: ಪಾಕಿಸ್ತಾನದ ಬಾಲಕೋಟ್ನಲ್ಲಿ ಭಾರತೀಯ ವಾಯುಸೇನೆ ದಾಳಿಯನ್ನೇ ನಡೆಸಿಲ್ಲ ಎಂದು ನೆರೆಯ ರಾಷ್ಟ್ರ ಹೇಳಿಕೊಳ್ಳುತ್ತಾ ಬರುತ್ತಿದೆ. ಆದರೆ, ಬಾಲ್ಕೋಟ್ನಲ್ಲಿರುವ ಉಗ್ರ ಶಿಬಿರಗಳನ್ನು ಭಾರತ ನಾಶ ಮಾಡಿದ್ದು ಹೌದು ಎಂದು ಸ್ವತಃ ಜೈಷ್-ಇ-ಮೊಹ್ಮದ್ ಉಗ್ರ ಸಂಘಟನೆಯ ಮುಖ್ಯಸ್ಥ ಮಸೂದ್ ಅಜರ್ ಸಹೋದರ ಮೌಲಾನಾ ಅಮ್ಮರ್ ಒಪ್ಪಿಕೊಂಡಿದ್ದಾನೆ. ಇದು ಪಾಕಿಸ್ತಾನಕ್ಕೆ ಇರಿಸುಮುರಿಸು ಉಂಟು ಮಾಡಿದೆ.
ಅಮ್ಮರ್ ಮಾತನಾಡಿರುವ ಆಡಿಯೋ ಕ್ಲಿಪ್ ಸಿಎನ್ಎನ್-ನ್ಯೂಸ್ 18ಗೆ ಲಭ್ಯವಾಗಿದ್ದು, ಅದರಲ್ಲಿ ಈ ವಿಚಾರ ಬೆಳಕಿಗೆ ಬಂದಿದೆ. “ಭಾರತೀಯ ವಾಯುಪಡೆ ಐಎಸ್ಐ ಅಥವಾ ಪಾಕಿಸ್ತಾನದ ಸೇನೆಯ ಮೇಲೆ ದಾಳಿ ನಡೆಸಿಲ್ಲ. ಅವರು ಅಟ್ಯಾಕ್ ಮಾಡಿದ್ದು ಜಿಹಾದ್ ವಿಚಾರವನ್ನು ಕಲಿಯುತ್ತಿರುವ ವಿದ್ಯಾರ್ಥಿಗಳ ಮೇಲೆ,” ಎಂದಿದ್ದಾನೆ ಅಮ್ಮರ್. ಬಾಲ್ಕೋಟ್ ದಾಳಿಯಲ್ಲಿ ಐಎಸ್ಐನ ಕರ್ನಲ್ ಸಲೀಮ್ ಖ್ವಾರಿ ಹಾಗೂ ಜೈಷ್ ತರಬೇತುದಾರ ಮೌಲಾನ್ ಮೋಯಿನ್ ಕೂಡ ಸತ್ತಿದ್ದಾನೆ ಎನ್ನಲಾಗಿದೆ.
ಪಾಕಿಸ್ತಾನದ ಬಾಲ್ಕೋಟ್ ಮೇಲೆ ಭಾರತೀಯ ವಾಯುಪಡೆ ದಾಳಿ ನಡೆಸಿತ್ತು. ಈ ವೇಳೆ ಅಲ್ಲಿನ ಉಗ್ರ ಶಿಬಿರಗಳು ದಾಳಿಗೆ ತುತ್ತಾಗಿದ್ದವು ಎಂದು ಭಾರತೀಯ ಸೇನೆ ಹೇಳಿಕೊಂಡಿತ್ತು. ದಾಳಿ ವೇಳೆ 300ಕ್ಕೂ ಅಧಿಕ ಭಯೋತ್ಪಾದಕರು ನಾಶಗೊಂಡಿದ್ದಾರೆ ಎನ್ನಲಾಗಿದೆ. ಆದರೆ, ಪಾಕಿಸ್ತಾನ “ ಈ ಸುದ್ದಿ ಸುಳ್ಳು. 300 ಜನ ಸತ್ತಿದ್ದಾರೆ ಎಂದಾದರೆ ಅವರ ಶವವಾದರೂ ಇರಬೇಕಲ್ಲ. ಯಾವ ರಾಷ್ಟ್ರದವರು ಬೇಕಾದರೂ ಬಂದು ಈ ಭಾಗದಲ್ಲಿ ಮುಕ್ತವಾಗಿ ಪರಿಶೀಲನೆ ನಡೆಸಬಹುದು,” ಎಂದು ಪಾಕಿಸ್ತಾನ ಸವಾಲು ಹಾಕಿತ್ತು. ಈ ದಾಳಿ ನಂತರದಲ್ಲಿ ಉಭಯ ರಾಷ್ಟ್ರಗಳ ನಡುವಿನ ಪರಿಸ್ಥಿತಿ ತೀವ್ರವಾಗಿ ಹದಗೆಟ್ಟಿದೆ.