ನಾಡಿನ ಅಧಿದೇವತೆ ಶ್ರೀ ಚಾಮುಂಡೇಶ್ವರಿ ದೇವಿಗೆ ಇಂದು ವಿಶೇಷ ಪೂಜೆ ನೆರವೇರಿಸಲಾಯಿತು

ಮೈಸೂರು,ಏ.6- ಕೊರೊನಾ ಮಹಾಮಾರಿ ತೊಲಗಲು ಸಂಕಲ್ಪ ಮಾಡಿ ನಾಡಿನ ಅಧಿದೇವತೆ ಶ್ರೀ ಚಾಮುಂಡೇಶ್ವರಿ ದೇವಿಗೆ ಇಂದು ವಿಶೇಷ ಪೂಜೆ ನೆರವೇರಿಸಲಾಯಿತು.

ಚಾಮುಂಡಿ ಬೆಟ್ಟದಲ್ಲಿರುವ ಶಕ್ತಿದೇವತೆ ಶ್ರೀ ಚಾಮುಂಡೇಶ್ವರಿ ದೇವಿಗೆ ಬೆಳಗಿನ ಜಾವ ಕೊರೊನಾ ಹೆಚ್ಚು ಹರಡಬಾರದು, ಸಾವು-ನೋವು ಉಂಟಾಗಬಾರದೆಂದು ಪ್ರಾರ್ಥಿಸಿ ಪಂಚಾಮೃತ ಅಭಿಷೇಕ, ರುದ್ರಾಭಿಷೇಕ ಹಾಗೂ ವಿಶೇಷ ಪೂಜೆ ನೆರವೇರಿಸಲಾಯಿತು.

ಪೂಜೆ ನಂತರ ದೇವಾಲಯದ ಪ್ರಧಾನ ಅರ್ಚಕರಾದ ಶಶಿಶೇಖರ್ ದೀಕ್ಷಿತ್ ಅವರು ಮಾತನಾಡಿ, ನಾಡಿನಾದ್ಯಂತ ಕೊರೊನಾ ಹರಡುತ್ತಿದೆ. ಜನರಲ್ಲಿ ರೋಗಬಾಧೆ ಹೆಚ್ಚಾಗುತ್ತಿದೆ. ಇದನ್ನು ತಡೆಯುವ ಶಕ್ತಿ ಆ ದೇವಿಯಲ್ಲಿದೆ. ಹಾಗಾಗಿ ಕೊರೊನಾ ಹೋಗಲಿ, ಜನತೆ ನೆಮ್ಮದಿಯಾಗಿರಲಿ ಎಂದು ಪ್ರಾರ್ಥಿಸಿ ಇಂದು ವಿಶೇಷ ಪೂಜೆ, ಅಭಿಷೇಕಗಳನ್ನು ನೆರವೇರಿಸಿದ್ದೇವೆ ಎಂದು ತಿಳಿಸಿದರು.

ದೇವಿ ದರ್ಶನಕ್ಕೆ ಏ.14ರ ವರೆಗೂ ಅವಕಾಶ ನೀಡುವುದಿಲ್ಲ. ಭಕ್ತರೂ ಕೂಡ ದೇವಾಲಯಕ್ಕೆ ಬರುತ್ತಿಲ್ಲ ಎಂದು ದೀಕ್ಷಿತ್ ತಿಳಿಸಿದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ