ಬಿಜೆಪಿ ಪ್ರಣಾಳಿಕೆಯನ್ನು ಟೀಕೆ ಮಾಡುತ್ತಿರುವವರು ನಕಲಿ ಕಾಂಗ್ರೇಸಿಗರು-ಬಿಜೆಪಿ ಮುಖಂಡ ಕೆ.ಎಸ್.ಈಶ್ವರಪ್ಪ

ಬಾಗಲಕೋಟೆ,ಏ.9- ಮುಸ್ಲಿಮರಿಗೆ, ಕ್ರಿಶ್ಚಿಯನ್ನರಿಗೆ ಕಾಂಗ್ರೆಸ್‍ನಲ್ಲಿ ಸಾಮಾಜಿಕ ನ್ಯಾಯವಿಲ್ಲವೆಂದು ಹಲವರು ಆ ಪಕ್ಷಕ್ಕೆ ರಾಜೀನಾಮೆ ನೀಡುತ್ತಿದ್ದಾರೆ ಎಂದು ಮಾಜಿ ಉಪ ಮುಖ್ಯಮಂತ್ರಿ, ಬಿಜೆಪಿ ಮುಖಂಡ ಈಶ್ವರಪ್ಪ ಹೇಳಿದ್ದಾರೆ.

ಬಾಗಲಕೋಟೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜೆ.ಅಲೆಗ್ಸಾಂಡರ್, ಎಚ್.ಟಿ.ಸಾಂಗ್ಲಿಯಾನ ರಂತಹವರು ಕಾಂಗ್ರೆಸ್ ಪಕ್ಷದಿಂದ ದೂರ ಸರಿಯುತ್ತಿರುವುದು ಇದಕ್ಕೆ ಉದಾಹರಣೆಯಾಗಿದೆ. ಕಾಂಗ್ರೆಸ್ ಹೆಸರೇಳಿಕೊಂಡು ಅಧಿಕಾರ ಹಿಡಿಯುವಂತಹವರು ಬಿಜೆಪಿ ಪ್ರಣಾಳಿಕೆಯನ್ನು ಟೀಕೆ ಮಾಡುತ್ತಿದ್ದಾರೆ.ಇವರೆಲ್ಲ ನಕಲಿ ಕಾಂಗ್ರೆಸ್ಸಿಗರು ಎಂದು ಸಿದ್ದರಾಮಯ್ಯನವರಿಗೆ ತಿರುಗೇಟು ನೀಡಿದರು.

ಬಿಜೆಪಿ ಪ್ರಣಾಳಿಕೆಯಿಂದ ದೇಶ ಭಕ್ತರಿಗೂ ಹಾಗೂ ರೈತರಿಗೂ ಬಹಳ ಸಂತೋಷವಾಗಿದೆ.ರಾಮಮಂದಿರ ನಿರ್ಮಾಣ ಎಲ್ಲರ ಕನಸು.ಅಷ್ಟೇ ಅಲ್ಲದೇ ಮುಸ್ಲಿಂ, ಕ್ರಿಶ್ಚಿಯನ್ ಸೇರಿದಂತೆ ಎಲ್ಲರ ಆಶಯವಾಗಿದೆ.

ಎಲ್ಲರಿಗೂ ಒಂದೇ ಕಾನೂನು ತರುತ್ತೇವೆ ಎನ್ನೋದು ಜನರಲ್ಲಿ ಸಂತೋಷ ತಂದಿದೆ ಎಂದರು.

ವೀರಶೈವ ಲಿಂಗಾಯತ ವಿಚಾರದಲ್ಲಿ ನಾವು ಧರ್ಮ ಒಡೆಯಬೇಡಿ ಎಂದೆವು.ಈಗ ಸಿದ್ದರಾಮಯ್ಯ ಹಾಗೂ ವಿನಯಕುಲಕರ್ಣಿ ದೊಡ್ಡ ತಪ್ಪ ಮಾಡಿದ್ವಿ ಅಂತಿದ್ದಾರೆ. ಧರ್ಮ ಜಾತಿ ಒಡೆಯುವುದಕ್ಕೆ ಮುಂದಾದವರು ಈ ದೇಶದಲ್ಲಿ ಮಣ್ಣು ಮುಕ್ಕಿದರು ಎಂದು ಕಿಡಿ ಕಾರಿದರು.

ಬಿಜೆಪಿ ಅಭ್ಯರ್ಥಿ ಎ.ಮಂಜು ಅವರನ್ನು ಹಾಸನದ ಜನತೆ ಗೆಲ್ಲಿಸುತ್ತಾರೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ