
ಬೆಂಗಳೂರು ,ಮಾ.3-ಹಿರಿಯ ಪತ್ರಕರ್ತೆ ಮತ್ತು ಪ್ರಗತಿಪರ ಚಿಂತಕಿ ಗೌರಿ ಲಂಕೇಶ್ ಹತ್ಯೆ ಪ್ರಕರಣದ ತನಿಖೆ ಈಗ ಕುತೂಹಲಕಾರಿ ಘಟ್ಟ ತಲುಪಿದೆ.
ಈಗಾಗಲೇ ಬಂಧಿತನಾಗಿರುವ ಶಸ್ತ್ರಾಸ್ತ್ರ ಪೂರೈಕೆದಾರ ಮತ್ತು ಹಿಂದೂ ಕಾರ್ಯಕರ್ತರ ನವೀನ್ಕುಮಾರ್ ಅಲಿಯಾಸ್ ಹೊಟ್ಟೆ ಮಂಜನನ್ನು ಈ ಪ್ರಕರಣ ಸಂಬಂಧ ವಿಶೇಷ ತನಿಖಾ ತಂಡ(ಎಸ್ಐಟಿ)ದ ಅಧಿಕಾರಿಗಳು ತೀವ್ರ ವಿಚಾರಣೆಗೊಳಪಡಿಸಿದ್ದು , ಮಹತ್ವದ ಮಾಹಿತಿಗಳನ್ನು ಕಲೆ ಹಾಕುತ್ತಿದ್ದಾರೆ.
ಕೆಲವು ದಿನಗಳ ಹಿಂದೆ ಬೆಂಗಳೂರಿನ ಮೆಜೆಸ್ಟಿಕ್ ಬಳಿ ಅಕ್ರಮ ಶಸ್ತ್ರಾಸ್ತ್ರ ಪೂರೈಕೆ ಆರೋಪದಡಿ ಸಿಕ್ಕಿಬಿದ್ದಿರುವ ನವೀನ್ನನ್ನು ನ್ಯಾಯಾಲಯದ ಆದೇಶದಂತೆ ಎಂಟು ದಿನಗಳ ಕಸ್ಟಡಿಗೆ ತೆಗೆದುಕೊಳ್ಳಲಾಗಿದೆ. ಆತನನ್ನು ಗೌರಿ ಹತ್ಯೆ ಪ್ರಕರಣ ಸಂಬಂಧ ತೀವ್ರ ವಿಚಾರಣೆಗೊಳಪಡಿಸಲಾಗಿದೆ ಎಂದು ಈ ಪ್ರಕರಣದ ತನಿಖಾಧಿಕಾರಿಯಾಗಿರುವ ಉಪಪೆÇಲೀಸ್ ಆಯುಕ್ತ(ಬೆಂಗಳೂರು ಪಶ್ಚಿಮ) ಎಂ.ಎನ್.ಅನುಚೇತ್ ತಿಳಿಸಿದ್ದಾರೆ.
ಆದರೆ ಈ ಕುರಿತು ಮತ್ತಷ್ಟು ವಿವರ ಮಾಹಿತಿಗಳನ್ನು ನೀಡಲು ಅವರ ನಿರಾಕರಿಸಿದ್ದಾರೆ.
ಗೌರಿ ಲಂಕೇಶ್ ಹತ್ಯೆಯಲ್ಲಿ ನವೀನ್ಕುಮಾರ್ ಅಲಿಯಾಸ್ ಹೊಟ್ಟೆ ಮಂಜನ ಪಾತ್ರವೇನು, ಆತನಿಗಿರುವ ಸಂಪರ್ಕವೇನು? ಈತ ಶಸ್ತ್ರಾಸ್ತ್ರಗಳನ್ನು ಯಾರ್ಯಾರಿಗೆ ಪೂರೈಸಿದ್ದಾನೆ ಎಂಬ ಮೊದಲಾದ ವಿವರಗಳು ವಿಚಾರಣೆ ನಂತರ ತಿಳಿದುಬರಲಿದೆ.
ಶಸ್ತ್ರಾಸ್ತ್ರಗಳ ಕಾಯ್ದೆಯಡಿ ಈಗಾಗಲೇ ಬಂಧಿತನಾಗಿ ಕಸ್ಟಡಿಯಲ್ಲಿರುವ ನವೀನ್ಕುಮಾರ್ ಕೆಲವು ಗೌಪ್ಯ ಸಂಗತಿಗಳನ್ನು ತಿಳಿಸಿದ್ದಾನೆ ಎಂದು ಹೇಳಲಾಗಿದ್ದು , ಆ ನಿಟ್ಟಿನಲ್ಲಿ ತನಿಖೆಯ ಜಾಡು ಮುಂದುವರೆದಿದೆ.