ಭಾರತದಲ್ಲಿ ಕೊರೊನಾ ಪೀಡಿತರ ಸಂಖ್ಯೆ 39ಕ್ಕೆ ಏರಿಕೆ; ಕೇರಳದಲ್ಲಿ ಒಂದೇ ಕುಟುಂಬದ ಐವರಿಗೆ ಅಂಟಿದ ವೈರಸ್

ನವದೆಹಲಿ: ಭಾರತಕ್ಕೂ ನೊವೆಲ್ಕೊರೊನಾ ಕಾಲಿಟ್ಟಿದ್ದು, ವೈರಸ್ಪೀಡಿತರ ಪ್ರಕರಣ ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇದೆ. ಕೇರಳದಲ್ಲಿ ಹೊಸ ಐದು ಪ್ರಕರಣಗಳು ಪತ್ತೆಯಾಗಿದ್ದು, ಮೂಲಕ ಸೋಂಕು ತಗುಲಿದವರ ಸಂಖ್ಯೆ ಭಾರತದಲ್ಲಿ 39ಕ್ಕೆ ಏರಿಕೆ ಆಗಿದೆ.

ಕೇರಳದಲ್ಲಿ ಕೊರೊನಾ ವೈರಸ್​ ತಗುಲಿದ ಐದು ಜನರು ಒಂದೇ ಕುಟುಂಬದವರಾಗಿದ್ದಾರೆ. ಈ ಐವರ ಪೈಕಿ ಮೂವರು ಈ ಮೊದಲು ಇಟಲಿಗೆ ತೆರಳಿದ್ದರು. ಈ ವೇಳೆ ಅವರಿಗೆ ಕೊರೊನಾ ವೈರಸ್​ ತಗುಲಿರಬಹುದು ಎಂದು ಶಂಕಿಸಲಾಗಿದೆ. ಇವರನ್ನು ಸಂಪರ್ಕಿಸಿದ ಎಲ್ಲರನ್ನೂ ಸದ್ಯ ಪರೀಕ್ಷೆಗೆ ಒಳಪಡಿಸಲಾಗುತ್ತಿದೆ.

ಮಂಗಳವಾರ ದೇಶಾದ್ಯಂತ ಹೋಳಿ ಆಚರಣೆ ಮಾಡಲಾಗುತ್ತಿದೆ. ಆದರೆ, ಕೊರೊನಾ ಭೀತಿ ಹಿನ್ನೆಲೆಯಲ್ಲಿ ದೆಹಲಿ ಸೇರಿದಂತೆ ಅನೇಕ ಭಾಗದಲ್ಲಿ ಹೋಳಿ ಆಚರಣೆಗೆ ಬ್ರೇಕ್​ ನೀಡಲು ನಿರ್ಧರಿಸಲಾಗಿದೆ. ಇನ್ನು, ಚಿಕನ್​, ಮಟನ್​ ಹಾಗೂ ಸಮುದ್ರ ಆಹಾರ  ತಿನ್ನುವುದರಿಂದ ಕೊರೊನಾ ಬರುತ್ತದೆ ಎನ್ನುವ ತಪ್ಪು ಕಲ್ಪನೆ ಅನೇಕರಲ್ಲಿದೆ. ಆದರೆ, ಈ ರೀತಿ ಆಹಾರಗಳ ಸೇವನೆಯಿಂದ ಕೊರೊನಾ ಬರುವುದಿಲ್ಲ ಎಂದು ಆರೋಗ್ಯ ಇಲಾಖೆ ಸ್ಪಷ್ಟನೆ ನೀಡಿದೆ.

ಕೊರೋನಾ ವೈರಸ್ ವಿಶ್ವಾದ್ಯಂತ ವೇಗವಾಗಿ ಪಸರಿಸುತ್ತಿದೆ. ಚೀನಾದಲ್ಲೇ ಹೆಚ್ಚಾಗಿ ಆರ್ಭಟಿಸುತ್ತಿರುವ ಈ ವೈರಸ್​ ಈಗಾಗಲೇ 90ಕ್ಕೂ ಹೆಚ್ಚು ದೇಶಗಳಿಗೆ ಅಡಿ ಇಟ್ಟಿದೆ. ವೈರಸ್​ನ ಸೋಂಕಿಗೆ ಒಳಗಾದವರ ಸಂಖ್ಯೆ 1 ಲಕ್ಷ ದಾಟಿದೆ. ಸಾವನ್ನಪ್ಪಿದವರ ಸಂಖ್ಯೆ 3,400ಕ್ಕೂ ಹೆಚ್ಚು.  ‘

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ