ದಿಲ್ಲಿಗೆ ತೆರಳಿದ್ದ ೧೬ರ ಪೈಕಿ ೧೪ ಮಂದಿ ರಾಮನಗರ ಜಿಲ್ಲೆಯವರೇ ಅಲ್ಲ

ರಾಮನಗರ: ಉಗ್ರನ ವಾಸಸ್ಥಾನವಾಗಿದ್ದ ರಾಮನಗರದಲ್ಲಿನ ಬೆಳವಣಿಗೆ ಆತಂಕ ಸೃಷ್ಟಿಸಿದ್ದು, ೧೪ ಜನ ತಬ್ಲಿಘಿಗಳು ಏಕಾಏಕಿ ನಾಪತ್ತೆಯಾಗಿರುವ ಆಘಾತಕಾರಿ ಅಂಶ ಬೆಳಕಿಗೆ ಬಂದಿದೆ. ಜಮಾತ್ ಹೆಸರಲ್ಲಿ ಜಿಲ್ಲೆಯ ದಾಖಲಾತಿ ನೀಡಿದ್ದ ಕೆಲವರು ಜಿಹಾದಿ ರೂಪ ಪಡೆದಿದ್ದಾರೆಯೇ ಎಂಬ ಅನುಮಾನವೂ ಕೂಡ ವ್ಯಕ್ತವಾಗುತ್ತಿದೆ.

ರಾಜ್ಯ ಸರ್ಕಾರದಿಂದ ಜಿಲ್ಲಾಡಳಿತಕ್ಕೆ ರವಾನೆಯಾಗಿದ್ದ ದಿಲ್ಲಿಯ ನಿಜಾಮುದ್ದೀನ್ ಮಸೀದಿಯ ಸುತ್ತಮುತ್ತ ಓಡಾಡಿದ್ದ ೧೬ ಮಂದಿಯ ಪಟ್ಟಿಯಲ್ಲಿ ೧೪ ಮಂದಿ ಜಿಲ್ಲೆಯಲ್ಲಿನ ನಿವಾಸಿಗಳು ಎಂಬ ಅಂಶ ಬೆಳಕಿಗೆ ಬಂದಿದೆ.

ಅನ್ಯ ಕಾರ್ಯ ನಿಮಿತ್ತ ದಿಲ್ಲಿಗೆ ತೆರಳಿದ್ದ ಜಿಲ್ಲೆಯ ೧೬ ಮಂದಿ ನಿಜಾಮುದ್ದೀನ್ ಮಸೀದಿಯ ಸುತ್ತಮುತ್ತ ಓಡಾಡಿರುವ ಕುರಿತು ಜಿಲ್ಲಾಡಳಿತಕ್ಕೆ ಮಾಹಿತಿ ರವಾನೆಯಾಗಿತ್ತು. ಇವರಲ್ಲಿ ಇಬ್ಬರು ಮಾತ್ರ ಜಿಲ್ಲೆಗೆ ವಾಪಸ್ಸಾಗಿದ್ದರೆ, ಉಳಿದ ೧೪ ಮಂದಿ ಜಿಲ್ಲೆಗೆ ಹಿಂದಿರುಗದೆ ಇರುವುದರಿಂದ ಆತಂಕ ಸೃಷ್ಟಿಯಾಗಿತ್ತು.

೧೪ ಮಂದಿ ಜಿಲ್ಲೆಯವರೇ ಅಲ್ಲ:
ಅದರೆ, ಸರ್ಕಾರ ಕಳುಹಿಸಿರುವ ಪಟ್ಟಿಯಲ್ಲಿರುವ ೧೪ ಮಂದಿಯೂ ಈ ಜಿಲ್ಲೆಯಲ್ಲಿ ವಾಸವೇ ಆಗಿಲ್ಲ. ಕೆಲವು ವರ್ಷಗಳ ಹಿಂದೆ ಜಿಲ್ಲೆಯ ವಿವಿಧ ಭಾಗದಲ್ಲಿ ನೆಲಸಿದ್ದ ಇವರೆಲ್ಲರು ಸ್ಥಳೀಯ ವಿಳಾಸ ನೀಡಿ ಮೊಬೈಲ್ ಸಿಮ್ ಖರೀದಿಸಿದ್ದರು. ಆದರೀಗ ಅವರೆಲ್ಲರೂ ಜಿಲ್ಲೆ ತೊರೆದು ಬೇರೆ ಬೇರೆ ಸ್ಥಳಗಳಲ್ಲಿ ನೆಲೆಸಿದ್ದಾರೆ.

ದಿಲ್ಲಿ ಸರ್ಕಾರವು ರಾಜ್ಯ ಸರ್ಕಾರಕ್ಕೆ ರಾಮನಗರ ಜಿಲ್ಲೆಯ ೧೬ ಮಂದಿ ಮೊಬೈಲ್ ನಂಬರ್‌ಗಳ ಆಧಾರದ ಮೇಲೆ ಆ ವ್ಯಕ್ತಿಗಳ ಮಾಹಿತಿ ನೀಡಿತ್ತು. ರಾಜ್ಯ ಸರ್ಕಾರ ಆ ಪಟ್ಟಿಯನ್ನು ಜಿಲ್ಲಾಡಳಿತಕ್ಕೆ ರವಾನಿಸಿತ್ತು. ಮೊಬೈಲ್ ಟವರ್‌ನ ನೆಟ್‌ವರ್ಕ್ ಅನ್ನು ಆಧರಿಸಿ ಮಸೀದಿ ಸುತ್ತಮುತ್ತ ಓಡಾಡಿದವರ ಮೊಬೈಲ್ ನಂಬರ್‌ಗಳನ್ನು ಕಲೆ ಹಾಕಲಾಗಿತ್ತು.

ಇಬ್ಬರಿಗೆ ಕ್ವಾರಂಟೈನ್ :
ಈ ೧೬ ಮಂದಿಯೂ ರಾಮನಗರ, ಚನ್ನಪಟ್ಟಣ, ಮಾಗಡಿ ಹಾಗೂ ಕನಕಪುರ ತಾಲೂಕಿಗೆ ಸೇರಿದವರಾಗಿದ್ದರು. ಜಮಾತ್ ನಡೆದ ದಿನದಲ್ಲಿ ಈ ೧೬ ಮಂದಿ ಆ ಸ್ಥಳದಲ್ಲಿ ಓಡಾಡಿದ್ದರು. ಇವರಲ್ಲಿ ಇಬ್ಬರು ಮಾತ್ರ ವಾಪಸ್ಸಾಗಿದ್ದಾರೆ. ಆರೋಗ್ಯ ಇಲಾಖೆ ಅಕಾರಿಗಳು ಹಾಗೂ ವೈದ್ಯರು ಅವರೆಲ್ಲರ ಆರೋಗ್ಯ ಪರೀಕ್ಷೆ ಮಾಡಿ ಹೋಮ್ ಕ್ವಾರಂಟೈನ್‌ನಲ್ಲಿ ಇಟ್ಟಿದ್ದರು. ಇವರಲ್ಲಿ ಕೊರೋನಾ ವೈರಸ್ ಸೋಂಕಿನ ಲಕ್ಷಣಗಳು ಕಂಡುಬಂದಿಲ್ಲ. ಆದರೆ, ಮತ್ತೊಮ್ಮೆ ಇಬ್ಬರ ಗಂಟಲ ದ್ರವ, ರಕ್ತ ಮಾದರಿಯನ್ನು ಪರೀಕ್ಷೆಗಾಗಿ ರವಾನಿಸಲಾಗಿದೆ.

ಮಳವಳ್ಳಿ ರೇಷ್ಮೆ ಬೆಳೆಗಾರರಿಂದಾಗಿ ಆತಂಕ:
ಮಂಡ್ಯ ಜಿಲ್ಲೆಯ ಮಳವಳ್ಳಿಯಲ್ಲಿ ಮೂವರು ವ್ಯಕ್ತಿಗಳಲ್ಲಿ ಕೊರೋನಾ ವೈರಸ್ ಇರುವುದು ದೃಢಪಟ್ಟಿದೆ. ನೆರೆಯ ಜಿಲ್ಲೆಯಲ್ಲಿ ಕೊರೋನಾ ವೈರಸ್ ಖಾತ್ರಿ ಆಗುತ್ತಿದ್ದಂತೆ ರಾಮನಗರ ಜಿಲ್ಲೆಯಲ್ಲಿ ಆತಂಕ ಮನೆ ಮಾಡಿದೆ. ಇದಕ್ಕೆ ರೇಷ್ಮೆಗೂಡು ಮಾರಾಟ ಪ್ರಮುಖ ಕಾರಣವಾಗಿದೆ.

ಮಳವಳ್ಳಿ ಪಟ್ಟಣದ ಒಂದು ಪ್ರದೇಶವನ್ನು ಮಂಡ್ಯ ಉಪವಿಭಾಗಾಕಾರಿಗಳು ಕಂಟೈನ್‌ಮೆಂಟ್ ಝೋನ್ ಎಂದು ಘೋಷಿಸಿ ಆದೇಶ ಹೊರಡಿಸಿದ್ದಾರೆ. ಆ ಭಾಗದ ರೇಷ್ಮೆ ಬೆಳೆಗಾರರು ಹೆಚ್ಚಾಗಿ ಮಾರುಕಟ್ಟೆಗೆ ವಹಿವಾಟು ನಡೆಸಲು ಆಗಮಿಸುವ ಕಾರಣ ರೀಲರ್‌ಗಳು ಸೇರಿದಂತೆ ಸ್ಥಳೀಯ ಆತಂಕ ಮನೆ ಮಾಡಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ